ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪಾದರಾಯನಪುರಕ್ಕೆ ಕ್ವಾರಂಟೈನ್ ಪೊಲೀಸರು ಮಾಡಲು ರಾತ್ರಿ ವೇಳೆ ಏಕೆ ಹೋಗಿದ್ದರು. ಬದಲಾಗಿ ಬೆಳಗಿನ ವೇಳೆ ಹೋಗಬೇಕಿತ್ತು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿ ಸರಿಯಲ್ಲ. ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಇಲ್ಲಿನ ಜನರಲ್ಲಿ ಭಯವಿದ್ದು, ಒಟ್ಟಿಗೆ 57 ಮಂದಿಯನ್ನು ಕರೆದುಕೊಂಡು ಹೋಗಲು ಪೊಲೀಸರು ಮುಂದಾದಾಗ ಅವರು ಈ ರೀತಿ ನಡೆದುಕೊಂಡಿದ್ದಾರೆ. ಅದರೆ ಅದು ಸರಿಯಲ್ಲ ಎಂದರು.
ರಾತ್ರಿ ವೇಳೆ ಹೋಗಬೇಡಿ, ಹಗಲಿನಲ್ಲಿ ಕ್ವಾರಂಟೈನ್ ಪ್ರಕ್ರಿಯೆ ಮಾಡಿ ಎಂದು ನಾನು ಈ ಹಿಂದೆಯೇ ಅಧಿಕಾರಿಗಳಿಗೆ ಹೇಳಿದ್ದೆ. ಶಂಕಿತರನ್ನು ಹಗಲು ವೇಳೆಯಲ್ಲಿ ಕರೆದುಕೊಂಡು ಹೋಗಿ, ರಾತ್ರಿ ವೇಳೆ ಬೇಡ ಎಂದು ಕಮಿಷನರ್’ಗೆ ಹೇಳಿದ್ದೆ. ಹೀಗಿದ್ದೂ, ರಾತ್ರಿ ವೇಳೆ ಹೋಗುವ ಅಗತ್ಯವೇನಿತ್ತು. ರಾತ್ರಿ ಹೋಗಿದ್ದರಿಂದ ಜನರು ಆತಂಕಕ್ಕೊಳಗಾದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದು, ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
Get in Touch With Us info@kalpa.news Whatsapp: 9481252093













