ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಮಾತೃಭೂಮಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವ ಜೈನಧರ್ಮದಲ್ಲಿ ಹಲವು ಸಾಧಕರು ಬೆಳಕಿಗೆ ಬಾರದೇ ಎಲೆಮರೆಯ ಕಾಯಿಯಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಜೈನ ಸಮುದಾಯದ ಓರ್ವ ಸಾಧಕಿಯೇ ನಮ್ಮ ಇಂದಿನ ಲೇಖನದ ಕೇಂದ್ರ ಬಿಂದು.
ಹೌದು… ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಾಯಾ-ವಾಚಾ-ಮನಸಾ ನಿಷ್ಕಲ್ಮಶ ಮನಃಸ್ಥಿತಿಯಿಂದ ಸದ್ದಿಲ್ಲದೆ ಸೇವಾ ಸಾಧನೆ ಮಾಡುತ್ತಿರುವ ಡಾ. ನೀರಜಾರವರು ಬಹುಮುಖ ಪ್ರತಿಭೆಯ ಗಣಿ ಎಂದರೂ ತಪ್ಪಾಗಲಾರದು.
ಈ ಸಾಧಕಿ ತಮ್ಮ ಪರಿಮಿತಿಯಲ್ಲಿ ಎಲ್ಲಾ ಧಾರ್ಮಿಕ ಸಾಮಾಜಿಕ ಕೆಲಸಗಳಿಗೆ ತಮ್ಮಿಂದಾದ ಸಹಕಾರ ಪ್ರೋತ್ಸಾಹ ನೀಡುವ ಇವರು ಜೈನ ಸಮುದಾಯದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವ ಮಹಿಳಾ ಸಾಧಕರಲ್ಲಿ ಇವರೂ ಒಬ್ಬರು.
ಜೈನ ಧಾರ್ಮಿಕ ವಿಚಾರಗಳಲ್ಲಿ ಯಾವ ವಿಷಯವನ್ನು ಕೊಟ್ಟರೂ ನಿರರ್ಗಳವಾಗಿ ಮಾತನಾಡುವ ಇವರು, ಜೈನಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದವರು. ವೃತ್ತಿಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯೂ ಹೌದು. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಮನಃಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಇವರ ತಂದೆ ಡಾ.ಧರಣೇಂದ್ರಯ್ಯ ಹಾಗೂ ತಾಯಿ ಧರ್ಮಕಾರ್ಯಗಳಲ್ಲಿ ಅತ್ಯಂತ ಉನ್ನತ ಮಟ್ಟದ ಕೆಲಸ ಮಾಡಿದ ಶ್ರೀಮತಿ ಕೌಶಲ್ಯ ಧರಣೆಂದ್ರ. ಪತಿ ನಾಗೇಂದ್ರಕುಮಾರ್ ಪತ್ನಿಯ ಎಲ್ಲಾ ಕೆಲಸಗಳಿಗೆ ಬೆಂಗಾವಲಾಗಿ ನಿಲ್ಲುತ್ತಾ ವೈದ್ಯರಾಗಿ ಬೆಂಗಳೂರಿನಲ್ಲಿ ಸ್ವಂತ ಚಿಕಿತ್ಸಾಲಯ ನಿರ್ವಹಿಸುತ್ತಿದ್ದಾರೆ.
