ಬೆಂಗಳೂರು: ಅಡ್ವೈಸರ್ ಮಾಸ ಪತ್ರಿಕೆ, ಸಂಗೀತ್ ನೃತ್ಯ ಭಾರತಿ ಅಕಾಡೆಮಿ ಮತ್ತು ಕರ್ನಾಟಕ ಇಂಜಿನೀಯರ್ಸ್ ಅಕಾಡೆಮಿ ರವರ ಸಂಯುಕ್ತಾಶ್ರಯದಲ್ಲಿ ಸಂವಾದ, ಅಡ್ವೈಸರ್ ನ ನೃತ್ಯ ವಿಶೇಷಾಂಕ ಪತ್ರಿಕೆ ಬಿಡುಗಡೆ ಮತ್ತು ’ನೃತ್ಯ ಸಂಭ್ರಮ’ವೆಂಬ ಸುಂದರ ನೃತ್ಯಗಳ ರಸದೌತಣವನ್ನು ರಸಿಕರಿಗೆ ನೀಡಲು ಬಹಳ ವೈವಿಧ್ಯಮಯವಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ವಿಶ್ವ ನೃತ್ಯ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಆಧುನಿಕ ದಿನಗಳಲ್ಲಿ ಶಾಸ್ತ್ರೀಯ ನೃತ್ಯವನ್ನು ಉಳಿಸಿ ಬೆಳೆಸುವುದು’ ಎಂಬ ಸಂವಾದಕ್ಕೆ ಹಿರಿಯ ನೃತ್ಯ ಗುರು ಶ್ರೀಮತಿ ರೇವತಿ ನರಸಿಂಹನ್ ರವರು ತಮ್ಮ ವಿದ್ವತ್ಪೂರ್ಣ ಮಂಡನೆಯೊಂದಿಗೆ, ಪಾರಂಪರಿಕ ನೃತ್ಯ ಪದ್ದತಿಗಳನ್ನು ಉಳಿಸಿಕೊಂಡು ಹೋಗಲು ಅನೇಕ ಸೂತ್ರಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಇನ್ನು ಸಂವಾದದಲ್ಲಿದ್ದಂತಹ ಮತ್ತೋರ್ವ ನೃತ್ಯಗುರು ಶ್ರೀಮತಿ ಪದ್ಮ ಹೇಮಂತ್ ರವರು ಮೂಲದ ಸೊಗಡಿಗೆ ಧಕ್ಕೆ ಬಾರದ ರೀತಿಯಲ್ಲಿ ಸಂಯೋಜನೆಗಳಲ್ಲಿ ವಿಭಿನ್ನತೆ, ಸಂಗೀತದಲ್ಲಿ ಹೊಸತನ ತಂದು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಈ ಕಲೆಯ ಪಾರಂಪರಿಕ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸಬಹುದೆಂಬ ತಮ್ಮ ಅಭಿಮತವನ್ನಿತ್ತರು.
ಕಲಾ ವಿಮರ್ಶಕ ಎಸ್. ನಂಜುಂಡ ರಾವ್ ಮಾತನಾಡಿ, ಆಧುನಿಕತೆಯನ್ನು ಬಳಸಿಕೊಂಡು ನಮ್ಮ ನೃತ್ಯಗಳಲ್ಲಿ ವೀಕ್ಷಕರಿಗೆ ರಸಾನುಭೂತಿಯನ್ನುಂಟು ಮಾಡಲು ಸಾಧ್ಯವಾದರೆ, ತಮ್ಮ ಪ್ರಯತ್ನಕ್ಕೆ ಸಫಲತೆ ಸಿಗುತ್ತದೆ. ಇದಕ್ಕೆ ಕಲಾವಿದರು, ಪೋಷಕರು, ಮಾಧ್ಯಮದವರು – ಎಲ್ಲರೂ ಜೊತೆಯಾಗಿ ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು.
ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಮಾತನಾಡಿ, ಶಾಸ್ತ್ರೀಯ ನೃತ್ಯಗಳ ಕಲಿಕೆಯ ಹಿಂದಿನ ಮಹತ್ವ, ಉದ್ದಿಶ್ಯ, ಅದರ ವ್ಯಾಪ್ತತೆಯನ್ನು ಯುವ ಪೀಳಿಗೆಗೆ ಮನನಮಾಡಿಸಿ ಕಲೆಯ ನಿಜವಾದ ಶಕ್ತಿಯೇ ಅದು ಕಲಾವಿದನಲ್ಲಿ ಉಂಟು ಮಾಡಬಹುದಾದ ಅಲೌಕಿಕ ಅನುಭೂತಿ ಎಂಬುದನ್ನು ಅರ್ಥಮಾಡಿಸಿದಾಗ ಕಲೆಯ ಉಳಿವು-ಬೆಳೆವು ತಂತಾನೆ ಆಗಿ ಹೋಗುತ್ತದೆಂಬುದನ್ನು ಬಹಳ ಅದ್ಭುತವಾದ, ಸಂದರ್ಭೋಚಿತವಾದ ಉದಾಹರಣೆ ಮತ್ತು ಆಧ್ಯಾತ್ಮಿಕ ಉಲ್ಲೇಖಗಳನ್ನು ನೀಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅನೇಕ ವಿಚಾರವಂತ ನೃತ್ಯಗುರುಗಳು, ಕಲಾರಸಿಕರಿದ್ದ ಸಭೆಯಲ್ಲಿ ನಡೆದ ಈ ವಿಚಾರಗೋಷ್ಟಿ ಬಹಳ ಅರ್ಥಪೂರ್ಣವಾಗಿತ್ತು.
