ಕಲ್ಪ ಮೀಡಿಯಾ ಹೌಸ್ | ಲೇಖನ: ಶಿವಮೊಗ್ಗ ರಾಮ್ |
ಉದ್ಯಾನನಗರಿಯ ನೃತ್ಯಕಲಾ ಗುರುಕುಲದ ಗುರು ದೀಕ್ಷಾ ಶಾಸ್ತ್ರಿ ಅವರ ಶಿಷ್ಯೆ ಪ್ರಣವಿ ಬೇರಿಕೆ ಭರತನಾಟ್ಯ #Bharatanatyam ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಜೂ. 24ರ ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜೆಎಸ್ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ರಂಗಪ್ರವೇಶಕ್ಕೆ #Rangapravesha ಮುಖ್ಯ ಅತಿಥಿಗಳಾಗಿ ದೃಷ್ಟಿ ಆರ್ಟ್ ಸೆಂಟರ್ ನಿರ್ದೇಶಕಿ ವಿದುಷಿ ಅನುರಾಧಾ ವಿಕ್ರಾಂತ್, ನಾದಂ ನೃತ್ಯ ಕೇಂದ್ರದ ನಿರ್ದೇಶಕಿ ನಂದಿನಿ ಮೆಹ್ತಾ ಆಗಮಿಸಿ ಯುವ ಕಲಾವಿದೆಗೆ ಪ್ರೋತ್ಸಾಹ ತುಂಬಲಿದ್ದಾರೆ. ಪ್ರಣವಿ ರಂಗಪ್ರವೇಶ ಪ್ರಸ್ತುತಿಗೆ ವಿದುಷಿ ಕಾಂಚನ ಶ್ರೀರಂಜನಿ (ಗಾಯನ), ಗುರು ದೀಕ್ಷಾ ಶಾಸ್ತ್ರಿ (ನಟುವಾಂಗ), ವಿದ್ವಾಂಸರಾದ ಹರ್ಷ ಸಾಮಗ (ಮೃದಂಗ), ಎನ್. ಆರ್. ಶ್ರೀಕೃಷ್ಣ ಭಟ್ (ಕೊಳಲು) ಮತ್ತು ಎ. ಶಂಕರ್ ರಾಮನ್ (ವೀಣೆ) ಪಕ್ಕವಾದ್ಯ ಸಹಕಾರವಿದೆ.

ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯೂನಿಕೇಷನ್ ಇಂಜಿನಿಯರಿಂಗ್ ದ್ವಿತೀಯ ಸೆಮಿಸ್ಟರ್ ಪದವಿ ಅಧ್ಯಯನ ಮಾಡುತ್ತಿರುವ ಪ್ರಣವಿ ನೃತ್ಯ ಕಲಿಕೆಗೆ ಅಡಿ ಇಟ್ಟಿದ್ದು 6ನೇ ವಯಸ್ಸಿನಿಂದ. ಇಂಜಿನಿಯರ್ ವೃತ್ತಿಯಲ್ಲಿರುವ ಜಯಲಕ್ಷ್ಮೀ ಮತ್ತು ಲಕ್ಷ್ಮೀಶ್ ದಂಪತಿಗೆ ಮಗಳು ಕಲಾವಿದೆ ಆಗಬೇಕು ಎಂಬ ಉತ್ಕಟ ಅಪೇಕ್ಷೆಗೆ ಪ್ರಣವಿಯ ಉತ್ಸಾಹವೂ ಮಿಳಿತಗೊಂಡಿದ್ದು ಸುಕೃತವೇ ಸರಿ.

ಬಹುಬೇಗ ನೃತ್ಯಕಲೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದು ಈಕೆಯ ವಿಶೇಷತೆ. ಭರತನೃತ್ಯದ ಮೇರು ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಪರಂಪರೆಯಲ್ಲಿ ಬಂದ ಶಿಷ್ಯೆ, ವಿಶ್ವಖ್ಯಾತಿಯ ಕಲಾವಿದೆ ಸುಂದರಿ ಸಂತಾನಂ ಕಲಾ ಕ್ಷೇತ್ರಕ್ಕೆ ಚಿರಪರಿಚಿತರು. ಇವರ ಮಾರ್ಗದರ್ಶನದಲ್ಲಿ ಸಾಗಿಬಂದಿರುವ ಭರತ ನೃತ್ಯಶಾಲೆಯ ಹೆಸರಾಂತ ನರ್ತಕಿಯರಾದ ಹರಿಣಿ ಸಂತಾನಂ, ದೀಕ್ಷಾ ಶಾಸ್ತ್ರಿ, ನಯನಾ ಸೋಮಯಾಜಿ, ನಮಿತಾ ರಾವ್, ಶ್ವೇತಾ ರಾಜಶೇಖರ್ ಅವರಿಂದ ನೃತ್ಯದ ಪಟ್ಟುಗಳನ್ನು ಕಲಿತುಕೊಂಡ ಪ್ರಣವಿ ಹಿಂತಿರುಗಿ ನೋಡಲೇ ಇಲ್ಲ. ಸದ್ಯ 2 ವರ್ಷದಿಂದ ದೀಕ್ಷಾ ಶಾಸ್ತ್ರಿ ಅವರಲ್ಲಿ ಕಲಿಕೆ ಮುಂದುವರಿಸಿರುವ ಪ್ರಣವಿ ಈಗ ಮಾರ್ಗ ಕರಣಗಳ ಅಭ್ಯಾಸದತ್ತ ಆಸಕ್ತಿ ತೋರಿದ್ದಾಳೆ.

