ಬೆಂಗಳೂರು: ರಾಜ್ಯದ ಜನ ಈಗಾಗಲೇ ಸಾಕಷ್ಟು ವಿರೋಧಿಸಿರುವ ಟಿಪ್ಪು ಜಯಂತಿಯನ್ನು ಒಂದು ವೇಳೆ ಮತ್ತೆ ಆಚರಿಸಲು ಮುಂದಾದರೆ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿದ ಅವರು, ರಾಜ್ಯದ ಜನರ ವಿರೋಧದ ನಡುವೆಯೂ ಸಹ ಈ ಹಿಂದೆ ಟಿಪ್ಪು ಜಯಂತಿಯನ್ನು ಆಚರಿಸಿದವರು ಅಧಿಕಾರ ಕಳೆದುಕೊಂಡಿದ್ದಾರೆ. ಟಿಪ್ಪು ಖಡ್ಗವನ್ನು ವಿದೇಶದಿಂದ ತಂದವರ ಗತಿ ಏನಾಗಿದೆ ಎಂಬುದೂ ಸಹ ಎಲ್ಲರಿಗೂ ತಿಳಿದಿದೆ ಎಂದು ಕಟಕಿಯಾಡಿದರು.
ಹಿಂದಿನ ಘಟನೆಗಳಿಂದ ರಾಜ್ಯದ ಮೈತ್ರಿ ಸರ್ಕಾರ ಪಾಠ ಕಲಿಯಬೇಕು. ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಜನರ ಭಾವನೆಗಳನ್ನು ಅವಮಾನಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಈಶ್ವರಪ್ಪ ಹೇಳಿದರು.
