ಡಾ. ನೀರಜಾರವರು ಉತ್ತಮ ಸಾಹಿತಿಯೂ ಹೌದು. ಜಿನದತ್ತರಾಯ ಚರಿತ್ರೆ ನೇಮಿನಾಥ ಪುರಾಣ ಎಂಬ ಎರಡು ಶ್ರೇಷ್ಠ ಅರ್ಥಪೂರ್ಣ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಚ್ಚಾಯಿ ಜೀವನ್ ಕಿ ಎಂಬ ಮುನಿಶ್ರೀ ಚಿನ್ಮಯ ಸಾಗರ ಕವನವನ್ನು ಇಂಗ್ಲೀಷ್’ಗೆ ಭಾಷಾಂತರಿಸಿದ್ದಾರೆ. ದಿಗಂಬರ ಹಾಗೂ ದಿಗಂಬರತ್ವ ಕೃತಿಯನ್ನು ಹಿಂದಿ ಇಂಗ್ಲಿಷ್ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಿ ಭಾಷಾಂತರದಲ್ಲೂ ಪರಿಣಿತಿ ಪಡೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಮುನಿಶ್ರೀ ಚಿನ್ಮಯಸಾಗರರ ಹಿಂದಿ ಕೃತಿಗಳನ್ನು ಪ್ರೇಮ ವಿವಾಹ ಮತ್ತು ಪರಿತಾಪಗಳು ಎನ್ನುವುದನ್ನೂ, ಮುನಿಶ್ರೀ ಆದಿತ್ಯಸಾಗರ ಮಹಾರಾಜರ ಝಾಣಜ್ಝಯಣ ಎಂಬ ಹಿಂದಿ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಇವರು ವೈದ್ಯಕೀಯ ಮಾಹಿತಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುದರ ಜೊತೆಗೆ ಇವರ ಆಧ್ಯಾತ್ಮಿಕ ವೈದ್ಯಕೀಯ ಭಾಷಣ ಆಕಾಶವಾಣಿ ಬೆಂಗಳೂರಿನಿಂದ ಬಿತ್ತರಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೂರದರ್ಶನದ ಚಂದನ ವಾಹಿನಿಯಲ್ಲಿ ಇವರ ಉಪನ್ಯಾಸಗಳು ಪ್ರಸಾರಗೊಳ್ಳುದರ ಜೊತೆಗೆ ವಿಮಾನಪುರದ ಭ. ಮಹಾವೀರ ಜಿನಮಂದಿರದ ಮಹಾವೀರ ಸಂಘದ ಸಹಯೋಗದೊಂದಿಗೆ ಧಾರ್ಮಿಕ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಜೈನ ಧರ್ಮದ ಪವಿತ್ರ ಪರ್ವ ದಶಲಕ್ಷಣ ಕಾಯಕ್ರಮಗಳಲ್ಲಿ ರಾಜ್ಯದಾದ್ಯಂತ ನೀಡಿದ ಉಪನ್ಯಾಸದಿಂದ ಬಹಳಷ್ಟು ಮಂದಿ ಪ್ರಭಾವಿತರಾಗಿದ್ದಾರೆ.
ಪಂಚಕಲ್ಯಾಣ ಮಹೋತ್ಸವಗಳಲ್ಲಿ ಇವರು ರಾಜ್ಯದ ವಿವಿಧ ಕಡೆ ಮತ್ತು ವೈನಾಡು,ಶಿಖರಜೀಯಲ್ಲಿ ಉಪನ್ಯಾಸ ನೀಡಿದ್ದು, 2015 ರ ಸೆಪ್ಟೆಂಬರ್’ನಲ್ಲಿ ನಡೆದ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದಷ್ಟೇ ಅಲ್ಲದೆ ಅಲ್ಲೂ ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ.
ವೈದ್ಯಕೀಯ ಸೇವಾ ಕೆಲಸದಲ್ಲೂ ಪತಿ ಡಾ. ನಾಗೇಂದ್ರ ಕುಮಾರ್ ಅವರೊಡನೆ ಅನೇಕ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.
ಭಾರತದ ವಿಶೇಷ ಭೂಮಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಪ್ರಯುಕ್ತವಾಗಿ ನಡೆದ ಜಿನಭಜನಾ ಸ್ಪರ್ಧೆ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯ ಕನ್ವೀನರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನೀರಜಾರವರ ಕೆಲಸಗಳು ಇಲ್ಲಿಗೆ ಮುಗಿದಿಲ್ಲ.ಈಗಾಗಲೇ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಇವರು, ಪ್ರತಿ ರವಿವಾರ ಬೆಳಗ್ಗೆ 7.15 ರಿಂದ 7.45 ರ ವರೆಗೆ ಚಂದನ ಟಿವಿಯಲ್ಲಿ ಬರುವ ರತ್ನತ್ರಯ ಎಂಬ ಧಾರ್ಮಿಕ ಧಾರಾವಾಹಿ ನಿರ್ಮಿಸುತ್ತಿರುವ ಪ್ರಥಮ ಜೈನ ಮಹಿಳಾ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿರುವ ಇವರು ಜೈನ ಧರ್ಮದ ಹೆಮ್ಮೆ.
