ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲೇ ಆರಂಭವಾಗಲಿದ್ದು, ಇದಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ನಗರಸಭೆ ಆಯುಕ್ತ ಮನೋಹರ್ ಮನವಿ ಮಾಡಿದರು.
ನಗರಸಭೆಯ ಸರ್.ಎಂ.ವಿ. ಸಭಾಂಗಣದಲ್ಲಿ ಕರೆಯಲಾಗಿದ್ದ 2021-22ನೆಯ ಸಾಲಿನ ಅಯವ್ಯಯದ ಪೂರ್ವಭಾವಿ ಸಭೆಯಲ್ಲಿ ನಾಗರಿಕರು ಸಂಘ ಸಂಸ್ಥೆಗಳು ನೀಡಿದ ಸಲಹೆ, ಚರ್ಚೆಯ ನಂತರ ಅವರು ಮಾತನಾಡಿದರು.
ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಹಲವು ವೃತ್ತಗಳ ಅಗಲೀಕರಣ ಮತ್ತು ಅಭಿವೃದ್ಧಿ ಸೇರಿದಂತೆ ಚನ್ನಗಿರಿ ರಸ್ತೆ ಅಗಲೀಕರಣ, ಫುಡ್ ಕೋರ್ಟ್, ಮೀನು ಮಾರುಕಟ್ಟೆ, ಬಸವೇಶ್ವರ ವೃತ್ತದ ಬಳಿಯ ಮಾರುಕಟ್ಟೆ ನಿರ್ಮಾಣ ಎಲ್ಲವೂ ಆಗಬೇಕಿದ್ದು ನಾಗರಿಕರು ಕೊಡುತ್ತಿರುವ ಸಹಕಾರ, ಸಲಹೆಗಳನ್ನು ಸ್ವೀಕರಿಸಿ ಈ ಎಲ್ಲಾ ಕಾಮಗಾರಿಗಳನ್ನು ಮುಂದುನ ವರ್ಷದೊಳಗಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ನಗರಸಭೆ ವ್ಯಾಪ್ತಿಯ ಉಜ್ಜನೀಪುರ, ವಿಜಯನಗರ ಐದು ಕಡೆಗಳಲ್ಲಿನ ಒಳಚರಂಡಿ ನಿರ್ಮಾಣ 2022ರ ವೇಳೆಗೆ ಮುಕ್ತಾಯಗೊಳ್ಳಲು ಕಾಲಾವಕಾಶ ನಿಗದಿಯಾಗಿತ್ತು. ಆದರೆ ಅದಕ್ಕೂ ಒಂದು ವರ್ಷ ಮುಂಚಿತವಾಗಿ 2021ರಲ್ಲಿಯೇ ಸದರಿ ಕಾಮಗಾರಿ ಪೂರ್ಣಗೊಂಡಿದ್ದು ಐದು ಸಾವಿರ ಮನೆಗಳಿಗೆ ಒಳಚರಂಡಿ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆ. 7.2 ಎಂ.ಎಲ್.ಡಿ. ಸಾಮರ್ಥ್ಯದ ಎಸ್.ಟಿ.ಪಿ ಘಟಕ ನಿರ್ಮಾಣ ಮಾಡಲಾಗಿದೆ. ವಿವಿಧ ಕಡೆಗಳಲ್ಲಿ 7 ಓಹೆಚ್, ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು ಈ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಉದ್ಘಾಟನಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ನಲ್ಲಿ ನೀರಿನ ಸರಬರಾಜಿಗೆ ಮನೆ ಮನೆಗಳಿಗೆ ಮೀಟರ್ ಅಳವಡಿಕೆ ಕಾರ್ಯ ಸಹ ಪ್ರಗತಿಯಲ್ಲಿದ್ದು ಇರುವ ಅಲ್ಪ ಸ್ವಲ್ಪ ಲೋಪದೋಷಗಳನ್ನೂ ಸಹ ಸರಿಪಡಿಸಿ ಪೂರ್ಣಗೊಳಿಸಲಾಗುತ್ತದೆ ಎಂದರು.
ನಗರಸಭೆ 21-22ರಲ್ಲಿ ವಿವಿಧ ಆದಾಯದ ಮೂಲಗಳಿಂದ, ಸರ್ಕಾರದ ಅನುದಾನಗಳಿಂದ ಒಟ್ಟು ರೂ.7866.52 ಲಕ್ಷ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2021-22 ಸಾಲಿನ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಅಂದಾಜು ಪಟ್ಟಿಯನ್ನು ಸಭೆಯಲ್ಲಿದ್ದವರಿಗೆ ಒದಗಿಸಿ ಮಾಹಿತಿ ನೀಡಿದರು.
