ಶ್ರೀರಾಮಕೃಷ್ಣ- ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಮಂಡ್ಯದಲ್ಲಿ ಆರಂಭವಾಗಿರುವ ವಿವೇಕ ಶಿಕ್ಷಣ ವಾಹಿನಿ ಸಂಸ್ಥೆಯು ಒಂದು ವರ್ಷದಿಂದ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.
ವಾಹಿನಿಯ ವತಿಯಿಂದ ಕಳೆದ ವರ್ಷ 10,000 ವಿದ್ಯಾರ್ಥಿಗಳಿಗೆ ನಿರ್ಮಾಣಂ ಪರೀಕ್ಷೆಯನ್ನು ಬರೆಸಲಾಗಿತ್ತು. ಅದರಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೋಸ್ಕರ ಸ್ವಾಮಿ ಪುರುಷೋತ್ತಮಾನಂದರು ಬರೆದಿರುವ, ರಾಮಕೃಷ್ಣ ಆಶ್ರಮದ ಪ್ರಕಟಣೆಯಾದ, ವಿದ್ಯಾರ್ಥಿಗಾಗಿ ಪುಸ್ತಕವನ್ನು ಆಧರಿಸಿದ 100 ಅಂಕಗಳ ನಿರ್ಮಾಣಂ ಲಿಖಿತ ಪರೀಕ್ಷೆಯನ್ನು ಮತ್ತೊಮ್ಮೆ ಆಯೋಜಿಸಲಾಗುತ್ತಿದೆ.
ಪರೀಕ್ಷಾ ಶುಲ್ಕ ಪ್ರತಿ ವಿದ್ಯಾರ್ಥಿಗೆ 30 ರೂಪಾಯಿ. ವಿದ್ಯಾರ್ಥಿಗಾಗಿ ಪುಸ್ತಕ, ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ, ಪ್ರತಿ ತರಗತಿಗೆ ನಾಲ್ವರಂತೆ ಅತಿ ಹೆಚ್ಚು ಅಂಕ ಗಳಿಸಿದ ವಿಜೇತರಿಗೆ ಬಹುಮಾನವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆಯ ಅರ್ಧದಷ್ಟು ಭಾರತ ಭಾರತಿ ಸರಣಿಯ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಪುಟ್ಟ ಪುಟ್ಟ ಪುಸ್ತಕಗಳು, ಮೌಲ್ಯಮಾಪಕರಿಗೆ ಒಂದು, ಸಂಯೋಜಕರಿಗೆ ಒಂದು, ಶಾಲೆಗೆ ಒಂದು ಸ್ಮರಣಿಕೆ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ಸಂಸ್ಥೆಯ ವತಿಯಿಂದ ಒದಗಿಸಲಾಗುತ್ತದೆ.
ಪುಸ್ತಕಗಳು ದೊರೆತ ಕೂಡಲೇ ಮಕ್ಕಳಿಗೆ ಅದನ್ನು ವಿತರಿಸಿ ಅದರಲ್ಲಿರುವ ನಾಲ್ಕು ಅಧ್ಯಾಯಗಳನ್ನು ಶಿಕ್ಷಕರ ಸಹಾಯದೊಂದಿಗೆ ತರಗತಿಗಳಲ್ಲಿ ಬೋಧಿಸಿ, ನವಂಬರ್ ಅಥವಾ ಡಿಸಂಬರ್ ತಿಂಗಳಲ್ಲಿ ಪರೀಕ್ಷೆಯನ್ನು ಆಯೋಜಿಸಿ, ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಜನವರಿ 12 ರ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡುವುದು ಸಂಯೋಜಕರ ಕೆಲಸ.
ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಮಯಾವಕಾಶ ನೀಡುವ ಸಲುವಾಗಿ ಪುಸ್ತಕಗಳನ್ನು ಅತ್ಯಂತ ಶೀಘ್ರದಲ್ಲಿ ತಲುಪಿಸಬೇಕಾಗುತ್ತದೆ. ಶುಲ್ಕವನ್ನು ಸಂಗ್ರಹಿಸಿ ನಮಗೆ ಕಳುಹಿಸಿದ ಕೂಡಲೇ ನಿಮಗೆ ಪುಸ್ತಕಗಳನ್ನು ತಲುಪಿಸಲಾಗುವುದು. ಪ್ರಶ್ನೆ ಪತ್ರಿಕೆ, ಉತ್ತರಪತ್ರಿಕೆ, ಪ್ರಮಾಣಪತ್ರ, ಸ್ಮರಣಿಕೆ ಮತ್ತು ಬಹುಮಾನಗಳನ್ನು ಪರೀಕ್ಷಾ ದಿನಾಂಕಕ್ಕೆ ಒಂದು ವಾರ ಮುಂಚಿತವಾಗಿ ಸಂಯೋಜಕರಿಗೆ ತಲುಪಿಸಲಾಗುವುದು. ದಾನಿಗಳು ಲಭ್ಯವಿದ್ದಲ್ಲಿ ನಿಮ್ಮ ಶಾಲೆಯ ಪೂರ್ಣ ಪರೀಕ್ಷಾ ಶುಲ್ಕವನ್ನು ನೀವೇ ಭರಿಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷೆ ಬರೆಯಲೂ ಅವಕಾಶ ಕಲ್ಪಿಸಬಹುದು.
ಸ್ವಾಮಿ ಪುರುಷೋತ್ತಮಾನಂದರು ಬರೆದಿರುವ ವಿದ್ಯಾರ್ಥಿಗಾಗಿ ಎನ್ನುವ ಈ ಪುಸ್ತಕದಲ್ಲಿ ಒಂದು ದಿವ್ಯ ಶಕ್ತಿ ಇದೆ. ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಈ ಪುಸ್ತಕವನ್ನು ವಿದ್ಯಾರ್ಥಿಗಳ ಭವ್ಯ ಭವಿಷ್ಯವನ್ನು ರೂಪಿಸುವ ಮಾಧ್ಯಮವನ್ನಾಗಿ ಬಳಸಲು ನಮ್ಮೊಡನೆ ಕೈಜೋಡಿಸಿ. ನೀವೂ ಈ ಪರೀಕ್ಷೆಯ ಆಯೋಜಕರಾಗಲು ಬಯಸಿದರೆ ತಕ್ಷಣ ಸಂಪರ್ಕಿಸಿ – ವಿವೇಕ ಶಿಕ್ಷಣ ವಾಹಿನಿ : 9880649290
ವಿದ್ಯಾರ್ಥಿಗಾಗಿ ಪುಸ್ತಕದ ಬಗ್ಗೆ
ಹೈಸ್ಕೂಲು ಓದುವ ಪ್ರತೀ ವಿದ್ಯಾರ್ಥಿಗೂ ತಾನು ಜೀವನದಲ್ಲಿ ಹೇಗೆ ಬದುಕಬೇಕು ಎನ್ನುವ ಪ್ರಶ್ನೆ ಉದ್ಭವ ಆಗಿಯೇ ಆಗುತ್ತದೆ. ಆದರೆ ತನ್ನಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ಆತನಿಗೆ ಅನೇಕ ಬಾರಿ ಸರಿಯಾದ ಉತ್ತರ ಸಿಗುವುದಿಲ್ಲ. ಈ ವಿಚಾರದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತದೆ. ಶಿಕ್ಷಕರು ತಂದೆತಾಯಿಯರಿಗೂ ಕೆಲವೊಮ್ಮೆ ಇದೆಲ್ಲವನ್ನು ಹೇಗೆ ತಿಳಿಸಿಕೊಡಬೇಕೆನ್ನುವ ಸರಿಯಾದ ಜ್ಞಾನವಿರುವುದಿಲ್ಲ. ಇದೆಲ್ಲವನ್ನೂ ಗಮನಿಸಿಯೇ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಬರೆದಿರುವ ವಿದ್ಯಾರ್ಥಿಗಾಗಿ ಎನ್ನುವ ಈ ಪುಸ್ತಕ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ಸಮರ್ಥ ಮಾರ್ಗದರ್ಶಿ.
ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಒಬ್ಬ ವಿದ್ಯಾರ್ಥಿ ಹೇಗಿರಬೇಕು ಎಂಬುದನ್ನು ಅತ್ಯಂತ ಸರಳ ಭಾಷೆಯಲ್ಲಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಈ ಪುಸ್ತಕದಿಂದ ಸ್ಫೂರ್ತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಜೀವನವನ್ನು ಉತ್ತಮಪಡಿಸಿಕೊಂಡಿದ್ದಾರೆ. ಈ ಪುಸ್ತಕ ಬರೆದು ಸುಮಾರು ಎರಡು ದಶಕಗಳು ಕಳೆದುಹೋಗಿವೆ. 32 ಕ್ಕೂ ಹೆಚ್ಚು ಮರುಮುದ್ರಣ ಕಂಡು 8 ಲಕ್ಷಕ್ಕೂ ಅಧಿಕ ಪ್ರತಿಗಳು ವಿದ್ಯಾರ್ಥಿಗಳ ಕೈ ಸೇರಿವೆ. ಹಿಡಿದರೆ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಆದರೆ ಜೀವನ ಪೂರ್ತಿ ಪಾಲಿಸಬೇಕಾದ ಅಮೂಲ್ಯ ವಿಚಾರಗಳುಳ್ಳ, ಪ್ರತಿಯೊಬ್ಬ ವಿದ್ಯಾರ್ಥಿಯೂ ಅವಶ್ಯವಾಗಿ ಓದಲೇಬೇಕಿರುವ ಈ ಪುಸ್ತಕದ ಕುರಿತಾದ ನಿರ್ಮಾಣಂ ಪರೀಕ್ಷೆಯನ್ನು ನಿಮ್ಮ ಮಗುವಿನ ಕೈಲಿ ಬರೆಸಲಾರಿರಾ?
ನಿರ್ಮಾಣಂ ನಲ್ಲಿ ನೀವು ಹೇಗೆ ಭಾಗವಹಿಸಬಹುದು?
ಸಂಯೋಜಕ: ಶಾಲೆಯೊಂದರಲ್ಲಿ ಪರೀಕ್ಷೆ ಸಂಯೋಜಿಸುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಬಹುದು.
ಸಂರಕ್ಷಕ: ಶಾಲೆಯೊಂದರ ಎಲ್ಲ ವಿದ್ಯಾರ್ಥಿಗಳ ಪೂರ್ಣ ಶುಲ್ಕವನ್ನು ಭರಿಸುವ ಮೂಲಕ ವಿದ್ಯಾರ್ಥಿಗಾಗಿ ಉಚಿತ ಪರೀಕ್ಷೆ ಬರೆಯುವಂತೆ ಮಾಡಬಹುದು.
ಪ್ರಾಯೋಜಕ: ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನಗಳನ್ನು ಪ್ರಾಯೋಜಿಸಬಹುದು. ಪ್ರಶ್ನೆ ಪತ್ರಿಕೆ ಮತ್ತು ಪ್ರಮಾಣ ಪತ್ರಗಳನ್ನು ಮುದ್ರಿಸಿಕೊಡಬಹುದು.
ಪ್ರಚಾರಕ: ಈ ಯೋಜನೆಯ ಬಗ್ಗೆ ನಿಮಗೆ ಗೊತ್ತಿರುವ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ, ಸಮಾಜಸೇವಕರಿಗೆ, ಸ್ನೇಹಿತರಿಗೆ ಮಾಹಿತಿ ನೀಡಿ ಪರೀಕ್ಷೆ ಆಯೋಜಿಸಲು ಮನವೊಲಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು.
