ಆರ್ಷ ಪರಂಪರೆಯ ಸಂಪತ್ಪ್ರತೀಕವಾದ ನ್ಯಾಯ, ವ್ಯಾಕರಣ, ವೇದಾಂತ, ಜ್ಯೋತಿಷ್ಯ, ಧರ್ಮಶಾಸ್ತ್ರ, ಮೀಮಾಂಸವೆಂಬ ಷಟ್ಶಾಸ್ತ್ರಕೋವಿದರಾದ ಆಗಮಜ್ಞ ವಿದ್ವಾನ್ ಶ್ರೀ ರಾಜಾ ಎಸ್. ಗಿರಿಆಚಾರ್ಯ ಅವರಿಗೆ
ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಸಲ್ಲಿಸಿದ ನುಡಿನಮನ
ಮಹಾಮಹೋಪಾಧ್ಯಾಯ, ಪಂಡಿತಕೇಸರಿ, ವಿದ್ವಾನ್ ರಾಜಾ ಎಸ್. ಗಿರಿ ಆಚಾರ್ಯ ನಾಮಾಂಕಿತ ಶ್ರೀ ಸುಜ್ಞಾನೇಂದ್ರಾಚಾರ್ಯ ಗುರುವರ್ಯರು ಷಾಷ್ಠಿಕ ವಂಶದ ಬೀಗಮುದ್ರೆ ಮನೆತನದ ಯಜುಃಶಾಖೆಯ ಗೌತಮ ಗೋತ್ರೋತ್ಪನ್ನರಾಗಿ ಈ ನಾಡು ಕಂಡ ಪರಮ ಶ್ರೇಷ್ಟ ಯತಿವರೇಣ್ಯರ ವೇದವಿದ ಪರಂಪರೆಯ ಶ್ರೀ ರಾಜಾ ಎಸ್. ವೆಂಕಟರಾಘವೇಂದ್ರಾಚಾರ್ಯ – ಸದ್ಗುಣಿ ಸಾಧ್ವೀಮಣಿ ಶ್ರೀಮತಿ ರತ್ನಾಬಾಯಿ ದಂಪತಿಗಳ ಮಂಗಳ ಗರ್ಭಾಂಬುಧಿಯಲ್ಲಿ ಕರುನಾಡಿನ ಕಪಿಲಾ ತಡಿಯ ಪುಣ್ಯಕ್ಷೇತ್ರ ನಂಜನಗೂಡಿನಲ್ಲಿ ಪಾರ್ಥಿವ ನಾಮ ಸಂವತ್ಸರ ಚೈತ್ರ ಶುಕ್ಲ ನವಮಿ (ಶ್ರೀರಾಮನವಮಿ) 20.04.1945 ರಂದು ಜನಿಸಿದರು.
ಈ ನಾಡು ಕಂಡ ಪರಮ ಶ್ರೇಷ್ಟ ಯತಿಪರಂಪರೆಯ ಪೂರ್ವಾಶ್ರಮ ವಂಶ ಸಂಜಾತರಾದ ಶ್ರೀಯುತರು ತಮ್ಮ ಆರಂಭಿಕ ಶಿಕ್ಷಣವನ್ನು ನಂಜನಗೂಡಿನಲ್ಲಿಯೇ ಪಡೆದು ಮುಂದೆ ತಿರುಮಲ ತಿರುಪತಿ ದೇವಸ್ಥಾನ ಆಗಮ ವಿದ್ಯಾಸಂಸ್ಥೆಯಲ್ಲಿ ದ್ವೈತವೇದಾಂತ ವಿದ್ವತ್ ಹಾಗೂ ವ್ಯಾಸ ವಿದ್ವತ್ ಪದವಿಗೃಹೀತರಾಗಿ, ಪೂರ್ವಪುಣ್ಯಸಂಚಯದ ಫಲವೋ ಎಂಬಂತೆ ಇವರ ತೀರ್ಥರೂಪರು ಪರಮಹಂಸಾಶ್ರಮವನ್ನು ಸ್ವೀಕರಿಸಿ ಶ್ರೀ ಶ್ರೀ 108 ಶ್ರೀಸುಜಯೀಂದ್ರ ತೀರ್ಥರೆಂಬ ಅಭಿಧಾನದಿಂದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ಸಾಮ್ರಾಜ್ಯಪೀಠದ ಅಧಿರೂಢರಾಗಿದ್ದು, ಆ ಮಹನೀಯರಿಂದಲೇ ನ್ಯಾಯ, ವ್ಯಾಕರಣ, ಸಪರಿಮಳನ್ಯಾಯ ಸುಧಾಂತ ದ್ವೈತವೇದಾಂತ ಶಾಸ್ತ್ರಗಳ ಉಪದೇಶ ಪಡೆದ ಸುಕೃತ ಇವರದಾಗಿದೆ. ಮುಂದೆ ಪೂರ್ವಮೀಮಾಂಸೆ, ಜ್ಯೋತಿಷ್ಯ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರಗಳಲ್ಲಿ ವಿದ್ವನ್ಮಣಿಗಳಾದ ಶ್ರೀ ಬಾಲಸುಬ್ರಹ್ಮಣ್ಯ ಶಾಸ್ತ್ರಿಗಳು, ಶ್ರೀ ಪಿ.ಪಿ. ಲಕ್ಷ್ಮಿನಾರಾಯಣ ಉಪಾಧ್ಯಾಯರು, ಗೋಡಾ ಸುಬ್ರಹ್ಮಣ್ಯ ಶಾಸ್ತ್ರಿಗಳು ಮತ್ತು ಶ್ರೀ ಕೃಷ್ಣಸ್ವಾಮಿ ತಾತಾಚಾರ್ಯ ಅವರುಗಳು ತಮಗೆ ದಿಕ್ಸೂಚಿಗಳಾದವರು.
