ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಂಸ್ಕಾರವಂತ ಪಾಲಕರನ್ನು ಪಡೆಯುವುದು ಮಕ್ಕಳಿಗೆ ಒಂದು ಭಾಗ್ಯವಾದರೆ ಅದೇ ರೀತಿ ಸುಸಂಸ್ಕೃತ ಮಾರ್ಗದಲ್ಲಿ ಸಾಗಲು ಆಸಕ್ತಿ ಹೊಂದಿರುವ ಶ್ರದ್ಧಾವಂತ ಸಂತಾನವನ್ನು ಹೊಂದಿರುವುದೂ ಪಾಲಕರ ಸುಕೃತ. ಇವೆರಡೂ ಒಂದೇ ವಂಶದಲ್ಲಿ ಮಿಳಿತವಾಗುವುದು ಬಹು ಅಪರೂಪ. ಈ ನಿಟ್ಟಿನಲ್ಲಿ ಖ್ಯಾತ ನೃತ್ಯ ದಂಪತಿ ಜೋಡಿ ಚಂದ್ರಪ್ರಭಾ- ಚೇತನ್ ಗಂಗಟ್ಕರ್ ಕುಟುಂಬ ಅನನ್ಯತೆಯನ್ನೇ ವರವಾಗಿ ಪಡೆದಿದೆ. ಕಲಾವಿದರ ಮಕ್ಕಳು ಕಲಾವಿದರು ಆಗಲೇಬೇಕು ಎಂದೇನು ನಿಯಮವಿಲ್ಲ. ಹಲವು ಬಾರಿ ಮಕ್ಕಳು ಅನ್ಯ ಆಸಕ್ತಿ ಹೊಂದಿರುತ್ತಾರೆ. ಆದರೆ ಚಂದ್ರಪ್ರಭಾ- ಚೇತನ್ ಮನೆಯಲ್ಲಿ ಅದ್ಭುತ ಚೇತನವೊಂದು ಚಿಗುರೊಡೆಯುತ್ತಿದೆ. ಈಕೆಯೇ ಅವರ ಹೆಮ್ಮೆಯ ಪುತ್ರಿ ಶ್ರೀಚರಿತಾ. ಇದೀಗ ಈಕೆ ಕಥಕ್ ರಂಗಮಂಚ್ ಪ್ರವೇಶಕ್ಕೆ ತಯಾರಿ ಪೂರ್ಣಗೊಳಿಸಿದ್ದಾರೆ. ಜೂ. 18ರ ಸಂಜೆ 6ಕ್ಕೆ ಬೆಂಗಳೂರಿನ ಚೌಡಯ್ಯ ಭವನದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ನರ್ತನ ರಂಗಕ್ಕೆ ಹೇಳಿ ಮಾಡಿಸಿದ ಪ್ರತಿಭೆ
ತಂದೆ ಮತ್ತು ಆಚಾರ್ಯ ವಿದ್ವಾನ್ ಚೇತನ್ರ ಭರತನಾಟ್ಯ, ತಾಯಿ ಮತ್ತು ಗುರು ಚಂದ್ರಪ್ರಭಾರ ಕೂಚುಪುಡಿ ನೃತ್ಯವನ್ನು ನೋಡುತ್ತಲೇ ಬೆಳೆದ ಶ್ರೀಚರಿತಾ, ಭಾವಪೂರ್ಣವಾಗಿ ಅಭಿನಯವನ್ನು ಪರಿಭಾವಿಸಿಕೊಂಡೇ ಅರಳಿದಳು. ಹೆಜ್ಜೆಗಳನ್ನು ಸಮರ್ಥವಾಗಿ ಪಡ ಮೂಡಿಸುವ ಕಲೆಗಾರಿಕೆಯನ್ನು ಅಂತರ್ಗತ ಮಾಡಿಕೊಂಡಿರುವುದೇ ವೇದಿಕೆಗೆ ಮೆರುಗನ್ನು ತಂದು ಕೊಟ್ಟಿತು.
