ಕಲ್ಪ ಮೀಡಿಯಾ ಹೌಸ್
ಸೊರಬ: ಕ್ರಾಂತಿಯ ಪರ್ವವಾದ 12ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರರ ಕೊಡುಗೆ ಅಪಾರವಾಗಿದ್ದು, ಅಸಮಾನತೆ, ವರ್ಣ, ಜಾತಿ, ಲಿಂಗಬೇಧ ತೊಡೆದು ಹಾಕುವ ಕಾರ್ಯವನ್ನು ವಚನಗಳ ಮೂಲಕ ಮಾಡಿದರು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಶಕುನವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ 12ನೆಯ ಶತಮಾನವು ಪ್ರಮುಖ ಕಾಲಘಟ್ಟವಾಗಿದ್ದು, ಬಸವಾದಿ ಶರಣರು ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಬಸವಣ್ಣ ಹಾಗೂ ಸಿದ್ಧರಾಮೇಶ್ವರ ಶ್ರೇಷ್ಠ ವಚನಕಾರರು. ಬಸವಣ್ಣ ರಾಜಕೀಯ ಮತ್ತು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು. ಸಿದ್ಧರಾಮೇಶ್ವರರು ಸಮಾಜ ಸೇವೆಯಲ್ಲಿ ತೊಡಗಿದ್ದರು. ಆಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ಮುಂದಿನ ಜನಾಂಗಕ್ಕೆ ಪರಿಚಯಿಸುವ ಕೆಲಸವಾಗಬೇಕು. ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಶಿವಯೋಗಿ ಸಿದ್ಧರಾಮೇಶ್ವರರ ಸಂದೇಶಗಳನ್ನು ತಿಳಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಅನೇಕ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿ, ಕ್ರಾಂತಿಕಾರಕ ಬದಲಾವಣೆ ತಂದರು. ವಚನಗಳು ಸಾರ್ವಕಾಲಿಕ. ಸಿದ್ಧರಾಮೇಶ್ವರರು ೬೮ ಸಾವಿರ ವಚನಗಳನ್ನು ರಚಿಸಿದ್ದಾರೆ ಎಂದರು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಸಮಸಮಾಜದಲ್ಲಿ ಎಲ್ಲರೂ ಒಂದೇ ಎಂಬುದನ್ನು ಅರಿತು ಕೆಲಸ ಮಾಡಿದರು. ಸಿದ್ಧರಾಮೇಶ್ವರರು ಅಸಂಖ್ಯಾತ ಕೆರೆ, ಬಾವಿ ಕಟ್ಟಿಸಿದರು. ಅಲ್ಲದೇ, ಸಾರ್ವಜನಿಕರ ಉಪಯೋಗಕ್ಕೆ ರಸ್ತೆ, ದೇವಾಲಯಗಳನ್ನು ನಿರ್ಮಿಸಿದರು. ಜನಕಲ್ಯಾಣ ಕಾರ್ಯಗಳನ್ನು ಮಾಡಿ ಕಾಯಕದ ಮಹತ್ವ ಸಾರಿದ ಶಿವಶರಣರು. ಇಂತಹ ಮಹನೀಯರ ವಿಚಾರಧಾರೆ, ತತ್ವಾದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಶಾಂತಾಪುರ ಸಂಸ್ಥಾನ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಕೆ. ಮಹೇಶ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಪಿ.ಎಸ್. ಪ್ರಶಾಂತ್, ಪ್ರಮುಖರಾದ ಕೆ. ಶಂಕರಪ್ಪ, ಎಚ್. ಮಲ್ಲಿಕಾರ್ಜುನ, ಕೆ. ಯಲ್ಲಪ್ಪ, ಶಾಂತಪ್ಪ ನರೇರ್, ಕೇಶವ ಬಿಳಗಲಿ, ಎಚ್. ಕೃಷ್ಣಪ್ಪ, ಕೃಷ್ಣಮೂರ್ತಿ ನಾಡಿಗೇರ್ ಸೇರಿದಂತೆ ಗ್ರಾಮಸ್ಥರು, ದೇವಸ್ಥಾನ ಸಮಿತಿಯವರು ಇದ್ದರು. ಸುರೇಶ್ ಹೆಂಡಗಾರ್ ಸ್ವಾಗತಿಸಿದರು. ಸೌಜನ್ಯ ಶಿವಮೊಗ್ಗ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post