ಕಲ್ಪ ಮೀಡಿಯಾ ಹೌಸ್
ಬದುಕಿನಲ್ಲಿ ಪ್ರತಿಯೊಬ್ಬರೂ ಪಡೆಯಲು ಸಾಧ್ಯವಾಗದ; ಆದರೆ ಪ್ರತಿಯೊಬ್ಬರೂ ಅರಿಯಲೇಬೇಕಾದ ಅಂತಃರಂಗದ ವಿದ್ಯೆಯನ್ನು ಕಲೆ ಎನ್ನಬಹುದು. ಹೀಗೆ ಅಂತಃರಂಗದಲ್ಲಿ ಅಡಗಿರುವ ಪ್ರತಿಭೆಯನ್ನು ವಿಕಸನಗೊಳಿಸಿಕೊಳ್ಳಲು ಕೇವಲ ಕೆಲವೇ ಕೆಲವು ಸಾಧಕರಿಗೆ ಮಾತ್ರ ಸಾಧ್ಯವಾಗುತ್ತದೆ.
ಸಾಧನೆ ಎಂದರೆ ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಸಾಧಿಸಿದುದು ಎಂದರ್ಥ. ನಾವು ಏನು ಮಾಡಬೇಕೆಂದಿರುತ್ತೇವೆಯೋ ಅದನ್ನು ಯಶಸ್ವಿಯಾಗಿ ಮಾಡಿದಾಗಲೇ ಅದು ಸಾಧನೆ ಎನ್ನಿಸಿಕೊಳ್ಳುತ್ತದೆ. ಬದುಕಿಗೆ ಉದಾತ್ತವಾದ ಸಂಸ್ಕಾರ ನೀಡಿ, ವ್ಯಕ್ತಿಯನ್ನು ತೀಡಿ, ಭವ್ಯವಾದ ವ್ಯಕ್ತಿತ್ವವನ್ನು ರೂಪಿಸಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ನಾಲ್ದೆಸೆಗಳಿಂದ ಮಾನ್ಯತೆ ದೊರೆಯುತ್ತದೆ. ಒಂಬತ್ತು ವರ್ಷ ಹರೆಯದಲ್ಲಿಯೇ ತನ್ನ ಅಸಾಧಾರಣ ಪ್ರತಿಭೆ ಹಾಗೂ ಸಾಧನೆಗಳಿಂದ ಮಾನ್ಯತೆಗೊಳ್ಳುತ್ತಿರುವವರು ಬೆಂಗಳೂರಿನ ಬಾಲಕಿ ಮಾನ್ಯತಾ ಜೈಕುಮಾರ್.
ಮಾನ್ಯತಾ ಅವರು ಸುಮಾರು ಒಂದು ವರ್ಷ ಹರೆಯದಲ್ಲಿಯೇ ತಮ್ಮ ಪುಟ್ಟ ಪುಟ್ಟ ನುಣುಪಾದ ಪಾದಗಳಿಗೆ ನೂಪುರಗಳನ್ನು ಕಟ್ಟಿಸಿಕೊಂಡು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಅಂದರೆ ಉಲಿಯಲು ಕಲಿಯುವ ಮೊದಲೇ ನಲಿಯಲು ಕಲಿತವರು. ಇವರ ಹುಟ್ಟು ಪ್ರತಿಭೆಯನ್ನು ಕಂಡ ಹೆತ್ತವರು ಸಮಯೋಚಿತವಾಗಿ ಪ್ರೋತ್ಸಾಹಿಸಿದರು. ಕ್ರಮಬದ್ಧವಾಗಿ ಕಲಿಕೆಗೆ ಅನುವು ಮಾಡಿಕೊಟ್ಟರು. ತಮ್ಮ ನಾಲ್ಕನೆ ವರ್ಷದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡುವಷ್ಟು ಶಕ್ತ ನೃತ್ಯಗಾತಿಯಾದರು ಮಾನ್ಯತಾ. ಭರತನಾಟ್ಯವನ್ನು ನೃತ್ಯಗುರು ಶ್ರೀಸೋಮಶೇಖರ ಅವರಿಂದ ಕಲಿತರೆ ಪಾಶ್ಚಿಮಾತ್ಯ ನೃತ್ಯಗಳನ್ನು ಮಾಸ್ಟರ್ ಮೋಹನ್ ಅವರಿಂದ ಕಲಿಯುತ್ತಿದ್ದಾರೆ. ಮಾಡೆಲಿಂಗ್ ತರಬೇತಿಯನ್ನು ಬ್ಲಿಟ್ಜ್ ಟುಡೆ ನಟನ ತರಗತಿಯಿಂದ ಪಡೆಯುತ್ತಿದ್ದಾರೆ.