ನಿರ್ಮಾಣಂ ಪರೀಕ್ಷೆಯ ಸಂಯೋಜಕರಿಗೆ ಸೂಚನೆಗಳು:
1. ನಿರ್ಮಾಣಂ ಪರೀಕ್ಷೆ ನಡೆಸಬೇಕಿರುವುದು ನವಂಬರ್ ಅಥವಾ ಡಿಸಂಬರ್ ತಿಂಗಳಲ್ಲಿ. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪ್ರಕಟಿಸಿದ ದಿನಾಂಕದಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಯಾವುದೇ ಅನುಕೂಲಕರ ಸಮಯದಲ್ಲಿ ನಡೆಸಬಹುದು. ಪರೀಕ್ಷೆಯ ಅವಧಿ ಗರಿಷ್ಠ ಎರಡು ಗಂಟೆ. ಗರಿಷ್ಠ ಅಂಕಗಳು 100.
2. ಮೊದಲು ಶಾಲೆಯ ಮುಖ್ಯೋಪಾಧ್ಯಾರಿಗೆ ಮನವಿ ಪತ್ರ ನೀಡಿ ಅನುಮತಿ ಪಡೆಯುವುದು. (ಅನುಮತಿ ಪತ್ರದ ಮಾದರಿ ಕೆಳಗಿದೆ) ಪರೀಕ್ಷೆಗಾಗಿ ಆಸಕ್ತ ವಿದ್ಯಾರ್ಥಿಗಳ ಬಳಿ ಪಡೆಯಬೇಕಾದ ಶುಲ್ಕ 30 ರೂಪಾಯಿಗಳು. ದಾನಿಗಳು ದೊರಕಿದಲ್ಲಿ ಶುಲ್ಕದಲ್ಲಿ ಕಡಿತ ಮಾಡಬಹುದು ಅಥವಾ ಉಚಿತ ಪರೀಕ್ಷೆಯನ್ನೂ ನಡೆಸಬಹುದು.
3. ನೀವು ಪರೀಕ್ಷೆ ತೆಗೆದುಕೊಳ್ಳಲಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ದೂರವಾಣಿ ಮೂಲಕ ನಮಗೆ ತಿಳಿಸಿ, ಪರೀಕ್ಷಾ ಶುಲ್ಕವನ್ನು ಅಕೌಂಟ್ ಗೆ ಜಮಾ ಮಾಡಿದ ಕೂಡಲೇ ನಿಮಗೆ 50 ಪುಟಗಳ ವಿದ್ಯಾರ್ಥಿಗಾಗಿ ಪುಸ್ತಕಗಳನ್ನು ಕಳುಹಿಸಲಾಗುವುದು. ಪುಸ್ತಕಗಳು ನಿಮಗೆ ತಲುಪಿದ ತಕ್ಷಣ ವಿದ್ಯಾರ್ಥಿಗಳಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿ. ಏಕೆಂದರೆ ನೀವು ಎಷ್ಟು ಬೇಗ ತಲುಪಿಸುತ್ತೀರೋ ಅಷ್ಟು ಹೆಚ್ಚಿನ ಸಮಯ ಮಕ್ಕಳಿಗೆ ಓದಿಕೊಳ್ಳಲು ಅವಕಾಶ ಸಿಗುತ್ತದೆ.
4. ಈ ಪುಸ್ತಕದಲ್ಲಿ ಒಟ್ಟು 4 ಅಧ್ಯಾಯಗಳಿದ್ದು, ಶಿಕ್ಷಕರ ಸಹಾಯದಿಂದ ಮಕ್ಕಳಿಗೆ ತರಗತಿಗಳಲ್ಲಿ ಇದನ್ನು ಬೋಧಿಸಿ, ನವಂಬರ್ / ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆ ನಡೆಸಿ ಉತ್ತರ ಪತ್ರಿಕೆಗಳನ್ನುಮೌಲ್ಯಮಾಪನ ಮಾಡಿ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿಯಂದು ಬಹುಮಾನವನ್ನು ವಿತರಿಸಬೇಕು.