ವಿವಿಧೆಡೆ ಪ್ರದರ್ಶನ
ಭರತ ನೃತ್ಯಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದ ಪ್ರಣವಿ, ಬೆಂಗಳೂರಿನ ದಕ್ಷಿಣ ಅಯೋಧ್ಯಾ ಎಂದೇ ಖ್ಯಾತವಾದ ಕೋದಂಡರಾಮ ದೇವಾಲಯದಲ್ಲಿ ಆಯೋಜಿಸಿದ್ದ ದಸರಾ #Dasara ಉತ್ಸವದಲ್ಲಿ ಕಲಾಪ್ರದರ್ಶನ ಮಾಡಿದ್ದು ಹೊಸತನಕ್ಕೆ ನಾಂದಿಯಾಯಿತು. 2022ರಲ್ಲಿ ಬೆಂಗಳೂರು #Bengaluru ಗಾಯನ ಸಮಾಜ ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದದ್ದು ಸ್ಫೂರ್ತಿ ನೀಡಿದೆ. ತಾಂತ್ರಿಕ ಶಿಕ್ಷಣದೊಂದಿಗೆ ಸಂಗೀತ ಮತ್ತು ಭರತ ನೃತ್ಯವನ್ನು ಸಮನ್ವಯಗೊಳಿಸಿಕೊಂಡಿರುವ ಪ್ರಣವಿ ಒಬ್ಬ ಉದಯೋನ್ಮುಖ ಕಲಾವಿದೆಯಾಗಿ ತನ್ನ ಪ್ರತಿಭಾ ವಿಕಸನಕ್ಕೆ ಅಣಿಗೊಂಡಿರುವುದು ಉತ್ತಮ ಯತ್ನ ಎನಿಸಿದೆ.

ಸುಳ್ಯ #Sullia ಮೂಲದ ಜಯಲಕ್ಷ್ಮೀ ಮತ್ತು ಲಕ್ಷ್ಮೀಶ್ ಬೇರಿಕೆ ದಂಪತಿಗೆ ವೃತ್ತಿ ಬದುಕಿನ ನಡುವೆ ಸಂಗೀತ ಕೇಳುವ, ಕಛೇರಿಗಳಿಗೆ ಹೋಗಿ ಗಾಯನ ಆಸ್ವಾದಿಸುವ ಹವ್ಯಾಸ ರೂಢಿಗತವಾಯಿತು. ಇದಕ್ಕೆ ಸಜ್ಜನ ಮಿತ್ರವೃಂದ ಪ್ರೇರಣೆ ನೀಡಿತು. ಉತ್ತಮ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂಬುದಕ್ಕೆ ಪ್ರಣವಿಯೇ ನಿದರ್ಶನ. ಬೇರಿಕೆ ಕುಟುಂಬದಲ್ಲಿ ಯಾವ ಕಲಾವಿದರು ಇಲ್ಲದಿದ್ದರೂ ಪಾಲಕರ ಸಂಗೀತಾಸಕ್ತಿಯೇ ಪ್ರಣವಿ ಕಲಾರಾಧನೆಗೆ ಮುನ್ನುಡಿ ಬರೆಯಿತು.
ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ನೀಡಿದರೆ ಸಾಲದು. ಕಲೆ ಮತ್ತು ಸಂಸ್ಕಾರವನ್ನೂ ನಮ್ಮ ನಿತ್ಯದ ಆಸಕ್ತಿ ಚಟುವಟಿಕೆಗಳಿಂದ ಕಲಿಸಬೇಕು ಎಂಬುದು ಜಯಲಕ್ಷ್ಮೀ ಮತ್ತು ಲಕ್ಷ್ಮೀಶ್ ಆಶಯ. ಅದಕ್ಕೆ ಪ್ರಣವಿ ಪ್ರತೀಕವಾಗಿದ್ದಾಳೆ. ಈಕೆ ಕಲಾರಂಗದ ಪ್ರತಿಮೆಯೂ ಆಗಿ ಮೇರು ಪಂಕ್ತಿಯಲ್ಲಿ ಮಿಂಚಬೇಕು ಎಂಬುದು ಗುರು ದೀಕ್ಷಾ ಶಾಸ್ತ್ರಿ ಅವರ ಆಶಯವೂ ಆಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post