ಕಲ್ಪ ಮೀಡಿಯಾ ಹೌಸ್
ಕರ್ನಾಟಕ ಹರಿದಾಸ ಪರಂಪರೆಯಲ್ಲಿ ಬಹಳ ಮುಖ್ಯವಾದ ಹೆಸರು ಶ್ರೀಪಾದರಾಜರು ಕನ್ನಡದಲ್ಲಿ ಹರಿದಾಸ ಸಾಹಿತ್ಯ ರಚನೆಯ ಆದ್ಯ ಪ್ರವರ್ತಕರೂ ಅವರೇ ಎಂದರೆ ತಪ್ಪಾಗಲಾರದು. ಅವರಿಗಿಂತ ಪೂರ್ವದಲ್ಲಿ ಹರಿದಾಸ ಸಾಹಿತ್ಯ ರಚನೆಯಾಗಿತ್ತೇ ಎಂಬುದರ ಬಗೆಗೆ ಚರ್ಚೆಗಳಿದ್ದು, ಅದಿನ್ನೂ ನಿಲುಗಡೆಗೆ ಬಂದಿಲ್ಲದಿರುವುದರಿಂದ ಶ್ರೀಪಾದರಾಜರೇ ದಾಸ ಸಾಹಿತ್ಯದ ಪ್ರವರ್ತಕರೆಂದು ಭಾವಿಸಲು ಅಡ್ಡಿಯಿಲ್ಲ.
ದಾಸ ಸಾಹಿತ್ಯವು ಸಾಹಿತ್ಯ ಪ್ರಕಾರದ ತವನಿಧಿಗಳಲ್ಲಿ ಒಂದಾಗಿದೆ.ಹರಿದಾಸ ಸಾಹಿತ್ಯ ಭಕ್ತಿಪಂಥ ಪರಂಪರೆಯಾಗಿ ಮೂಡಿ ಬಂದಿದ್ದು, ಶ್ರೀಪಾದರಾಜರ ಕಾಲದಲ್ಲಿ ಭಾಗವತ ಧರ್ಮದ ಪ್ರಚಾರದಿಂದಲೇ ಜನಸಾಮನ್ಯರು ಸಂಸ್ಕಾರ ಹಾಗೂ ಸಾಧ್ಯವೆಂದರಿತವರು ಶ್ರೀಪಾದರಾಜರು. ಶ್ರೀಪಾದರಾಜರು ತಮ್ಮ ಹರಿದಾಸ ಕೃತಿಗಳಲ್ಲಿ ಅತ್ಯಂತ ರಮಣೀಯವಾಗಿ ಮನಮುಟ್ಟುವ ರೀತಿಯಲ್ಲಿ ಆಧ್ಯಾತ್ಮಿಕತೆಯ ತಿರುಳನ್ನು ವ್ಯಕ್ತಪಡಿಸಿದ್ದಾರೆ. ದಾಸ ಸಾಹಿತ್ಯ ಸಂಗೀತ ಮಾಧ್ಯಮದ ಮೂಲಕ ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸಿತು. ಲಕ್ಷಾಂತರ ಜನಕ್ಕೆ ಸಂಸ್ಕಾರ ನೀಡಿತು. ಹೃದಯಸ್ಫರ್ಶಿ ಸಾಹಿತ್ಯವಾಯಿತು. ಸೈದ್ಧಾಂತಿಕವಾಗಿ ತತ್ವನಿರೂಪಣೆಯನ್ನು ಸಮರ್ಥವಾಗಿ ಮಾಡಿತು. ಬುದ್ದಿ ಮತ್ತು ಭಾವನೆಗಳೆರಡಕ್ಕೂ ಕ್ರಿಯಾತ್ಮಕವಾಗಿ ಪ್ರಚೋದನೆ ನೀಡಿತು.
