ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಿನ್ನ ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣಗಳಿರಿವು ತಪ್ಪದಿರಲಿ.
– ಹೀಗೆಂದು ದಾರ್ಶನಿಕ, ಮಹಾಮಹಿಮ, ಜಗದ್ಗುರು ಮಧ್ವಾಚಾರ್ಯರು ಹಿಂದೆ ಇತ್ತ ಆದೇಶವನ್ನು ಇಂದಿಗೂ ನಮ್ಮ ನಡುವೆ ಪರಿಪಾಲಿಸುತ್ತ ಬಂದ ಅಜಾತಶತ್ರು, ಪರಮ ಸಹಿಷ್ಣು, ತ್ಯಾಗ ಸೌಜನ್ಯದ ಸಾಕಾರ ರೂಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥರು ನಮಗೆಲ್ಲ ಅನಂತ ಸ್ಪೂರ್ತಿ.
ವೇದಾಂತ, ವಿದ್ಯೆ, ಸಮಾಜಸೇವೆಗಳೊಂದಿಗೆ ನಿತ್ಯ ಹರಿಸೇವೆಯಲ್ಲಿ ತೊಡಗಿರುವ ಶ್ರೀಪಾದರ ಪ್ರವೃತ್ತಿ “ ಕೀರ್ತಿ ಶನಿಯಿಂದ…. ದೂರ ಇರು…” ಶ್ರೀಗಳು ಲೋಕಮಾನ್ಯರು, ಅವರು ಮಾಡಿದ ಅಮೋಘ ಕಾರ್ಯವಾದ ಶಿಕ್ಷಣ, ಶೀಲ ಮತ್ತು ಧರ್ಮಮಾರ್ಗದ ಬೋಧನೆಯಿಂದ ಲಕ್ಷಾಂತರ ಯುವ ಜನರನ್ನು ಪ್ರಭಾವಿತರನ್ನಾಗಿಸಿದೆ. ಸಾಮಾಜಿಕ ಕಾಳಜಿ, ಮತೀಯ ಸಾಮರಸ್ಯದ ಕುರಿತು ಮಾತನಾಡುತ್ತಿದ್ದ ಶ್ರೀಗಳು ಸಂಪ್ರದಾಯವಾದಿಗಳಿಗೆ ಕ್ರಾಂತಿಕಾರಿಯಂತೆ ಕ್ರಾಂತಿಕಾರಿಗಳಿಗೆ ಸಂಪ್ರದಾಯವಾದಿಯಂತೆ ಕಂಡರೂ ಸನಾತನ ಸಮಾಜದ ಆದ್ಯ ವಕ್ತಾರ, 90 ವಯೋಮಾನದ ಈ ವಿಶ್ವಮಾನ್ಯ ಗುರುಗಳು ಇನ್ನು ನೆನಪು ಮಾತ್ರ.
ಮಡೆ ಸ್ನಾನ, ಪಂಕ್ತಿ ಬೇಧ, ರಾಮಮಂದಿರ ಹೀಗೆ ಯಾವುದೇ ರಾಜ್ಯ ಅಥವಾ ರಾಷ್ಟ್ರ ರಾಜಕಾರಣ ವಿಷಯವಿರಲಿ ಸದಾ ಸುದ್ದಿಯಲ್ಲಿದ್ದ ಪೇಜಾವರ ಶ್ರೀಗಳು ಜಾಗತಿಕವಾಗಿ ಜ್ಞಾನ ಪರಂಪರೆಯು ನಶಿಸಿಹೋಗುವಂತಹ ಪರ್ವಕಾಲದಲ್ಲಿ ಶ್ರೀಗಳು ವೇದಾಂತ ಗುರುಕುಲ ಸ್ಥಾಪಿಸಿ ಶಾಸ್ತ್ರಾಧ್ಯಯನದ ಸಂಪತ್ತನ್ನು ಬೆಳೆಸಿದ್ದಾರೆ ಎಂದರೆ ಉತ್ಪ್ರೇಕ್ಷೆಯ ಮಾತಾಗದು. ಸನಾತನ ಭಾರತೀಯ ಸಂಸ್ಕೃತಿಯ ಪ್ರಸಾರಕರಾಗಿ ಹಗಳಿರುಳು ಶ್ರಮಿಸುತ್ತ ಪೀಠಾಧಿಪತ್ಯವನ್ನು ಸನ್ಯಾಸವನ್ನು ಜೊತೆಜೊತೆಯಾಗಿ ಸಂಭಾಳಿಸಿಕೊಂಡು ಬಂದಿದ್ದ ಶ್ರೀಗಳು ಹಿಂದೂ ಸಮಾಜದ ಅನಘ್ರ್ಯ ರತ್ನವೊಂದನ್ನು ಕಳೆದುಕೊಂಡಿದೆ.
ವಾಮನ ಮೂರ್ತಿ – ತ್ರಿವಿಕ್ರಮ ಶಕ್ತಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸುಬ್ರಹ್ಮಣ್ಯ ಸಮೀಪದ ರಾಮಕುಂಜ ಶ್ರೀಗಳ ಜನ್ಮ ಸ್ಥಳ. ಎಂ.ನಾರಾಯಣಾಚಾರ್ಯ ಮತ್ತು ಕಮಲಮ್ಮದಂಪತಿಗಳ ಸುಪುತ್ರನಾಗಿ ಪ್ರಜಾಪತಿ ಸಂವತ್ಸರ, ವೈಶಾಖ ಶುದ್ಧ ದಶಮಿ, ಸೋಮವಾರ (27-4-1931). ಜನಿಸಿದ ಇವರ ಪೂವಾಶ್ರಮದ ನಾಮ ವೆಂಕಟರಮಣ, ಗರ್ಭಾಷ್ಟಮದಲ್ಲಿ ಉಪನಯನವಾದುದು ಕಾಸರಗೋಡು ತಾಲ್ಲೂಕಿನ ಕಣ್ವತೀರ್ಥದಲ್ಲಿ, 1938ರಲ್ಲಿ ಹೊಸಪೇಟೆ ಸಮೀಪದ ಹಂಪಿ ಚಕ್ರತೀರ್ಥದ ವ್ಯಾಸರಾಜ ಪ್ರತಿಷ್ಠಾಪಿತ ಯಂತ್ರೋದ್ಧಾರ ಪ್ರಾಣದೇವರ ಸನ್ನಿಧಿಯಲ್ಲಿ; ಶ್ರೀ ವಿಶ್ವಮಾನ್ಯ ತೀರ್ಥರಿಂದ ಸನ್ಯಾಸಾಶ್ರಮ ಸ್ವೀಕಾರ. ಆಶ್ರಮ ಸ್ವೀಕಾರ .ವೆಂಕಟರಮಣನೆಂಬ ವಟು ಆಚಾರ್ಯ ಮಧ್ವರು ಅಲಂಕರಿಸಿದ ಸರ್ವಜ್ಞಪೀಠವೇರಿ ಶ್ರೀ ವಿಶ್ವೇಶ ತೀರ್ಥರೆಂದು ಜಗನ್ಮಾನ್ಯರಾದದು ಅಪೂರ್ವ ದಿವ್ಯ ಘಳಿಗೆ ಬಹುಧಾನ್ಯ ಸಂವತ್ಸರ, ಮಾರ್ಗಶಿರ ಶುದ್ಧ ಪಂಚಮಿ, ಶುಕ್ರವಾರ (3-12-1938). 1945ರ ಅವಧಿಯಲ್ಲಿ ಉಡುಪಿ ಸಮೀಪದ ಬಾರಕೂರು ಭಂಡಾಕೇರಿ ಮಠದಲ್ಲಿ ಶ್ರೀ ವಿದ್ಯಾಮಾನ್ಯ ತೀರ್ಥರ ಬಳಿ ವಿದ್ಯಾರ್ಜನೆ ಮಾಡಿದ ಶ್ರೀಗಳು 1952-54, 1968-70, 1984-86 2000-02ರ ಹಾಗೂ 2016 – 18ರ ಅವಧಿಗಳಲ್ಲಿ ಪರ್ಯಾಯ ಪೂಜಾ ಕರ್ತವ್ಯಗಳನ್ನು ನೆರವೇರಿಸಿದ್ದಾರೆ. ಆಕಾರದಲ್ಲಿ ವಾಮನನಾದರು ಸಾಧನೆಯಲ್ಲಿ ತ್ರಿವಿಕ್ರಮ. ದೀನ ದಲಿತರಿಗೆ ಸದಾ ಕೈಚಾಚಿ ನಿಂತ ಧೀಮಂತ ಸಂತ.
