ಕಲ್ಪ ಮೀಡಿಯಾ ಹೌಸ್ | ಸೊರಬ |
ದೈಹಿಕವಾಗಿ ಅಂಗ ವೈಫಲ್ಯತೆ ಹೊಂದಿದವರು ವಿಕಲಚೇತನರಲ್ಲ. ಆದರೆ, ದೈಹಿಕವಾಗಿ ಆರೋಗ್ಯವಾಗಿದ್ದು ಮಾನಸಿಕವಾಗಿ ವೈಫಲ್ಯತೆ ಹೊಂದಿರುವ ವ್ಯಕ್ತಿಗಳು ನಿಜವಾದ ವಿಕಲಚೇತನರು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಬೆಳಗಾವಿ ಜಿಲ್ಲಾ ಅಥಣಿ ತಾಲೂಕಿನ ಬಸವರಾಜ ಶಂಕರ ಉಮ್ರಾಣಿ ಹೇಳಿದರು.
ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್ ನಲ್ಲಿ ಜನ ಸಂಗ್ರಾಮ ಪರಿಷತ್, ಯುವ ಶಕ್ತಿ ಸಮಿತಿ ಹೊಸಪೇಟೆ ಬಡಾವಣೆ, ನಮ್ಮೂರು ಸಮುದಾಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಬುಧವಾರ ಸಂಜೆ ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮ ಹಾಗೂ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಉಪನ್ಯಾಸ ಹಾಗೂ ಸಂವಾದದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಲು ಆತಂಕಕ್ಕೆ ಪಡದೇ, ನಿರಂತರ ಅಧ್ಯಯನ, ಧ್ಯಾನ ಮತ್ತು ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನನ್ನ ಅಂಗ ವೈಫಲ್ಯವೇ ನನಗೆ ಸ್ಫೂರ್ತಿಯಾಗಿದ್ದು, ನನಗೆ ಜನ್ಮತಃ ದೃಷ್ಟಿ ದೋಷವಿಲ್ಲದಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಯಾವುದೇ ವರ್ಷದ ತಿಂಗಳು, ದಿನಾಂಕವನ್ನು ಹೇಳಿದಾಗ ಅದು ಯಾವ ವಾರ ಎನ್ನುವುದು ನಿಖರವಾಗಿ ಹೇಳುವುದು. ವಿವಿಧ ನೋಟುಗಳನ್ನು ಕೊಟ್ಟರೆ ಅವುಗಳನ್ನು ಮುಟ್ಟಿ ತಕ್ಷಣವೇ ಅವುಗಳ ಮೌಲ್ಯವನ್ನು ತಿಳಿಸುವುದು. ಗಡಿಯಾರದ ಸಹಾಯವಿಲ್ಲದೆ ಸಮಯವನ್ನು ನಿಖರವಾಗಿ ಹೇಳುವುದು. ಒಂಬತ್ತು-ಹತ್ತು ಸಂಖ್ಯೆಗಳನ್ನು ಒಟ್ಟಿಗೆ ಗುಣಾಕಾರ, ಭಾಗಾಕಾರ, ಕೂಡುವುದು, ಕಳೆಯುವುದು, ಸಂಘಟಕರ ದೂರವಾಣಿ ಸಂಖ್ಯೆಯನ್ನು ನಿಖರವಾಗಿ ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಸಭಿಕರನ್ನು ಹುಬ್ಬೇರಿಸುವಂತೆ ಮಾಡಿದರು.
ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ. ಭಟ್ ಉದ್ಘಾಟಿಸಿದರು. ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್, ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ಮಹೇಶ್ ಖಾರ್ವಿ, ನಮ್ಮೂರು ಸಮುದಾಯ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಸ್. ರಾಘವೇಂದ್ರ, ಯುವ ಶಕ್ತಿ ಸಮಿತಿ ಅಧ್ಯಕ್ಷ ಕೃಷ್ಣ ಮೊಗವೀರ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಗುತ್ತಿ, ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಗಾಯಿತ್ರಿ ಗೋಖಲೆ, ಪ್ರಮುಖರಾದ ಎಸ್. ಕೃಷ್ಣಾನಂದ, ಸುಜಾತಾ ಜೋತಾಡಿ, ಗೌರಮ್ಮ ಭಂಡಾರಿ, ವಿನೋದ್ ವಾಲ್ಮೀಕಿ, ರಮೇಶ ಕಲ್ಲಂಬಿ, ಕೆ.ಎಂ. ರಾಜೇಂದ್ರ, ಶ್ರೀಧರ್ ಇಂಟರ್ನ್ಯಾಷನಲ್ ಸ್ಕೂಲ್ನ ಬೋಧಕ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post