ನವದೆಹಲಿ: ಭಾರತದ ವಾಯುಗಡಿ ಉಲ್ಲಂಘಿಸಿ ದಾಳಿ ಮಾಡಲೆತ್ನಿಸಿದ ಪಾಕಿಸ್ಥಾನ ಫೈಟರ್ ಜೆಟ್’ನ್ನು ಏಕಾಂಗಿಯಾಡಿ ಹೊಡೆದುರುಳಿಸಿ, ಕೊನೆಯಲ್ಲಿ ಪಾಕಿಸ್ಥಾನ ಸೈನಿಕರಿಂದ ಬಂಧಿಸಲ್ಪಟ್ಟ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಪಿಗಳು ಮಾನಸಿಕ ನರಕ ಯಾತನೆ ನೀಡಿದರು ಎಂಬ ವಿಚಾರ ಇಂದು ಬೆಳಕಿಗೆ ಬಂದಿದೆ.
ಈ ಕುರಿತಂತೆ ವಾಸ್ತವ ವಿಚಾರವನ್ನು ಹಿಂದೂಸ್ತಾನ್ ಟೈಮ್ಸ್ ವಿವರವಾಗಿ ವರದಿ ಮಾಡಿದ್ದು, ಇದರಂತೆ, ಪಾಪಿ ಪಾಕಿಸ್ಥಾನಿಗಳು ಅಭಿನಂದನ್’ಗೆ 24 ಗಂಟೆಗಳ ಕಾಲ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ. ಅಭಿನಂದನ್ ಬಿಡುಗಡೆಯಾಗಿ ಭಾರತಕ್ಕೆ ಬಂದ ಬಳಿಕ ಮಿಲಿಟರಿ ಆಸ್ಪತ್ರೆಯಲ್ಲಿನ ಕೂಲಿಂಗ್ ಡೌನ್ ಪ್ರಕ್ರಿಯೆಯಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ತಾನು ಪಾಕ್ ಸೇನೆಯ ವಶದಲ್ಲಿದ್ದಾಗ ಅನುಭವಿಸಿದ್ದ ನರಕ ಯಾತನೆಯ ವಿವರಗಳನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅತ್ಯಂತ ಪ್ರಮುಖವಾಗಿ ಭಾರತದ ರಹಸ್ಯ ಮಾಹಿತಿ ಹಾಗೂ ನಕ್ಷೆಗಳ ಕುರಿತಾಗಿ ಮಾಹಿತಿ ಪಡೆಯಲು ಪಾಕ್ ಮುಂದಾಗಿತ್ತು. ಭಾರತೀಯ ವಾಯು ಪಡೆಯು ದಾಳಿ ವೇಳೆ ಬಳಸುತ್ತಿದ್ದ ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿ, ಭಾರತೀಯ ಸೇನೆಯ ನಿಯೋಜನೆ ಮತ್ತು ಅವುಗಳ ನಿಖರ ತಾಣ, ಅತಿ ಸೂಕ್ಷ್ಮ ಸೇನಾ ಸಾರಿಗೆ ಮಾಹಿತಿ, ದಾಳಿಗೆ ಭಾರತ ಸಿದ್ಧಪಡಿಸಿರುವ ಫೈಟರ್ ಜೆಟ್ಗಳ ನಿಖರ ಸಂಖ್ಯೆ ಇತ್ಯಾದಿಗಳ ರಹಸ್ಯ ಮಾಹಿತಿಯನ್ನು ಅಭಿನಂದನ್ ಅವರಿಂದ ಪಡೆಯಲು ಪಾಕ್ ಸೇನೆ ಇನ್ನಿಲ್ಲದ ರೀತಿಯ ಮಾನಸಿಕ ಹಿಂಸೆಯನ್ನು ಆತನಿಗೆ ನೀಡಿತ್ತು ಎಂದು ವರದಿಯಾಗಿದೆ.
ಎಂತಹ ಹಿಂಸೆ ನೀಡಿತ್ತು ಗೊತ್ತಾ?
ಅಭಿನಂದನ್ ಪಾಕ್ ವಶದಲ್ಲಿದ್ದ ವೇಳೆ ಅವರಿಗೆ ರೇಡಿಯೋ ತರಂಗಾಂತರದ ಮೂಲಕ ಮಾಹಿತಿ ಪಡೆಯಲು ಪಾಕ್ ಯತ್ನಿಸಿತ್ತು. ಮಾತ್ರವಲ್ಲ, ಕಿವಿಯೇ ಹರಿದುಹೋಗುವಂತಹ ಭಾರೀ ಪ್ರಮಾಣದ ಸಂಗೀತವನ್ನು ಕೇಳಿಸಲಾಗಿದ್ದು, ಪೂರಾ ದಿನ ಒಂದು ಕ್ಷಣವೂ ಕೂರಲು ಬಿಡದೇ ನಿಲ್ಲಿಸಿಯೇ ಇತ್ತು.
ಆದರೆ, ಪಾಕ್ ನೀಡಿದ ಎಲ್ಲ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಅಭಿನಂದನ್ ಅವರು ಅನುಭವಿಸಿದರೇ ವಿನಾ, ದೇಶಕ್ಕೆ ಸಂಬಂಧಿಸಿದ ಒಂದು ಸಣ್ಣ ಮಾಹಿತಿ ಇರಲಿ, ಒಂದು ಅಕ್ಷರವನ್ನೂ ಸಹ ಬಾಯಿ ಬಿಡಲಿಲ್ಲ. ಆ ಮೂಲಕ ನಮ್ಮ ದೇಶದ ಯಾವುದೇ ಒಂದು ಮಾಹಿತಿ ಶತ್ರುಗಳಿಗೆ ದೊರೆಯಬಾರದು ಎಂಬ ರಾಷ್ಟ್ರಪ್ರೇಮವನ್ನು ಅಭಿನಂದನ್ ಮೆರೆದಿದ್ದು, ಇಡಿಯ ದೇಶಕ್ಕೇ ಮಾದರಿಯಾಗಿದೆ.

