ದಾಸ ಸಾಹಿತ್ಯ ವಿಶ್ವ ಸಾಹಿತ್ಯ ಕಂಡ ವಿನೂತನ ಬಗೆಯ ಸಾಹಿತ್ಯ. ಶೈಲಿಯಲ್ಲಿ ಸಂಗೀತ ಮಾಧ್ಯಮದ ಮೂಲಕ ತತ್ವ ಪ್ರಸಾರಕ್ಕೆ ತೊಡಗಿದ್ದು ಇದೆ. ವೈಶಿಷ್ಟ್ಯ. ಸಂಗೀತದಿಂದಾಗಿ ಕರ್ಣರಮಣೀಯವಾಗಿ, ಸಾಹಿತ್ಯದಿಂದಾಗಿ ಹೃದಯಸ್ಫರ್ಶಿಯಾಗಿ ತತ್ವ ಶ್ರೀಮಂತಿಕೆಯಿಂದಾಗಿ ಬುದ್ಧಿ ವಿಕಸನಕ್ಕೆ ಕಾರಣವಾಗುವ ಅಪೂರ್ವತೆ ಇದರದು. ಆಧ್ಯಾತ್ಮವು ಜೀವನದ ಉಸಿರು ಎಂಬ ತಾತ್ವಿಕ ಮಹತ್ವನ್ನು ಪಾಮರ ಜನರಿಗೂ ತಿಳಿಸಿಕೊಟ್ಟಿದ್ದು ಇದರ ಸಾಧನೆ.
ನರಹರಿತೀರ್ಥರು ಹರಿದಾಸ ಪರಂಪರೆಯನ್ನು ಪ್ರಾರಂಭಿಸಿದ ನಂತರ ಅದನ್ನು ಒಂದು ನಿರ್ದಿಷ್ಟವಾದ ರೂಪಕ್ಕೆ ತಂದು ಭದ್ರ ಬುನಾದಿಯ್ನು ಹಾಕಿಕೊಟ್ಟು ಬೆಳೆಸಿದವರು ಶ್ರೀಪಾದರಾಜರು. ನರಹರಿ ತೀರ್ಥರು ಕಿಡಿಯಾದರೆ ಶ್ರೀಪಾದರಾಜರು ಜ್ಯೋತಿ.
ಶ್ರೀಪಾದರಾಜರು ಕನ್ನಡ ಸಾಹಿತ್ಯಕ್ಕೆ ಭಗವದ್ಭಕ್ತರಿಗೆ ದಾಸಕೂಟಸ್ಥರಿಗೆ ಮಾಡಿರುವ ಉಪಕರ ಬಹುಸ್ಮರಣೀಯವಾದುದು. ಸಂಸ್ಕೃತ ಮಂತ್ರಮಾತುಗಳಲ್ಲಿಯ ಮಂಗಳಾತ್ಮಕ ಪಾವಿತ್ರವನ್ನು ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಶ್ರೀಪಾದರಾಜರದು. ದಾಸಸಾಹಿತ್ಯವೆಂಬ ಹೊಸ ಕಲ್ಪನೆಯೆಂಬ ಅವರ ಬ್ರಹ್ಮಚೈತನ್ಯದಿಂದ ಪಲ್ಲವಿಸಿ ಕನ್ನಡ ಭಾಷೆ ಹಾಗೂ ಸಾಹಿತ್ಯಗಳಿಗೆ ಹೊಸ ಆಯಾಮವನ್ನು ಮೂಡಿಸಿತು. ತಮ್ಮ ಸಮರ್ಥ ವಾಗ್ವೈಖರಿಯಿಂದಾಗಿ ಕನ್ನಡದಲ್ಲಿ ಹೊಸದೊಂದು ದಾಸ್ಯಭಾವದ ಮಧುರಶೈಲಿಗೆ ಪ್ರವರ್ತಕರಾದರು ಶ್ರೀಪಾದರಾಜರು. ಅವರಿಂದ ಸ್ಫೂರ್ತಿಗೊಂಡ ಅನೇಕ ಜನ ಯತಿಗಳು, ವೈದಿಕರು, ಗೃಹಸ್ಥರು, ಕನ್ನಡದಲ್ಲಿ ಧೈರ್ಯವಾಗಿ ಕೃತಿಗಳನ್ನು ರಚಿಸತೊಡಗಿದರು. ತೊರವೆ ರಾಮಾಯಣ, ನಾರಣಪ್ಪನ ಭಾರತಗಳು ಶ್ರೀಪಾದರಾಜರ ನಂತರವೇ ಬಂದಿರುವುದು ಈ ಹಿನ್ನೆಲೆಗೆ ನಿದರ್ಶನ. ಮುದುಡಿ ಮಲಗಿದ್ದ ಭಾಗವತ ಧರ್ಮ ಮೈಚಳಿಬಿಟ್ಟ ಎದ್ದು, ಜಾಗೃತವಾಗಿ ಧೃಢವಾಗಿ ನಡೆಯಲು ಪ್ರಾರಂಭವಾಯಿತು.
