ಕಲ್ಪ ಮೀಡಿಯಾ ಹೌಸ್ | ವಿಶೇಷ ವರದಿ |
ಸ್ವಾತಂತ್ರ ಸಂಗ್ರಾಮದ ಕಹಳೆಯ ಮೂಲಕ ರಾಷ್ಟ್ರದ ಮನಮನಗಳಲ್ಲಿ ತುಂಬಿರುವ ಈಸೂರು #Esooru ಗ್ರಾಮದ ಮೂಲವೇ ಈಶ್ವರನ ನೆಲೆ ಎಂದು ಇತ್ತೀಚೆಗೆ ಪತ್ತೆಯಾಗಿರುವ ಶಾಸನ ದೃಡೀಕರಿಸಿದೆ.
ಗ್ರಾಮದ ಹೆಗ್ಗೆರೆ ಕೆರೆಯ ಏರಿಯ ಮೇಲೆ ಶ್ರೀ ಹೆಗ್ಗೆರೆ ಚೌಡೇಶ್ವರಿ ದೇವಸ್ಥಾನ ಹೊಸದಾಗಿ ನಿರ್ಮಿಸಲು ಮೂಲ ಪೂಜನೀಯ ಶಿಲ್ಪವನ್ನು ಸ್ಥಳಾಂತರಿಸುವಾಗ ಅದರ ಕೆಳಭಾಗದಲ್ಲಿ ಈ ಶಾಸನವಿದ್ದುದನ್ನು ಸ್ಥಳೀಯ ಇತಿಹಾಸ ಸಂಶೋಧಕ ಮಂಜಪ್ಪ ಚುರ್ಚಿಗುಂಡಿ ಪತ್ತೆ ಮಾಡಿದ್ದಾರೆ
ಶಾಸನವು ಒಂದು ಸ್ಮಾರಕ ಶಿಲ್ಪದ ಕೆಳಭಾಗದಲ್ಲಿದ್ದು ಮೂರು ಸಾಲಿನಿಂದ ಕೂಡಿದೆ. ಮಹಾ ಸಾಮಾಂತಾಧಿ ಪತಿಯಾದ ಪುಸಿಮಯ್ಯನು ಈಶ್ವರ ಪುರವನ್ನು ಪ್ರತಿಪಾಳಿಸುತ್ತಿರುವುದಾಗಿ ಶಾಸನ ತಿಳಿಸುತ್ತದೆ. ಶಾಸನವು ತೃಟಿತವಾಗಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಶಾಸನದ ಲಿಪಿ ಮತ್ತು ಶಿಲ್ಪದ ವಿನ್ಯಾಸಗಳು ರಾಷ್ಟ್ರಕೂಟರ ಅವಧಿಗೆ ಸೇರುತ್ತವೆ.
ಶಾಸನದಲ್ಲಿ ಉಲ್ಲೇಖಿತ ಈಶ್ವರಪುರವು ಈಗಿನ ಈಸೂರಿನ ಹೆಸರಾಗಿದೆ. ಈಸೂರಿನ ನಾಮವನ್ನು ಅನೇಕ ಶಾಸನಗಳು ಉಲ್ಲೇಖಿಸುತ್ತವೆ. 7ನೇ ಶತಮಾನಕ್ಕೆ ಸೇರಿದ ಜಂಬಾನಿಯ ಶಾಸನದ ಉಲ್ಲೇಖ ಅತ್ಯಂತ ಹಳೆಯದಾಗಿದ್ದು ಅದರಲ್ಲಿ ಇಸವುರ ಎಂದಿದೆ. ಪಕ್ಕದ ಗ್ರಾಮವಾದ ಸಾಲೂರಿನ ರಾಷ್ಟ್ರಕೂಟರ ಶಾಸನ ಒಂದರಲ್ಲಿ ಈಸವೂರ್ ಎಂದು ಉಲ್ಲೇಖವಿದೆ. ಹತ್ತನೆಯ ಶತಮಾನದ ನಂತರದ ಹಲವು ಶಾಸನಗಳಲ್ಲೂ ಈಸವೂರು ಎಂದು ಉಲ್ಲೇಖ ಕಂಡುಬರುತ್ತದೆ.