ಹೌದು. ತಂದೆಯ ಗರಡಿಯಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ ಮಗು ಹೊಸ ಹೊಸ ಆಲೋಚನೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿರುವುದೇ ಒಂದು ವಿಸ್ಮಯ. ಕೋವಿಡ್ ಲಾಕ್ಡೌನ್ ಸಂದರ್ಭ ವಿದ್ವಾನ್ ಚೇತನ್ ಕಥಕ್ ನೃತ್ಯ ಕಲಿಯುವ ಆಸಕ್ತಿ ತೋರಿದರು. ಆ ನಿಟ್ಟಿನಲ್ಲಿ ಒಂದಷ್ಟು ತಾಲೀಮು ನಡೆಸಿದ್ದು ಸರಿಯೇ. ಇದನ್ನೇ ಗಮನಿಸುತ್ತಿದ್ದ ಶ್ರೀಚರಿತಾ, ತಾನೂ ಕಥಕ್ ಕಲಿಯಬೇಕು ಎಂಬ ಅಪೇಕ್ಷೆ ಬಿಂಬಿಸಿದಳು. ಆಗ ಕಂಡ ಗುರುವೇ ಶ್ವೇತಾ ವೆಂಕಟೇಶ್. ಕಲಿಕೆಗೆ ಬೆಂಬಲ ನೀಡಿದ ತಂದೆ- ತಾಯಿ ಮಗಳ ಆಸಕ್ತಿಗೆ ನೀರು ಎರೆದರು. ಗುರು ಶ್ವೇತಾ ಭಾವದ ಹೂರಣ ತುಂಬಿದರು. ಚರಿತಾಳ ಒಳಗಿದ್ದ ಚೇತನ ಕಥಕ್ ಪದಾಂತಗಳಿಗೆ ಹೃದಯವಂತ ಹೆಜ್ಜೆಗಳನ್ನು ಹಾಕಿಸಿತು. ಇದರ ಫಲವೇ ರಂಗಾರೋಹಣ …
ಪರಮೋಚ್ಛ ಖುಷಿ ಇದೆ:
ಕಥಕ್ ಎಂಬುದು ಒಂದು ಸಂಕೀರ್ಣ ನೃತ್ಯ ಪ್ರಕಾರ. ಅದನ್ನು ಅಭ್ಯಾಸ ಮಾಡಲು ಎಂಟೆದೆ ಬೇಕು. ಕರಗತ ಮಾಡಿಕೊಳ್ಳಲು ಸಾಕಷ್ಟು ಸಮಯ ಧಾರೆ ಎರೆಯ ಬೇಕು. ಈ ನಿಟ್ಟಿನಲ್ಲಿ ನನ್ನ ಮಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಕೆಯ ಭಾವಪೂರ್ಣ ನಡೆಗಳು ನನ್ನನ್ನು ಭಾವುಕಳನ್ನಾಗಿ ಮಾಡುತ್ತದೆ ಎನ್ನುತ್ತಾರೆ ಶ್ರೀಚರಿತಾಳ ತಾಯಿ ಮತ್ತು ನೃತ್ಯ ಕಲಾವಿದೆ ಚಂದ್ರಪ್ರಭಾ. ಅಭ್ಯಾಸ ಮಾಡುವಾಗ ಮಗಳು ಸಂಪೂರ್ಣ ತನ್ನನ್ನು ತಾನು ಮರೆತುಬಿಟ್ಟಿರುತ್ತಾಳೆ. ಎಂದಿಗೂ, ಯಾವತ್ತೂ ನೃತ್ಯದ ವಿಷಯದಲ್ಲಿ ಆಕೆ ಇಟ್ಟ ಹೆಜ್ಜೆಗಳು ಆರೋಹವಾಗಿಯೇ ಸಾಗಿವೆ. ಅಂತಹ ಹೃದಯವಂತ ಅಭ್ಯಾಸ ಮತ್ತು ತನ್ಮಯತೆ ಆಕೆಯಲ್ಲಿ ನೆಲೆಸಿರುವ ಪರಿ ಕಂಡರೆ ನನಗೆ ಭಗವಂತನ ಅತ್ಯುನ್ನತ ಅನುಗ್ರಹದ ಪರಮಾವಧಿಯ ಧನ್ಯತೆ ಮತ್ತು ಪರಮೋಚ್ಛ ಖುಷಿಗಳನ್ನೇ ನೀಡುವ ಚೇತನವನ್ನು ನೀಡಿದ್ದಾನೆಂದು ಭಾಸವಾಗುತ್ತದೆ ಎನ್ನುತ್ತಾರೆ.