ತಮ್ಮ ಕಾಲದಲ್ಲಿ ಸಂಸ್ಕೃತ ವಿದ್ಯೆಯು ಉನ್ನತ ಮಟ್ಟದಲ್ಲಿದ್ದರೂ ಅದು ಭಕ್ತಿ ಪ್ರಚೋದನೆಗೆ ಹೆಚ್ಚು ತೀವ್ರವಾಗಿ ಪ್ರಯೋಜನವಾಗುತ್ತಿಲ್ಲವೆಂಬುದನ್ನು ಮನಗಂಡ ಶ್ರೀಪಾದರಾಜರು, ದೇಶಕಾಲೋಚಿತವಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಾನ್ಯರಲ್ಲೂ ಹಿಂದೂ ಸಂಸ್ಕೃತಿ, ಸಂಪ್ರದಾಯ ಪರಂಪರೆಗಳ ಬಗ್ಗೆ ಸುಲಭವಾಗಿ ತಿಳಿಸಿ ಸಂಘಟನೆಯನ್ನು ಪ್ರಚೋದಿಸಲು ದಾಸಪಂಥವನ್ನು ಉದ್ಘಾಟಿಸಿದರು. ಸಕಲ ತತ್ವ ವಿಷಯಗಳನ್ನೂ ಸಂಗೀತ ಬದ್ಧವಾಗಿ ಕನ್ನಡದಂತಹ ಲಲಿತಭಾಷೆಯಲ್ಲಿ ಜನರಿಗೆ ಕೊಟ್ಟು ಶ್ರೀಪಾದರಾಜರು ಈ ಮಾರ್ಗದಲ್ಲಿ ತಾವೇ ಮೊದಲು ಕನ್ನಡದಲ್ಲಿ ದೇವರ ನಾಮಗಳನ್ನು ಉಗಾಭೋಗಗಳನ್ನು, ಸುಳಾದಿಗಳನ್ನು ರಚನೆಮಾಡಿ ಗಂಭೀರವಾದ ಗಂಧರ್ವ ಕಂಠದಿಂದ ದೇವರೆದುರು ಗಾನಮಾಡಿ ತೋರಿಸಿದರು. ಸಂಗೀತ ಸಾಹಿತ್ಯಗಳ ಅಮೋಘ ಮೇಳವಾದ ಈ ಮಾರ್ಗ ದಿನೇ ದಿನೇ ಹೆಚ್ಚು ಜನರನ್ನು ಆಕರ್ಷಿಸಲಾರಂಭಿಸಿತು. ಶ್ರೀಪಾದರಾಜರಿಂದ ಬಂದ ಪ್ರತಿ ಶಬ್ದವೂ ಬೀಜಾಕ್ಷರಾಭಿಮಾನಿ ದೇವತೆಗಳ ದಿವ್ಯಸುಂದರ ನರ್ತನವಾದುವು.
ನಾರದ ಭಕ್ತಿಸೂತ್ರದ ಮೂಲಭೂತ ಆಸಕ್ತಿ ರೂಪಗಳಾದ ಗುಣಮಹಾತ್ಮಾಸಕ್ತಿ , ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸ್ಮರಣಾಸಕ್ತಿ, ಸಖ್ಯಾಸಕ್ತಿ, ಕಾಂತಾಸಕ್ತಿ, ವಾತ್ಸಲ್ಯಾಸಕ್ತಿ, ಆತ್ಮನಿವೇದನಾಸಕ್ತಿ, ತನ್ಮಯಾಸಕ್ತಿ, ವಿರಹಾಸಕ್ತಿಗಳೆಂಬ ಏಕಾದಶಾ ವಿಧ ಭಕ್ತಿಯಾಸಕ್ತಿಗಳನ್ನು ಮುಂದೆಂದಿಗೂ ಹರಿದಾಸ ಸಾಹಿತ್ಯದಲ್ಲಿ ನಿರಂತರ ಪ್ರವಹಿಸುವಂತೆ ಪ್ರಭಾಸಪೂರ್ಣವಾಗಿ ತಮ್ಮ ಕಾವ್ಯಗಳಲ್ಲಿ ಬಳಕೆ ಬಗೆ ತಂದು ಶತಮಾನಗಳ ಪ್ರೇರಕ ಶಕ್ತಿಯಾದರು. ತಮಿಳುನಾಡಿನ ಆಳ್ವಾರುಗಳು ಮಧುರಭಕ್ತಿಯನ್ನು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಂತ ದಟ್ಟವಾಗಿ, ಅನನ್ಯವಾಗಿ ತಮ್ಮ ಕೀರ್ತನೆಗಳಲ್ಲಿ ಒಡಮೂಡಿಸಿದವರೆಂದರೆ ಶ್ರೀಪಾದರಾಜರು.