ಭರತಭೂಮಿಯ ಅವಿಚ್ಛಿನ್ನ ಸಂಸ್ಕøತಿಯ ಪ್ರಯತ ಪ್ರತೀಕವಾದ ಧರ್ಮ ಗ್ರಂಥಗಳ ಸಾರಸರ್ವಸ್ವವನ್ನೂ ನಿತಾಂತ ಅಧ್ಯಯನ, ಚಿಂತನ, ಸಂಶೋಧನ, ಸಂಪಾದನ ಅಧ್ಯಾಪನಗಳ ಮೂಲಕ ಕರತಲಾಮಲಕವಾಗಿಸಿಕೊಂಡು, ದೈವದತ್ತ ಗ್ರಹಣ, ಮನನ, ಧಾರಣ ಶಕ್ತಿಯ ಭಾಂಡಾಗಾರವೇ ಆದ ಶ್ರೀಯುತರು ಭೀಮಪ್ರತಿಭೆಯಿಂದ ಷಟ್ಶಾಸ್ತ್ರಗಳಲ್ಲಿ ಅನನ್ಯ ಪರಿಣತಿ ಸಾಧಿಸಿ ಸಾಂಸ್ಕೃತಿಕ , ಧಾರ್ಮಿಕ ವಲಯದ ಮಹಾಮನೀಷಿಯಾಗಿದ್ದಾರೆ.
ಪ್ರಾತಃಸ್ಮರಣೀಯ ಪೂಜ್ಯ ಶ್ರೀ ಸುಜಯೀಂದ್ರ ಶ್ರೀಪಾದಂಗಳವರ ಅಭಿಲಾಷೆಯಂತೆ ಪುಣ್ಯಭೂಮಿ ಮಂತ್ರಾಲಯದ ಶ್ರೀ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ನೇತಾರರಾಗಿ ಸಾವಿರಾರು ವಿದ್ಯಾಕಾಂಕ್ಷಿಗಳಿಗೆ ಶಾಸ್ತ್ರಸಂಪತ್ತಿನ ಜ್ಞಾನಧಾರೆಯನ್ನೆರೆಯುತ್ತ ಅವರ ಭವಿಷ್ಯದ ರೂವಾರಿಗಳಾಗಿ ಅನುಪಮ ಸೇವೆ ಸಲ್ಲಿಸುತ್ತಲಿದ್ದಾರೆ.
ಸಂಸ್ಕøತದಲ್ಲಿ ಶಾಬ್ದಬೋಧ, ವಿಷ್ಣು ಭಾಗವತ, ಕರ್ಮನಿರ್ಣಯ, ಪಾದೋದಕ ಪ್ರಾಶನ ಗ್ರಂಥಗಳು, ಇಪ್ಪತ್ನಾಲ್ಕು ಕನ್ನಡ ಗ್ರಂಥಗಳು, ಎಂಟು ತೆಲುಗು ಕೃತಿಗಳ ರಚನೆ ಇವರ ಭಾಷಾವೈದುಷ್ಯದ ದ್ಯೋತಕವಾಗಿ ನೂರಾರು ಗ್ರಂಥಗಳ ಸಂಪಾದಕರಾಗಿ , ಇವರ ನೇತೃತ್ವದಲ್ಲಿ ನಡೆಯುತ್ತಿರುವ ಅನೇಕ ಪ್ರಾಚೀನ ಪ್ರಯತ ಪ್ರಥಿತ ಗ್ರಂಥಗಳ ಹಸ್ತಪ್ರತಿ ಸಂಗ್ರಹಣೆ, ಸಂರಕ್ಷಣೆ, ಸಂಪಾದನೆ, ಪರಿಷ್ಕರಣೆ, ಪ್ರಕಟಣೆಗಳು ಭಾರತೀಯ ಧಾರ್ಮಿಕ ಸಾಹಿತ್ಯ ಭಂಡಾರಕ್ಕೆ ಸಂದ ಅಮೂಲ್ಯ ಕೊಡುಗೆಗಳಾಗಿವೆ. ತೆಂಕು ಭಾರತದಿಂದ ವಾರಣಾಸಿಯವರೆಗೆ ಇವರ ವಿದ್ವತ್ತಿನ ಕಾರ್ಯ ವ್ಯಾಪ್ತಿ ವಿಸ್ತಾರ. ಮಂತ್ರಾಲಯ ಶ್ರೀಮಠದ ಶ್ರೀಮತ್ಸಮೀರ ಸಮಯ ಸಂವರ್ಧಿನೀ ಸಭೆಯ ಅಧ್ವರ್ಯುವಾಗಿ ಶ್ರೀಯುತರು ನಡೆಸಿಕೊಟ್ಟ ಧಾರ್ಮಿಕ ವಿದ್ವತ್ ಸಮಾವೇಶಗಳು ಮಂತ್ರಾಲಯ ಮಹಾ ಸಂಸ್ಥಾನದ ಕೀರ್ತಿ ಕಲಶವನ್ನು ಮತ್ತಷ್ಟು ದೇದೀಪ್ಯಮಾನಗೊಳಿಸಿದೆ.
