ಕಲ್ಪ ಮೀಡಿಯಾ ಹೌಸ್ | ಸೊರಬ |
ಸ್ವಂತ ಕೃಷಿ ಭೂಮಿ ಇಲ್ಲದೆಯೂ ಮಾಡಬಹುದಾದ ಕೃಷಿ ಈ ಜೇನುಕೃಷಿ. ಈ ಜೇನು ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಆಸಕ್ತರು ಆರ್ಥಿಕ ಸದೃಡತೆಯನ್ನು ಪಡೆದುಕೊಳ್ಳಬೇಕು ಎಂದು ಜೇನು ಕೃಷಿಕ ಗೌತಮ ಬಿಚ್ಚುಗತ್ತಿ ಹೇಳಿದರು.
ತಾಲೂಕು ಯಲಸಿ ಗ್ರಾಮದ ಸುವರ್ಣ ಸಸ್ಯ ಕ್ಷೇತ್ರದಲ್ಲಿ ಸಿದ್ಧಾಪುರ ತಾಲೂಕು ಬಿದರಕಾನು ಮತ್ತು ಸಂಪಗೋಡು ಕಾರ್ಯಕ್ಷೇತ್ರ ಹಾರ್ಸಿಕಟ್ಟ ವಲಯದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಜೇನು ಕೃಷಿಯ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿ ಮಾತನಾಡಿದರು.
ಜೇನು ಕೃಷಿಯಿಂದ ಕೇವಲ ತುಪ್ಪದ ಆದಾಯವಲ್ಲದೆ ಪರಾಗ, ಮೇಣದಿಂದಲೂ ಆದಾಯ ಗಳಿಸಲು ಅವಕಾಶವಿದೆ. ತುಸು ತಾಳ್ಮೆ, ಶ್ರದ್ಧೆ ಇದ್ದರೆ ಅತ್ಯಂತ ಸರಳ ಹಾಗೂ ಸಹಜವಾದ ಜೇನು ಕೃಷಿಯನ್ನು ಯಾರೂ ಕರಗತ ಮಾಡಿಕೊಳ್ಳಬಹುದು. ಇಂತಹ ಕೃಷಿಗೆ ನಾವು ಮುಂದಾದರೆ ನಮ್ಮ ಆರ್ಥಿಕ ಸ್ಥಿತಿಯನ್ನಷ್ಟೆ ನಮ್ಮ ಅಗತ್ಯಕ್ಕೆ ಸದಾ ನೆರವಾಗುವ ಪ್ರಕೃತಿಯ ಸಂಪತ್ತಿನ ಹೆಚ್ಚಳಕ್ಕೆ, ಮುಂಪೀಳಿಗಾಗಿ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಸೊರಬ ಕೃಷಿ ಮೇಲ್ವಿಚಾರಕ ಲೋಕೇಶ್ ಮಾತನಾಡಿ, ಬಿಡುವಿನ ಸಮಯದಲ್ಲಿ ಜೇನು ಸಾಕಣಿಕೆಯ ಜೊತೆಗೆ ನಿಮ್ಮ ಆರ್ಥಿಕ ಸದೃಢತೆಗೆ ಯೋಜನೆಯ ಮಹತ್ವಾಕಾಂಕ್ಷಿ ವೃತ್ತಿ ಪೂರಕ ಚಟುವಟಿಕೆಗಳನ್ನು ಅರಿತು ಅಳವಡಿಸಿಕೊಳ್ಳಬೇಕು. ಜೇನು ಕೃಷಿಗೆ ನೆರವಾಗುವ ದೃಷ್ಟಿಯಿಂದ ತಲಕಾಲುಕೊಪ್ಪದ ವಿಘ್ನೇಶ್, ಗೌತಮ ಬಿಚ್ಚುಗತ್ತಿಯಂತಹ ಉತ್ತಮ ಸಾಧಕರ ಮೂಲಕ ಯೋಜನೆಯ ಸದಸ್ಯರುಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಸಿದ್ಧಾಪುರ ಎಸ್ಕೆಡಿಆರ್ಡಿಪಿ ಕೃಷಿ ಮೇಲ್ವಿಚಾರಕ ಮಹದೇವಪ್ಪ, ಕೃಷಿ, ಕೂಲಿ ಮುಂತಾದ ವೃತ್ತಿಯ ಜೊತೆಗೆ ಆರ್ಥಿಕ ಸ್ವಾವಲಂಬನೆಗೆ ನೆರವಾಗುವ ದೃಷ್ಟಿಯಿಂದ ಯೋಜನಾ ಸದಸ್ಯರಿಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ತರಬೇತಿಯನ್ನು ಒದಗಿಸಲಾಗುತ್ತಿದೆ. ಜೊತೆಗೆ ವೃತ್ತಿ, ಪ್ರವೃತ್ತಿಯ ಸಾಧಕರನ್ನು ನೇರ ಪರಿಚಯಿಸಲಾಗುತ್ತಿದೆ ಎಂದರು.
ಸುಮಾರು 50 ಮಂದಿ ಸದಸ್ಯರಿಗೆ ಯಲಸಿಯಲ್ಲಿ ಜೇನುಕೃಷಿ ಮತ್ತು ಕಸ್ತೂರಿ ಕ್ಯಾಟರಿಂಗ್ ನ ಆರತಿ ಮಹೇಶ್ ಅವರಿಂದ ಚಿಪ್ಸ್ ತಯಾರಿಕೆ ಪ್ರಾತ್ಯಕ್ಷಿಕೆ, ಚಂದ್ರಗುತ್ತಿ ಹೋಬಳಿ ಚೆನ್ನಪಟ್ಣದ ಜೀವಪ್ಪ ಇವರಿಂದ ಕುರಿ ಮತ್ತು ಕೋಳಿಸಾಕಣಿಕೆ ಬಗ್ಗೆ, ಅಂಕರವಳ್ಳಿ ಸದಾನಂದಗೌಡರಿಂದ ಯಂತ್ರ ನಾಟಿ ಪದ್ಧತಿಯ ಕುರಿತು, ಪಟ್ಟಣದ ಸೈಯದ್ ಸಾಬ್ ಇವರ ಊದಬತ್ತಿ ತಯಾರಿಕೆ ವಿಧಾನಗಳ ಪ್ರಾತ್ಯಕ್ಷಿಕೆಯನ್ನ ಸದಸ್ಯರಿಗೆ ನೀಡಲಾಯಿತು. ಗ್ರಾಮದ ಆಸಕ್ತ ಕೃಷಿಕರು, ಯುವಕರು, ಉತ್ತರ ಕನ್ನಡ ಜಿಲ್ಲೆ ಶಿಬಿರಾರ್ಥಿಗಳು ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post