ನಗರಸಭೆ ಲೆಕ್ಕಾಧೀಕ್ಷಕ ಸೈಯದ್ ಮಹಮೂದ್ ಆಲಿ ಮಾತನಾಡಿ, ಪ್ರತಿ ಬಾರಿ ಸಭೆಯಲ್ಲಿ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೂಕ್ತ-ಸಲಹೆಗಳನ್ನು ನೀಡುವ ಬಜೆಟ್ ಯಶಸ್ವಿಗೆ ಸಹಕರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಸಹ ಸರ್ಕಾರ ಹಲವು ಅನುದಾನಗಳನ್ನು ಹಾಗು ನಗರಸಭೆ ಆದಾಯಗಳನ್ನು ನಿರೀಕ್ಷಿಸಿ ಬಜೆಟ್ ಸಿದ್ದಪಡಿಸಬೇಕಾಗಿದೆ. ಪ್ರಸ್ತುತ ನಗರಸಭೆಗೆ ಬರುತ್ತಿರುವ ಆದಾಯಗಳಲ್ಲಿ ಇಳಿಮುಖವಾಗುತ್ತಿದೆ. ಪ್ರಮುಖವಾಗಿ ನೀರಿನ ಶುಲ್ಕ ವಸೂಲಾತಿ ಈ ಬಾರಿ ಶೇ.50ರಷ್ಟು ಮಾತ್ರ ನಡೆದಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹ ಸಹಕರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.ನಗರಸಭಾ ಮಾಜಿ ಅಧ್ಯಕ್ಷ ವಿ. ವೆಂಕಟೇಶ್ ಮಾತನಾಡಿ, ನಗರಸಭೆಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಗರಸಭೆಯ ಆದಾಯದ ಮೂಲವನ್ನಾಗಿ ಮಾಡಿಕೊಂಡರೆ ಉತ್ತಮ ಎಂದರು.
ಸಾಮಾಜಿಕ ಸೇವಾ ಕಾರ್ಯಕರ್ತ ನರಸಿಂಹಾಚಾರ್, ಮಾಜಿ ನಗರಸಭಾಧ್ಯಕ್ಷ ಆರ್. ಕರುಣಾಮೂರ್ತಿ ಮುಸ್ಲಿಂ ಮುಖಂಡ ಜಹೀರ್ ಖಾನ್, ಮನೆ ಮಾಲೀಕರ ಸಂಘದ ಅಧ್ಯಕ್ಷ ರುದ್ರಪ್ಪ, ಬಸವರಾಜ್, ರಘು, ವರ್ತಕರ ಸಂಘದ ಅಧ್ಯಕ್ಷ ಹರೀಶ್ ಬಾಬು, ಕಾಂಗ್ರೆಸ್ ಮುಖಂಡ ಗಂಗಾಧರ್ ಹಾಗೂ ಅನೇಕರು ಮಾತನಾಡಿ ನಗರದ ರಸ್ತೆ ಅಗಲೀಕರಣ, ನೀರು ಶುದ್ಧೀಕರಣ, ರಸ್ತೆ ಬದಿ ಮರ ಗಿಡ ಬೆಳೆಸುವ ಬಗ್ಗೆ, ಕನ್ಸರ್ವೆನ್ಸಿ ರಸ್ತೆ ಸ್ವಚ್ಛತೆ, ಚರಂಡಿ ನಿರ್ಮಾಣ, ಬೀದಿ ದೀಪ ಮುಂತಾದ ವಿಷಯಗಳ ಕುರಿತಂತೆ ಸಲಹೆ ನೀಡಿ ಮಾತನಾಡಿದರು.
ವೇದಿಕೆಯಲ್ಲಿ ನಗರಸಭೆ ಅಧಿಕಾರಿ ರಂಗರಾಜ ಪುರೆ, ಕಂದಾಯಾಧಿಕಾರಿ ರಾಜ್ಕುಮಾರ್, ಪರಿಸರ ಇಂಜನಿಯರ್ ಪ್ರಭಾಕರ್ ಅವರುಗಳು ಉಪಸ್ಥಿತರಿದ್ದರೆ. ನಗರಸಭೆ ಅಧಿಕಾರಿಗಳಾದ ಸುನಿತಾ, ಸುಹಾಸಿನಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post