ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಸಾಧಕನಿಗೆ ಸಾಕು ಎಂಬ ಪ್ರಯತ್ನದ ಸಾಹುಕಾರ ಇರುವುದಿಲ್ಲ, ಹಾಗೆಯೇ ಎಲ್ಲವೂ ತನ್ನಿಂದ ತಾನೇ ಎಂಬ ಅಹಂಭಾವದ ನಡೆಯೂ ಇರುವುದಿಲ್ಲ. ಮನಸ್ಸಿಟ್ಟು ಮಾಡುವ ಕಾರ್ಯದಲ್ಲಿ ತೃಪ್ತಿಯ ಹೊನಲು ಇದ್ದರೆ ಸಾಧನೆ ಎಂಬ ಶ್ರೀಮಂತಿಕೆ ತಾನಾಗಿಯೇ ಕಾಣುವುದು ಈ ಮೇಲಿನ ಮಾತುಗಳು ನಮ್ಮ ದಾವಣಗೆರೆ ಜಿಲ್ಲೆಯ ಡಿಸಿ ಮತ್ತು ಎಸ್ಪಿ ಇವರಿಗೆ ಚೆನ್ನಾಗಿ ಅರ್ಥೈಸಿ ಹೇಳುತ್ತದೆ ಅಲ್ಲವೇ.
ಒಂದು ವ್ಯವಸ್ಥೆಯನ್ನು, ವ್ಯವಸ್ಥೆಯ ಲೋಪವನ್ನು ಸರಿಪಡಿಸಿಕೊಂಡಾಗ ಸ್ವಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿ, ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಸಾಗಲು ದೃಢವಾದ ಮನಸ್ಸು ಬೇಕು. ಕೆಲಸದಲ್ಲಿ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಆಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆಗ ನಮ್ಮ, ನಮ್ಮನ್ನು, ನಂಬಿದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಅವರ ಹೃದಯ ಸಿಂಹಾಸನದಲ್ಲಿ ಆರಾಮವಾಗಿ ನೆಲೆವೂರುತ್ತೇವೆ.
ದಾವಣಗೆರೆ ಜಿಲ್ಲೆಯ ಎರಡು ಕಣ್ಣುಗಳಾಗಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಜಿಲ್ಲೆಯ ಜನತೆಯ ಕಣ್ಣುಗಳು ಮಾತ್ರವಲ್ಲ, ಎರಡು ನಕ್ಷತ್ರಗಳಾಗಿ ಪ್ರಕಾಶಮಾನವಾಗಿ ಮಿನುಗುತ್ತಿದ್ದಾರೆ. ಜಿಲ್ಲೆಯಲ್ಲಿರುವ ಬಡವರ, ದೀನ ದಲಿತರ, ಮಧ್ಯಮ ವರ್ಗದವರ, ವಿಧವೆಯರ, ವೃದ್ಧರ, ವಿಕಲಚೇತನರ, ಕೂಲಿ ಕಾರ್ಮಿಕರ ಹೃದಯ ಸಿಂಹಾಸನದಲ್ಲಿ ಎಂದಿಗೂ ಮರೆಯಲು ಸಾಧ್ಯವಾಗದ ರೀತಿಯಲ್ಲಿ ತಮ್ಮ ಕಾರ್ಯವನ್ನು ಕಾಯಾ ವಾಚಾ ಮನಸಾ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸವೆಂದು ನಾವು ಜನತೆಯ ಸೇವೆಯನ್ನು ಮಾಡಲು ಬಂದಂತಹ ಸೇವಕರು ಎಂದು ತಮ್ಮನ್ನು ನಂಬಿದ ಜನರ ಸೇವೆಯನ್ನು ಯಾರೂ ಮರೆಯದ ರೀತಿಯಲ್ಲಿ ಮಾಡುತ್ತಿದ್ದಾರೆ. ಆದ್ದರಿಂದಲೇ ನಾವು ಅವರನ್ನು ದಾವಣಗೆರೆ ಜಿಲ್ಲೆಯ ಜನತೆಯ ಕಣ್ಣುಗಳಲ್ಲಿ ಮಿನುಗುತ್ತಿರುವ ಎರಡು ನಕ್ಷತ್ರಗಳು ಎಂದು ಕರೆಯುತ್ತಿರುವುದು.
ಅವಕಾಶಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದೊಂದು ರೀತಿಯಲ್ಲಿ ಒದಗಿ ಬರುತ್ತಲೇ ಇರುತ್ತವೆ. ಬಂದ ಅವಕಾಶಗಳನ್ನು ನಮ್ಮ ಬುದ್ಧಿವಂತಿಕೆಯಿಂದ ಸರಿಯಾಗಿ ಬಳಸಿಕೊಂಡು ಜಾಣ್ಮೆಯ ನಡೆ ಇಡಬೇಕು. ಆಗ ನಾವು ಸಾಧನೆ ಎಂಬ ಉತ್ತುಂಗ ಶಿಖರವನ್ನು ಅತಿ ಸುಲಭವಾಗಿ ಏರಬಹುದು.
ಮನಸ್ಸು ಮತ್ತು ಹೃದಯವನ್ನು ಸ್ಪರ್ಧಾತ್ಮಕವಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮೀಸಲಿಡಬೇಕು. ಹಲವು ವಿಭಿನ್ನ ಸ್ಪರ್ಧೆಗಳನ್ನು ಎದುರಿಸುವ ಬದಲಾಗಿ ಒಂದೇ ಉದ್ದೇಶಿತ ಗುರಿಯೊಂದಿಗೆ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು. ಅಲ್ಲದೇ ಸಾಧಿಸುವ ಕಿಚ್ಚು ಮನಸ್ಸಿನಲ್ಲಿದ್ದರೆ ಯಶಸ್ಸು ನಿಶ್ಚಿತ.
ಶ್ರೀ ಹನುಮಂತರಾಯರು, ಐಪಿಎಸ್
ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದಾವಣಗೆರೆ
ಸದ್ಯ ದಾವಣಗೆರೆ ಜಿಲ್ಲೆಯ ಜನತೆಗೆ ಅಪರೂಪಕ್ಕೆ ಒಮ್ಮೆ ಎನ್ನುವಂತೆ ತುಂಬಾ ವರ್ಷಗಳ ನಂತರ ಜಿಲ್ಲೆಯ ಜನತೆಗೆ ಉತ್ತಮ ಅಧಿಕಾರಿಗಳು ಡಿಸಿ ಮತ್ತು ಎಸ್ಪಿ ರೂಪದಲ್ಲಿ ದೊರೆತಿದ್ದಾರೆ.
ನಾವು ಎಲ್ಲೋ ಒಂದು ಕಡೆ ಅಲ್ಲಿನ ಜನರ ಹೃದಯವನ್ನು ಕದ್ದ ಅಧಿಕಾರಿಗಳನ್ನು ನೆನೆಯುತ್ತಾ, ಛೇ ನಮ್ಮ ಜಿಲ್ಲೆಗೂ ಅಂತಹ ಅಧಿಕಾರಿಗಳು ಇರಬಾರದೇ ಎಂದು ಪಶ್ಚಾತಾಪ ಪಡುತ್ತಿದ್ದೇವೆ. ಅಂತಹ ಪ್ರಾಮಾಣಿಕ ಅಧಿಕಾರಿಯು ನಮ್ಮ ಜಿಲ್ಲೆಗೆ ಸಿಕ್ಕಾಗ ನಮಗೆ ಆಗ ಆಗುವ ಆನಂದವನ್ನು ವರ್ಣಿಸಲು ಸಾಧ್ಯವೇ? ಇಂದು ನಾವು ಡಿಕೆ ರವಿ, ರವಿ ಚನ್ನಣ್ಣವರ್, ಅಣ್ಣಾಮಲೆ, ರೋಹಿಣಿ ಸಿಂಧೂರಿ, ಶಾಲಿನಿ ರಜನೀಶ್ ಇವರಂತೆ ಅದೆಷ್ಟೋ ಪ್ರಾಮಾಣಿಕ ಅಧಿಕಾರಿಗಳನ್ನು ಮೆಚ್ಚಿಕೊಂಡ ಯುವ ಸಮೂಹ, ಬಡವರು, ಮಧ್ಯಮ ವರ್ಗದ ಜನರು ಇಂಥ ಅಧಿಕಾರಿಗಳ ಅಭಿಮಾನಿಗಳಾಗಿದ್ದು, ಇವರಲ್ಲೇ ಅನುಕರಣೆ ಮಾಡುತ್ತಿದ್ದಾರೆ.
