ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನ ಕೃಪಾ ಪೋಷಿತ ಉಗ್ರವಾದಿಗಳಿಂದ ಪದೇ ಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆರಳಿರುವ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಶೀಘ್ರ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸುಳಿವು ನೀಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಗಡಿಯಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರ ದಾಳಿ ಇದೇ ರೀತಿ ಮುಂದುವರೆದರೆ, ನಾವು ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಮ್ಮ ಬಳಿಯೂ ಸಹ ಸರ್ಜಿಕಲ್ ಸ್ಟೈಕ್ ಸೇರಿದಂತೆ ಹಲವು ಅವಕಾಶಗಳು ಪಾಕ್ಗೆ ಬುದ್ದಿ ಕಲಿಸಲು ಸಿದ್ದವಾಗಿದೆ ಎಂದು ಹೇಳುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ.
ಮತ್ತೊಂದು ಅಂಥ ದಾಳಿ ಅಗತ್ಯ ಎನ್ನುವುದು ನನ್ನ ನಂಬಿಕೆ. ಆದರೆ ಅದನ್ನು ಹೇಗೆ ಮಾಡುತ್ತೇವೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ ಎಂದಿರುವ ರಾವತ್, ಈ ಮಧ್ಯೆ ಪಾಕಿಸ್ಥಾನದ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನು ಹಿಂಪಡೆಯುವಂತೆ ಕರೆ ನೀಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ಇನ್ನು, ಗಡಿಯಲ್ಲಿ ಪದೇ ಪದೇ ತಂಟೆ ಮಾಡುತ್ತಿರುವ ಹಾಗೂ ಗಡಿಯನ್ನು ದಾಟಲು ಯತ್ನಿಸುತ್ತಿರುವ ಪಾಕ್ ಸೇನೆ ಹಾಗೂ ಉಗ್ರರ ಕೃತ್ಯವನ್ನು ತಡೆಗಟ್ಟಲು ವಿಶೇಷ ಯೋಜನೆ ರೂಪಿಸಿರುವ ಭಾರತೀಯ ಸೇನೆ, ಇದಕ್ಕಾಗಿ ಎಂತಹ ಪರಿಸ್ಥಿತಿಯನ್ನು ಸಹ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ರಾವತ್ ಹೇಳಿದ್ದಾರೆ.
ಅಲ್ಲದೇ, ಪಾಕ್ ಹಾಗೂ ಪ್ರೇರಿತ ಉಗ್ರರು ತಮ್ಮ ಕೃತ್ಯವನ್ನು ನಿಲ್ಲಿಸದೇ ಇದ್ದರೆ ನಮ್ಮ ಬಳಿ ಎಲ್ಲ ರೀತಿಯ ಶಸ್ತ್ರ ಹಾಗೂ ಸೇನೆ ಸಿದ್ದವಾಗಿದೆ. ಇದಕ್ಕಾಗಿ, ನಾವು ಯುದ್ದವನ್ನೂ ಸಹ ಎದುರಿಸಲು ಸಿದ್ದವಾಗಿದ್ದೇವೆ ಎಂದು ಪಾಕ್ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
Discussion about this post