ಇಂತಹ ಮಗುವನ್ನು ನೀಡಿದ ನನ್ನ ದೈವಕ್ಕೆ ನಾನು ಎಂದೆಂದಿಗೂ ಋಣಿಯಾಗಿರುವೆ. ಆದಕಾರಣಕ್ಕಾಗಿ ಶಾಲೆಯಲ್ಲಿ ಇಂಥದ್ದೇ ವಿಷಯ, ಇಂತಿಷ್ಟೇ ಅಂಕ ಪಡೆಯ ಬೇಕು ಎಂದು ನಾನು ಯಾವತ್ತೂ ಒತ್ತಡ ಹೇರಿಲ್ಲ. ನೃತ್ಯವನ್ನು ಆಕೆ ಭವಿಷ್ಯದ ಜೀವನದಲ್ಲಿ ವೃತ್ತಿಯನ್ನಾಗಿ ಅಥವಾ ಪ್ರವೃತ್ತಿಯನ್ನಾಗಿ ಹೇಗೆ ಆಯ್ಕೆ ಮಾಡಿಕೊಂಡರೂ ನನಗೆ ಅದು ತೃಪ್ತಿಯೇ ಸರಿ ಎನ್ನುತ್ತಾರೆ ಅವರು. ಕಲಾಪರಂಪರೆಯ ಪ್ರಭೆಯಲ್ಲಿ ಮಗಳು ನರ್ತನ ಮುಂದುವರಿಸಿಕೊಂಡು ಹೋಗಿಯೇ ಹೋಗುತ್ತಾಳೆ ಎಂಬ ಅನನ್ಯ ಭರವಸೆ ಎನಗಿದೆ ಎನ್ನುವಾರ ಚಂದ್ರಪ್ರಭಾ ಸಂಪೂರ್ಣ ಭಾವುಕರಾಗಿಬಿಟ್ಟಿದ್ದರು.
ಶ್ರೀಚರಿತಾ ಚಿತ್ರ ಕಲಾವಿದೆಯಾಗಿಯೂ ತನ್ನ ಚಾಪುಗಳನ್ನು ಒತ್ತಿರುವುದು ಇನ್ನೊಂದು ವಿಶೇಷ. ಪೆನ್ಸಿಲ್ ಸ್ಕೆಚ್, ಪೋರ್ಟ್ರಾಯ್ಟ ಇತ್ಯಾದಿ ಪ್ರಕಾರಗಳಲ್ಲಿ ಆಕೆಯ ಕುಂಚ ಸಾಕಷ್ಟು ವಿಸ್ತಾರವಾಗಿ ಸಾಗಿದೆ. ಕ್ರೀಡೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಈಕೆಗರೆ ಥ್ರೋಬಾಲ್ ಮತ್ತು ಬಾಸ್ಕೆಟ್ ಬಾಲ್ ಪಂದ್ಯಗಳಲ್ಲಿ ಅನೇಕ ಬಹುಮಾನ ಅಲಂಕರಿಸಿವೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಇರುವುದೇ ಈಕೆಯ ವಿಶಿಷ್ಟ ಗುಣಲಕ್ಷಣ. ಕಲಾ ಕ್ಷೇತ್ರಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ದಂಪತಿಗೆ ಇದಕ್ಕಿಂತ ಬೇರೇನು ಸೌಭಾಗ್ಯ ಬೇಕು ?