ಅದೇ ನಿಟ್ಟಿನಲ್ಲಿ ನಮ್ಮ ದಾವಣಗೆರೆ ಜಿಲ್ಲೆಯ ಜನತೆಗೆ ಅಂತಹ ಅಧಿಕಾರಿಗಳು ಸಿಗಬಾರದೇ ಎಂದು ಪ್ರಶ್ಚಾತ್ತಾಪ ಪಡುತ್ತಿದ್ದ ಜನತೆಗೆ ಬಹು ವರ್ಷಗಳ ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಸಿಕ್ಕಿರುವುದು ನಮ್ಮ ಸೌಭಾಗ್ಯ ಅಲ್ಲವೇ. ಅವರ ಕಾರ್ಯ ವೈಖರಿಗೆ, ಜನರ ಸಮಸ್ಯೆಗೆ ಸ್ಪಂದಿಸುವ ರೀತಿ, ಸ್ಥಳದಲ್ಲೇ ಪರಿಹಾರ ನೀಡುತ್ತಿರುವುದು ಕಂಡು ಜಿಲ್ಲೆಯ ಜನತೆ ಹರ್ಷಗೊಂಡಿದ್ದಾರೆ. ನಮಗೂ ನಮ್ಮ ಜಿಲ್ಲೆಗೂ ಒಬ್ಬ ದಕ್ಷ ಅಧಿಕಾರಿಗಳು ಸಿಕ್ಕಿದ್ದಾರೆ ಎಂದು ಸಂಭ್ರಮದಿಂದ ಹೆಮ್ಮೆ ಪಡುತ್ತಿದ್ದಾರೆ. ಅದಕ್ಕೆ ಹೇಳುವುದು ಕಣ್ರೀ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿದ್ದರೆ ಎಂಥವರೂ ಆದರೂ ಸಹ ಅವರು ಉನ್ನತ ಸ್ಥಾನವನ್ನು ಏರಿ ಜನರ ಹೃದಯ ಸಿಂಹಾಸನದಲ್ಲಿ ರಾಜನಂತೆ ಮೆರೆಯುತ್ತಾರೆ.
ಈ ಮೇಲೆ ಹೆಸರಿಸಿದ ಅಧಿಕಾರಿಗಳು ಜನರ ಮನಸ್ಸಿನಲ್ಲಿ ಎಂದೆಂದಿಗೂ ಮರೆಯದ ನಕ್ಷತ್ರದಂತೆ ಜಿನುಗುತ್ತಿರುವುದು ಏಕೆ ಅಂದುಕೊಂಡಿದ್ದೀರಾ? ಇವರು ತಾವು ಒಬ್ಬ ಅಧಿಕಾರಿ, ತಮಗೆ ಅಧಿಕಾರವಿದೆ ಎಂದು ಅಹಂ ಪಡದೇ, ದರ್ಪ ತೋರದೆ, ತಾವೊಬ್ಬ ಜನರ ಸೇವೆ ಮಾಡಲು ಬಂದ ಜನಸೇವಕ ಎಂದು ಜನರ ಮಧ್ಯದಲ್ಲಿ ಬೆರೆತು, ಅವರೊಂದಿಗೆ ತಾವು ಒಬ್ಬರಾಗಿ ಅವರ ಕಷ್ಟ ಕಾರ್ಪಣ್ಯಕ್ಕೆ ಅವರ ಸಮಸ್ಯೆಯ ಪರಿಹಾರಕ್ಕೆ ತಾಳ್ಮೆಯಿಂದಲೇ ಅವರೊಟ್ಟಿಗೆ ಇದ್ದು ಅದಕ್ಕೆ ಪರಿಹಾರ ಕಂಡುಕೊಳ್ಳುವ ರೀತಿ ಇದೆಯಲ್ಲ ಅದು ಕಣ್ರೀ ಜನರ ಹೃದಯ ಸಿಂಹಾಸನವನ್ನು ಗೆದ್ದಿರುವುದು.
