ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
1974 ‘ಶಿವಮೊಗ್ಗ ಟೈಮ್ಸ್’ ದಿನಪತ್ರಿಕೆ ಯ ಮೂಲಕ ಕೆ ಬಿ ರಾಮಪ್ಪ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಧೀಮಂತ ಪತ್ರಕರ್ತರಾದ ಖಾದ್ರಿ ಶಾಮಣ್ಣ ಅವರೆ ಈ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದರು. ಸುಮಾರು ಮೂರು ದಶಕಗಳಿಗೂ ಹೆಚ್ಚುಕಾಲ ಪತ್ರಿಕೆಯನ್ನು ಮುನ್ನೆಡೆಸಿದ ರಾಮಣ್ಣ ಪತ್ರಿಕೋದ್ಯಮ ಅಧ್ಯಯನಕ್ಕೆ ಒಂದು ಆಕರ ವಿಷಯವಾಗಿ ದಕ್ಕಬಲ್ಲರು.
ಕೆ ಬಿ ರಾಮಪ್ಪ . ನನ್ನ ಪ್ರೀತಿಯ ‘ಕೆಬಿಆರ್’ ಗೂ ನನಗೂ ವಯಸ್ಸಿನಲ್ಲಿ ಸರಿ ಸುಮಾರು ನಲವತ್ತು ವರ್ಷಗಳ ಅಂತರ. ನಾನು ಅವರ ಹಿರಿಯ ಮಕ್ಕಳ ಸರಿಸಮಾನ ಎನ್ನಬಹುದು.
ಅವೆಲ್ಲವನ್ನೂ ಮೀರಿದ ಅನುಗಾಲದ ಗೆಳೆಯನಂತೆ ಸತತ 27 ವರ್ಷಗಳ ಕಾಲ ಕೆಬಿಆರ್ ನನ್ನನ್ನು ಪ್ರಭಾವಿಸಿದ್ದಿದೆಯಲ್ಲಾ ಅದೊಂದು ಸೊಜಿಗದ ಸಂಗತಿಯೇ ಸರಿ.
ವಯಸ್ಸಿನ ಹಿರಿಯನಾಗಿ, ಸರಿಸಮಾನ ಗೆಳೆಯನಾಗಿ, ಹಿತೈಷಿಯಾಗಿ, ಮಾರ್ಗದರ್ಶಕನಾಗಿ ಅದಕ್ಕಿಂತ ಮಿಗಿಲಾಗಿ ವಯಸ್ಸು, ಸ್ಥಾನ ಮಾನಗಳ ಹಮ್ಮುಬಿಮ್ಮು ಇಲ್ಲದೆ ಪರಿಚಾರಕನಂತೆಯೂ ಬದುಕಿನ ಸಹನೆ, ಸೌಜನ್ಯವನ್ನು ಕೆಬಿಆರ್ ‘ಗೆಳೆತನ’ ದಿಂದ ಕಲಿಯಬೇಕಾಯ್ತು.
‘ಗುರು ನೀನು ಹಸಿ ಹುಲ್ಲಿಗೆ ಬೆಂಕಿ ಹಚ್ತಿಬಿಡ್ತಿಯಾ…’ ಎಂದು ನಾನು ಅದೆಷ್ಟೋ ಬಾರಿ ಅವರ ಕಾಲೆಳೆದಿದ್ದೆ, ನನ್ನ ದುಡುಕಿನ ಸ್ವಾಭಾವದಿಂದ ವಾಗ್ದಾಳಿ ನಡೆಸುವ ಮೂಲಕ ಅವರೊಳಗೆ ಆಗ್ಗಾಗ್ಗೆ ಹೆಡೆಯಾಡುತ್ತಿದ್ದ ನೆಗೆಟೀವ್ attitude ಬಗ್ಗೆಯೂ ತಗಾದೆ ಮಾಡಿ ಬಿಡುತ್ತಿದ್ದೆ.
