ನವದೆಹಲಿ: ತೀವ್ರ ಹೃದಯಾಘಾತದಿಂದ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಇಡಿಯ ದೇಶಕ್ಕೇ ಮಾತೃಹೃದಯಿಯಾಗಿದ್ದ ತಾಯಿಯ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ನವದೆಹಲಿಯ ಲೋಧಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಭೂತಾನ್ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರುಗಳು, ಎಲ್ಲ ಪಕ್ಷಗಳ ಮುಖಂಡರು ಹಾಜರಿದ್ದು, ಅಗಲಿದ ಮಾತೃಹೃದಯಿಗೆ ಅಂತಿಮ ನಮನ ಸಲ್ಲಿಸಿದರು.
ತಮ್ಮ ಮೊದಲ ಅವಧಿಯ ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿ ಯಶಸ್ವಿಯಾಗಿ ಹಾಗೂ ಸಮರ್ಥವಾಗಿ ಕರ್ತವ್ಯ ನಿಭಾಯಿಸಿದ ಸುಷ್ಮಾ ಅವರ ಪಾರ್ಥಿವ ಶರೀರ ಕಂಡ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರು ಹಾಕಿದರು.
ಪರಮಾಪ್ತ ಶಿಷ್ಯೆ ನೆನೆದು ಕಣ್ಣೀರು ಹಾಕಿದ ಆಡ್ವಾಣಿ
ಪ್ರಸ್ತುತ ಬಿಜೆಪಿಯ ಅತ್ಯಂತ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ಸುಷ್ಮಾ ಸ್ವರಾಜ್ ಪರಮಾಪ್ತ ಶಿಷ್ಯೆಯಾಗಿದ್ದರು.
ಸುಷ್ಮಾ ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದ ವೇಳೆ ತೀರಾ ಭಾವುಕರಾದ ಆಡ್ವಾಣಿಯವರು ತೀವ್ರ ದುಃಖತಪ್ತರಾಗಿದ್ದರು. ಆಡ್ವಾಣಿ ಅವರೊಂದಿಗೆ ದೀರ್ಘ ಸಮಯ ಪಕ್ಷ ಸಂಘಟನೆಯಲ್ಲಿ ಸುಷ್ಮಾ ಭಾಗಿಯಾಗಿದ್ದರು. ತಮ್ಮ ರಾಜಕೀಯ ಗುರುವಿನ ಸ್ಥಾನವನ್ನು ಆಡ್ವಾಣಿ ಅವರಿಗೆ ಸುಷ್ಮಾ ನೀಡಿದ್ದರು. ಈ ಸಲುವಾಗಿ ಪ್ರತಿ ವರ್ಷ ಆಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಸುಷ್ಮಾ ಅವರು ಚಾಕಲೇಟ್ ಕೇಕ್ ಜತೆ ಆಗಮಿಸುತ್ತಿದ್ದರು. ಆ ದಿನಗಳನ್ನು ನೆನೆದ ಹಿರಿಯ ಜೀವ ನೊಂದಿದ್ದನ್ನು ಕಂಡ ನೆರೆದಿದ್ದವರ ಕಣ್ಣಲ್ಲೂ ಸಹ ನೀರು ಜಿನುಗಿತು.
Discussion about this post