ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಾಲ್ಕು ಉದರದ ರೋಮಾಂತಕ ಪ್ರಾಣಿಗಳು ದೇಶದ ಸಂಪತ್ತಾಗಿದ್ದು, ಇವುಗಳಲ್ಲಿ ಬರುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪಶುವೈದ್ಯರು ಕಾರ್ಯೋನ್ಮುಕರಾಗಬೇಕು ಎಂದು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಚ್.ಡಿ. ನಾರಾಯಣ ಸ್ವಾಮಿ ಕರೆ ನೀಡಿದರು.
ADVANCES IN DIAGNOSIS AND TREATMENT OF RUMINAL DISORDERS OF BOVINES ಎಂಬ ವಿಷಯದ ಕುರಿತಾಗಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಾಗಾರವು ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳುವಲ್ಲಿ, ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು, ಈ ಮೂಲಕ ರೈತರಿಗೆ ದೊರಕುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲಿದೆ. ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದರಿಂದ ವಿಶ್ವವಿದ್ಯಾಲಯದ ಘೋಷ ವಾಕ್ಯವಾದ ‘‘ರೈತ ಸ್ನೇಹಿ ಹಾಗೂ ಗ್ರಾಮೀಣಾಭಿವೃದ್ದಿಯ ಧ್ಯೇಯ’’ ಎಂಬ ಉದ್ದೇಶ ಈಡೇರಲಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಸಿ. ವೀರಣ್ಣ ಮಾತನಾಡಿದ, ನಾಲ್ಕು ಉದರದ ರೋಮಾಂತಕ ಜಾನುವಾರುಗಳಲ್ಲಿ ಎಸಿಡಿಟಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಾಲು ಕುಂಟುವಿಕೆ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವುದು ಕಂಡುಬರುತ್ತಿದೆ. ಇದನ್ನು ಸರಿಯಾಗಿ ನಿರ್ವಹಿಸುವುದು ಅತೀ ಅವಶ್ಯಕವಾಗಿದ್ದು, ಪಶುವೈದ್ಯರು ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಾಮನ್ ವೆಲ್ಥ್ ವೆಟರಿನರಿ ಅಸೋಸಿಯೆನ್ ಕಾರ್ಯಕಾರಿ ನಿರ್ದೇಶಕರಾದ ಡಾ.ಅಬ್ದುಲ್ ರೆಹಮಾನ್ ಮಾತನಾಡಿ, ಈ ರೀತಿಯ ಅನೇಕ ಕಾರ್ಯಾಗಾರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಿದ್ದು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಇಂಡಿಯನ್ ಬ್ಯುಯಾಟ್ರಿಷಿಯನ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ.ಎಸ್.ಯತಿರಾಜ್ ಮಾತನಾಡಿ, ಈ ಕಾರ್ಯಾಗಾರದಲ್ಲಿ ಕಲಿತ ಆಧುನಿಕ ತಂತ್ರಜ್ಞಾನವನ್ನು ಪಶುವೈದ್ಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಾನುವಾರುಗಳ ಸೇವೆ ಮಾಡಬೇಕು ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾದ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಡೀನ್ ಡಾ.ಪ್ರಕಾಶ್ ನಡೂರ್ ಮಾತನಾಡಿ, ನಾಲ್ಕು ಉದರದ ರೋಮಾಂತಕ ಪ್ರಾಣಿಗಳು ದೇಶದ ಸಂಪತ್ತಾಗಿದ್ದು ಇವು ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಉನ್ನತ ತಂತ್ರಜ್ಞಾನವನ್ನು ಪಶುವೈದ್ಯರು ಅಳವಡಿಸಿಕೊಂಡು ಜಾನುವಾರು ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ಹುಚ್ಚುನಾಯಿ ಕಾಯಿಲೆಯ ರೋಗಪತ್ತೆಯ ಬಗ್ಗೆ ಸಹ ಕಾರ್ಯಾಗಾರವು ನಡೆಯಿತು.
ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಸ್ಟ್ರೇಲಿಯಾದ ಡಾ.ನತಾಶಾ ಲೀಸ್ ಮತ್ತು ಡಾ.ಮಾರ್ಕ್ ಬೂತ್
ಭಾಗವಹಿಸಿದರು.
ಸಂಘಟನಾ ಕಾರ್ಯದರ್ಶಿಗಳಾಗಿ ಡಾ.ಎನ್.ಬಿ. ಶ್ರೀಧರ ಮತ್ತು ಡಾ: ಶ್ರೀಕೃಷ್ಣ ಇಸಲೂರು ಹಾಗೂ ಸಹ ಸಂಘಟನಾ ಕಾರ್ಯದರ್ಶಿಗಳಾಗಿ ಮತ್ತು ಡಾ. ಕ್ಯಾಪ್ಟನ್ ಡಾ. ರವಿ ರಾಯದುರ್ಗ ಮತ್ತು ಡಾ.ಎಸ್.ಜೆ.ಅರುಣ್, ಕಾರ್ಯಾಗಾರ ನಡೆಸಿಕೊಟ್ಟರು. ಡಾ.ಜಯಶ್ರೀಯವರಿಂದ ವಂದನಾರ್ಪಣೆ ನಡೆಯಿತು.
Get in Touch With Us info@kalpa.news Whatsapp: 9481252093
Discussion about this post