ಸದಾ ಒಂದಿಲ್ಲೊಂದು ಕಾರ್ಯದಲ್ಲಿ ವ್ಯಸ್ತರಾಗಿರುವ ಇಂಥ ವ್ಯಕ್ತಿತ್ವವುಗಳ್ಳ ಯಾರೇ ಆಗಲಿ, ಸಂಪೂರ್ಣ ಬದ್ಧತೆ ಹಾಗೂ ವ್ಯವಧಾನ ಅಗತ್ಯವಾಗಿ ಬೇಕಿರುವ ವ್ಯವಸ್ಥೆಯೊಂದರ ಸಂಸ್ಥೆಗಳನ್ನು ನಡೆಸುವುದೇ ಒಂದು ಸವಾಲಿನ ಕೆಲಸ. ಆದರೆ ಪೇಜಾವರ ಶ್ರೀಗಳು ಈ ಮಾತಿಗೆ ಅಪವಾದ. ತಾವು ಎಷ್ಟು ಸಂಸ್ಥೆಗಳ ಗೌರವಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆಂಬುದು ಬಹುಶಃ ಅವರಿಗೇ ಗೊತ್ತಿರಲಿಕ್ಕಿಲ್ಲ! ಸಮಾಜವೆಂಬ ಸರೋವರದ ಮೀನುಗಲೇ ಮಠಾಧಿಪತಿಗಳು, ನೀರು ಬಿಟ್ಟು ಮೀನು ಬದುಕದು, ಮೀನಿಲ್ಲದೆ ನೀರು ಸ್ವಚ್ಚವಾಗದು, ಇದು ಶ್ರೀಗಳ ಧೋರಣೆ.
ಜಗದ ಹಿತಕ್ಕೆ ತನ್ನನ್ನೇ ಮುಡಿಪಿಟ್ಟ ರಾಜಯೋಗಿ: ಶ್ರೀಪಾದರು ಧರ್ಮಸಂಸ್ಥಾಪನೆಯ ಮಹಾಯಜ್ಞದ ಅಧ್ವರ್ಯುವಾಗಿ ಲೌಕಿಕ -ಪಾರಮಾರ್ಥಿಕ ಸಂಗಮದಂತಿದ್ದಾರೆ. ಅವರು ಸಲ್ಲಿಸುತ್ತಿರುವ ಅಸಾಮಾನ್ಯ ಕ್ರಿಯಾಶೀಲತೆಯ ನಾನಾ ಜನರ ಶುಶ್ರೂಷೆ ಮತ್ತು ದೀನ ಜನೋದ್ಧಾರಗಳು ಶ್ರೀಮಧ್ವರ ಆದೇಶದಂತೆ ದೇವರಿಗೆ ಸಲ್ಲಿಸುವ ಕಪ್ಪ ಕಾಣಿಕೆ.
ರಾಮಕುಂಜದಿಂದ ರಾಮಜನ್ಮಭೂಮಿಯವರೆಗೆ ಸಾಗಿಬಂದಿರುವ ಶ್ರೀಗಳ ಪರಿವ್ರಾಜಕ ಪಯಣ ಆಧುನಿಕ ಜಗತ್ತಿಗೆ ಒಂದು ಆದರ್ಶ ಪೂರ್ಣ ಅಧ್ಯಾಯ. ಸಮಾಜಕ್ಕೆ ಸಮರ್ಥ ಪ್ರೇರಣೆ ನೀಡುವ ಇವರು ಮೂಲತಃ ಧಾರ್ಮಿಕ ವಿಜ್ಞಾನಿ. ಅನನ್ಯ ಕರ್ಮವೀರ. ನಾಡಿನ ಸಾಮಾಜಿಕ, ಭೌದ್ಧಿಕ, ವಿಚಾರಶೀಲ ಮತ್ತು ನಿತ್ಯ ಜೀವನದ ಕ್ಲಿಷ್ಟ ಜೀವನದ ಸಮಸ್ಯೆಗಳಿಗೆ ಸ್ಪಂದಿಸುವ ಯತಿಗಳು ತೀರ ವಿರಳ. ಜಡ್ಡು ಗಟ್ಟಿದ್ದ ಸಂಪ್ರದಾಯಕ್ಕೆ ಹೊಸ ವ್ಯಾಖ್ಯಾನ ಬರೆದ ಕ್ರಾಂತಿಕಾರಿ ವಿರಕ್ತ. ದಲಿತಕೇರಿಗೆ ಬಂದ ಪರಮಹಂಸ.
ವಿದ್ವತ್ತಿನ ಎತ್ತರಬಿತ್ತರಗಳಿಂದ ,ಬ್ರಹ್ಮತೇಜಸ್ಸಿನಿಂದ, ಮಾನಸಿಕ ಲವಲವಿಕೆಯಿಂದ, ಕೃಷ್ಣಾರ್ಪಣ ಭಾವದಿಂದ, ಆತ್ಮಸಂಪತ್ತಿನ ಗಂಧಪರಿಮಳದಿಂದ, ಸರಳತೆಯ ಉನ್ನತ ಚಿಂತನದಿಂದ ಮಾನವೀಯತೆಯ ಮಂಗಳ ಮೂರ್ತಿಗಳೆನಿಸಿ. ಸರ್ವಧರ್ಮ ಸಮನ್ವಯ ಭಾವನೆ ಹಾಗೂ ಸಹೃದಯತೆ ಶ್ರೀಗಳ ಸ್ವತ್ತಾಗಿತ್ತು. ಇವರಿಗಿದ್ದ ಶಾಸ್ತ್ರಜ್ಞಾನ, ಜಾಗತಿಕ ಜ್ಞಾನ, ಕರ್ತವ್ಯಶಕ್ತಿ, ಸದ್ಗುಣಗಳು ಜನ್ಮಾಂತರದ ಸುಕೃತದಿಂದ ಒದಗಿದೆ. ಸೂರ್ಯನು ಒಂದು ಅಂಶದಿಂದ ಭೂಮಿಯಿಂದ ಪಡೆದಿದ್ದೇ ಆದಲ್ಲಿ ಅದರ ಸಾವಿರ ಅಂಶವನ್ನು ತುಂಬಿಸಿ ಮತ್ತೆ ಭೂಮಿಗೆ ಹಿಂತಿರುಗಿಸುತ್ತಾನೆ. ಅಂತೇಯೇ ಶ್ರೀಗಳು ಸಮಾಜದಿಂದ ಪಡೆದುದಕ್ಕಿತಂಲೂ ಅವರಿಂದ ಸಮಾಜ ಪಡೆದಿರುವುದೆ ಹೆಚ್ಚು. ರಾಗದ್ವೇಷಗಳಿರದ ಪರಿಶುದ್ಧ ಚಾರಿತ್ರ್ಯದ ಯತಿ ಜೀವನ ಶ್ರೀಪಾದರದ್ದು.
