ಕಲ್ಪ ಮೀಡಿಯಾ ಹೌಸ್
ಸೊರಬ: ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದ್ದರೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ನಿತ್ಯ ಬೆಳಗಿನ 6-10 ಗಂಟೆ ಸಮಯದಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ, ಮುಖ್ಯರಸ್ತೆ, ಮಾರ್ಕೆಟ್ ರಸ್ತೆಯಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನರು ಅನಗತ್ಯವಾಗಿ ಅಲ್ಲಲ್ಲಿ ಕುಳಿತು ಕೊಳ್ಳುವುದು, ಮದುವೆ, ಹಬ್ಬ ಹರಿದಿನ ಎಂದು ಖರೀದಿಗೆ ನಗರಕ್ಕೆ ಆಗಮಿಸುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಅಂಗಡಿಗಳ ಶಟರ್ ಹಾಕಿಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿರುವುದು ಕಂಡು ಬರುತ್ತಿದೆ.
ಕೆಲ ವ್ಯಾಪಾರಿಗಳು ಮನೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಹಣ್ಣು ಹಂಪಲು ಮಾರಾಟಕ್ಕೆ ಅವಕಾಶ ನೀಡಿದ್ದರೂ ವ್ಯಾಪಾರಿಗಳು ಮನೆಮನೆಗೆ ತೆರಳಿ ವ್ಯಾಪಾರ ಮಾಡದೇ ಒಂದೇ ಕಡೆ ನಿಲ್ಲುವುದರಿಂದ ಜನಜಂಗುಳಿ ಉಂಟಾಗುತ್ತಿದೆ.
ದಿನಸಿ ವಸ್ತು ಖರೀದಿಗೆ ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನರು!
ಪಟ್ಟಣದಲ್ಲಿ ಕೆಲ ದಿನಸಿ ವಸ್ತುಗಳ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ವಸ್ತುಗಳನ್ನು ಮಾರುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಕೆಲವು ವರ್ತಕರು ಕೇವಲ ಭರ್ಜರಿ ವ್ಯಾಪಾರದಲ್ಲೇ ಮಗ್ನರಾಗಿದ್ದರು ವಿನಃ ಮಾಸ್ಕ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳು ಗ್ರಾಹಕರಿಗೂ ಸೂಚಿಸಲಿಲ್ಲ. ಈ ನಡುವೆ ದಂಡ ಹಾಕಬೇಕಾದ ಪುರಸಭೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸಿದರು.
ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳ್ಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಜನರು ಮಾತ್ರ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿ, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಮಾಸ್ಕ್ ಧರಿಸದೇ ಪಟ್ಟಣದಲ್ಲಿ ಸಂಚಾರ ಮಾಡುತ್ತಿದ್ದಾರೆ. ಅಂಗಡಿಯವರು ನಾಮಕಾವಸ್ತೆಗಾಗಿ ಸ್ಯಾನಿಟೈಜರ್ ಇಟ್ಟಿದ್ದು ಹಚ್ಚಿಕೊಳ್ಳುವಂತೆ ಕಡ್ಡಾಯವಾಗಿ ಗ್ರಾಹಕರಿಗೆ ಹೇಳುತ್ತಿಲ್ಲ. ಪೊಲೀಸರು ಕೇವಲ ಬೈಕ್ ಸವಾರರನ್ನು ಮಾತ್ರ ಹಿಡಿದು ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.
ನಿರ್ಬಂಧದ ನಡುವೆ ನಡೆಯಿತು ವಾರದ ಸಂತೆ!
ಕೊರೋನಾ ಕರ್ಫ್ಯೂ ಜಾರಿಯಾದ ಬೆನ್ನಲ್ಲೆ ವಾರದ ಸಂತೆ ನಡೆಸಲು ನಿಷೇಧವಿದ್ದರೂ ಸಹ, ಹಳೇ ಸೊರಬದ ಹೊಸಪೇಟೆ ಬಡಾವಣೆಯಲ್ಲಿ ವಾರದ ಸಂತೆ ರಾಜಾರೋಷವಾಗಿ ನಡೆಯಿತು. ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿ ಬಿದ್ದ ಜನ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದನ್ನೇ ಮರೆತಂತೆ ಕಂಡುಬಂತು. ನೂರಾರು ಸಂಖ್ಯೆಯಲ್ಲಿ ಜನ ಜಮಾವಣೆಗೊಂಡರೂ ಪಿಡಿಓ ಮಾತ್ರ ಇತ್ತ ಕಡೆ ಗಮನ ಹರಿಸಲಿಲ್ಲ. ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ವರ್ತಿಸುವ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post