ಕಲಾ ಪ್ರಸ್ತುತಿಗೆ ಅಣಿಯಾದ ಶ್ರೀಚರಿತಾ
ಬೆಂಗಳೂರು ನಗರದ ಪ್ರಖ್ಯಾತ ನೃತ್ಯ ಸಂಸ್ಥೆ ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ನ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ, ಹೆಸರಾಂತ ನೃತ್ಯ ದಂಪತಿ- ಚೇತನಾ- ಚಂದ್ರಪ್ರಭಾ ಅವರ ಪುತ್ರಿ ಶ್ರೀಚರಿತಾ ಗಂಗಟ್ಕರ್ ‘ ಕಥಕ್ ರಂಗ್ಮಂಚ್ ಪ್ರವೇಶ’ ಕ್ಕೆ ಅಣಿಯಾಗಿದ್ದಾರೆ. ಮಲ್ಲೇಶ್ವರದ ವಯ್ಯಲಿಕಾವಲ್ ಚೌಡಯ್ಯ ಸ್ಮಾರಕ ಭವನದಲ್ಲಿ ಜೂ. 18ರ ಸಂಜೆ 6.30ಕ್ಕೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಿದುಷಿಯರಾದ ದುರ್ಗಾ ಆರ್ಯ, ಶುಭಾ ಧನಂಜಯ, ವಿದುಷಿ ಸುಪರ್ಣಾ ವೆಂಕಟೇಶ, ರಾಮಕಥಾ ಖ್ಯಾತಿಯ ವಿದ್ವಾನ್ ಸತ್ಯನಾರಾಯಣ ರಾಜು ಮತ್ತು ಸಾಯಿ ವೆಂಕಟೇಶ ಸಾಕ್ಷಿಯಾಗಲಿದ್ದಾರೆ. ರಂಗಮಂಚ್ ಪ್ರವೇಶಕ್ಕೆ ಪ್ರಖ್ಯಾತ ಕಲಾವಿದ ಶಂಕರ ಶಾನುಭಾಗ್ ಗಾಯನ, ಶ್ವೇತಾ ಪದಾಂತ, ಕಾರ್ತಿಕ ಭಟ್ ತಬಲಾ ಮೈಸೂರು ಸಮೀರ ರಾವ್ ಕೊಳಲು, ಶ್ರುತಿ ಸೀತಾತ್ ಮತ್ತು ಪಖವಾಜ್ ನಲ್ಲಿ ಗುರುಮೂರ್ತಿ ವೈದ್ಯ ಸಹಕಾರ ನೀಡಲಿರುವುದು ವಿಶೇಷವಾಗಿದೆ.
ಬಹುಮುಖೀ -ಸದಾ ಸುಖಿ
ಶ್ರೀಚರಿತಾ ಕರ್ನಾಟಕ ಶಾಸ್ತ್ರೀಯ ಸಂಗೀತ, ಕಥಕ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾಳೆ. ಶಾಲಾ ವ್ಯಾಸಂಗದಲ್ಲೂ ಮೊದಲ ಸ್ಥಾನದಲ್ಲೇ ಇದ್ದು, ಥ್ರೋ ಬಾಲ್, ಹ್ಯಾಂಡ್ ಬಾಲ್, ಪೆನ್ಸಿಲ್ ಸ್ಕೆಚ್ ಡ್ರಾಯಿಂಗ್ನಲ್ಲೂ ವಿಶೇಷ ಪ್ರೌಢಿಮೆ ತೋರಿ ಅನೇಕ ಬಹುಮಾನ ಪಡೆದಿರುವುದು ಬಹುಮುಖೀ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ವೇದಿಕೆಯಲ್ಲಿ ಜೈಪುರ್ ಮತ್ತು ಮುಘಲ್ ಘರಾನಾ ಪ್ರಸ್ತುತಪಡಿಸಲಿರುವ ಶ್ರೀಚರಿತಾ, ನಂತರ ದೇವಿ ನೃತ್ಯ ಹಾಗೂ ದಾಸರ ಪದ ‘ ಕೃಷ್ಣ ನೀ ಬೇಗನೆ ಬಾರೋ … ಕೃತಿಗೆ ಹೆಜ್ಜೆ ಹಾಕುತ್ತಿದ್ದಾಳೆ.
