ಹೈಸ್ಕೂಲು ಓದುವ ಪ್ರತೀ ವಿದ್ಯಾರ್ಥಿಗೂ ತಾನು ಜೀವನದಲ್ಲಿ ಹೇಗೆ ಬದುಕಬೇಕು ಎನ್ನುವ ಪ್ರಶ್ನೆ ಉದ್ಭವ ಆಗಿಯೇ ಆಗುತ್ತದೆ. ಆದರೆ ತನ್ನಲ್ಲಿ ಉದ್ಭವವಾಗುವ ಪ್ರಶ್ನೆಗಳಿಗೆ ಆತನಿಗೆ ಅನೇಕ ಬಾರಿ ಸರಿಯಾದ ಉತ್ತರ ಸಿಗುವುದಿಲ್ಲ. ಈ ವಿಚಾರದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತದೆ.
ಶಿಕ್ಷಕರು ತಂದೆತಾಯಿಯರಿಗೂ ಕೆಲವೊಮ್ಮೆ ಇದೆಲ್ಲವನ್ನು ಹೇಗೆ ತಿಳಿಸಿಕೊಡಬೇಕೆನ್ನುವ ಸರಿಯಾದ ಜ್ಞಾನವಿರುವುದಿಲ್ಲ. ಇದೆಲ್ಲವನ್ನೂ ಗಮನಿಸಿಯೇ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಬರೆದಿರುವ ವಿದ್ಯಾರ್ಥಿಗಾಗಿ ಎನ್ನುವ ಈ ಪುಸ್ತಕ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ಸಮರ್ಥ ಮಾರ್ಗದರ್ಶಿ.
ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಒಬ್ಬ ವಿದ್ಯಾರ್ಥಿ ಹೇಗಿರಬೇಕು ಎಂಬುದನ್ನು ಅತ್ಯಂತ ಸರಳ ಭಾಷೆಯಲ್ಲಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಈ ಪುಸ್ತಕದಿಂದ ಸ್ಫೂರ್ತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಜೀವನವನ್ನು ಉತ್ತಮಪಡಿಸಿಕೊಂಡಿದ್ದಾರೆ.
ಈ ಪುಸ್ತಕ ಬರೆದು ಸುಮಾರು ಎರಡು ದಶಕಗಳು ಕಳೆದುಹೋಗಿವೆ. 32 ಕ್ಕೂ ಹೆಚ್ಚು ಮರುಮುದ್ರಣ ಕಂಡು 8 ಲಕ್ಷಕ್ಕೂ ಅಧಿಕ ಪ್ರತಿಗಳು ವಿದ್ಯಾರ್ಥಿಗಳ ಕೈ ಸೇರಿವೆ. ಹಿಡಿದರೆ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಆದರೆ ಜೀವನ ಪೂರ್ತಿ ಪಾಲಿಸಬೇಕಾದ ಅಮೂಲ್ಯ ವಿಚಾರಗಳುಳ್ಳ, ಪ್ರತಿಯೊಬ್ಬ ವಿದ್ಯಾರ್ಥಿಯೂ ಅವಶ್ಯವಾಗಿ ಓದಲೇಬೇಕಿರುವ ಈ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಅತಿ ದೊಡ್ಡ ಪ್ರಮಾಣದಲ್ಲಿ ತಲುಪಿಸಬೇಕಾದ ಅವಶ್ಯಕತೆಯಿದೆ…
ಬನ್ನಿ ಈ ಕಾರ್ಯದಲ್ಲಿ ಕೈಜೋಡಿಸಿ…
#ಮತ್ತೊಮ್ಮೆನಿರ್ಮಾಣಂ
Discussion about this post