ಪಾಂಡಿತ್ಯದ ವಿಜಯ ಮಾಲೆ
ಅರಿವನ್ನು ಗುರುವೆಂದು ಬಣ್ಣಿಸುತ್ತದೆ. ಸತ್ಯದ ನಾಣ್ಣುಡಿ. ಅರಿವನ್ನು ತರುವ ಗುರುವಿನೊಂದಿಗೆ ಸರ್ವತ್ರ ಭಗವಂತ ಸಂಘಟಕನಂತೆ ಇರುತ್ತಾನೆ ಎಂಬ ಧರ್ಮಶಾಸ್ತ್ರದ ವಚನಕ್ಕೆ ನಿದರ್ಶನ ಎಂಬಂತೆ ಬದುಕಿದ್ದ ಶ್ರೀಪಾದರು. ಸಂಸ್ಕೃತದ ಪ್ರಾರಂಭದ ಶಿಕ್ಷಣ- ಅಡ್ಡೆ ವೇದವ್ಯಾಸಾಚಾರ್ಯರು ಮೊದಲಾದ ಉಡುಪಿಯ ವಿದ್ವಾಂಸರಲ್ಲಿ. ಶ್ರೀಪಾದರು ವಿದ್ಯಾರ್ಥಿಯಾಗಿದ್ದಾಗ ರಚಿಸಿದ ಕಾವ್ಯ-ಸಾಂಬವಿಜಯ. ನ್ಯಾಯಶಾಸ್ತ್ರದ ವಾಕ್ಯಾರ್ಥದಲ್ಲಿ ಜಯಭೇರಿ- 1961ರಲ್ಲಿ ದಿಲ್ಲಿಯಲ್ಲಿ ನಡೆದ ವಿಶ್ವಕಲ್ಯಾಣ ಯಾಗದ ಸಂದರ್ಭದಲ್ಲಿ ಷಡಂಗ ರಾಮಚಂದ್ರಶಾಸ್ತ್ರಿಗಳು ಮಾಡಿದ ಮಾಥೂರಿ ಪಂಚಲಕ್ಷಣಿಯ ಪೂರ್ವಪಕ್ಷಕ್ಕೆ ಸಮಾಧಾನಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾದದ್ದು. ಚೊಚ್ಚಲ ಕನ್ನಡಕೃತಿ – 1962ರಲ್ಲಿ ಧಾರವಾಡದ “ಮಿಂಚಿನಬಳ್ಳಿ”ಯಿಂದ ಪ್ರಕಟಗೊಂಡ ಶ್ರೀಮಧ್ವಾಚಾರ್ಯರ ತತ್ತ್ವಜ್ಞಾನದ ವೈಶಿಷ್ಟ್ಯ(ಈಗ ತತ್ವಾಂಜಲಿ ಎಂದು ಮರುಮುದ್ರಣಗೊಂಡಿರುವ) ಕೃತಿ ರಚನೆ. ತಾಳಮದ್ದಳೆಯಲ್ಲಿ ಶ್ರೀ ಕೃಷ್ಣ- ಬದರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಧಾವಿದ್ಯಾರ್ಥಿಗಳು ನಡೆಸಿದ “ಸುಧನ್ವಾರ್ಜುನ ಕಾಳಗ” ಯಕ್ಷಗಾನ ತಾಳಮದ್ದಳೆಯಲ್ಲಿ ಶ್ರೀಕೃಷ್ಣನಾಗಿ ಪಾತ್ರ(21-08-1992) ನಿರ್ವಹಿಸಿದ್ದರು.
ಶ್ರೀಗಳ ವಿಭೂತಿವ್ಯಕ್ತಿತ್ವದಲ್ಲಿ ವ್ಯಾಖ್ಯಾನ -ಸಂಶೋಧನೆಗಳು ಹಾಸುಹೊಕ್ಕಾಗಿದ್ದವು. ಅವರ ವ್ಯಾಖ್ಯಾನದ ಹಿಂದೆ ಕಾಣುವ ಸ್ಪಷ್ಟತೆ ಸಂಶೋಧನಾತ್ಮಕ ಅಧ್ಯಯನದ ಪ್ರತಿಫಲ. ತಮ್ಮ ದರ್ಶನದ ಹಿರಿಮೆಯ ಅನುಸಂಧಾನದ ಜೊತೆಗೆ ಇತರ ದರ್ಶನಗಳ ವೈಚಾರಿಕತೆಯನ್ನು ಗೌರವಿಸುವುದು ಶ್ರೀಪಾದರ ಸಾರಸ್ವತ ಸ್ನೇಹಪರತೆಗೆ ಸಾಕ್ಷಿಯಾಗಿದ್ದವು. ಸನ್ಯಾಸಾಶ್ರಮದ ಭಾಗವಾಗಿ ಜಪ, ತಪ, ತಪ್ನ, ಪೂಜೆಗಳ ಅನುಷ್ಠಾನ, ನಿಯಮಿತ ಮಿತಾಹಾರ, ಉಲ್ಲಸಿತ ಮಾನಸಿಕ ಸ್ಥಿತಿ ಇವು ಶ್ರೀಗಳವರ ಆರೋಗ್ಯದ ಗುಟ್ಟಾಗಿತ್ತು! ವಿದ್ಯಾರ್ಥಿಗಳಿಗೆ ಪಾಠ, ವಿದ್ವಾಂಸರೊಡನೆ ಶಾಸ್ತ್ರ ವಿಮರ್ಶೆ, ಸಿಬ್ಬಂದಿಯೊಮದಿಗೆ ಆಡಳಿತ ವಿಶ್ಲೇಷಣೆ. ಶಿಷ್ಯರೊಂದಿಗೆ ಸಂವಾದ, ಸಾವಜನಿಕ ಕಾರ್ಯಕ್ರಮಗಳಲ್ಲಿ ಭಾಗಿ ನಿರಂತರ ಕಾರ್ಯ ಚಟುವಟಿಕೆಗಳ ನಡುವೆ ವಿವಿಧ ರಾಷ್ಟ್ರೀಯ ದಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಗುರುತರ ಜವಾಬ್ದಾರಿ… ಅಚ್ಚರಿಯೆನಿಸುವ ಸರಳತೆ ಅವರ ದೈನಂದಿನ ಜೀವಿತದ ಭಾಗ!!
