ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಪೋ ಮಹಿಮರಾದ ಶ್ರೀವಾದಿರಾಜ ಸ್ವಾಮಿಗಳು ತಮ್ಮ ತಪಃ ಪ್ರಭಾವದಿಂದ ಅನೇಕರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿದ್ದು, ಇವರ ನಾಮಸ್ಮರಣೆ ಹಾಗೂ ಇವರ ಕೃತಿಗಳ ಪಠಣ, ಶ್ರವಣದಿಂದ ಸರ್ವಪಾಪಗಳೂ ನಾಶವಾಗುತ್ತವೆ ಎಂದು ಪಂಡಿತ ಶ್ರೀನಿವಾಸಾಚಾರ್ ಹೇಳಿದರು.
ಅವರು ಹಳೇನಗರದ ಶ್ರೀರಾಘವೇಂದ್ರಸ್ವಾಮಿ ಮತ್ತು ಶ್ರೀವಾದಿರಾಜಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಶ್ರೀವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ ವಾದಿರಾಜಯತಿಗಳು ರಚಿಸಿದ ತೀರ್ಥ ಪ್ರಬಂಧದಲ್ಲಿನ ಪುಣ್ಯಕ್ಷೇತ್ರಗಳ ಮಹಿಮೆಯ ಕುರಿತು ಉಪನ್ಯಾಸ ನೀಡಿದರು.
ಮಧ್ವಮತದ ತತ್ವಸಿದ್ಧಾಂತಗಳನ್ನು ವಾದಿರಾಜರು ತಮ್ಮಕೃತಿಗಳಲ್ಲಿ ತಿಳಿಸುವುದರ ಜೊತೆಗೆ ಗಯಾ, ಕಾಶಿ, ಅಯೋಧ್ಯೆ, ಪುಷ್ಕರ, ಕುರುಕ್ಷೇತ್ರ, ಬದರಿ, ಬೃಂದಾವನ, ಮಥುರ ಸೇರಿದಂತೆ ಭಗವಂತನ ವಿಶೇಷ ಸನ್ನಿಧಾನವಿರುವ ಕ್ಷೇತ್ರಗಳ ಪರಿಚಯವನ್ನು ತಮ್ಮಕೃತಿಗಳಲ್ಲಿ ವಿವರವಾಗಿ ತಿಳಿಸುವ ಮೂಲಕ ಆಸ್ತಿಕ ಜನರಿಗೆ ಮಹದುಪಕಾರ ಮಾಡಿದ್ದಾರೆ.
ಗಂಗಾಜಲವನ್ನು ನೋಡಿದರೆ, ಸ್ಪರ್ಷಿಸಿದರೆ, ಅದರಲ್ಲಿ ಮಿಂದರೆ, ಗಂಗಾನದಿಯ ವರ್ಣನೆ ಕೇಳಿದರೆ ಹೇಗೆ ನಮ್ಮೆಲ್ಲಾ ಪಾಪಗಳು ನಾಶವಾಗುತ್ತವೆ ಎಂದು ಶಾಸ್ತ್ರಕಾರರು ಹೇಳಿರುವರೋ ಹಾಗೆಯೇ ಶ್ರೀವಾದಿರಾಜರ ಕೃತಿಗಳನ್ನು ಆದ್ಯಯನ ಮಾಡುವುದರಿಂದ, ಶ್ರವಣಮಾಡುವುದರಿಂದ, ಅವರು ರಚಿಸಿದ ಭಗವಂತನ ಕುರಿತ ಕೀರ್ತನೆಗಳನ್ನು ಹಾಡುವುದರಿಂದ ಅವರ ನಾಮಸ್ಮರಣೆ ಮಾಡುವುದರಿಂದ ನಮ್ಮೆಲ್ಲ ಪಾಪಗಳು ನಾಶವಾಗುತ್ತವೆ ಎಂದರು.