ಜಂಬಾನಿ ಗ್ರಾಮದ ಶಾಸನದಲ್ಲಿ ಈಸೂರನ್ನು ಅಂದಿನ ವಾರಣಾಸಿಯಂತಹ ಪವಿತ್ರ ಸ್ಥಳವೆಂದು ಉಲ್ಲೇಖಿಸಲಾಗಿದೆ. ಏಳನೇ ಶತಮಾನದ ವೇಳೆಗಾಗಲೇ ಈಸೂರು ಒಂದು ಪ್ರಮುಖ ಶಿವನ ಆರಾಧನಾ ಕ್ಷೇತ್ರವಾಗಿತ್ತು ಎಂದು ತಿಳಿಯುತ್ತದೆ.
ಈಗ ದೊರೆತಿರುವ ಶಾಸನವು ಇಸವೂರು ಎಂದರೆ ಈಶ್ವರನ ಊರು(ಈಶ್ವರ ಪುರ) ಎಂಬ ಸ್ಪಷ್ಟ ಮಾಹಿತಿಯನ್ನು ನೀಡುವ ಮೂಲಕ ಈಸೂರು ಮೂಲತಃ ಈಶ್ವರನ ನೆಲೆಯೆಂದು ದೃಡೀಕರಿಸಿದೆ.
ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಗಜಪೃಷ್ಠಾಕಾರದ ತಳಪಾಯ ಹೊಂದಿರುವ ಶಿವಾಲಯವಿದ್ದು ಇದು ಶಾತವಾಹನರ ಅವಧಿಯ ದೇವಾಲಯವಾಗಿದೆ. 2 -3 ನೇ ಶತಮಾನದಲ್ಲಿಯೇ ಇಲ್ಲಿ ಶಿವನ ಆರಾಧನೆ ಉನ್ನತ ಮಟ್ಟದಲ್ಲಿದ್ದುದರಿಂದ ಈ ಊರಿಗೆ ಈಶ್ವರ ಪುರ ಈಶನ ಊರು , ಇಸವೂರು, ಈಸೂರು ಎಂಬ ನಾಮ ಬಂದಿದೆ.
ಶಾಸನವಿರುವ ಸ್ಮಾರಕ ಶಿಲ್ಪದ ಬಳಿ ಈಗ ಮಾತೆ ಚೌಡೇಶ್ವರಿಯನ್ನು ಪ್ರತಿಷ್ಟಾಪಿಸಲಾಗುತ್ತಿದೆ. ಈ ಸ್ಥಳವು ಹೆಗ್ಗೆರೆ ಎಂದು ಕರೆಯಲ್ಪಡುತ್ತಿದ್ದು ಪ್ರಾಚೀನ ದೊಡ್ಡ ಕೆರೆಯ ಕಲ್ಪನೆಯನ್ನು ತೆರೆದಿಡುತ್ತದೆ. ಹಾಗಾಗಿ ಇಲ್ಲಿನ ಚೌಡೇಶ್ವರಿ ಅಮ್ಮನನ್ನು ಹೆಗ್ಗೆರೆ ಚೌಡೇಶ್ವರಿ ಎಂದು ಆರಾಧಿಸಲಾಗುತ್ತಿದೆ.
ದಿವಂಗತ ಜಗದೀಶ್ ಅಗಸಿಬಾಗಿಲು ಶಾಸನ ಓದಿಕೊಟ್ಟಿರುತ್ತಾರೆ. , ಶೇಜೇಶ್ವರ್ ನಿರ್ದೇಶಕರು ರಾಜ್ಯ ಪುರಾತತ್ವ ಇಲಾಖೆ ಮತ್ತು ರಮೇಶ್ ಬಿ ಹಿರೇಜಂಬೂರು ಇವರು ಶಾಸನ ಅಧ್ಯಯನಕ್ಕೆ ಸಲಹೆ ನೀಡಿರುತ್ತಾರೆ. ಮತ್ತು ಬೇಕರಿ ರಾಘಣ್ಣ ದನಿಮನಿ ಜಯಪ್ಪ ಬೇಗೂರು ಶಿವಪ್ಪ ಮತ್ತು ಶ್ರೀ ಹೆಗ್ಗೆರೆ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳಾದ ಸುರೇಶ ಚುರ್ಚಿಗುಂಡಿ, ಆಂಜನೆಯ ಪ್ರಭು ಸಂಡದ ಕುಮಾರ ಸ್ವಾಮಿ, ರವಿ ಮತ್ತು ಸದಸ್ಯರು ಶಾಸನ ಅಧ್ಯಯನಕ್ಕೆ ಸಹಕಾರ ನೀಡಿರುತ್ತಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