ವೈದಿಕ – ಲೌಕಿಕ ಸಮನ್ವಯ
ಇಂದಿನ ವಿಜ್ಞಾನಯುಗದಲ್ಲಿ ಧರ್ಮದ ಅವಶ್ಯಕತೆ ಹೆಚ್ಚಿದೆ. ದೇಶವನ್ನೆ ಮಾರಕಾಸ್ತ್ರಗಳಿಂದ ಕೊಲ್ಲಲು ಹವಣಿಸುವ ಮಾನವನಿಗೆ ಧರ್ಮಾಚರಣೆಯೇ ಇದರ ವಿರುದ್ಧ ಸೆಣೆಸಾಡಲು ಸಿದ್ಧವಿರುವ ದಿವ್ಯಾಸ್ತ್ರ ಎಂಬುದು ಶ್ರೀಗಳ ಅಚಲ ನಂಬಿಕೆ. ಆಮಿಷ ಪ್ರಲೋಭನೆಯ ಕಣ್ಣ ಮುಚ್ಚಾಲೆಯೊಂದಿಗೆ ನಡೆದಿರುವ ಮತಾಂತರದ ವಿಷಯವನ್ನು ಮುಂಚಿನಿಂದಲು ಎಚ್ಚರಿಸಿ; ಅದರ ವಿರುದ್ಧ ಹೋರಾಟವನ್ನು ನಡೆಸುತ್ತಿರುವ ಶ್ರದ್ಧಾಳು. ನಕ್ಸಲೀಯರ ಮನಗೆದ್ದು ಅವರನ್ನು ಹಿಂಸೆ, ಶಾಂತಿ ಮತ್ತು ಋಜುತ್ವದ ಮಾರ್ಗಕ್ಕೆ ತರುವುದು ಶ್ರೀ ಕೃಷ್ಣನ ಸೇವೆಯೇ ಎಂಬುದು ಶ್ರೀಗಳ ಧೋರಣೆಯಾಗಿತ್ತು. ಗೋ ಸಂರಕ್ಷಣೆ ನಂತರದಲ್ಲಿ ಅತಿ ಹೆಚ್ಚಿನ ಆವಶ್ಯಕತೆಯು ಕಂಡುಬರುವುದು ಪರಿಸರ ರಕ್ಷಣೆ ಎಂಬ ದೃಢ ನಿಲುವಿನ ಶ್ರೀಗಳು ಕರ್ನಾಟಕ ಕರಾವಳಿಯಲ್ಲಿ ಸ್ಥಾಪಿತವಾದ ಕೈಗಾ ಅಣು ವಿದ್ಯುತ್ ಸ್ಥಾವರದ ಬಗೆಗೆ ನಡೆಸಿದ ಜಾಥಾ ಅವರ ಪರಿಸರ ಕಾಳಜಿಗೆ ನಿದರ್ಶನ.
ಮನುಷ್ಯತ್ವ –ಮುಮುಕ್ಷತ್ವ-ಮಹಾಪುರುಷ ಆಶ್ರಯ ಇವು ಮೂರು ಶ್ರೀಪಾದರಲ್ಲಿ ಏಕೀಭವಿಸಿರುವುದು ನಾಡಿನ ಪುಣ್ಯ. ಇವರ ಚಿಂತನೆಗಳಿಗೆ ಕ್ರಿಯಾಶೀಲ ರೂಪ ದೊರೆತಿದ್ದು ಕಿರಿವಯಸ್ಸಿನಲ್ಲೆ ಅಸ್ಪೃಷ್ಯತೆ ನಿವಾರಿಸಿ ಸಹಬಾಳ್ವೇ ನಡೆಸಬೇಕೆನ್ನುವ ಸಂದೇಶ ಸಿಕ್ಕಿದ್ದು ಮಹಾತ್ಮ ಗಾಂಧೀಜಿರವರ ಜೀವನ ದರ್ಶನದಿಂದ. 19ರ ಹರೆಯದಲ್ಲಿ ಮೊಟ್ಟ ಮೊದಲಿಗೆ ಮೈಸೂರಿನಲ್ಲಿ ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರರ ಸಮ್ಮುಖದಲ್ಲಿ ಆಗಮತ್ರಯ ಸಮ್ಮೇಳನದ ಅಧ್ಯಕ್ಷ ಪೀಠವೇರಿ ಮಾಡಿದ ಬೋಧಪ್ರದ ವಿದ್ವತ್ ಪೂರ್ಣ ಭಾಷಣದಿಂದ ಹಿಂದೂ ಸಮಾಜಕ್ಕೊಂದು ಭದ್ರಬುನಾದಿ ಏರ್ಪಟ್ಟಿತ್ತು.
ಪ್ರಕೃತಿ ವಿಕೋಪ-ಪರಿಹಾರ ಕಾರ್ಯ
ತಪೋನಿರತನಾದ ಸಾಧಕನು ತನ್ನ ಮುಂದೆ ದುಃಖಪಡುವ ಜನರನ್ನು ನೋಡಿ ಉಪೇಕ್ಷೇ ಪಟ್ಟರೆ ಅವನ ತಪಸ್ಸಿನ ಪುಣ್ಯ ಒಡೆದ ಮಡಿಕೆಯಿಂದ ನೀರು ಸೋರುವಂತೆ ಸೋರಿ ಹೋಗುತ್ತದೆ. ಇದು ಭಾಗವತದಲ್ಲಿ ವೇದವ್ಯಾಸರು ನೀಡಿದ ಸಂದೇಶ. ಈ ಮಹಾತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಕಳಕಳಿ ಇರುವ ಅಪರೂಪದ ಯತಿ ಶ್ರೀ ವಿಶ್ವೇಶ ತೀರ್ಥರಾಗಿದ್ದರು..
ಬಾಲ್ಯದಿಂದ ಹೊಸಬಗೆಯ ಯೋಜನೆಯನ್ನು ರೂಢಿಸಿಕೊಂಡ ವ್ಯಕ್ತಿತ್ವ ಇವರದು. ಚಿಕ್ಕಂದಿನಲ್ಲಿ ಕೆರೆಗೆ ಬಿದ್ದು ಮುಳುಗಿದಾಗ ಹತ್ತಿರದಲ್ಲಿದ್ದರೂ ಅಸೃಶ್ಯತೆಯ ಕಾರಣದಿಂದ ತಮ್ಮನ್ನು ಮೇಲಕ್ಕೆತ್ತಲು ಚಡಪಡಿಸಿದ ಹಿಂದುಳಿದವನ ಅಸಹಾಯಕತೆ ಅವರನ್ನು ಇದು ಹೀಗೆ ಇರಬೇಕೆ? ಎನ್ನುವ ಜಿಜ್ಞಾಸೆಗೆ ಒಡ್ಡಿತ್ತು. ಸಂನ್ಯಾಸಿಯಾದ ಮೇಲೆ ಇತರ ಧರ್ಮಿಯರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧಾರಾಳವಾಗಿ ಮಠದೊಳಗೆ ಬರುತ್ತಿರುವಾಗ ಹಿಂದೂಧರ್ಮದವರೇ ಆದ ಹಿಂದುಳಿದವರು ಹೊರಗೆ ನಿಂತು ಕಾಯುವ ಅಪರೂಪದ ದೃಶ್ಯ ಇರುತ್ತಿತ್ತು. ಹೀಗಾಗಬಾರದು ಎನ್ನುವ ತೀರ್ಮಾನಕ್ಕೆ ಬಂದರು ಶ್ರೀಪಾದರು.ಇದು 1970 ರಲ್ಲಿ ಬೆಂಗಳೂರಿನ ಗಬ್ಬಾರ್ ಬ್ಲಾಕಿನ ಹರಿಜನಕೇರಿಯಲ್ಲಿ ಕಾವಿಧರಿಸಿದ ಪೀಠಾಧಿಪತಿಗಳೊಬ್ಬರ ಭೇಟಿಗೆ ಕಾರಣವಾಯಿತು.