ಶ್ರೀಪಾದರಾಜರು ಅಂತರಂಗದ ಆತ್ಮಶೋಧನೆಗೆ ಹೆಚ್ಚು ಗಮನವಿತ್ತು ಆಡಂಬರ ಬೂಟಾಟಿಕೆಗಳನ್ನು ಖಂಡಿಸಿದರು. ಮುಖವ ತೊಳೆದು ನಾಮ ಬಳಕೊಂಡೆನೆಲ್ಲದೆ, ಸುಖತೀರ್ಥ ಶಾಸ್ತ್ರವನೋದಿದೆನೋ, ಮುಖಶೃಂಗಾರಕ್ಕೆ ಮನಸೋತನೆಲ್ಲೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ಎಂದು ಆಚಾರ್ಯ ಶಾಸ್ತ್ರಪಾರಾಯಣದ ಅಗತ್ಯಗಳನ್ನು ಒತ್ತಿ ಹೇಳಿದರು.
ಭಕ್ತಿಬೇಕು ವಿರಕ್ತಿ ಬೇಕು ಕೃತಿಯಲ್ಲಿ ಸಂಗದ ಬಗ್ಗೆ ಪ್ರಸ್ತಾಪಿಸುತ್ತ ಸುಸಂಗ ಹಿಡಯಲೇಬೇಕು ದುಸಂಗ ಬಿಡಬೇಕು. ರಂಗ ವಿಠಲನ್ನ ಬಿಡದೇ ನೆರನಂಬಿರಬೇಕು ಎನ್ನುತ್ತಾರೆ. ಸಂಗ ಸಹವಾಸಗಳ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪಿಸುವ ಶ್ರೀಪಾದರಾಜರು ವ್ಯಕ್ತಿತ್ವ ನಿರ್ಮಾಣ ವಿಕಸನಗಳಲ್ಲಿ ಸಂಗದ ಪರಿಣಾಮ ಪ್ರಮುಖ ಪಾತ್ರ ವಹಿಸುವುದನ್ನು ಸೂಚಿಸಿರುತ್ತಾರೆ.
ಉತ್ತಮರ ಸಂಗ ಎನಗಿತ್ತು ಸಲಹೋ ಕೃತಿಯಲ್ಲಿ ತಿರುತಿರುಗಿ ಪಟ್ಟಲೊ ಎನ್ನುತ್ತಾ ಮರುಜನ್ಮವಿಲ್ಲದಂತಾಗಲೂ ಉತ್ತಮರ ಸಂಗಬೇಕು. ಅದೇ ಕುಜನರ ಸಂಗ ಹೀನ ಜನರೊಳಗಾಟ ಶ್ವಾನಾದಿಗಳ ಕೂಟದಂತೆ ಎನ್ನುತ್ತಾರೆ. ಮುಕ್ತಿ ಪ್ರದಾಯಕ ಶಕ್ತಿಯನ್ನು ಉತ್ತಮರ ಸಂಗ ಹೊಂದಿದೆ ಎಂಬ ಮಾತು ಪರಿಣಾಮಕಾರಿಯಾಗಿದೆ. ದುರ್ಗಂಧದವರೊಂದಿಗಿನ ಸ್ನೇಹಕ್ಕಿಂತ ಸುಗಂಧದವರೊಂದಿಗೆ ಗುದ್ದಾಟ ಲೇಸು ಎಂಬ ಮಾತಿದೆ. ವಾಸುದೇವನೇ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕು ಎಂಬ ಸಾಲುಗಳು ಮಾರ್ಮಿಕವಾಗಿದೆ. ಶ್ರೀಶನ ದಾಸರ ದಾಸರ ದಾಸರ ದಾಸ್ಯವೇ ನಿಮ್ಮನ್ನು ಉದ್ದರಿಸಬಲ್ಲದು. ಇತರೆ ವಿಷಯಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತವ ಕೊಡು ಸಾಕೆಂದರೆ ಎಂದು ಭಿನ್ನವಿಸಿಕೊಂಡಿದ್ದಾರೆ. ಇಂದ್ರಿಯಗಳೆಲ್ಲ ನಿನ್ನನ್ನೇ ಆರಾಧಿಸುವಂತೆ ಮಾಡು. ಅನ್ಯದುಷ್ಟಮಾರ್ಗಗಳ ಕಡೆಗೆ ಮನಚಲಿಸದಂತೆ ಮಾಡು ಎಂಬ ಪ್ರಾರ್ಥನೆ ಗಮನಾರ್ಹವಾಗಿದೆ.