ಇವರು ಇಂದು ಉನ್ನತ ಸ್ಥಾನವನ್ನು ಅಲಂಕರಿಸಲು ಅವರು ಬಾಲ್ಯದಲ್ಲಿ ಪಡೆದ ಕಷ್ಟ ಕಣ್ರೀ. ಅವರ ವಿದ್ಯಾಭ್ಯಾಸದ ದಿನದಲ್ಲಿ ಅವರ ಹೆತ್ತ ತಂದೆ ತಾಯಿಗಳು ಪಟ್ಟ ಕಷ್ಟದ ದಿನಗಳನ್ನು ತಾವು ಅಧಿಕಾರ ಪಡೆದ ಮೇಲೂ ಮರೆಯದೆ ಇರುವುದರಿಂದಲೇ ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳನ್ನು ಬಹು ಬೇಗನೆ ಅರ್ಥೈಸಿಕೊಳ್ಳುತ್ತಾರೆ. ಅಂದಿನ ಅವರ ಕಷ್ಟ ನೋವುಗಳು ಕಣ್ಣಿಗೆ ಬಂದಾಗ ಅವರ ಮನಸ್ಸು ಕರಗಿ ನಮ್ಮಂತೆ ಅವರು ಕಷ್ಟ ಪಡಬಾರದು ಎಂದು, ಇಂದು ನಮಗೆ ಅಧಿಕಾರವಿದೆ ಅಧಿಕಾರ ಇದ್ದ ಸಂದರ್ಭದಲ್ಲಿ ಜನರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡುವ ಭಾಗ್ಯ ಒದಗಿ ಬಂದಿದೆ. ಅದನ್ನು ಪ್ರಾಮಾಣಿಕವಾಗಿ ಮಾಡೋಣ ಎಂದು ಸಂಕಲ್ಪ ತೊಟ್ಟು ನಡೆಯುತ್ತಿರುವುದರಿಂದಲೇ ಇಂದು ಜನರಿಗೆ ಹತ್ತಿರವಾಗಿದ್ದಾರೆ.
ಹಣ-ಅಧಿಕಾರಕ್ಕಿಂತ ಜ್ಞಾನ ಮುಖ್ಯ. ಜ್ಞಾನದ ಬೆಳಕು ಹತ್ತಿದರೆ ಎಲ್ಲವನ್ನೂ ಪಡೆಯಬಹುದು. ಯಶಸ್ಸಿನ ಉನ್ನತಿಯನ್ನು ತಲುಪಲು ಸಾಧ್ಯ. ಸಾಧನೆಯ ಸಿದ್ಧಿಗೆ ಬಡತನ ಎಂದಿಗೂ ಅಡ್ಡಿ ಬರುವುದಿಲ್ಲ ಬಡತನವನ್ನೇ ಮೆಟ್ಟಿಲು ಮಾಡಿಕೊಳ್ಳಬೇಕು. ಜಾತ್ರೆಯಲ್ಲಿ ಉತ್ತುತ್ತಿ ಮಾರುತ್ತಿದ್ದ ನನ್ನಂಥ ಸಾಮಾನ್ಯ ವ್ಯಕ್ತಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ ಎಂದರೆ ಸತತ ಪರಿಶ್ರಮ, ಶ್ರದ್ಧೆ, ಗುರಿ ಹಾಗೂ ಸಾಧಿಸುವ ಛಲದಿಂದಲೇ. ಇವೆಲ್ಲಾ ಇದ್ದರೆ ಒಬ್ಬ ವ್ಯಕ್ತಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ.