ಅಸ್ಪೃಶ್ಯತೆ ನಿವಾರಣೆಗೆ ಆಕರ್ಷಿತರಾದ ಸಂಪ್ರದಾಯಬದ್ದ ಧರ್ಮಗುರು
ಭಾರತೀಯ ಸಮಾಜದಲ್ಲಿ ಧರ್ಮ, ಜಾತಿ, ವ್ರತ, ನಿಯಮ, ಪೂಜೆ-ಪುನಸ್ಕಾರ ಇವೆಲ್ಲವೂ ನಿತ್ಯಜೀವನದ ಹಾಸುಹೊಕ್ಕುಗಳು. ಶತಶತಮಾನಗಳಿಂದ ಭಾರತೀಯ ಸಂಸ್ಕೃತಿ ಮತ್ತು ಜನಜೀವನದಲ್ಲಿ ನೆಲೆಯೂರಿದ ಆಚಾರ-ವಿಚಾರಗಳ ಅವಿಭಾಜ್ಯ ಅಂಗಗಳು,ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಮತ್ತು ವಿಧಿವಿಧಾನಗಳನ್ನು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ಧರ್ಮಪೀಠಗಳಿಗೆ ಸೇರಿದೆ. ಧರ್ಮಪೀಠ ಮತ್ತು ಸಾಮಾಜಿಕ ಜೀವನ ಇವೆರಡೂ ಪರಸ್ಪರ ಪೂರಕ ಚಲನಶೀಲ ವ್ಯವಸ್ಥೆಗಳು. ಇಂತಹ ಧರ್ಮಪೀಠಗಳಲ್ಲಿ ಉಡುಪಿಯೂ ಒಂದು. ಕರ್ನಾಟಕದ ಧಾರ್ಮಿಕ ಮತ್ತು ಸಂಸ್ಕೃತಿಕ ಜೀವನ ವ್ಯವಸ್ಥೆಯಲ್ಲಿ ಉಡುಪಿಯ ಅಷ್ಟಮಠಗಳು ಪ್ರಮುಖ ಪಾತ್ರ ವಹಿಸುತ್ತ ಬಂದಿವೆ.ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಷ್ಟಮಠಗಳ ಪೈಕಿ ಒಂದಾದ ಪೇಜಾವರ ಅಧೋಕ್ಷಜ ಪೀಠದ ಹಿರಿಯ ಯತಿವರ್ಯರು.
ಬಾಲ್ಯದಿಂದಲೂ ರಾಷ್ಟ್ರೀಯ ಪ್ರಜ್ಞೆ
ಬಾಲ್ಯದಿಂದಲೂ ಯತಿ ವಿಶ್ವೇಶತೀರ್ಥರಿಗೆ ಸ್ವಾತಂತ್ರ್ಯ ಆಂದೋಲನದ ಬೆಳವಣಿಗೆ, ಮಹಾತ್ಮಗಾಂಧೀಜಿ ಮತ್ತಿತರ ರಾಷ್ಟ್ರಪ್ರೇಮಿಗಳ ಬಂಧನ, ಅವರ ಬಿಡುಗಡೆ, ಗಾಯಾಳುಗಳ ಶುಶ್ರೂಷೆ, ಖಾದಿಬಟ್ಟೆ-ಇವುಗಳ ಬಗೆಗೆ ಅಪಾರ ಕಾಳಜಿ. ಮಹಾತ್ಮಗಾಂಧೀಜಿಯವರ ಕರೆಗೆ ಓಗೊಟ್ಟು ಮಿಲ್ ಬಟ್ಟೆಗಳನ್ನು ಬಹಿರಂಗವಾಗಿ ಸುಟ್ಟು ಗುರುಗಳಾದ ಶ್ರೀ ವಿಶ್ವಮಾನ್ಯರು ಬಾಲಯತಿಗೆ ಸ್ಫೂರ್ತಿ ಮತ್ತು ಉತ್ತೇಜನ ನೀಡಿದರು. 1942ರ ಕ್ವಿಟ್ಇಂಡಿಯಾ ಚಳುವಳಿಗೆ ಬೆಂಬಲ ನೀಡಿ ಮಹಾತ್ಮಗಾಂಧೀಜಿಯವರಿಗೆ ಪತ್ರ ಬರೆದವರು ಶ್ರೀ ವಿಶ್ವಮಾನ್ಯರು. ಬಾಲ್ಯದಲ್ಲಿ ಸ್ಫೂರ್ತಿಯ ಸೆಲೆಯಾಗಿ ಕಂಡ ಸುಭಾಷ್ ಚಂದ್ರಬೋಸ್ ಮತ್ತು ಸ್ವಾಮಿ ವಿವೇಕಾನಂದರು ಇಂದಿಗೂ ಶ್ರೀ ವಿಶ್ವೇಶತೀರ್ಥರಿಗೆ ಆದರ್ಶಪ್ರಾಯರಾಗಿದ್ದರು..
1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮಹಾತ್ಮಗಾಂಧೀಜಿಯವರನ್ನು ಅಂದಿನ ಬ್ರಿಟಿಷ್ ಸರ್ಕಾರ ಬಂಧಿಸಿತ್ತು. ಅಂದು ಶ್ರೀ ಕೃಷ್ಣನ ಪೂಜೆ ಮುಗಿಸಿ ಸಾಂಕೇತಿಕವಾಗಿ ಒಂದು ದಿನದ ಉಪವಾಸ ಮಾಡಿದಾಗ ಶ್ರೀ ವಿಶ್ವೇಶತೀರ್ಥರಿಗೆ 12 ವಯಸ್ಸು. 1947ರ ಆಗಸ್ಟ್ 14-15 ಮಧ್ಯರಾತ್ರಿ ಉಡುಪಿಯ ರಥಬೀದಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣ ಸಮಾರಂಭದಲ್ಲಿ ಸಡಗರ-ಸಂತಸದಿಂದ ಭಾಷಣ ಮಾಡಿದ ಯತಿ ವಿಶ್ವೇಶರಿಗೆ ಆಗ 16 ವರ್ಷ.
ಗಾಂಧೀಜಿಯವರಿಂದ ಪ್ರಭಾವಿತರಾಗಿ ಖಾದಿಬಟ್ಟೆ ಮತ್ತು ಕೈ ಮಗ್ಗದ ಮಡಿ ಧರಿಸುವ ನಿಯಮವನ್ನು ಇಂದಿಗೂ ಪರಿಪಾಲಿಸುತ್ತಾ ಬಂದಿದ್ದ ಶ್ರೀ ಪೇಜಾವರರು ಅಪ್ಪಟ ಸ್ವದೇಶಾಭಿಮಾನಿ.ಇವೆಲ್ಲದರ ಜೊತೆಜೊತೆಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೇಲೆ ಪ್ರಭಾವ ಬೀರಿದ ಮತ್ತೊಂದು ಆಂದೋಲನವೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾಮಾಜಿಕ ಮಹತ್ವದ ಕಾರ್ಯವಾದ ಅಸ್ಪೃಶ್ಯತೆ ನಿವಾರಣೆಯ ಆಂದೋಲನವನ್ನು ಶ್ರೀ ಕೃಷ್ಣನ ಪೂಜೆಯಷ್ಟೇ ಅನನ್ಯಭಾವದಿಂದ ಕೈಗೆತ್ತಿಕೊಂಡರು. 1950 ರ ದಶಕದಲ್ಲಿ ಹರಿಜನಕೇರಿಲ್ಲಿ ಸ್ವಾಮಿಜಿಯೊಬ್ಬರು ಓಡಾಡುವುದು ಮನೆಮಾತಾಯಿತು. ‘ಕುಡಿತ, ಹಿಂಸೆ, ದುಶ್ಚಟ-ಇವುಗಳನ್ನು ಬಿಡಿ ಎಂದು ಹೇಳಲಾರಂಭಿಸಿದೆ. ಇಂದಿಗೂ ಇದೇ ನನ್ನ ಭಾಷಣದ ಸಾರಾಂಶ’ ಹೀಗೆನ್ನುತ್ತಿದ್ದರು ಶ್ರೀಪಾದರು.