ಪ್ರತಿಯೊಂದು ಕ್ಷೇತ್ರದಲ್ಲೂ ಆಡಂಬರವಿಲ್ಲದೆ ಸೇವಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವರು, ವೈದ್ಯಕೀಯ, ಧಾರ್ಮಿಕ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ನಿರಂತರಾಗಿ ಸಮರ್ಪಣಾ ಭಾವದಿಂದ ಮಾಡುತ್ತಾ ಬಂದಿರುವುದು ವಿಶೇಷ.
ಸಂಘ ಸಂಸ್ಥೆಗಳಲ್ಲಿ ಇವರು ಮಾಡಿದ ಕೆಲಸಗಳು ಕಡಿಮೆಯೇನಿಲ್ಲ. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಉಪಾಧ್ಯಕ್ಷರಾಗಿ, ಸುಮೇರು ಜೈನ ಫೌಂಡೇಶನ್ ಅದರ ನಿಕಟ ಪೂರ್ವ ಉಪಾಧ್ಯಕ್ಷರಾಗಿ, ಜೈನ ಮಿಲನ್ ಈಸ್ಟ್ ಪೂರ್ವ ಅಧ್ಯಕ್ಷರಾಗಿ, ಕರ್ನಾಟಕ ಜೈನ್ ಅಸೋಸಿಯೇಷನ್’ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಉತ್ತಮ ಕಾರ್ಯ ನಿರ್ವಹಿಸಿ ಎಲ್ಲರ ಪ್ರಶಂಸೆ ಗಳಿಸಿದ್ದಾರೆ. ಉತ್ತಮ ಲೇಖಕಿಯಾದ ಇವರು ಬ್ಭೂ ಮಾತು ಎಂಬ ಆನ್’ಲೈನ್ ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟವಾಗಿ ಮಾಹಿತಿಯ ಕಣಜವಾಗಿವೆ. ಅಂತರ್ಜಾಲದ ಸ್ಪೀಕಿಂಗ್ ಟ್ರೀ ವೆಬ್’ಸೈಟ್’ನಲ್ಲಿ ಬರೆಯುತ್ತಿದ್ದಾರೆ.
ಇವರ ಈ ಎಲ್ಲ ಸೇವೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಅದರಲ್ಲೂ ಪ್ರಮುಖವಾದವು ಕರ್ನಾಟಕ ಲೇಖಕಿಯರ ಸಂಘದ ಉದಯೋನ್ಮುಖ ಕವಿಯಿತ್ರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾ ರತ್ನ ಪ್ರಶಸ್ತಿ, ಬುದ್ಧ ಶಾಂತಿ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಗಳು ಸಂದಿವೆ.
ಡಾ. ನೀರಜಾ ಜೈನಧರ್ಮದ ವಿಶೇಷ ಮಹಿಳಾ ಶಕ್ತಿ ಎಂದರೂ ತಪ್ಪಾಗಲಾರದು. ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಇವರು ಸದಾ ಇನ್ನೊಬ್ಬರ ಕೆಲಸಗಳಿಗೆ ನಿಷ್ಕಲ್ಮಶ ಮನಸ್ಸಿನಿಂದ ಬೆಂಗಾವಲಾಗಿ ನಿಂತು ಸಹಕಾರ ನೀಡುತ್ತಿರುವ ಇವರ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ನೇತೃತ್ವದಲ್ಲಿ ಮೂಡಿಬರುತ್ತಿರುವ ರತ್ನತ್ರಯ ಧಾರಾವಾಹಿ ಸಾವಿರಾರು ಸಂಚಿಕೆಯನ್ನು ದಾಟಲಿ ಎನ್ನುವ ಆಶಯದೊಂದಿಗೆ…
Get in Touch With Us info@kalpa.news Whatsapp: 9481252093
Discussion about this post