ಶಿವಮೊಗ್ಗ: ಮಲೆನಾಡು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬಂಪರ್ ಬಹುಮಾನ ಘೋಷಿಸಿದ್ದು, ಒಂದು ತಿಂಗಳ ಹಿಂದಷ್ಟೆ ಆರಂಭವಾಗಿದ್ದ ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ರೈಲು ಸಂಚಾರವನ್ನು ವಾರದಲ್ಲಿ ಆರು ದಿನಕ್ಕೆ ವಿಸ್ತರಣೆ ಮಾಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, ಇದುವರೆಗೂ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ರೈಲು, ಇನ್ನು ಮುಂದೆ ವಾರದಲ್ಲಿ ಆರು ದಿನ ಸಂಚರಿಸಲಿದೆ. ರೈಲು ಪ್ರಯಾಣಿಕರ ಒತ್ತಾಯ ಹಾಗೂ ಅಗತ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಕುರಿತಂತೆ ಒಪ್ಪಿಗೆ ದೊರೆತಿದ್ದು, ಇನ್ನು ಅಧಿಕೃತವಾಗಿ ಆದೇಶ ಹೊರಡಿಸಿದ ನಂತರ ಅತಿ ಶೀಘ್ರದಲ್ಲೆ ಆರು ದಿನ ಸಂಚಾರ ಆರಂಭವಾಗಲಿದೆ ಎಂದವರು ತಿಳಿಸಿದರು.
ಪ್ರತಿ ದಿನ ಬೆಳಿಗ್ಗೆ 5.15 ಕ್ಕೆ ಶಿವಮೊಗ್ಗದಿಂದ ಹೊರಡಲಿದ್ದು, ಬೆಳಿಗ್ಗೆ 10.10ಕ್ಕೆ ಯಶವಂತಪುರ ತಲುಪಲಿದೆ. ಅದೇ ರೀತಿ ಸಂಜೆ 5.30 ಕ್ಕೆ ಯಶವಂತಪುರದಿಂದ ಹೊರಡಲಿರುವ ರೈಲು ರಾತ್ರಿ 10.10 ಕ್ಕೆ ಶಿವಮೊಗ್ಗ ತಲುಪಲಿದೆ. ಮಂಗಳವಾರ ಜನಶತಾಬ್ದಿ ರೈಲು ಸಂಚಾರ ಇರುವುದಿಲ್ಲ.

