ತುರ್ತು ಪರಿಸ್ಥಿತಿ
ಪ್ರಜಾತಂತ್ರ ವ್ಯವಸ್ಥೆಯ ಬಗೆಗೆ ಅಪಾರ ಮನ್ನಣೆ-ಗೌರವ ನೀಡಲು ಧಾರ್ಮಿಕ ಸಂಸ್ಥೆಗಳನ್ನು ಹುರಿಗೊಳಿಸುವುದು ಶ್ರೀ ಪೇಜಾವರರ ಮತ್ತೊಂದು ಉದಾತ್ತಗುಣವಾಗಿತ್ತು. ಆಡಳಿತದಲ್ಲಿ ನೈತಿಕ ಪ್ರಜ್ಞೆಯನ್ನು ಮೂಡಿಸಲು ಶ್ರೀಗಳವರು ಹೆಚ್ಚಿನ ಗಮನ ನೀಡಿದ್ದಾರೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಪ್ರಜಾತಂತ್ರ ಮೌಲ್ಯಗಳಿಗೆ ಧಕ್ಕೆ ಬಂದಾಗ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರಿಗೆ ಪೇಜಾವರ ಯತಿಗಳು ಬರೆದ ಪತ್ರ ಪ್ರಜಾಸತ್ತಾತ್ಮಕಮೌಲ್ಯ ರಕ್ಷಣೆಗೆ ಧರ್ಮಪೀಠವೊಂದು ನೀಡಿದ ಶ್ರೇಷ್ಠ ಕೊಡುಗೆಯಾಯಿತು.
“ನೆಹರೂಜಿಯವರ ಪುತ್ರಿಯಾಗಿ ಜನರ ಸ್ವಾತಂತ್ರ್ಯಹರಣ ನಿಮ್ಮಿಂದಾಗಬಾರದು. ನಿಮ್ಮ ಸುತ್ತಮುತ್ತ ನಿಮಗೆ ಪ್ರೀಯವಾದುದಷ್ಟನ್ನೇ ಹೇಳುವ ಹೊಗಳುಭಟ್ಟರು ಇರುತ್ತಾರೆ. ಎಚ್ಚರವಿರಲಿ. ಅಪ್ರಿಯ ಸತ್ಯವನ್ನು ಹೇಳುವವರು ಇರುವುದಿಲ್ಲ ಇದ್ದರೂ ಬಹು ಕಡಿಮೆ. ನಾನು ನಿಮ್ಮ ಮೇಲಿನ ಅಭಿಮಾನದಿಂದ ಇಂತಹ ಅಪ್ರಿಯ ಸತ್ಯವನ್ನು ಹೇಳಲು ಈ ಪತ್ರ ಬರೆಯುತ್ತಿದ್ದೇನೆ. ನಾನು ಸನ್ಯಾಸಿ. ಭಿಕ್ಷೆ ಬೇಡುವುದು ನನ್ನ ಧರ್ಮ. ದೇಶದ ಪ್ರಜಾಪ್ರಭುತ್ವ ರಕ್ಷಣೆಗಾಗಿ ಭಿಕ್ಷೆ ಬೇಡುತ್ತಿದ್ದೇನೆ” ಇದು ಪೇಜಾವರ ಮಠಾಧೀಶರು ಇಂದಿರಾಗಂಧಿಯವರಿಗೆ ಅಂದು ಬರೆದು ರಿಜಿಸ್ಟರ್ ಟಪಾಲಿನ ಮೂಲಕ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಕಳುಹಿಸಿದ ಪತ್ರ.
ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪರಿವ್ರಾಜಕನ ಪಾತ್ರ
ಮುಂದಿನ ಪೀಳಿಗೆಗಾಗಿ ಪ್ರಕೃತಿದತ್ತವಾದ ಪರಿಸರ ಸಂಪತ್ತನ್ನು ಉಳಿಸಿ, ಬೆಳೆಸುವ ವಿಶಾಲ ಮನೋಧರ್ಮ ಶ್ರೀ ವಿಶ್ವೇಶತೀರ್ಥರಲ್ಲಿದೆ. ಅಪ್ರಬುದ್ಧರಿಗೆ ಪ್ರತಿಮೆ ಅಥವ ಗುಡಿಗೋಪುರಗಳಲ್ಲಿ ಮಾತ್ರ ದೇವರು ಕಾಣುತ್ತಾನೆ. ಆದರೆ ಜ್ಞಾನಿಗೆ ಸರ್ವತ್ರ ದೇವರು ಕಾಣುತ್ತಾನೆ. ಪ್ರಕೃತಿ ಮತ್ತು ಪರಿಸರದಲ್ಲಿ ದೇವರನ್ನು ಕಂಡವರು ಶ್ರೀ ಪೇಜಾವರರು. ಪರಿಸರದ ಮೇಲೆ ನಡೆಯುವ ಅತಿಕ್ರಮಣ ಮತ್ತು ನಾಶದ ವಿರುದ್ಧ ದನಿ ಎತ್ತುವ ಸಾಧು-ಸಂತ ವರ್ಗಕ್ಕೆ ಶ್ರೀ ವಿಶ್ವೇಶತೀರ್ಥರು ಆಜೀವ ಪರ್ಯಂತ ದಳಪತಿ ಇದ್ದಂತೆ ಇದ್ದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನೆರವಿನ ಹಸ್ತ
ಗಾಂಧೀಜಿಯವರ ಅಹಿಂಸೆ ಮತ್ತು ಸೇವಾತತ್ಪರತೆಯ ತತ್ವಗಳ ಮೂಲಕ ನಕ್ಸಲೀಯರಿಗೆ ಶಾಂತಿ ಉಪದೇಶ ನೀಡುವ ಶ್ರೀಗಳವರ ಪ್ರಯತ್ನ ಬಹುಮಟ್ಟಿಗೆ ಫಲಪ್ರದವಾಗಿತ್ತು. ಈ ಪ್ರದೇಶಗಳ ಏಕಾಂಗಿ ಮನೆಗಳಿಗೆ ಮತ್ತು ಬಡಜನರು ಹಾಗೂ ದಲಿತರ ಮನೆಗಳಿಗೆ ಸಾರ್ವಜನಿಕ ವಂತಿಗೆ, ಸರ್ಕಾರದ ಸಹಾಯ ಮತ್ತು ಪೇಜಾವರ ಮಠದ ಖರ್ಚಿನಿಂದ ವಿದ್ಯುಚ್ಛಕ್ತಿ ಪೂರೈಸಿದ್ದಾರೆ ಶ್ರೀಗಳವರು. ನಕ್ಸಲ್ ಚಳುವಳಿಯತ್ತ ಆಕರ್ಷಿತವಾಗಲಿದ್ದ 100ಕ್ಕೂ ಹೆಚ್ಚು ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಖುದ್ದಾಗಿ ನಿಂತು ಶಾಂತಿ-ಸೌಹಾರ್ದಯುತ ಬಾಳುವೆಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಶ್ರೀ ಪೇಜಾವರ ಸ್ವಾಮಿಗಳಿಗೆ ಸಲ್ಲುತ್ತದೆ.ಬಡಬಗ್ಗರುಗಳ ಬಗ್ಗೆ ಕಾಳಜಿ- 2000 ರಿಂದ ನಿರಂತರ ಬಡಬಗ್ಗರುಗಳ ಮಹಾಖಾಯಿಲೆಗಳ ಬಗ್ಗೆ ಯಥಾಶಕ್ತಿ ಆರ್ಥಿಕ ಸಹಾಯ, ಉಡುಪಿಯಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯಗಳ ಸ್ಥಾಪನೆ. ಬೆಂಗಳೂರಿನಲ್ಲಿ ಶ್ರೀ ಕೃಷ್ಣ ಸೇವಾಶ್ರಮದ ಆಸ್ಪತ್ರೆಯಲ್ಲಿ ಬಡರೋಗಿಗಳ ಸೇವೆಗಾಗಿ ಡಯಾಲಿಸಿಸ್ನ ಸೇವಾ ಶುಶ್ರೂಷೆ, ಗುಜರಾತ್ನ ಭೂಕಂಪದಿಂದ ಪೀಡಿತವಾದ ಪ್ರದೇಶದಲ್ಲಿ ಗಂಜಿ ಕೇಂದ್ರ ಸ್ಥಾಪನೆ. ಔಷಧಿ, ವಸ್ತ್ರ ಇತ್ಯಾದಿ ವಿತರಣೆ.
