ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಚುನಾವಣೆ ಸಮಯ ಬಂದಾಗ ಮಾತ್ರ ಗ್ರಾಮದ ಜನರು ರಾಜಕಾರಣಿಗಳ ಕಣ್ಣಿಗೆ ಕಾಣುತ್ತಾರೆ. ಇಲ್ಲಿ ದಿನವೂ ಗಣಿದೂಳು ಕುಡಿದು, ಈಗಲೊ ಆಗಲೊ ತಲೆಮೇಲೆ ಕಲ್ಲು, ಮನೆ ಕುಸಿಯತ್ತದೆ ಎಂದು ನಿದ್ರೆ ಇಲ್ಲದೆ ಆತಂಕದಿಂದ ಬದುಕುವ ನಮ್ಮನ್ನು ಒಂದು ದಿನವಾದರೂ ಬಂದು ಯೋಗಕ್ಷೇಮ, ಸಾಧಕಬಾದಕಗಳ ಬಗ್ಗೆ ವಿಚಾರಿಸಿಲ್ಲ ಎಂದು ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪ ಗ್ರಾಮದ ಮಹಿಳೆಯರು ಶಾಸಕರ ವಿರುದ್ಧ ಹರಿಹಾಯ್ದರು.
ಬಸ್ತಿಕೊಪ್ಪ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಾಣ ಶಂಕುಸ್ಥಾಪನೆ ಗಾಗಿ ಅವರು ತೆರಳಿದ್ದಾಗ ಇಲ್ಲಿನ ಅಧಿಕೃತ, ಅನಧಿಕೃತ ಕಲ್ಲು ಗಣಿಗಾರಿಕೆ ತೆರವುಗೊಳಿಸಿದರೆ ಅದೇ ನಮಗೆ ಗ್ರಾಮ ಅಭಿವೃದ್ಧಿ, ಮೊದಲು ಈ ಗಣಿಗಾರಿಕೆ ನಿಲ್ಲಿಸಿ ಎಂದು ಮನವಿ ಮಾಡಿಕೊಂಡರು.
ರಾಜಕೀಯದವರಿಗೆ ಓಟಷ್ಟೆ ಮುಖ್ಯ ನಮ್ಮ ಸಮಸ್ಯೆಯಲ್ಲ. ಬಡವರ ಗೋಳಿಗೆ ಬೆಲೆ ಇಲ್ಲ.
-ಶ್ರೀಮತಿ ಜಯಮ್ಮ
ಬಸ್ತಿಕೊಪ್ಪ ಗ್ರಾಮದ ಮಹಿಳೆ
ಗಣಿಗಾರಿಕೆಯಿಂದ ಇಲ್ಲಿನವರ ಆರೋಗ್ಯ ಹದಗೆಟ್ಟಿದೆ, ಕೃಷಿ ಭೂಮಿ ಗಣಿದೂಳಿನಿಂದ ಹಾಳಾಗಿದ್ದು ಕೃಷಿ ಹಿನ್ನಡೆ ಆಗಿದೆ. ಶುದ್ಧ ನೀರು ಸಿಗುತ್ತಿಲ್ಲ, ಗಣಿ ಅರ್ಭಟಕ್ಕೆ ಕಾಡು ಪ್ರಾಣಿಗಳು, ವಿಷಪೂರಿತ ಹಾವುಗಳು ಊರಿಗೆ ಬರುತ್ತಿವೆ, ಇಲ್ಲಿನ ಕಾಯ್ದಿಟ್ಟ ಅರಣ್ಯ ನಾಶವಾಗುತ್ತಿದೆ, ಮುಂತಾದ ಹಲವು ಬಗೆಯ ವಾಸ್ತವ ಸ್ಥಿತಿಯನ್ನು ನಾವು ಈಗಾಗಲೆ ಹಲವು ಬಾರಿ ಶಾಸಕರ, ಇಲಾಖೆಯವರ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ಇದೆ ವೇಳೆ ಪತ್ರಿಕೆಗಳೊಂದಿಗೆ ಮಾತನಾಡಿದರು.
ಇದೇ ರೀತಿಯ ಅಸಡ್ಡೆ ಮುಂದುವರೆದರೆ ನಾವು ಮುಂಬರುವ ಎಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ. ಶಾಸಕರ ಮನೆ ಎದುರು ನಿರಶನ ಹೂಡುತ್ತೇವೆ. ಗ್ರಾಮಪಂಚಾಯತಿಗೆ ಮುತ್ತಿಗೆ ಹಾಕಿ ಅಲ್ಲೂ ಅಧಿಕಾರಿ, ಜನಪ್ರತಿನಿಧಿಗಳನ್ನು ಕೂಡಿ ಹಾಕಿ ಪ್ರತಿಭಟಿಸುತ್ತೇವೆ ಎಂದು ಗ್ರಾಮಸ್ಥರಾದ ಮಂಜು ಬಡಗಿ, ಶಶಿಧರ್, ರಘುಪತಿ, ಚಿದು, ಕಮಲಾಕರ್, ಪರಶುರಾಮ, ಉಮೇಶ, ರಮೇಶ, ಶಶಿಕುಮಾರ್, ಶಿವು, ಜಯಮ್ಮ, ಲಕ್ಷ್ಮೀ, ಸವಿತಾ, ಕಲಾವತಿ ಸೇರಿದಂತೆ ಊರಿನ ಗ್ರಾಮಸ್ಥರು ಆಗ್ರಹಿಸಿದರು. ಇವರ ಸಮಸ್ಯೆ ಗಳನ್ನು ಆಲಿಸದ ಶಾಸಕರು ಮನವಿ ಕೊಡಿ ನೋಡೋಣ ಎಂದು ಹಾರಿಕೆ ಉತ್ತರ ನೀಡಿದರು
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post