5. ಪ್ರಶ್ನೆ ಪತ್ರಿಕೆ – ಉತ್ತರ ಪತ್ರಿಕೆ (ಎರಡೂ ಒಟ್ಟಿಗೇ ಇರುತ್ತದೆ), ಪ್ರತಿ ತರಗತಿಗೆ ನಾಲ್ಕರಂತೆ ವಿಜೇತರಿಗೆ ಬಹುಮಾನವಾಗಿ ಭಾರತ ಭಾರತಿ ಪುಸ್ತಕಗಳು ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಶಾಲೆ, ಸಂಯೋಜಕ, ಮೌಲ್ಯಮಾಪಕರಿಗೆ ಸ್ಮರಣಿಕೆಗಳನ್ನು ಪರೀಕ್ಷೆಗೆ ಒಂದು ವಾರ ಮುಂಚಿತವಾಗಿ ನಿಮ್ಮ ವಿಳಾಸಕ್ಕೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ತಲುಪಿಸಲಾಗುವುದು.
6. ಒಂದು ವೇಳೆ ಯಾರಾದರೂ ದಾನಿಗಳು ಮಕ್ಕಳಿಗಾಗಿ ಹೆಚ್ಚುವರಿ ಬಹುಮಾನ ನೀಡಲು ಮುಂದೆ ಬಂದರೆ ಅವಶ್ಯವಾಗಿ ಸ್ವೀಕರಿಸಿ. ಮಕ್ಕಳಿಗೆ ಕೊಟ್ಟು ಪ್ರೋತ್ಸಾಹಿಸಿ. ಇಲ್ಲಿ ಸ್ಪರ್ಧೆಗಿಂತಲೂ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕೆಂಬ ಉದ್ದೇಶವಿರುವುರಿಂದ ಆ ಅಂಶಕ್ಕೆ ಹೆಚ್ಚು ಮಹತ್ವ ಕೊಟ್ಟು ಪುಸ್ತಕದಲ್ಲಿರುವ ಹಲವಾರು ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಉಳಿದ ಎಲ್ಲ ಸಣ್ಣಪುಟ್ಟ ವಿಚಾರಗಳನ್ನು ಬದಿಗೆ ಸರಿಸಬೇಕೆಂದು ಕೋರಿಕೊಳ್ಳುತ್ತೇವೆ.
ಬನ್ನಿ ಸಹೋದರರೇ, ಸಮಾಜ ಹಾಳಾಗುತ್ತಿದೆ, ಹುಡುಗರು ಸರಿ ಇಲ್ಲ, ಯುವ ಜನತೆ ದಾರಿ ತಪ್ಪಿದೆ, ಅದೂ ಇದು ಅಂತ ಬರೀ ದೂರುವ ಬದಲು ಕಟ್ಟುವ ಕೆಲಸ ಮಾಡೋಣ. ವಿದ್ಯಾರ್ಥಿಗಳ ಮನಸ್ಸನ್ನು ಶಕ್ತಿಯುತವಾಗಿ ನಿರ್ಮಾಣ ಮಾಡಲು ನಮ್ಮದೊಂದು ಅಳಿಲು ಸೇವೆ ಸಲ್ಲಿಸೋಣ. ಈ ಮೇಲಿನ ನಾಲ್ಕು ಅಂಶಗಳಲ್ಲಿ ಯಾವುದಾದರೂ ಒಂದರಲ್ಲಾದರೂ ಭಾಗಿಯಾಗುವುದರ ಮೂಲಕ ನಿರ್ಮಾಣಂ ಅನ್ನು ಯಶಸ್ವಿಗೊಳಿಸೋಣ. ಸ್ವಾಮಿ ವಿವೇಕಾನಂದರ ಜಗದ್ಗುರು ಭಾರತದ ಕನಸನ್ನು ನನಸು ಮಾಡೋಣ. ಜೈ ಹಿಂದ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ವಿವೇಕ ಶಿಕ್ಷಣ ವಾಹಿನಿ: 9880649290
Discussion about this post