ಅನೂಚಾನ ಹೈಂದವ ಪರಂಪರೆಯ ಹಿರಿಮೆ ಗರಿಮೆಗಳೇ ಮೂರ್ತಗೊಂಡ ಇವರ ಜ್ಞಾನಸಂಪತ್ತಿನ ಸೌಲಭ್ಯವನ್ನು ಅಖಿಲ ಭಾರತ ಮಾಧ್ವ ಮಹಾ ಮಂಡಳ, ಪೂರ್ಣಪ್ರಜ್ಞ ವಿದ್ಯಾಪೀಠ, ಟಿಟಿಡಿ ದಾಸ ಸಾಹಿತ್ಯ ಯೋಜನೆ, ಆಂಧ್ರದ ದೇವಾದಾಯ ಇಲಾಖೆ, ಕರ್ನಾಟಕ, ತಮಿಳುನಾಡು ಸರ್ಕಾರಗಳ ಧಾರ್ಮಿಕ ದತ್ತಿ ಇಲಾಖೆ ಮುಂತಾದ ಅನೇಕ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು ತಮ್ಮದಾಗಿಸಿಕೊಂಡಿರುವುದು ಇವರ ಹೆಮ್ಮೆಯ ಮಕುಟದಲ್ಲಿ ಹುದುಗಿಸಿದ ನವ ಮೌಕ್ತಿಕವಾಗಿದೆ.
ವ್ಯಾಸ-ದಾಸ ಸಾಹಿತ್ಯ ಸಮನ್ವಯ ಪೀಠದ ಸಂಸ್ಥಾಪಕ ಅಧ್ಯಕ್ಷರಾಗಿ, ದ್ವೈತರಥ ರಥಿಕರಾಗಿ ಅನೇಕ ಶಾಸ್ತ್ರಾರ್ಥ ಸದಸ್ಸುಗಳ ನಿರ್ವಾಹಕರಾಗಿ, ನಾಡಿನಾದ್ಯಂತ ಸಂಚರಿಸುತ್ತ ಧರ್ಮಪ್ರಸರಣ ಸಂರಕ್ಷಣ ಮಹಾಕ್ರತುವಿನಲ್ಲಿ ಶ್ರಮವೆಣಿಸದೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು, ಜನಮಾನಸದಲ್ಲಿ ಧರ್ಮಜಾಗೃತಿಯ ಬೆಳಕನ್ನು ಮೂಡಿಸುತ್ತ ಮುನ್ನಡೆಯುತ್ತಿರುವ ಇವರ ನಿಡುವಯಣದಲ್ಲಿ ಇವರನ್ನರಸಿ ಬಂದ ಪ್ರಶಸ್ತಿ, ಪುರಸ್ಕಾರ, ಗೌರವ, ಸಮ್ಮಾನ ಉಪಾಧಿಗಳು ಅಗಣಿತ. ಭಾರತ ಸರಕಾರದ ರಾಷ್ಟ್ರಪತಿ ಪ್ರಶಸ್ತಿಯೂ ಸೇರಿದಂತೆ ನಾಡಿನ ಬಹುತೇಕ ಎಲ್ಲ ಮಠಾಧೀಶರಿಂದ, ಪ್ರತಿಷ್ಟಿತ ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ ಸಂಘ ಸಂಸ್ಥೆಗಳಿಂದ ಅಪರಿಮಿತ ಪ್ರಶಂಸಾಭಿನಂದನೆಗಳು ಇವರಿಗೆ ಸಂದಿರುವುದು ನಮಗೆಲ್ಲ ಹೆಮ್ಮೆಯೆನಿಸಿದೆ.
ಲೇಖನ: ಜಿ.ಪಿ ನಾಗರಾಜನ್ , ಬೆಂಗಳೂರು
Discussion about this post