ಹೆಮ್ಮೆಯ ಚೇತನ
ರಾಜಧಾನಿಯ ಅಗ್ರಮಾನ್ಯ ನೃತ್ಯ ದಂಪತಿಗಳಲ್ಲಿ ಕೂಚುಪುಡಿ- ಭರತನಾಟ್ಯ ಸಮನ್ವಯಮಾಡಿಕೊಂಡು ಔನ್ನತ್ಯ ಸಾಧಿಸಿರುವ ಜೋಡಿ ಚಂದ್ರಪ್ರಭಾ- ಚೇತನ್ರ ಹೆಮ್ಮೆಯ ಪುತ್ರಿಯೇ ಶ್ರೀಚರಿತಾ. ಈಕೆ ವಿದ್ಯಾಂಜಲಿ ಅಕಾಡೆಮಿಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಎಳವೆಯಲ್ಲೇ ಕಲಾಸಕ್ತಿ ಮೈಗೂಡಿಸಿಕೊಂಡಿದ್ದು, ಭರತನಾಟ್ಯ- ಕಥಕ್ನ ಪಾಠಾಂತರಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ತನ್ನ ಕ್ರಿಯಾಶೀಲತೆ ಹೊಮ್ಮಿಸುತ್ತಿರುವುದು ಗಮನಾರ್ಹವಾಗಿದೆ.
ಈಗಾಗಲೇ ತಂದೆ- ತಾಯಿ ಬಳಿಯೇ ಭರತನಾಟ್ಯ ಕಲಿತು 2 ವರ್ಷದ ಹಿಂದೆಯೇ ರಂಗ ಪ್ರವೇಶ ಮಾಡಿರುವ ಈಕೆ, ಕಥಕ್ ಬಗ್ಗೆ ಅಪಾರ ಆಸಕ್ತಿ ತೋರಿದ ಫಲವಾಗಿ ಗುರು ಶ್ವೇತಾರ ಪ್ರೀತಿಯ ಶಿಷ್ಯೆಯಾಗಿದ್ದಾಳೆ. ಕಥಕ್ ರಂಗ್ ಪ್ರವೇಶಕ್ಕೆ ಸನ್ನದ್ಧಳಾಗಿರುವುದು ವಿಶೇಷಲ್ಲಿ ವಿಶೇಷ.
ಚಿಕ್ಕ ವಯಸ್ಸಿನಲ್ಲಿ ಯಾವುದೇ ವಸ್ತು, ವಿಷಯ ಮತ್ತು ಕಲಾ ಸಂಪ್ರದಾಯಗಳ ಬಗ್ಗೆ ಆಳವಾದ ಆಸಕ್ತಿಗಳು ಪ್ರಕಟವಾಗುವುದು ಅಪರೂಪ. ಆದರೆ ಶ್ರೀಚರಿತಾ ಈ ವಿಷಯದಲ್ಲಿ ಕೊಂಚ ಭಿನ್ನ ಮಗು. ಆಕೆ ಗೆಜ್ಜೆ ಕಟ್ಟಿದಳು ಎಂದರೆ ಮುಗೀತು. ಸುಸ್ತು, ಸಂಕಟ, ನೋವು, ಬೇಸರ, ಇದು ನನಗೆ ಸಾಕು, ಮುಗಿಸುತ್ತೇನೆ- ಎಂಬ ಮಾತೇ ಇಲ್ಲ. ಆಕೆಯ ಹೃನ್ಮನಗಳಲ್ಲಿ ಕೇವಲ ನಲಿವನ್ನೇ ನಾನು ಕಂಡಿರುವೆ ಎನ್ನುತ್ತಾರೆ ಕಥಕ್ ಗುರು ಶ್ವೇತಾ ವೆಂಕಟೇಶ್.