ರಥೋತ್ಸವ
ವಾದಿರಾಜರ ಆರಾಧನೆಯ ಪ್ರಯುಕ್ತ ಬೆಳಿಗ್ಗೆ ವಾದಿರಾಜರ, ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮತ್ತು ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರಾಣದೇವರ ರಜತ ಮೂರ್ತಿಯನ್ನು ಮತ್ತು ವಾದಿರಾಜರ, ರಾಘವೇಂದ್ರ ಸ್ವಾಮಿಗಳ ರಜತ ಬೃಂದಾವನವನ್ನು ಪುಷ್ಪಾಲಂಕೃತ ರಥದಲ್ಲಿರಿಸಿ ಪಂಡಿತ ಗೋಪಾಲಾಚಾರ್ ಪೌರೋಹಿತ್ಯದಲ್ಲಿ ರಥಪೂಜೆ, ಬಲಿ, ನೈವೇದ್ಯಾದಿಗಳನ್ನು ನೆರವೇರಿಸಲಾಯಿತು.
ನಂತರ ಭಕ್ತಾದಿಗಳು ವಾದಿರಾಜ ಸ್ವಾಮಿಗಳ ನಾಮಸ್ಮರಣೆ ಹಾಗೂ ಗೋವಿಂದ ನಾಮಸ್ಮರಣೆ ಮಾಡುತ್ತಾ ಹರಿಸರ್ವೋತ್ತಮ- ವಾಯುಜೀವೋತ್ತಮ ಎಂದು ಉಚ್ಛಸ್ವರದಲ್ಲಿ ಕೂಗುತ್ತಾ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಲನೆ ನೀಡಿದರು.
ಬ್ರಾಹ್ಮಣರ ಬೀದಿ, ಪೇಟೆಬೀದಿ ಮೂಲಕ ಹಳೇನಗರದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೆ ಸಾಗಿತು. ಅಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕರಾದ ವೆ.ಬ್ರ. ರಂಗನಾಥಶರ್ಮ ದೇವರಿಗೆ ಹಾಗೂ ಗುರುಗಳಿಗೆ ಮಂಗಳಾರತಿ ಬೆಳಗಿದ ನಂತರ ಪುನಃ ರಥವನ್ನು ಅದೇಮಾರ್ಗದಲ್ಲಿ ಎಳೆದು ಶ್ರೀಮಠಕ್ಕೆ ತರಲಾಯಿತು.
ಪಲ್ಲಕ್ಕಿಯಲ್ಲಿ ಗುರುಗಳ ಬೃಂದಾವನ ಮತ್ತು ಪ್ರಾಣದೇವರ ಮೂರ್ತಿಯನ್ನಿರಿಸಿ ಶ್ರೀರಾಮೇಶ್ವರ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಪಲ್ಲಕ್ಕಿ ಉತ್ಸವ ತೆರಳಿ, ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿದ ನಂತರ ಶ್ರೀಮಠಕ್ಕೆ ಪಲ್ಲಕ್ಕಿ ಉತ್ಸವ ಹಿಂದಿರುಗಿ ಬಂದ ನಂತರ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ತೀರ್ಥಪ್ರಸಾದ ಅನ್ನಸಂತರ್ಪಣೆ ನಡೆಸಲಾಯಿತು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಮಠದ ಮುಖ್ಯಸ್ಥರಾದ ಮುರಳೀಧರ ತಂತ್ರಿ, ಮಾಧವರಾವ್, ಶ್ರೀಪತಿ, ಜಿ.ರಮಾಕಾಂತ, ಚಿಟ್ಟೂರು ರಾಘವೇಂದ್ರಾಚಾರ್, ಪಂಡಿತರುಗಳಾದ ಶೇಷಗಿರಿ ಆಚಾರ್, ಗಂಟೆ ನಾರಾಯಣಾಚಾರ್, ಅನಂತಾಚಾರ್, ಗೋಪಾಲರಾವ್, ಸಣ್ಣಗಂಟೆ ನಾರಾಯಣಾಚಾರ್, ವೆಂಕಟೇಶ್, ಮುಕುಂದ, ಜಯಶ್ರೀ ಧೃವರಾವ್, ಪರಿಮಳ, ಸುನಂದಮ್ಮ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post