ಏರುದಂಡಿಗೆ ನೂರಾಳು ಮಂದಿಯು ಮೂರು ದಿನದ ಭಾಗ್ಯ ಝಣ ಝಣವು ಎಂಬ ಕಾಳ ಬೆಳದಿಂಗಳ ಸಂಸಾರ ಎಂಬ ಕೃತಿಯಲ್ಲಿ ಸಾಲು ಬದುಕಿನಂತೆ ಬದುಕಿನಲ್ಲಿನ ಸಿರಿತನವೂ ನಶ್ವರ. ಆ ನಶ್ವರ ಭಾಗ್ಯವ ನಂಬಿ ಶಾಶ್ವತ ಜನರ ಕಳೆದುಕೊಳ್ಳದಿರಲು ಸೂಚಿಸುತ್ತಾರೆ.
ಶ್ರೀಪಾದರಾಜರು ಭಕ್ತ ಮಂದಾರರೂ, ಹರಿಪಾದಾಂಬುಜಭೃಂಗರೂ, ಸಿರಿಕೃಷ್ಣದಿವ್ಯಪಾದಜ್ಯ ಚಿಂತಾಲೋಲರು ಆಗಿದ್ದು, ಆಗ ತಾನೇ ಅರಳತೊಡಗಿದ್ದ ಹರಿದಾಸ ಪರಂಪರೆಯ ಹರಿಕಾರರೂ ಆಗಿದ್ದು, ಶರಣಕೀರ್ತಿತರಂಗರೂ, ಶರಣಜನಸುರಧೇನುಗಳೂ ಆಗಿದ್ದರೆಂದು ಶ್ರೀ ವ್ಯಾಸರಾಜರು ಕೀರ್ತಿಸಿದ್ದಾರೆ.
ಭಗವಂತನ ಕೃಪೆಯ ರಹಸ್ಯವನ್ನು ಚೆನ್ನಾಗಿ ಅರಿತ ಶ್ರೀಪಾದರಾಜರು, ಇಡಿ ಬದುಕನ್ನು ಪರಮಾತ್ಮನ ಕೃಪೆಗೆ ಅರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ. ಮನುಷ್ಯನ ಉನ್ನತಿ ಹಾಗೂ ಅವನತಿಗಳಿಗೆ ಭಗವಂತನೇ ಕಾರಣ ಎಂದು ನಂಬಿದ ಅವರು ಇಟ್ಟಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಎಂದು ಭಿನ್ನವಿಸಿದ್ದಾರೆ. ಅವನ ಕರುಣೆ ಇದ್ದಷ್ಟು ಕಾಲ ಯಾವುದಕ್ಕೂ ಕೊರತೆಯಿಲ್ಲ. ಆದರೆ ಆತನ ಮಮತೆ ತಪ್ಪಿದರೆ ಮಾತನಾಡಿಸುವವರು ಗತಿಯಿಲ್ಲ. ಒಮ್ಮೊಮ್ಮೆ ಕರುಣಾನಿಧಿಯ ಕರುಣೆಸಮೂಹ ತಪ್ಪುವುದುಂಟು ಎಂಬ ಎಚ್ಚರಿಕೆ ನೀಡಿದ್ದಾರೆ.
ಶ್ರೀಪಾದರಾಜರು ಭಗವಂತನ್ನು ಯಾವ ನಿಲುವಿನಿಂದ ಕೊಂಡಾದಿದದ್ದಾರೆಂಬುದಕ್ಕೆ ಅವರ ಕೀರ್ತನೆಗಳೇ ಸಾಕ್ಷಿಯಾಗಿದೆ. ಶ್ರೀಪಾದರಾಜರಿಗೆ ಭಗವಂತನಲ್ಲಿದ್ದ ತುಂಬು ಭಕ್ತಿ ಅವರ ಹಾಡುಗಳಲ್ಲಿ ವ್ಯಕ್ತವಾಗಿದೆ. ಶ್ರೀ ರಂಗನಾಥನಲ್ಲಿ ಅವರದು ನಿರ್ವ್ಯಾಜ್ಯ ಭಕ್ತಿ. ನವವಿಧ ಭಕ್ತಿಯು ಅವರ ಹಾಡುಗಳಲ್ಲಿ ಇದೆಯಾದರೂ ಮಧುರಭಾವದ ಭಕ್ತಿಯ ಕೈ ಮೇಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post