ಸೊರಬ: ನಿರ್ದಿಷ್ಟ ಗುರಿ, ಛಲ, ಆದಮ್ಯ ಚೇತನ, ಧೈರ್ಯ, ತನ್ನ ಗುರಿಯ ಕುರಿತು ಬದ್ಧತೆ ಇರುವವ ಎವರೆಸ್ಟ್ ಏರಬಲ್ಲ ಎಂಬ ಮಾತಿಗೆ ಹತ್ತಿರದ ಉದಾಹರಣೆ ಸೊರಬದ ಎಂ.ಆರ್. ರತೀಶ.
ರತೀಶ ಉಳವಿ ಹೊಳೆಕಟ್ಟೆಯ 26 ವರ್ಷದ ಯುವಕ. ಎಂ.ಕೆ. ರಘು, ಸಿ.ಎನ್. ಅಣ್ಣಮ್ಮ ದಂಪತಿ ಪುತ್ರನಾದ ಈತ ಸೆಪ್ಟೆಂಬರ್ 2 ರಿಂದ ಭಾರತೀಯ ಪರ್ವತಾರೋಹಣ ಸಂಸ್ಥೆ ದೆಹಲಿ ನಡೆಸಿದ ಅಲ್ಪೈನ್ ಸ್ಟೈಲ್ ಎಕ್ಸ್ಪೆಡಿಷನ್ ನಲ್ಲಿ ಭಾಗವಹಿಸಿ ಸುಮಾರು 5953 ಮೀ. ಎತ್ತರದ ಮೌಂಟ್ ಆಂಗ್ಡುರಿ ಏರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಐಎಂಎಫ್ ನ ಎಸ್.ಕೆ. ಕುಟ್ಟಿ ಅವರ ನೇತೃತ್ವದಲ್ಲಿ ಇವರ ತಂಡ ತರಬೇತಿ ಪಡೆದು ದೆಹಲಿಯಿಂದ ಮಣಿಕರಣ್ಗೆ ಸಾಗಿ ಕುಟ್ಲಾ, ಸರಮ್ ತಾಷ್ನಿಂದ ಬೇಸ್ ಕ್ಯಾಂಪ್ ನತ್ತ ಸುಮಾರು 18 ಗಂಟೆಗಳ ಕಾಲ ನಡಿಗೆ ಪಯಣ. ಧರ್ಮಸುರ ಪರ್ವತದ ಪಯಣ ಕಷ್ಟಕರವಾಗಿರುವುದರಿಂದ ಅಂತಿಮವಾಗಿ ಮೌಂಟ್ ಅಂಗ್ಡುರಿಗೆ ತೆರಳಿ ವಾಪಸ್ಸಾಗಿದ್ದಾರೆ.
ಹಿಮಪಾತ, ಚಳಿ, ಲೆಕ್ಕಿಸದೆ ನಿಯಮಿತ ಆಹಾರ ಸೇವಿಸುತ್ತ 25 ದಿನಗಳ ಇವನ ಆರೋಹಣ, ಆವರೋಹಣದ ಕ್ಷಣಗಳು ಮೈ ರೋಮಾಂಚನಗೊಳಿಸುವಂತಿದ್ದು, ಸಂತಸದಿಂದ ಆಸಕ್ತರೊಂದಿಗೆ ಹಂಚಿಕೊಳ್ಳುತ್ತಾನೆ.
ರತೀಶ ಒಬ್ಬ ಉತ್ತಮ ಗಿಟಾರ್ ವಾದಕ ಕೂಡ, ಆಟೋಟಗಳಲ್ಲೂ ಆಸಕ್ತಿ ಇರುವ ಇವನಿಗೆ ಇವನ ತಂದೆ ತಾಯಿಯರು ಪ್ರತಿ ಹೆಜ್ಜೆಗೂ ಪ್ರೋತ್ಸಾಹ ನೆರವು ನೀಡುತ್ತ ಬಂದಿದ್ದು, ಮಾದರಿ ಯುವಕನನ್ನಾಗಿ ರೂಪಿಸಿದ್ದಾರೆ.
ಇವನ ಸಾಧನೆಗೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಲಿಂಗರಾಜಗೌಡ, ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಹುನವಳ್ಳಿ ಪ್ರಶಾಂತ್, ತಾಲೂಕು ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯವರು ತುಂಬು ಸಂತಸ ವ್ಯಕ್ತಪಡಿಸಿದ್ದು, ಮನೆಗೆ ತೆರಳಿ ಗೌರವಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
Discussion about this post