ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾನ್ಯ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ ರವರು ಮಂಡಿಸಿರುವ 2026ರ ಕೇಂದ್ರ ಬಜೆಟ್ ದೇಶದ ಭವಿಷ್ಯಕ್ಕೆ ದಿಕ್ಕು ತೋರಿಸುವ, ಅಭಿವೃದ್ಧಿಯ ಸ್ಪಷ್ಟ ದೃಷ್ಟಿಪತ್ರವಾಗಿದೆ ಎಂದು ಮಾನ್ಯ ವಿಧಾನ ಪರಿಷತ್ ಶಾಸಕರು ಡಿ.ಎಸ್.ಅರುಣ್ ಹೇಳಿದರು.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರವು ಪ್ರತೀ ವರ್ಷ ಬಜೆಟ್ ಮಂಡಿಸುವಾಗ ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡು ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಹಾಗೂ ಕೇವಲ ರಾಜಕೀಯ ಉಳಿವಿಗೆ ಸೀಮಿತವಾಗಿದ್ದರೆ, ಕೇಂದ್ರ ಸರ್ಕಾರವು ತಂತ್ರಜ್ಞಾನ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಅಭಿವೃದ್ಧಿಯ ಮೂಲಕ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವ ದೃಢ ಬುನಾದಿಯನ್ನು ಈ ಬಜೆಟ್ ಮೂಲಕ ಹಾಕಿದೆ ಎಂದು ಅಭಿಪ್ರಾಯಪಟ್ಟರು.
ಯುವನಿಧಿಯ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುವ ರಾಜ್ಯ ಸರ್ಕಾರದ ನೀತಿಗಳಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು MSME ವಲಯಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸುಲಭ ಸಾಲ, ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವ ಮೂಲಕ ಯುವಕರಿಗೆ ಭತ್ಯೆಯಲ್ಲ, ಶಾಶ್ವತ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದೆ ಎಂದರು.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ AI ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ಮೂಲಕ ಭಾರತವನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲಿದ್ದು, ಇದು ನಮ್ಮ ರಾಜ್ಯದ ಯುವಶಕ್ತಿಗೆ ಹೊಸ ದಿಕ್ಕು ನೀಡಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು ಸಹ ಹಣವಿಲ್ಲ ಎಂದು ನಿರ್ಲಕ್ಷ ತೋರಿಸುತ್ತಿರುವಾಗ, ಕೇಂದ್ರ ಸರ್ಕಾರವು ಹೈ ಸ್ಪೀಡ್ ರೈಲು ಕಾರಿಡಾರ್ಗಳ ಮೂಲಕ ದೇಶದ ಸಂಪರ್ಕ ಕ್ರಾಂತಿಗೆ ಚಾಲನೆ ನೀಡಿದೆ. ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಯೋಜನೆಗಳು ಕೇವಲ ಸಾರಿಗೆಯಲ್ಲ, ಇವು ಕೈಗಾರಿಕೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ವೇಗವರ್ಧಕಗಳಾಗಿವೆ. ಇದು ಕೇಂದ್ರ ಸರ್ಕಾರದ ವೇಗ, ಪ್ರಮಾಣ ಮತ್ತು ಪರಿಣಾಮಕಾರಿ ಆಡಳಿತಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ಗಳಿಗೆ ಅನುದಾನ ನೀಡದೇ ಗ್ರಾಮೀಣ ಬದುಕನ್ನು ಅಸ್ತವ್ಯಸ್ತಗೊಳಿಸಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದ ಗ್ರಾಮ ಸ್ವರಾಜ್ ದೃಷ್ಟಿಕೋನವೇ ಪಾಠವಾಗಿದೆ. ಹಳ್ಳಿಯ ಕುಶಲಕರ್ಮಿಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು, ರೈತರಿಗೆ ಡ್ರೋನ್ ತಂತ್ರಜ್ಞಾನ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದು ಮಹಾತ್ಮ ಗಾಂಧೀಜಿಯವರ ನಿಜವಾದ ಗ್ರಾಮ ಸ್ವರಾಜ್ಯದ ಕನಸನ್ನು ಮೋದಿಜಿ ಸರ್ಕಾರ ಸಾಕಾರಗೊಳಿಸುತ್ತಿರುವುದಕ್ಕೆ ಉದಾಹರಣೆಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ, ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳ ಔಷಧಿಗಳ ಮೇಲೆ ರಿಯಾಯಿತಿ ಘೋಷಿಸಿರುವುದು ಸಾಮಾನ್ಯ ನಾಗರಿಕರಿಗೆ ಮಹತ್ತರ ಪರಿಹಾರವಾಗಿದ್ದು, ಕರಾವಳಿ ಆರ್ಥಿಕತೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಆಧುನೀಕರಿಸಲು ಘೋಷಿಸಿರುವ ಬೃಹತ್ ಯೋಜನೆಗಳು ಕರ್ನಾಟಕದ ಕರಾವಳಿ ಭಾಗಕ್ಕೆ ಹೊಸ ಚೈತನ್ಯ ನೀಡಲಿವೆ ಎಂದು ಅಭಿಪ್ರಾಯಪಟ್ಟರು.
ಒಟ್ಟಾರೆಯಾಗಿ, ಇದು ಕೇವಲ ಬಜೆಟ್ ಅಲ್ಲ, ಭಾರತೀಯರ ಬದುಕನ್ನು ಬದಲಿಸುವ ವಿಕಸಿತ ಭಾರತದ ಸಂಕಲ್ಪ ಪತ್ರವಾಗಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