ಅಡ್ವೈಸರ್ ಪತ್ರಿಕೆಯ ನೃತ್ಯ ವಿಶೇಷಾಂಕವನ್ನು ಅನನ್ಯ ಸಂಸ್ಥೆಯ ಸಂಸ್ಥಾಪಕ ಡಾ. ಆರ್.ವಿ. ರಾಘವೇಂದ್ರ ರವರು ಕೆ.ಇ.ಎ. ಪ್ರಭಾತ್ನ ಎಲ್ಲಾ ಪದಾಧಿಕಾರಿಗಳು, ಪ್ರಣವ ಮೀಡಿಯ ಹೌಸ್ ನ ಮುಖ್ಯಸ್ಥ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ, ಅಡ್ವೈಸರ್ ಪತ್ರಿಕೆಯ ಸಂಪಾದಕರಾದ ಬಸವರಾಜ್ ಸಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿದರು.
ರೂಪದರ್ಶಿ, ಗಾಯಕಿ, ನಟಿ, ನೃತ್ಯ ಕಲಾವಿದೆ ಕುಮಾರಿ ಶೀತಲ್ ಹೇಮಂತ್ ರವರ ಸುಂದರ ವರ್ಣಮಯ ಮುಖಪುಟಹೊತ್ತ ಈ ವಿಶೇಷ ಸಂಚಿಕೆಯಲ್ಲಿ ಕಲೆಯಲ್ಲಿಯೇ ತಮ್ಮ ಜೀವನವನ್ನು ಕಂಡುಕೊಂಡಂಥಹ ನೃತ್ಯ ಗುರುಗಳ ಸಂದರ್ಶನಗಳು, ನೃತ್ಯ ಮತ್ತು ಅದಕ್ಕೆ ಪೂರಕವಾದ ಕಲಾರಂಗಗಳ ಕುರಿತಾದ ಅನೇಕ ವಿದ್ವನ್ಮಣಿಗಳ ಅನುಭವದ ಮೂಸೆಯಿಂದ ಅಕ್ಷರರೂಪದಲ್ಲಿ ಬಿಂಬಿತವಾದ ಸಂಗ್ರಹಯೋಗ್ಯ ಲೇಖನಗಳು, ನೃತ್ಯ ಪರಂಪರೆಯನ್ನು ಉಳಿಸಿಬೆಳೆಸುವತ್ತ ಶ್ರಮಿಸುತ್ತಿರುವ ಅನೇಕ ನೃತ್ಯರಂಗದ ಹಿರಿಯ ಚೇತನಗಳ ಕುರಿತಾದ ಮಾಹಿತಿ, ನೃತ್ಯಕ್ಷೇತ್ರದ ಯುವ ಪ್ರತಿಭೆಗಳನ್ನು ಪರಿಚಯಿಸುವ ಲೇಖನಗಳ ಮಹಾಪೂರವೇ ಇದ್ದು ನೃತ್ಯಾಸಕ್ತರಿಗಷ್ಟೇ ಅಲ್ಲದೆ ಸಾಮಾನ್ಯ ಓದುಗರಿಗೂ ಈ ನೃತ್ಯಕಲೆಯನ್ನು ಪರಿಚಯಿಸುವ ವಿನಮ್ರ ಪ್ರಯತ್ನವನ್ನು ನೃತ್ಯ ಗುರು ಶ್ರೀಮತಿ ಪದ್ಮ ಹೇಮಂತ್ ರವರು ಬಹಳ ಶ್ರದ್ದೆಯಿಂದ ಮಾಡಿದ್ದಾರೆ.
