ತೀರ್ಥಹಳ್ಳಿ: ಮಲೆನಾಡಿನ ಹಸಿರನ್ನು ಹಾಸಿ ಹೊದ್ದುಕೊಂಡಿರುವ ತೀರ್ಥಹಳ್ಳಿ ತಾಲೂಕು ಧಾರ್ಮಿಕವಾಗಿಯೂ ಸಹ ಐತಿಹ್ಯವನ್ನು ಹೊಂದಿರುವ ಸ್ಥಳ. ಇಂತಹ ಪ್ರದೇಶದಲ್ಲಿ ನೆಲೆಸಿರುವ ಶ್ರೀ ನಾಗಯಕ್ಷೆ ದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಉದ್ದರಿಸುವ ತಾಯಿಯಾಗಿ ನಿಂತಿದ್ದಾಳೆ.
ಹೌದು… ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರೆ ಅಂಚೆ ವ್ಯಾಪ್ತಿಯ ಹೇಗಲತಿ ಗ್ರಾಮದಲ್ಲಿ ಶ್ರೀ ನಾಗಯಕ್ಷೆ ದೇವಾಲಯವಿದೆ. ಇಲ್ಲಿರುವ ನಾಗಯಕ್ಷೆ ದೇವಿಯು ಕಲ್ಪನ ಅಮ್ಮನವರ ಮೂಲಕ ಪ್ರತಿ ಹುಣ್ಣಿಮೆಯಂದು ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆದು, ಸಮಸ್ಯೆಗಳಿಗೆ ಪರಿಹಾರ ಹಾಗೂ ಪ್ರಸಾದ ನೀಡುತ್ತಾ ಬಂದಿದ್ದಾರೆ.
ವಿಶೇಷತೆ:
ಶ್ರೀ ನಾಗಯಕ್ಷೆ ದೇವಸ್ಥಾನ, ಹೇಗಲತ್ತಿ ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ಧಿಯಾಗಿದ್ದು, ವಾಸುಕೀ ಸನ್ನಿಹಿತ ಶ್ರೀನಾಗ ಯಕ್ಷೆ ದೇವರು ಭಕ್ತಾದಿಗಳ ಕಾಮನೆಗಳ ಪ್ರದಾಯಕನಾಗಿ, ಈ ಕ್ಷೇತ್ರದ ಅಧಿದೇವತೆಯಾಗಿ ನೆಲೆಸಿರುತ್ತಾನೆ. ಈ ಕ್ಷೇತ್ರವನ್ನು ಗುಪ್ತ ಕ್ಷೇತ್ರವೆಂಬುವುದಾಗಿಯೂ ಕರೆಯುತ್ತಾರೆ.
ಮೃತ್ತಿಕಾ ಅರಿಶಿಣ ತೀರ್ಥ ಪ್ರಸಾದ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ಪವಿತ್ರ ಅಭಿಷೇಕ ತೀರ್ಥ ಸ್ನಾನದಿಂದ ಭಯಾನಕ ರೋಗಗಳೂ, ಚರ್ಮ ವ್ಯಾಧಿಗಳೂ ಶಮನವಾಗುವುದೆಂಬುದು ಭಕ್ತರ ಅಪಾರ ನಂಬಿಕೆ. ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ವಿಶೇಷ ದಿನದಂದು ಅನ್ನ ಸಂತರ್ಪಣೆ ನಡೆಯುತ್ತಿದೆ.
ಸರ್ಪದೋಷದಿಂದ ಬರುವಂತಹ ಸಂತಾನ ಹೀನತೆ, ಚರ್ಮ ವ್ಯಾಧಿ, ದೃಷ್ಠಿ ಮಾಂಧ್ಯತೆ, ಭೂಮಿ ದೋಷ ಮೊದಲಾದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಅಶ್ಲೇಷ ಬಲಿ, ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸಿ ಕೃತಾರ್ಥರಾಗುತ್ತಾರೆ.
ಹಿನ್ನೆಲೆ:
ಶ್ರೀ ಶಾರದಮ್ಮನವರು ಹೇಗಲತ್ತಿ ಊರಿನಲ್ಲಿ ನೆಲೆಸಿದ ಸಮಯವದು. ಸುಮಾರು 45 ವರ್ಷಗಳ ಹಿಂದೆ ಇವರ ಮಗುವಿನ ಮನಸು, ಜನಿಸಿದ ಸಮಯ ಹಾಗೂ ಭಕ್ತಿಗೆ ಮೆಚ್ಚಿ ಒಲಿದ ದೇವರೆ ಶ್ರೀ ನಾಗಯಕ್ಷೆ, ಇವರೇ ಮೂಲ ಪಾತ್ರಿಗಳು. ಈಗ ಇವರ ಮಗಳಾದ ಕಲ್ಪನ ಅವರು ಜನಿಸಿದ್ದು, ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಯ ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನ ಆವರಣದಲ್ಲಿ 1984ರ ಎಪ್ರಿಲ್ 15ರಂದು ಜನಿಸಿದರು. ಅಮ್ಮನವರ ಸೇವೆ ಮಾಡಲೆಂದೇ ಜನಿಸಿದ ಇವರು ಮುಂದೆ ಅಮ್ಮನ ಶಕ್ತಿಯನ್ನು ಪಡೆದು ಭಕ್ತರ ನೋವು ನಲಿವುಗಳಲ್ಲಿ ತಮ್ಮ ಜೀವನ ಭಕ್ತರಿಗೆ ಮುಡಿಪಾಗಿಟ್ಟಿದ್ದಾರೆ.
(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9483474343)
-ಸಂತೋಷ್
Discussion about this post