ಮಾನ್ಯತಾ ಅವರು ಭರತನಾಟ್ಯ, ಪಾಶ್ಚಾತ್ಯ ನೃತ್ಯ, ರೂಪದರ್ಶಿತ್ವದೊಂದಿಗೆ ನಟನೆಯನ್ನು ಕೂಡ ಮೈಗೂಡಿಸಿಕೊಂಡವರು. ನೂರಾರು ವೇದಿಕೆಗಳಲ್ಲಿ ಹಿರಿಯ ನಟಿಯಾರದ ಕಲ್ಪನಾ, ಮಂಜುಳಾ, ಉಮಾಶ್ರೀ ಮುಂತಾದವರ ನಟನೆಯನ್ನು ಅತ್ಯುತ್ತಮವಾಗಿ ಅನುಕರಿಸಿ ಅಚ್ಚುಮೆಚ್ಚಿನ ಬಾಲನಟಿ ಎಂದು ಕರೆಸಿಕೊಂಡಿದ್ದಾರೆ. ಬೆಂಗಳೂರಿನ ಕೆ. ಆರ್. ಪುರಮ್ ಇಲ್ಲಿನ ದಿವ್ಯಾ ಅಕಾಡೆಮಿ ಆಫ್ ಲರ್ನಿಂಗ್ ಶಾಲೆಯ ನಾಲ್ಕನೆ ತರಗತಿಯ ವಿದ್ಯಾರ್ಥಿನಿ ಮಾನ್ಯತಾ. ಅವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದಿನ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ನೃತ್ಯ ಸ್ಪರ್ಧೆ, ಛದ್ಮವೇಷ ನಟನೆಗಳಲ್ಲಿ ತಪ್ಪದೇ ಬಹುಮಾನ ಗಳಿಸುತ್ತ ಬಂದವರು.
ಮಾನ್ಯತಾ ಅವರು ಹಲವಾರು ಉತ್ಪನ್ನಗಳಿಗೆ ರೂಪದರ್ಶಿಯಾಗಿ ಅಭಿನಯಿಸಿದ್ದಾರೆ. 2021ರ ಮಕ್ಕಳ ಕ್ಯಾಲೆಂಡರಿಗೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ. 2020ರಲ್ಲಿ ನಡೆದ ’ವಂಡರ್ ಕಿಡ್ಸ್’ ಸ್ಪರ್ಧೆಯಲ್ಲಿ ಎರಡನೆ ಸ್ಥಾನವನ್ನು ಪಡೆದಿದ್ದಾರೆ. 2021ರ ಜುಲೈ ತಿಂಗಳಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ’ಫ್ಯಾಷನ್ ಶೋ’ಗೆ ಆಯ್ಕೆಯಾದ ಐದು ಸ್ಪರ್ಧಿಗಳಲ್ಲಿ ಮಾನ್ಯತಾ ಒಬ್ಬರು. ಅವರು ಟ್ಟ್ಝ ಆಟಟ ಟ್ಛ ್ಝಛ್ಞಿಠಿ ್ಕಛ್ಚಿಟ್ಟ ಇದಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡ ಹಾಗೂ ಇತರ ಭಾಷೆಗಳ ದೂರದರ್ಶನ ವಾಹಿನಿಗಳ ಧಾರಾವಾಹಿಗಳಲ್ಲಿ ಹಾಗೂ ಯೂ-ಟ್ಯೂಬ್ ವೆಬ್ ಸಿರಿಸ್’ಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಭಾರತರತ್ನ, ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನ್ಮದಿನವಾದ ಎಪ್ರಿಲ್ 14 ರಂದು ಜನಿಸಿರುವವರು ಮಾನ್ಯತಾ ಅವರಿಗೆ ಸಾಯಿ ಕೋಶಿನ್ ಕುಮಾರ್ ಎನ್ನುವ ಪುಟ್ಟ ಅನುಜನಿದ್ದಾನೆ. ತಾಯಿ ಶ್ರೀಮತಿ ಜ್ಯೋತಿ ಐಶ್ವರ್ಯ ಅವರು ಶಿಕ್ಷಕಿ. ತಂದೆ ಜೈಕುಮಾರ್ ಅವರು ಕಂಪ್ಯೂಟರ್ ಇಂಜಿನಿಯರ್. ಮಾನ್ಯತಾ ಅವರು ಮುಂದೆ ಜೀವರಕ್ಷಕ ವೈದ್ಯೆಯಾಗಬೇಕೆಂದು ಬಯಸಿದ್ದಾರೆ. ಮಾನ್ಯತಾ ಅವರ ಹುಟ್ಟಿದ ದಿನವಾದ ಇಂದು ಸೌರಮಾನ ಯುಗಾದಿ ಹಬ್ಬವೂ ಆಚರಿಸಲ್ಪಡುತ್ತಿದೆ. ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಭವಿತವ್ಯದಲ್ಲಿ ಅವರ ಸಾಧನೆಗಳು ಶಿಖರಪ್ರಾಯವಾಗಿರಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post