ನೃತ್ಯ ಕ್ಷೇತ್ರದ ಹಿರಿಯ ಗುರುಗಳಾದ ಬಿ. ಭಾನುಮತಿ, ಬಿ.ಕೆ. ವಸಂತಲಕ್ಷ್ಮಿ, ರೇವತಿನರಸಿಂಹನ್ – ಇವರುಗಳ ಸಂದರ್ಶನ ಲೇಖನದ ಜೊತೆಗೆ ನೃತ್ಯ ಕ್ಷೇತ್ರದ ಡಾ. ವಿದ್ಯಾ ರಾವ್, ಡಾ. ಲಕ್ಷ್ಮೀ ಬಸವರಾಜ್, ಡಾ. ಮಾಲಿನಿ ರವಿಶಂಕರ್, , ವಿ. ಅಶ್ವಥ ರಾಮಯ್ಯ, ಪೂರ್ಣಿಮಾ ಗುರುರಾಜ, ರಶ್ಮಿ ಥಾಪರ್, ಸುಗ್ಗನಹಳ್ಳಿ ಷಡಕ್ಷರಿ, ಕೆಂಗೇರಿ ಚಕ್ರಪಾಣಿ , ಡಾ. ಬಿ.ಎಸ್ ಪಾರಿಜಾತ, ರೂಪಶ್ರೀ ಮಧುಸೂದನ, ಸುಮ ಕೃಷ್ಣ ಮೂರ್ತಿ, ಪೂರ್ಣ ಸುರೇಶ್, ಅಂಜನಾ ಸುಧೀಂದ್ರ, ಪುಲಿಕೇಶಿ ಕಸ್ತೂರಿ, ಚೇತನ್ ಗಂಗಾಟ್ಕರ್-ಚಂದ್ರಪ್ರಭ ಚೇತನ್, ದೀಪ ಭಟ್, ಶ್ರೀರಂಜಿನಿ ಉಮೇಶ್, ಜಿ.ಬಿ.ಕೋಟೆ ಅನಂತ್ ಮತ್ತು ಸುರೇಶ್ ಸ್ಟಾನ್ಲೆರವರುಗಳು ತಮ್ಮ ವಿಚಾರಪೂರ್ಣ ಲೇಖನಗಳ ಮೂಲಕ ಈ ಸಂಚಿಕೆಯನ್ನು ಶ್ರೀಮಂತಗೊಳಿಸಿದ್ದಾರೆ.
ಸಮಾರಂಭದಲ್ಲಿ ನೃತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಗುರು ಶ್ರೀವತಿ ರೇವತಿ ನರಸಿಂಹನ್ ರವರನ್ನು ಸನ್ಮಾನಿಸಲಾಯಿತು. ಇನ್ನು ಈ ನೃತ್ಯ ಸಂಚಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ಪೂರೈಸಿಕೊಟ್ಟ ಬಹುಮುಖ ಪ್ರತಿಭೆಯ ಗುರು ಶ್ರೀಮತಿ ಪದ್ಮ ಹೇಮಂತ್ ರವರಿಗೆ ಅವರು ಕಲಾರಂಗಕ್ಕೆ ನೀಡುತ್ತಿರುವ ಸೇವೆಯನ್ನು ಗುರುತಿಸಿ ಅಡ್ವೈಸರ್ ಪತ್ರಿಕೆಯವರು ತಮ್ಮ ಸಂಸ್ಥೆಯ ವತಿಯಿಂದ ’ನೃತ್ಯ ಕಲಾ ಉತ್ತುಂಗ’ ಎಂಬ ಬಿರುದನ್ನು ನೀಡಿ ಗೌರವಿಸಿದರು.
’ನೃತ್ಯ ಸಂಭ್ರಮ’ – ನೃತ್ಯ ಕಾರ್ಯಕ್ರಮದಲ್ಲಿ ಕುಮಾರಿ ಎಂ. ಅನನ್., ಶೀತಲ್ ಹೇಮಂತ್, ಪ್ರೀತಿ ಮಂಜುನಾಥ್ ತಮ್ಮ ಭರತನಾಟ್ಯ ಏಕವ್ಯಕ್ತಿ ಪ್ರದರ್ಶನದಿಂದ ಸಭೆಯನ್ನು ರಂಜಿಸಿದರೆ, ನಿಧಾಘ್ ಕರುನಾಡ್ ತಮ್ಮ ಕಥಕ್ ಶೈಲಿಯ ಏಕವ್ಯಕ್ತಿ ಪ್ರದರ್ಶನವಿತ್ತು ರಸಿಕರ ಮನಸೂರೆ ಗೈದರು. ಗುರು ಬೃಂದರವರ ಮಾರ್ಗದರ್ಶನದಲ್ಲಿ ಅನನ್ಯ ಕಲಾನಿಕೇತನ ಸಂಸ್ಥೆಯವರು ಮತ್ತು ಗುರು ಪದ್ಮ ಹೇಮಂತ್ ರವರ ಮಾರ್ಗದರ್ಶನದಲ್ಲಿ ಸಂಗೀತ್ ನೃತ್ಯ ಭಾರತಿ ಅಕಾಡೆಮಿ ಸಂಸ್ಥೆಯವರು ತಮ್ಮ ಸಮೂಹ ನೃತ್ಯ ಪ್ರದರ್ಶನಗಳಿಂದ ಸಭಿಕರ ಮೆಚ್ಚುಗೆ ಗಳಿಸಿದರು.
Discussion about this post