ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರವು ಕೇವಲ ಮನುಷ್ಯನಿಗಷ್ಟೇ ಸೀಮಿತವಾಗಿಲ್ಲ; ಸಕಲ ಜೀವಜಗತ್ತಿನ ಅಸ್ತಿತ್ವಕ್ಕೂ ಅವಶ್ಯಕವಾಗಿದೆ. ಹೀಗಾಗಿ ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡಬೇಕಿದ್ದು, ವಿಶೇಷವಾಗಿ ಯುವ ಸಮೂಹದಲ್ಲಿ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆಯ ಮನೋಭಾವ ಬೆಳೆಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ತಾಲ್ಲೂಕಿನ ಹರೀಶಿ ಗ್ರಾಮದ ವಿನಾಯಕ ಸ್ಮಾರಕ ಕ್ರೀಡಾಂಗಣದಲ್ಲಿ ರಾಘವಿ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಪರಿಸರವು ವಿಶಾಲವಾದ ಪ್ರಪಂಚದಂತೆ. ವಿಶ್ವದ ಪ್ರತಿಯೊಂದು ಜೀವಿಗೂ ಅದರ ಅಗತ್ಯವಿದೆ. ಮಲೆನಾಡು ಪ್ರದೇಶದ ಜನರು ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಗಿಡ ನೆಡುವುದು ಮಾತ್ರವಲ್ಲ, ಅವುಗಳ ಪಾಲನೆ-ಪೋಷಣೆಯೂ ಅಷ್ಟೇ ಮುಖ್ಯವಾಗಿದೆ” ಎಂದು ಹೇಳಿದರು.
ಮಲೆನಾಡಿನಂತಹ ಹಸಿರು ಪರಿಸರವನ್ನು ಉಳಿಸಿಕೊಳ್ಳುವ ಅಗತ್ಯವಿದ್ದು, ಪ್ರಕೃತಿಯೊಂದಿಗೆ ಬದುಕುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಪರಿಸರದ ಮಹತ್ವವನ್ನು ಅನೇಕ ಕವಿಗಳು ತಮ್ಮ ಕೃತಿಗಳ ಮೂಲಕ ಸಾರಿದ್ದು, ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಇಂದಿನ ಮಕ್ಕಳು ಮತ್ತು ಯುವಕರು ಮೊಬೈಲ್ ಬಳಕೆಗೆ ಹೆಚ್ಚು ಸಮಯ ಮೀಸಲಿಡುತ್ತಿರುವುದು ಕಳವಳಕಾರಿ. ಪರಿಸರ, ಪ್ರಕೃತಿ ಮತ್ತು ಜೀವಜಗತ್ತಿನ ಕುರಿತು ಅಧ್ಯಯನ ಮಾಡುವ ಮೂಲಕ ಜಾಗೃತಿ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಅರಿವು ಬಾಲ್ಯದಿಂದಲೇ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಘವಿ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಫೌಂಡೇಷನ್ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರವಾಗಿದ್ದು, ನಿಸರ್ಗವು ಅದರ ಸಮತೋಲನವನ್ನು ಕಾಪಾಡುತ್ತದೆ. ಆದರೆ ಮನುಷ್ಯನ ಅನಪೇಕ್ಷಿತ ಹಸ್ತಕ್ಷೇಪ, ಸ್ವಾರ್ಥ ಹಾಗೂ ಯೋಜನಾರಹಿತ ಚಟುವಟಿಕೆಗಳಿಂದ ಪರಿಸರದ ಸಮತೋಲನ ಕುಸಿಯುತ್ತಿದೆ ಎಂದು ಹೇಳಿದರು.
ಮಾನವನ ಆರೋಗ್ಯವು ಪರಿಸರವನ್ನು ಅವಲಂಬಿಸಿದ್ದು, ಪರಿಸರದ ಆರೋಗ್ಯದ ಕಡೆಗೆ ಗಮನ ನೀಡುವುದು ಅತ್ಯಂತ ಅವಶ್ಯಕವಾಗಿದೆ. ಪರಿಸರ ನಾಶದಿಂದಾಗಿ ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚುತ್ತಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಚಿಂತನೆಯನ್ನು ಬದಲಾಯಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಮಕ್ಕಳಲ್ಲಿ ಪರಿಸರದ ಬಗ್ಗೆ, ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಡುವ ಬಗ್ಗೆ ಹಾಗೂ ಪರಿಸರವನ್ನು ಬೆಳೆಸುವ ಕುರಿತು ಅರಿವು ಮೂಡಿಸುವ ಮೂಲಕ ಜಾಗೃತಿ ಬೆಳೆಸುವುದು ಅಗತ್ಯವಾಗಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗದೆ, ಪರಿಸರ ಸಂರಕ್ಷಣೆ ಜೀವನದ ಭಾಗವಾಗಬೇಕು. ಸಮಾಜದ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಶಾಲಾ ಪಠ್ಯಕ್ರಮದಲ್ಲಿ ಕೃಷಿ ಹಾಗೂ ಪರಿಸರ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳಲ್ಲಿ ಪ್ರಕೃತಿ ಮತ್ತು ಕೃಷಿಯ ಬಗ್ಗೆ ಕಾಳಜಿ ಬೆಳೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿವಕುಮಾರ್ ಕಡಸೂರು, ರಾಜು ಕೆಂಜಿಕೊಪ್ಪ, ಹೊಳಿಯಮ್ಮ, ಈಶ್ವರ ಚನ್ನಪಟ್ಟಣ, ಸುರೇಶ್ ಉದ್ರಿ, ಜಿ.ಎಸ್. ಹೆಗಡೆ, ರಾಜು ಮಾವಿನಬಳ್ಳಿಕೊಪ್ಪ, ವಜ್ರಕುಮಾರ್, ಶ್ರೀನಿವಾಸ್ ಭಟ್, ಕೃಷ್ಣಪ್ಪ, ಮಹೇಶ್, ಗಣೇಶ್ ಆಚಾರ್, ಶ್ರೀಧರ್ ಡಿ.ಪಿ. ಸೇರಿದಂತೆ ಹಲವರು ಭಾಗವಹಿಸಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news
