ಸುನಾಮಿ ಸಂತ್ರಸ್ತರಸೇವಾಕಾರ್ಯ -2005 ರಲ್ಲಿ ತಮಿಳುನಾಡಿನ ಕೆಲವು ಪ್ರದೇಶಗಳು ಸುನಾಮಿಯ ಪ್ರಭಾವಕ್ಕೆ ಪೀಡಿತವಾದಾಗ ಕಡಲೂರಿನ ಮೊದಲಿಯಾರ್ ಕುಪ್ಪಂನಲ್ಲಿ 20 ಲಕ್ಷಕ್ಕೂ ಮೀರಿದ ಆರ್ಥಿಕ ವ್ಯವಸ್ಥೆಯಲ್ಲಿ ಗೃಹನಿರ್ಮಾಣ
ಪ್ರವಾಹ ಪರಿಹಾರ-2009 ರಲ್ಲಿ ಉತ್ತರ ಕರ್ನಾಟಕ ಪ್ರದೇಶಗಳು ಜಲಪ್ರಳಯಕ್ಕೆ ತುತ್ತಾದಾಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದವಸ -ಧಾನ್ಯ, ವಸ್ತ್ರ ಪಾತ್ರೆ ಸಾಮಗ್ರಿಗಳು. ಆಹಾರ ಪದಾರ್ಥಗಳ ವಿತರಣೆ. ಗುಲ್ಬರ್ಗದ ಜೀವರ್ಗಿ ತಾಲ್ಲೂಕಿನ ಕೋಡಿ, ಕೋಬಾಳ ಗ್ರಾಮಗಳಲ್ಲಿ 1.25 ಕೋಟಿ ಆರ್ಥಿಕ ವೆಚ್ಚದಲ್ಲಿ ದೀನದಲಿತರಿಗೆ ಗೃಹ ನಿರ್ಮಾಣ.
ಮುಂದುವರೆದ ಸೇವಾಯಜ್ಞ
ಶ್ರೀ ವಿಶ್ವೇಶತೀರ್ಥರು ಯತಿಯಾಗಿ ತಾತ್ವಿಕ ಪ್ರಪಂಚಕ್ಕೆ ಅಸಾಧಾರಣ ಕೊಡುಗೆ ನೀಡಿದ್ದರೆ, ಹಿಂದುಗಳಿಗಾಗಿ ಹಿಂದೂ ಧರ್ಮಕ್ಕೆ ಧಕ್ಕೆ ಒದಗಿದಾಗ ಪ್ರತಿಭಟಿಸಿದ್ದಾರೆ. ಸಾಮಾಜಿಕ ಸಹೃದಯರಾಗಿ ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿದ್ದಾರೆ. ತತ್ವಜ್ಞಾನದ ಆಳಕ್ಕಿಳಿದು ನಿರಂತರ ಉದ್ಗ್ರಂಥಗಳ ಪಾಠವನ್ನು ನಡೆಸುತ್ತಾ 30 ಸುಧಾಮಂಗಳಗಳನ್ನು ನಡೆಸಿದ್ದಾರೆ. ವಿದ್ಯಾಪೀಠದ ಮೂಲಕ ಸಮಾಜದಲ್ಲಿ ಜ್ಞಾನದ ಕೊರತೆಯನ್ನು ನೀಗಿಸಿದ್ದಾರೆ.ರಾಷ್ಟ್ರದ ಪ್ರಜೆಯಾಗಿ ರಾಜಕಾರಣಿಗಳಿಗೆ ಬುದ್ದಿ ಹೇಳಿ ತಿದ್ದಿದ್ದಾರೆ. ಹೀಗೆ ಹತ್ತು-ಹಲವು ಬಾಧ್ಯತೆಗಳನ್ನು ಜೀವನದಲ್ಲಿ ಪೂರೈಸಿದ ಶತಮಾನದ ಯತಿಶಕ್ತಿ ಇವರಾಗಿದ್ದರು.
ಸಾಟಿ ಇಲ್ಲದ ಪರ್ಯಾಯಗಳು
ಉಡುಪಿ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಹೊಸ ಛಾಪು ಮೂಡಿಸಿದ್ದು ಶ್ರೀಪಾದರು ಪರಿಸರದ ಸುಧಾರಣೆಯ ಜೊತೆಗೆ ಧಾರ್ಮಿಕ ಸಾಂಸ್ಕೃತಿಕ ಆಯಾಮ ನೀಡಿ ನಾಡ ಉತ್ಸವವನ್ನಾಗಿಸಿದ ಹೆಗ್ಗಳಿಕೆ. 1952ರ ಮೊದಲನೆಯ ಪರ್ಯಾಯದಲ್ಲಿ ಅವರು ಹುಟ್ಟು ಹಾಕಿದ ಅಖಿಲ ಭಾರತ ಮಾಧ್ವ ಮಹಾ ಮಂಡಲ ಇಂದು ಹೆಮ್ಮರವಾಗಿ ಜ್ಞಾನಪ್ರಸರಣ ಕಾರ್ಯದಲ್ಲಿ ನಿರತವಾಗಿದೆ. ನಂತರದ ಪರ್ಯಾಯದಲ್ಲಿ ನಿರ್ಮಿಸಿದ ರಾಜಾಂಗಣ ಸಭಾಂಗಣದ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಶಾದ್ಯಂತ ಭಾಗವಹಿಸದ ಪಂಡಿತರು, ಕಲಾವಿದರು, ಮುತ್ಸದ್ಧಿಗಳೇ ಇಲ್ಲ ಎನ್ನಬಹುದು.
ಪೇಜಾವರ ಮಠದ ವಿಶೇಷತೆಗಳು
ಶ್ರೀ ಮಧ್ವಾಚಾರ್ಯರು ನೀಡಿದ ವಿಠಲ ಪಟ್ಟದ ದೇವರು. ಶ್ರೀ ವಿಜಯಧ್ವಜರ ಕಾಲದಿಂದ ಕಣ್ವತೀರ್ಥ ಮಠದಲ್ಲಿದ್ದ ವಿಭೀಷಣ ಕರಾರ್ಚಿತ ರಾಮದೇವರನ್ನು ಪಟ್ಟದ ದೇವರೊಂದಿಗೆ ಪೂಜಿಸಲಾಗುತ್ತಿದೆ.