ಶ್ರೀ ಮಹಾಂತೇಶ್ ಬೀಳಗಿ, ಐಎಎಸ್
ಜಿಲ್ಲಾಧಿಕಾರಿಗಳು, ದಾವಣಗೆರೆ
ನಮ್ಮ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯಾದ ಮಹಾಂತೇಶ್ ಬೀಳಗಿ ಇವರು ಬಡ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದಾರೆ. ತಮ್ಮ ವಿದ್ಯಾಭ್ಯಾಸದ ದಿನದಲ್ಲಿ ತಮ್ಮ ತಾಯಿ ಪಟ್ಟ ಕಷ್ಟವನ್ನು ಮರೆಯದೇ, ಅದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮ ಜನರ ಮುಂದೆ ತಾನು ಉನ್ನತ ಸ್ಥಾನ ಪಡೆಯಲು ಪಟ್ಟ ಕಷ್ಟವನ್ನು ಬಿಡಿಬಿಡಿಯಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ಉನ್ನತ ಸ್ಥಾನದ ಕುರಿತು ಮನದಾಳದ ಮಾತನ್ನು ಜನರೊಟ್ಟಿಗೆ ಹಂಚಿಕೊಂಡಿದ್ದಾರೆ.
ಹಿಂದೆ ಜಾತ್ರೆಯಲ್ಲಿ ಉತ್ತುತ್ತಿ ಮಾರುತ್ತಿದ್ದ ಮಗನಾಗಿ ಇಂದು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಜನತೆಯಲ್ಲಿ ಎಂದೆಂದಿಗೂ ಮರೆಯದ ಮಾಣಿಕ್ಯವಾಗಿದ್ದಾರೆ. ಜನರಿಗೆ ತೊಂದರೆಯಾಗುತ್ತಿರುವ ಇಲಾಖೆಗಳಿಗೆ ಯಾವುದೇ ಮುನ್ಸೂಚನೆಯಿಲ್ಲದೆ ದಿಢೀರ್ ಭೇಟಿ ನೀಡುತ್ತಿರುವುದು ಜಿಲ್ಲೆಯ ಇತರ ಇಲಾಖೆಯ ಅಧಿಕಾರಿಗಳಿಗೆ ಬೆಚ್ಚಿ ಬೀಳುವಂತೆ ಮಾಡಿದೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಸಲುವಾಗಿ ವಾರದಲ್ಲಿ ಎರಡು ಬಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದರಿಂದ ಜನರ ಕೆಲಸ ಕಾರ್ಯಗಳು ವಿಳಂಬವಾಗಿದೆ ತ್ವರಿತಗತಿಯಲ್ಲಿ ಸಾಗುವಂತೆ ನೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ವಾಟ್ಸಾಪ್ ನಂಬರಿಗೆ ಜನರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡಾಗ ಜನರಿಗೆ ಗೊತ್ತಿಲ್ಲದಂತೆ ತೆರೆಮರೆಯಲ್ಲಿ ಇದ್ದುಕೊಂಡು ಅವರ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತಿದ್ದಾರೆ. ಇವರು ಕಣ್ರೀ ನಿಜವಾದ ಜನನಾಯಕ. ಇವರ ಅಧೀನದಲ್ಲಿ ಬರುವ ಎಲ್ಲ ಇಲಾಖೆಗಳಿಗೆ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗದೆ ತ್ವರಿತಗತಿಯಲ್ಲಿ ಮಾಡಿಕೊಂಡು ಹೋಗುವಂತೆ ತಾಕೀತು ಮಾಡಿದ್ದಾರೆ. ಇವರ ಮಾತನ್ನು ಮೀರಿ ವಿಳಂಬ ಮಾಡಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡುವುದು, ಬೇರೆಡೆ ವರ್ಗಾವಣೆಗೊಳಿಸಿರುವುದು ಇವರು ಕೆಲಸದಲ್ಲಿ ತೋರುತ್ತಿರುವ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ. ಇವರ ಖಡಕ್ ಆದೇಶದಿಂದ ಇತರೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ.
