ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ Shri Ranganatha Swamy Brahmarathothsava ಶುಕ್ರವಾರ ಅಪಾರ ಭಕ್ತಿಭಾವ ಹಾಗೂ ವೈಭವದೊಂದಿಗೆ ಜರುಗಿತು. ಈ ಬಾರಿ ನೂತನವಾಗಿ ನಿರ್ಮಿಸಲಾದ ರಥದಲ್ಲಿ ದೇವರ ಮೆರವಣಿಗೆ ನಡೆಯುವುದು ವಿಶೇಷ ಆಕರ್ಷಣೆಯಾಗಿತ್ತು.
ರಥೋತ್ಸವದ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಲ್ಲಕ್ಕಿ ಉತ್ಸವಗಳು ನೆರವೇರಿದವು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳಿಗೆ ನೇತೃತ್ವ ವಹಿಸಿದರು. ತಹಶೀಲ್ದಾರ್ ಪುರಂದರ್ ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.
ನೂತನ ರಥದಲ್ಲಿ ರಾಜಬೀದಿಯ ಮೂಲಕ ಶ್ರೀ ರಂಗನಾಥ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಸುರಭಿ ಪುರಾಧೀಶ್ವರನ ಶೋಭಾಯಾತ್ರೆ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಹೆಚ್ಚಿಸಿತು. ಸಾವಿರಾರು ಭಕ್ತರು ರಥವನ್ನು ಎಳೆದು ಭಕ್ತಿಭಾವ ವ್ಯಕ್ತಪಡಿಸಿದರು.
ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ, ಕಾಳು ಮೆಣಸು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ರಥ ಸಾಗಿದ ಮಾರ್ಗದಲ್ಲಿ ಭಕ್ತರ ಹರಿದು ಬಂದ ಜನಸಾಗರ ಕಂಡುಬಂತು.
ರಥೋತ್ಸವದ ವೇಳೆ ಯಾವುದೇ ಅಡಚಣೆ ಉಂಟಾಗದಂತೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕಪೇಟೆ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಲಿಲ್ಲ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ, ಪಟ್ಟಣದ ನಿವಾಸಿಗಳು ಹಾಗೂ ಹಿರೇಶಕುನ, ಹಳೇಸೊರಬ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ರಥೋತ್ಸವವನ್ನು ಯಶಸ್ವಿಗೊಳಿಸಿದರು.
ಒಟ್ಟಾರೆ, ನೂತನ ರಥದಲ್ಲಿ ನಡೆದ ಈ ವರ್ಷದ ಬ್ರಹ್ಮರಥೋತ್ಸವವು ಸೊರಬ ಪಟ್ಟಣದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮೆರೆಯುವಂತೆ ಮಾಡಿತು.
ವರದಿ :ಮಧು ರಾಮ್ ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















