ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೆ.22ರಂದು ಆರಂಭಗೊಂಡಿದ್ದ ಶಿವಮೊಗ್ಗ ದಸರಾ ಅದ್ದೂರಿಯಾಗಿ ನಡೆದಿದ್ದು, ಇಂದು ತಹಶೀಲ್ದಾರ್ ರಾಜೀವ್ ಅವರು ಅಂಬು ಕಡಿದು ಬನ್ನಿ ಮುಡಿಯುವ ಮೂಲಕ ವೈಭವದ ತೆರೆ ಬಿದ್ದಿದೆ.
ಸಂಜೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಿಂದ ಆರಂಭಗೊಂಡ ಆನೆ ಅಂಬಾರಿ ಹಾಗೂ ನೂರಾರು ದೇವಾನು ದೇವತೆಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವು ಜನಪ್ರತಿನಿಧಿಗಳು ಜಂಬೂ ಸವಾರಿಗೆ ಅಧಿಕೃತ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಂಬೂ ಸವಾರಿ ಎಸ್’ಪಿಎಂ ರಸ್ತೆ, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್’ಗೆ ಬಂದು ತಲುಪಿತು.
ಆನೆ ಮೇಲೆ ಬೆಳ್ಳಿ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ತಾಯಿ ಚಾಮುಂಡೇಶ್ವರಿಯ ಜಂಬೂ ಸವಾರಿಗೆ ಕಳೆ ಕಟ್ಟುವಂತೆ ಹತ್ತು ಹಲವು ಕಲಾ ತಂಡಗಳು ಮೆರುಗು ನೀಡಿದವು.
ಫ್ರೀಡಂ ಪಾರ್ಕ್’ನಲ್ಲಿ ಹಾಕಲಾಗಿದ್ದ ಬೃಹತ್ ಎತ್ತರದ ವೇದಿಕೆಯಲ್ಲಿ ಸಂಪ್ರದಾಯದ ಪ್ರಕಾರ ತಹಶೀಲ್ದಾರ್ ರಾಜೀವ್ ಅವರು ಪೂಜೆ ಸಲ್ಲಿಸಿ, ಅಂಬು ಕಡಿದು, ಬನ್ನಿ ಮುಡಿದರು. ಈ ಮೂಲಕ ಶಿವಮೊಗ್ಗ ಪಾಲಿಕೆಯ ಈ ಬಾರಿಯ ದಸರಾಗೆ ಅದ್ದೂರಿ ತೆರೆ ಬಿದ್ದಿತು. ನಂತರ ರಾವಣನ ಪ್ರತಿಕೃತಿ ದಹನ ಮಾಡಲಾಯಿತು.
ವೇದಿಕೆ ಮೇಲೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್’ಸಿ ಬಲ್ಕಿಷ್ ಬಾನು, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಫೋಟೋ ಆಲ್ಬಂ ನೋಡಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























