ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಗರ ವ್ಯಾಪ್ತಿಯಲ್ಲಿರುವ ಯಾವುದೇ ಅನಧಿಕೃತ ಸಂಸ್ಥೆಗಳು ಲಾಕ್ ಡೌನ್ ಸಂದರ್ಭದಲ್ಲಿ ಚಂದಾ ಕೇಳುವುದು ಗಮನಕ್ಕೆ ಬಂದರೆ ತತಕ್ಷಣವೇ ತಮ್ಮ ಗಮನಕ್ಕೆ ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಮಕ್ಕಳ ಕಲ್ಯಾಣ ಸಮಿತಿ ಮನವಿ ಮಾಡಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ, ನಗರ ವ್ಯಾಪ್ತಿಯಲ್ಲಿ ಇರುವ ಬಹುಪಾಲು ಮಕ್ಕಳ ಅನುಸರಣ ಸಂಸ್ಥೆಗಳು, ಈ ಲಾಕ್ ಡೌನ್ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಮುಖಾಂತರ, ಮಿಂಚಂಚೆಗಳ ಮೂಲಕ ಹಾಗೂ ಟೆಲಿಫೋನ್ ಕಾಲ್’ಗಳ ಮುಖಾಂತರ, ತಮ್ಮಲ್ಲಿ ಇರುವ ಮಕ್ಕಳಿಗೆ ಅಥವಾ ಅನಾಥ ಮಕ್ಕಳಿಗೆ ದಿನಸಿಗಳು ಇರುವುದಿಲ್ಲ ಮತ್ತು/ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ವರ್ಷಕ್ಕೆ ಇಷ್ಟು ಖರ್ಚು ಎಂತಲೂ ಸಾರ್ವಜನಿಕರಿಂದ ಚಂದಾ ಎತ್ತುತ್ತಿರುವ ವಿಷಯವೂ ಸಾಕ್ಷ್ಯಾಧಾರ ಸಹಿತ ಸಮಿತಿಯ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದೆ.
ಮೊದಲನೆಯದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿಗಳ ಗಮನಕ್ಕೆ ಬರದೆ ಯಾವುದೇ ಸಂಸ್ಥೆಯು ತಂದೆ ತಾಯಿ ಇಲ್ಲದ ಮಕ್ಕಳನ್ನು ಸಾಕುವುದು ರಕ್ಷಣೆ ಮತ್ತು ಪೋಷಣೆ ಮಾಡುವುದು ಕಾನೂನುರೀತ್ಯ ಅಪರಾಧವಾಗಿರುತ್ತದೆ. ಹಾಗೆಯೇ ದೇಶದಲ್ಲಿ ಈಗ ಇರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮತ್ತು ಸರ್ಕಾರವು ಘೋಷಿಸಿರುವ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮಕ್ಕಳ ಹೆಸರಿನಲ್ಲಿ ಸಾರ್ವಜನಿಕರಿಂದ ಹೀಗೆ ಚಂದ ಎತ್ತುವುದು ಅನೈತಿಕ ಆಚರಣೆ ಆಗಿರುತ್ತದೆ ಎಂದು ಸಮಿತಿ ತಿಳಿಸಿದೆ.
ಮಕ್ಕಳ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾನೂನು ಹಾಗೂ ಭಾರತೀಯ ದಂಢ ಸಂಹಿತೆಯ ಪ್ರಕಾರ ಹೀಗೆ ಕೇಳುವುದೂ ಕ್ರಿಮಿನಲ್ ಅಪರಾಧವಾಗುತ್ತದೆ. ಇಂಥ ವೇದಿಕೆಗಳಿಗೆ ಸ್ಪಂದಿಸುವುದರ ಮೂಲಕ ಅಪರಾಧದಲ್ಲಿ ಪಾಲುದಾರರಾಗದಿರಿ ಎಂದು ಸಮಿತಿ ಮನವಿ ಮಾಡಿದೆ.
ಈ ರೀತಿಯ ಕೋರಿಕೆ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಸರ್ಕಾರದ ಗಮನಕ್ಕೆ ತರಬೇಕು ಅಥವಾ 1098ಗೆ ಕರೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸುವಂತೆ ಎಂದು ಸಮಿತಿ ಕೋರಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post