ಇನ್ನು, ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಯನ್ನು ಹೊತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರ ಕಾರ್ಯವೂ ಸಹ ಮೆಚ್ಚುವಂಥದ್ದು ಕಣ್ರೀ. ಜಿಲ್ಲೆಯ ಜನತೆಗೆ ರವಿ ಚನ್ನಣ್ಣವರಂತಹ ದಕ್ಷ ಪೊಲೀಸ್ ಅಧಿಕಾರಿ ಸಿಕ್ಕಿರುವುದು ಹೆಮ್ಮೆ ಪಡುವಂತಹ ವಿಷಯ. ತಾವು ಒಬ್ಬ ಪೊಲೀಸ್ ಅಧಿಕಾರಿ ಎಂಬುದನ್ನು ಮರೆತು ಜನರೊಟ್ಟಿಗೆ ಬೆರೆತು ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ರೀತಿ ಜನತೆಯಲ್ಲಿ ಆತಂಕವನ್ನು ದೂರ ಮಾಡಿದೆ. ಸದಾ ನಗುಮುಖದೊಂದಿಗೆ ತಮ್ಮ ಬಳಿ ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರಿಗೆ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಯಾವುದೇ ಒತ್ತಡಕ್ಕೆ ಒಳಗಾಗದೇ ಜನರ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಪರಿಸ್ಥಿತಿಯ ಗಂಭೀರತೆಯನ್ನು ಅರಿಯುತ್ತಾರೆ. ಇದರಿಂದಾಗಿಯೇ ಇಂದು ಜಿಲ್ಲೆಯಾದ್ಯಂತ ಶಾಂತಿ ನೆಲೆಸಿದೆ.
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು, ಜಿಲ್ಲಾಧಿಕಾರಿಗಳ ಜೊತೆ ಸೇರಿ ಇಲಾಖೆಯ ಅಧಿಕಾರಿಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವುದು ಜಿಲ್ಲೆಯ ಜನತೆಯಲ್ಲಿ ಹರ್ಷ ಉಂಟು ಮಾಡಿದೆ. ತಮ್ಮ ವ್ಯಾಪ್ತಿಗೆ ಬರುವ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳೊಂದಿಗೆ ಕ್ಷಣಕ್ಷಣದ ಮಾಹಿತಿ ಎಲ್ಲಾ ಪಡೆದು ಅಗತ್ಯಕ್ಕೆ ಅನುಗುಣವಾಗಿ ಕಾನೂನಿನ ಪರಿಮಿತಿಯಲ್ಲೇ ನಡೆದುಕೊಂಡು ಹೋಗುತ್ತಿರುವುದರಿಂದ ನಮ್ಮ ಜಿಲ್ಲೆಯ ಜನಸಾಮಾನ್ಯರ ಧ್ವನಿಯಲ್ಲಿ ಧ್ವನಿಯಾಗಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಒಟ್ಟಿಗೆ ಸೇರಿ ಕುಂದೂರು ಕೆರೆಯ ಸ್ವಚ್ಛತೆಯ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮದಲ್ಲಿ ಸೈಕಲ್ ಜಾಥಾ ನಡೆಸುವುದರ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮೊನ್ನೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗೆ ನಡೆಯದಂತೆ ಸ್ಥಳದಲ್ಲೇ ಇಬ್ಬರು ಅಧಿಕಾರಿಗಳು ಮೊಕ್ಕಾಂ ಹೂಡಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಿರುವುದು ಜಿಲ್ಲೆಯ ಜನತೆಯಲ್ಲಿ ಮನೆ ಮಾತಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ಈ ಇಬ್ಬರು ಅಧಿಕಾರಿಗಳು ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಜಿಲ್ಲೆಯ ಎರಡು ನಕ್ಷತ್ರಗಳಾದ ಡಿಸಿ ಮತ್ತು ಎಸ್ಪಿ ಒಟ್ಟಿಗೆ ಉದ್ಘಾಟಿಸಿ ಜಿಲ್ಲೆಯ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ.