ಶಿಸ್ತಿಗೆ ಬೆಲೆ
ಅಭ್ಯಾಸದ ಸಂದರ್ಭವೂ ಸೇರಿದಂತೆ ವೇದಿಕೆ ಕಾರ್ಯಕ್ರಮಗಳಲ್ಲಿ ನರ್ತನಕ್ಕೆ ತಕ್ಕ ವಸ್ತ್ರ ವಿನ್ಯಾಸ, ಹಾವಭಾವ, ಛಾಯಾಗ್ರಹಣ, ವಿಡಿಯೋ, ವೇದಿಕೆ, ಬೆಳಕಿನ ವಿನ್ಯಾಸ ಮತ್ತು ಹಿಮ್ಮೇಳ ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಈಕೆಗೆ ಖಚಿತತೆ ಇರಬೇಕು. ಇದು ಅವಳ ಅಂತರಂಗದ ಬಿಗಿ ಒತ್ತಾಸೆ. ಚಿಕ್ಕ ಚಿಕ್ಕ ಸಂಗತಿಗಳಲ್ಲಿ ದೊಡ್ಡ ದೊಡ್ಡ ನಿಖರತೆಗಳನ್ನು ಬಯಸುವ ಈ ಬಾಲ ಪ್ರತಿಭೆ ಮುಂದೊಂದು ದಿನ ಕಲಾಕ್ಷೇತ್ರಕ್ಕೆ ಮಹತ್ತರ ಆಸ್ತಿಯಾಗುತ್ತಾಳೆ ಎಂಬುದು ನನ್ನ ಅಭಿಮತ.
ಶ್ವೇತಾ ವೆಂಕಟೇಶ್. ಕಥಕ್ ಗುರು, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್
ಹಲವು ವೇದಿಕೆಗಳಲ್ಲಿ ಕಲಾ ಪ್ರಸ್ತುತಿ:
ಬಾಲ ಪ್ರತಿಭೆ ಶ್ರೀಚರಿತಾ ಈಗಾಗಲೇ ಹಲವು ವೇದಿಕೆಗಳಲ್ಲಿ ತನ್ನ ಕಲಾವಂತಿಕೆ ಪ್ರದರ್ಶನ ಮಾಡಿರುವುದು ಶ್ಲಾಘನೀಯ. ಸಾಯಿ ನೃತ್ಯೋತ್ಸವ, ಸಂಕ್ರಮಣ ಉತ್ಸವ, ಬಾಲಕಲಾಸಂಗಮ, ದಾಸ ಮಹೋತ್ಸವ, ಬಾಲ ಭವನದ ಮಕ್ಕಳ ದಿನಾಚರಣೆ ನೃತ್ಯೋತ್ಸವ ಹಾಗೂ ನಿರಂತರಂ ಕಲೆಮನೆ ಉತ್ಸವಗಳಲ್ಲೂ ಈಕೆ ಕಲಾ ರಸಿಕರ ಮನ ಗೆದ್ದಿದ್ದಾಳೆ. ಗುರುವಿನೊಂದಿಗೆ ಕೆಲವು ವೇದಿಕೆಗಳಲ್ಲಿ ನರ್ತಿಸಿರುವುದು ಪ್ರಶಂಸನೀಯ. ಇದಲ್ಲದೆ ಸಿಂಗಪುರ ಮತ್ತು ಇಂಡೋನೇಷ್ಯಾ ಗಳಲ್ಲಿ ನಡೆದ ಕಲಾ ಉತ್ಸವಗಳಲ್ಲಿ ಈಕೆಗೆ ವೇದಿಕೆ ಲಭ್ಯವಾಗಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಬಗ್ಗೆ ಅಪಾರವಾದ ಆಸಕ್ತಿ ಅತ್ಯುನ್ನತ ಗೌರವ, ಅನನ್ಯವಾದ ಗುರು ಭಕ್ತಿ ಮತ್ತು ಕೃತಜ್ಞತಾ ಭಾವಗಳೇ ಶ್ರೀಚರಿತಾಳನ್ನು ಉನ್ನತ ಸ್ತರಕ್ಕೆ ಏರಿಸಬಲ್ಲವು. ಬಾಲ ಪ್ರತಿಭೆಯನ್ನು ಬೆಂಬಲಿಸೋಣ. ಕಲಾಪ್ರತಿಭೆಗೆ ಚಪ್ಪಾಳೆ ತಟ್ಟೋಣ. ಅರಳು ಪ್ರತಿಭೆಗಳಿಗೆ ಹೃದಯ ತುಂಬಿ ಹಾರೈಸೋಣ.
ಲೇಖನ: ಶಿವಮೊಗ್ಗ ರಾಮ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post