ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮೀನು ಹಿಡಿಯಲು ತೆರಳಿದ್ದ ಇಬ್ಬರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮಿನಕೊಪ್ಪ ಬೋವಿ ಕಾಲೋನಿಯ ಬಳಸೋಕೆರೆಯಲ್ಲಿ ನಡೆದಿದೆ.
ಶಿವಮೊಗ್ಗದ ಸೋಮಿನಕೊಪ್ಪ ಕರೆಯಲ್ಲಿ ನಿನ್ನೆ ಸಂಜೆ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ಅಡ್ಡ ದಿಡ್ಡಿ ತೆಗೆದಿರುವ ಗುಂಡಿಗಳಲ್ಲಿ ಒಂದೇ ಕುಟುಂಬದ ಪೂಜಾ(11) ಹಾಗೂ ಮಾಲತೇಶ(9) ಎಂಬ ಮಕ್ಕಳು ಸಾವು ಕಂಡ ಘಟನೆ ವರದಿಯಾಗಿದೆ.
ಇದೇ ಸಂದರ್ಭದಲ್ಲಿ ಅವರ ಜೊತೆ ಹೋಗಿದ್ದ ಪುಟಾಣಿ ಬಾಲಕಿಯೊಬ್ಬಳು ಮನೆಗೆ ಬಂದು ಮಾಹಿತಿ ನೀಡಿದ್ದರಿಂದ ಮಕ್ಕಳು ಸಾವು ಕಂಡ ಘಟನೆ ಬೆಳಕಿಗೆ ಬಂದಿದೆ.
ಸ್ವಲ್ಪ ಮಣ್ಣು ಮಿಶ್ರಿತವಾದ ಚಿಕ್ಕ ಮೀನುಗಳನ್ನು ಕೈಯಲ್ಲಿದ್ದ ಡಬ್ಬಿ ಹಾಗೂ ಕವರ್ನಲ್ಲಿ ಹಾಕಿಕೊಂಡು ಬರುತ್ತಿದ್ದ ವೇಳೆ ಕೇವಲ 9 ವರ್ಷದ ಮಾಲತೇಶ ಎಂಬ ಮಗು ಕೆರೆಯಲ್ಲಿದ್ದ ಸುಮಾರು 10 ರಿಂದ 15 ಅಡಿ ಗುಂಡಿಯ ಮೇಲ್ಭಾಗದಲ್ಲಿ ನಿಂತು ಮೀನುಗಳನ್ನು ತೊಳೆಯಲು ಹೋಗಿದ್ದಾನೆ. ಈ ಸಮಯದಲ್ಲಿ ಕಾಲು ಜಾರಿ ಬಿದ್ದ ಈತನನ್ನ, ಅಕ್ಕ ಪೂಜಾ ಕಾಪಾಡಲು ಹೋಗಿದ್ದಾಳೆ. ಆದರೆ ದುರಾದೃಷ್ಟವಶಾತ್ ಆಕೆಯೂ ನೀರಿನಲ್ಲಿ ಬಿದ್ದಿದ್ದಾಳೆ.
ವಿಷಯ ತಿಳಿದ ಗ್ರಾಮದ ಯುವಕರು ನೀರಿಗೆ ಹಾರಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಕ್ಕಳ ಜೀವ ಹಾರಿಹೋಗಿತ್ತು.
ಪ್ರಕರಣ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Get In Touch With Us info@kalpa.news Whatsapp: 9481252093
Discussion about this post