ಸದೃಢವಾದ ಮನಸ್ಸು ಹೊಂದಿರುವ ನಿಷ್ಠಾವಂತ, ಪ್ರಾಮಾಣಿಕತೆ ಇರುವ ಹತ್ತು ಜನ ಯುವಕರು ಸಿಕ್ಕರೆ ಇಡೀ ಭರತ ಖಂಡದ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಅಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಇಂದು ಈ ಇಬ್ಬರು ಅಧಿಕಾರಿಗಳನ್ನು ನೋಡಿದಾಗ ನೆನಪಿಗೆ ಬಂದಿತ್ತು. ಅಂದು ಏನಾದರೂ ಜಿಲ್ಲೆಯ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಸ್ವಾಮಿ ವಿವೇಕಾನಂದರಿಗೆ ಅಂದೇ ಸಿಕ್ಕಿದ್ದರೆ ಇಡೀ ಭವ್ಯ ಭಾರತದ ಚಿತ್ರವನ್ನು ಅಂದೇ ಬದಲಾಗುತ್ತಿತ್ತು.
ಆದರೂ ಇಂದು ನಮಗೆ ಈ ಇಬ್ಬರು ಅಧಿಕಾರಿಗಳು ಸಿಕ್ಕಿರುವುದು ನಮ್ಮ ಪುಣ್ಯ ಎಂದುಕೊಳ್ಳುವ, ಅವರನ್ನು ಅವರ ಸೇವೆಯನ್ನು ನಮ್ಮ ಜಿಲ್ಲೆಯಲ್ಲಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಅವರ ಬೆಂಬಲಕ್ಕೆ ನಿಲ್ಲೋಣ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಆಶಯವಾಗಿದೆ.
ಜಿಲ್ಲೆಗೆ ಆಗಮಿಸಿರುವ ನೂತನ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ ಅವರು ಕಡು ಬಡತನದಿಂದ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬುದನ್ನು ಅವರು ಅನೇಕ ಸಭೆ ಸಮಾರಂಭಗಳಲ್ಲಿ ಹಂಚಿಕೊಂಡಿರುವುದನ್ನು ನಾವು ಕೇಳಿದ್ದೇವೆ. ಅವರು ಯಾವುದೇ ಇಲಾಖೆಗಳಿಗೆ ಮುನ್ಸೂಚನೆ ಇಲ್ಲದೆ ದಿಢೀರ್ ಭೇಟಿ ನೀಡುತ್ತಿರುವುದು ಭ್ರಷ್ಟ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಮೊನ್ನೆ ಹರಿಹರ ತಾಲೂಕಿನಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಇವರಿಬ್ಬರ ಸೇವಾ ಕಾರ್ಯ ಮುಂದುವರೆಯಲಿ.
-ಎಚ್.ಎಸ್. ಶಿವಶಂಕರ್
ಮಾಜಿ ಶಾಸಕರು, ಹರಿಹರ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯರು ಜಿಲ್ಲೆಯ ಜನತೆಯಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ್ದಾರೆ. ಇವರಿಬ್ಬರು ಜನರ ಸಮಸ್ಯೆಯನ್ನು ಶಾಂತಚಿತ್ತದಿಂದ ಆಲಿಸಿ ಪರಿಹಾರ ಕೊಳ್ಳುತ್ತಿರುವ ರೀತಿ ಮೆಚ್ಚುವಂಥದ್ದು. ಬಹುದಿನಗಳ ನಂತರ ನಮ್ಮ ಜಿಲ್ಲೆಗೆ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳು ಸಿಕ್ಕಿರುವುದು ನಮ್ಮ ಎಲ್ಲರ ಭಾಗ್ಯ.
-ವಾಗೀಶ ಸ್ವಾಮಿ
ಜಿಲ್ಲಾ ಪಂಚಾಯ್ತಿ ಸದಸ್ಯರು, ಹರಿಹರ, ದಾವಣಗೆರೆ ಜಿಲ್ಲಾ
ವಿಶೇಷ ವರದಿ: ಪ್ರಕಾಶ್ ಮಂದಾರ, ಹರಿಹರ
Get in Touch With Us info@kalpa.news Whatsapp: 9481252093
Discussion about this post