ಕಲ್ಪ ಮೀಡಿಯಾ ಹೌಸ್ | ಸೊರಬ |
ತಮ್ಮದೇ ಆದ ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾ, ಸಂಘದ ಸದಸ್ಯರನ್ನು ಕಡೆಗಣಿಸುವ ಪ್ರವೃತ್ತಿ ಅನುಸರಿಸುತ್ತಿರುವ ದೇವೇಂದ್ರಪ್ಪ ಚನ್ನಾಪುರ ಅವರನ್ನು ಗಂಗಾಮತ ಸಮಾಜದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಮದು ಸಮಾಜದ ಪ್ರಧಾನ ಕಾರ್ಯದರ್ಶಿ ಜಿ. ಸಂಗಮೇಶ್ ಶಂಕರಿಕೊಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ತಾಲೂಕಿನಲ್ಲಿ ಗಂಗಾಮತ ಸಮಾಜ ಸರ್ವ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಪಕ್ಷಾತೀತ ನಿಲುವಿನೊಂದಿಗೆ ಮುನ್ನೆಡೆಯುತ್ತಿದೆ. ಆದರೆ, ದೇವೇಂದ್ರಪ್ಪ ಚನ್ನಾಪುರ ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಸಮಾಜದ ಬಹುತೇಕ ಸದಸ್ಯರಿಗೆ ಬೇಸರ ತಂದಿದೆ ಎಂದರು.
ಗಂಗಾಮತ ಸಮಾಜ ನೋಂದಣಿಯಾಗಿದ್ದು, ಸಂಘದ ಬೈಲಾ ಪ್ರಕಾರ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷಕ್ಕೆ ಸೀಮಿತವಾಗಿರುತ್ತದೆ. ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರೆ ಮಾತ್ರ ಅಧಿಕಾರವನ್ನು ಮುನ್ನೆಡೆಸಲು ಅವಕಾಶವಿದೆ. ದೇವೇಂದ್ರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿದಾಗ ಒಪ್ಪಿಗೆ ಸೂಚಿಸಿದ್ದರು. ಆದರೆ, ಅಧಿಕಾರಾವಧಿ ಮುಗಿದು ಸುಮಾರು ಎರಡು ವರ್ಷಗಳು ಕಳೆದರೂ ಸಹ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೇ ನಿರ್ಲಕ್ಷ್ಯತೆಯಿಂದ ವರ್ತಿಸುತ್ತಿರುವುದನ್ನು ಖಂಡಿಸಿ ಸಂಘದ 21 ಸದಸ್ಯರ ಪೈಕಿ 14 ಸದಸ್ಯರು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ತೀರ್ಮಾನಿಸಿ, ಸಂಘಗಳ ಜಿಲ್ಲಾ ನೋಂದಾಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಲಾಗಿದೆ. ಜೊತೆಗೆ ಸಂಘದ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಹಾಗೂ ಸೆಪ್ಟಂರ್ಬ ಅಂತ್ಯದೊಳಗೆ ನೂತನ ಕಾರ್ಯಕಾರಿ ಸಮಿತಿ ರಚನೆ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
Also read: ಬಳ್ಳಾರಿ-ವಿಜಯನಗರ-ಕೊಪ್ಪಳ ವಲಯ ಸುರಕ್ಷತಾ ಸಮಿತಿಯಿಂದ ಸುರಕ್ಷತೆ ಕುರಿತ ಒಂದು ದಿನದ ಸೆಮಿನಾರ್ ಸಂಪನ್ನ
ಸಂಘದ ನಿರ್ದೇಶಕ ಪರಶುರಾಮ ಹುರಳಿ ಮಾತನಾಡಿ, ಆನವಟ್ಟಿಯಲ್ಲಿ ಹಾಗೂ ಪಟ್ಟಣದಲ್ಲಿ ನಡೆದ ಸಮಾಜದ ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಅಧ್ಯಕ್ಷರಾದ ದೇವೇಂದ್ರಪ್ಪ ತಿಳಿಸಿದ್ದರು. ಆದರೆ, ಈವರೆಗೂ ಸಭೆಯನ್ನು ಕರೆಯದೇ ಉದ್ಧಟತನದಿಂದ ಸಂಘದ ಸದಸ್ಯರನ್ನೇ ಬದಲಾವಣೆ ಮಾಡಲು ಏಕಪಕ್ಷೀಯವಾಗಿ ತೀರ್ಮಾನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸಮಾಜದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರ ಗಮನಕ್ಕೆ ಯಾವುದೇ ವಿಷಯಗಳನ್ನು ತರುತ್ತಿಲ್ಲ. ಜೊತೆಗೆ ಬೈಲಾ ನಿಯಮಗಳನ್ನು ಪಾಲಿಸುತ್ತಿಲ್ಲ. ದಾಖಲೆಗಳನ್ನು ಸಹ ಸುಪರ್ಧಿಯಲ್ಲಿಟ್ಟುಕೊಂಡು ಸಮಾಜವನ್ನು ಹಾಳು ಮಡುತ್ತಿದ್ದಾರೆ. ಇದನ್ನು ಖಂಡಿಸಿ ತಾಲೂಕಿನ ಎಲ್ಲಾ ಹೋಬಳಿಗಳ ಸದಸ್ಯರು ಬೇಸರಿಸಿಕೊಂಡಿದ್ದಾರೆ. ಸಂಘದಲ್ಲಿ ರಾಜಕೀಯ ಬೆರೆಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯಕ್ಷರಾದ ದೇವೇಂದ್ರಪ್ಪ ಅವರನ್ನು ಬದಲಿಸಿ ಪಕ್ಷಾತೀತ ವ್ಯಕ್ತಿತ್ವವುಳ್ಳ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಈರಪ್ಪ ಹಿತ್ಲರ್ ಜಡೆ, ನಿರ್ದೇಶಕರಾದ ರಾಮಪ್ಪ ಆನವಟ್ಟಿ, ಪಿ.ಜಿ. ನಾಗರಾಜ, ಎಂ.ಅಶೋಕ್ ಜಡೆ, ಸಮಾಜದ ಪ್ರಮುಖರಾದ ಪ್ರಭು ಕಮನವಳ್ಳಿ, ಪರಶುರಾಮ ಸೊರಬ ಉಪಸ್ಥಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post