ಮಠದ ಪರಂಪರೆಯ ಏಳನೆಯವರಾದ ಶುಕಾಂಶರಾದ ಶ್ರೀ ವಿಜಯಧ್ವಜತೀರ್ಥರು ಭಾಗವತಕ್ಕೆ ಅಪೂರ್ವ ವ್ಯಾಖ್ಯಾನ ಬರೆದು ಬಹುದೊಡ್ಡ ವಾಙ್ಮಯ ಕೊಡುಗೆ ನೀಡಿದ್ದಾರೆ. ಹಾಗೂ ಚಿತ್ರಾಪುರದಲ್ಲಿದ್ದ ಭಟ್ಟಾಚಾರ್ಯ ಸಂಪ್ರದಾಯದ ಶ್ರೀಗಳನ್ನು ವಾದದಲ್ಲಿ ಸೋಲಿಸಿ ಅವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಮಾಧ್ವಮಠವನ್ನಾಗಿ ಮಾಡಿ ಮುಂದುವರೆಸಿದ್ದು ಗಮನೀಯವಾದದ್ದು.
ಗಣ್ಯರ ದೃಷ್ಟಿಯಲ್ಲಿ ಶ್ರೀ ವಿಶ್ವೇಶತೀರ್ಥರು:
ವಸ್ತುತಸ್ತು ಹೇಳುವುದಾದರೆ, ನಾವು ವಿಶ್ವೇಶತೀರ್ಥರಿಗೆ ಹೇಳಿ ನೀಡಿದ ಜ್ಞಾನಕ್ಕಿಂತ ಸಹಸ್ರ ಪಾಲು ಅಧಿಕ ಜ್ಞಾನವನ್ನು ಅವರು ದೇವತಾ ಪ್ರಸಾದಲಬ್ಧ ಪ್ರತಿಭೆಯಿಂದ ಹೊಂದಿದ್ದಾರೆ. ಅವರಿಗೆ ಇರುವ ಶಾಸ್ತ್ರಜ್ಞಾನ, ಜಾಗತಿಕ ಜ್ಞಾನ, ಕರ್ತವ್ಯ, ಸದ್ಗುಣಗಳು ಜನ್ಮಾಂತರದ ಪ್ರತಿಭೆಯಿಂದ ಪಡೆದಿದ್ದಾರೆ.
-ವಿದ್ಯಾಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರು
ಸನ್ಯಾಸ ಕಠಿಣವಾದ ಆಶ್ರಮ, ಆ ಆಶ್ರಮಧರ್ಮವನ್ನು ಪಾಲಿಸಿದ್ದಾರೆ. ಶುದ್ಧ ಚಾರಿತ್ರ್ಯ ಬೆಳೆಸಿಕೊಂಡಿದ್ದಾರೆ. ವಿದ್ವತ್ತು ಇದೆ. ವೈಯಕ್ತಿಕ ಬೆಳವಣಿಗೆಯ ಜೊತೆಗೆ ಹೊಸ ಭಾವನೆ ಬೆಳೆಸಿದ್ದಾರೆ.
-ಶ್ರೀ ಸಿದ್ಧಗಂಗಾ ಮಠಾಧೀಶರು
ಮರ ತಾನು ಬಿಸಿಲಿಗೆ ಬೆಂದು ನೆರಳನ್ನು ನೀಡುತ್ತದೆ. ದೀಪದ ಬತ್ತಿ ತಾನು ಸವೆದು ಬೆಳಕು ಚೆಲ್ಲುತ್ತದೆ. ಅಂತೆಯೇ ತಾವು ನೊಂದು ಪರಸುಖಕ್ಕಾಗಿ ಶ್ರಮಿಸಿದ ಸ್ವಾಮಿಗಳು. ಅವರು ಸನ್ಯಾಸಿಗಳ ಪರಂಪರೆಗೆ ತಿಲಕದಂತೆ.
-ಶ್ರೀರಾಮಚಂದ್ರಾಪುರ ಮಠಾಧೀಶರು
ಜನರನ್ನು ಧರ್ಮದೆಡೆಗೆ ಮುಖ ಮಾಡಿಸಿದವರು; ವಿಶ್ವಕ್ಕೆ ಈಶ ಹಾಗೂ ತೀರ್ಥದಂತೆ ಪವಿತ್ರವಾದವರು.
-ಶ್ರೀಆದಿಚುಂಚನಗಿರಿ ಮಠಾಧೀಶರು
ಚಲಿಸುವ ನೀರುಶುದ್ಧ, ಅಲೆದಾಡುವ ಸನ್ಯಾಸಿಯೂ ಶುದ್ಧ ಪೇಜಾವರ ಸ್ವಾಮಿಗಳಿಗೆ ಇದು ಅನ್ವಯಿಸುತ್ತದೆ.
-ಶ್ರೀರಂಗ ಸ್ವಾಮಿಗಳು
ಆನೆ ದೊಡ್ಡದು, ಆದರೆ ಅದನ್ನು ಚಿಕ್ಕ ಅಂಕುಶ ಮಣಿಸುತ್ತದೆ. ಹಾಗೆ ಮದವೇರಿದ ಸಮಾಜವನ್ನು ತಮ್ಮ ಸಂಕಲ್ಪ ಶಕ್ತಿಯಿಂದ ಮಣಿಸಿದ ಅಸಾಧಾರಣ ವ್ಯಕ್ತಿ ಅವರು.
-ಶ್ರೀ ತರಳಬಾಳು ಮಠಾಧೀಶರು
ದಕ್ಷಿಣ ಕನ್ನಡ ಕಡಲತೀರದ ಮೂರು ರತ್ನಗಳು ಶ್ರೀ ಮಧ್ವಾಚಾರ್ಯರು, ಶ್ರೀ ವಾದಿರಾಜರು ಮತ್ತು ಶ್ರೀ ವಿಶ್ವೇಶತೀರ್ಥರು.
-ಪಂಢರೀನಾಥಾಚಾರ್ಯ ಗಲಗಲಿ
ಆರ್ಥಿಕವಾಗಿ ಸುಭದ್ರವಾದ ಸಂಸ್ಥೆ ಕೆಲಸ ಮಾಡುವುದು ಆಶ್ಚರ್ಯವಲ್ಲ ಆದರೆ ಪೇಜಾವರ ಸ್ವಾಮಿಗಳಿಗೆ ಇಂತಹ ಹಿನ್ನೆಲೆ ಯಾವುದೂ ಇಲ್ಲ. ಸೂರ್ಯನರಥಕ್ಕೆ ಒಂದೇ ಗಾಲಿ, ಕಾಲಿಲ್ಲದ ಅರುಣಸಾರಥಿ ಆದರೂ ಅವನ ಸಿದ್ಧಿಗೆ ಕ್ರಿಯಾಶಕ್ತಿ ಕಾರಣ. ಅದರಂತೆ ಸ್ವಾಮಿಗಳ ಸಿದ್ಧಿ ವೈಯಕ್ತಿಕ ಪರಿಶ್ರಮದ ಫಲ
-ಪಂಡಿತ ಮಾಹುಲಿ ವಿದ್ಯಾಸಿಂಹಾಚಾರ್ಯ
Get in Touch With Us info@kalpa.news Whatsapp: 9481252093
Discussion about this post