Also read: ಜೂ. 9ರವರೆಗೆ ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ
ಇಂತಹ ಕಾರಣಗಳಿಗಾಗಿಯೇ, ಅವರ ತಪ್ಪಿಗೆ ನಾನು, ನನ್ನ ತಪ್ಪಿಗೆ ಅವರು ಪರಸ್ಪರ ಹುಸಿ ಜಗಳವಾಡುತ್ತಲೆ ದ್ವೇಷ, ಸೇಡು ರಹಿತ ಮುನ್ನೆಡೆದೆವು. ಪುರುಸೊತ್ತಿದ್ದಾಗ ಅವರ ಜೊತೆ ಒಂದು ರಮ್ಮಿ ಜಾಕ್ ಪಾಟ್ ಆಡೋದೇ ಖುಷಿ. ಜೊತೆಗಿದ್ದು ಉಣ್ಣುವಾಗ ಒಂದು ತುತ್ತು ಹೆಚ್ಚುವರಿ ನನ್ನ ತಟ್ಟೆಗೆ ಹಾಕದೆ ಆ ಜೀವ ಸುಮ್ಮನಿರುತ್ತಿರಲಿಲ್ಲ. ಕಿರಿಯರಿಗಿಂತ ಕಿರಿಯರಾಗಿ ಅವರು ಅನುಭವಿಸುತ್ತಿದ್ದ ಜೀವನೋತ್ಸಾಹ ಅವರ ಆರೋಗ್ಯದ ಗುಟ್ಟು ಎನ್ನಬಹುದೇನೋ.
ಒಮ್ಮೆ ಪತ್ರಕರ್ತರ ಸಂಘದ ಅಧ್ಯಕ್ಷ ಚುನಾವಣೆಯಲ್ಲಿ ಎದುರಾಳಿ (ಶತ್ರುಗಳಲ್ಲ) ಗುಂಪಿನ ಕೈವಶವಾದ ಕೆಬಿಆರ್ ತನ್ನ (ಕು) ತಂತ್ರ ಹೊಸೆದು ನನ್ನನ್ನು ಸೋಲಿಸಿದ (ಅಪ)ಕೀರ್ತಿಯನ್ನೂ , ಅದೇ ಕಾಲಕ್ಕೆ ನನ್ನ ಸಿಟ್ಟನ್ನು ಸ್ವೀಕರಿಸಬೇಕಾಯಿತು ಅವರು.
ಮತ್ತೊಂದು ಬಾರಿಯ ಚುನಾವಣೆಯಲ್ಲಿ ನಾನು ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಗೆದ್ದಾಗ ಎಂದಿನ ಮಮಕಾರದಿಂದ ಕೈ ಹಿಡಿದು ಅಭಿನಂದಿಸಿತು ಆ ಜೀವ. ಅಲ್ಲಿಗೆ ಮುನಿಸುಗಳು ಇತ್ಯರ್ಥಗೊಂಡಿದ್ದವು. ನಮ್ಮಿಬ್ಬರ ಸ್ನೇಹಕ್ಕೆ ಹುಳಿ ಹಿಂಡಿದವರ ಬಣ್ಣ ಅರಿವಾಗಿ ಕೊರಗಿದರು.
ಕೆಬಿಆರ್ ತನ್ನ ಸ್ನೇಹದ ಸೆಳೆವಿಗೆ ಸಿಕ್ಕವರ ಕಷ್ಟ,ನಷ್ಟಗಳ ಪರಿಹಾರಕ್ಕೆ ಹಗಲು ರಾತ್ರಿ ಎನ್ನದೆ, ತನ್ನ ವಯಸ್ಸು, ಆರೋಗ್ಯ ಕಾಳಜಿಯೂ ಇಲ್ಲದೆ ಒಳಿತಿಗಾಗಿ ದುಡಿದದ್ದು ಮಾತ್ರ ಅವರ ಉದಾತ್ತ ಗುಣದ ಸಂಕೇತ.
ದುರಾದೃಷ್ಟವೆಂದರೆ ಅವರಿಂದಲೇ ಉಪಕೃತಾರ್ಥರಾದವರ ‘ಕೃತಘ್ನತೆ’, ‘ದ್ರೋಹಗಳು ಜೊತೆಗೆ ಮಗಳು, ಮಗನ ಅಕಾಲಿಕ ಸಾವು ಅವರನ್ನು ಇಳಿವಯಸ್ಸಿನಲ್ಲಿ ಬಾಧಿಸಿ ಮೆತ್ತೆಗೆ ಮಾಡಿಬಿಟ್ಟವು.
ಕೆಬಿಆರ್ ಎಂಬ ಸ್ಥಿತಪ್ರಜ್ಞ ಜೀವ ಎಲ್ಲವನ್ನೂ ನುಂಗಿಕೊಂಡೆ ನಿರ್ಗಮಿಸಿತು.
ಅಲ್ ವಿದಾ…..ಡಿಯರ್…
ಲೇಖನ: ರವಿಕುಮಾರ್ ಟೆಲೆಕ್ಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post