ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಮ್ಮಾ ಎಂಬ ಆ ಎರಡು ಅಕ್ಷರಕ್ಕೆ ಎಷ್ಟೊಂದು ಶಕ್ತಿ ಇದೆ ಅಲ್ವಾ… ಅಮ್ಮಾ ಎಂದರೆ ಪ್ರೀತಿಯ ಕಡಲು, ಮಮತೆಯ ಗಣಿ, ವಾತ್ಸಲ್ಯದ ತೊಟ್ಟಿಲು, ಜೀವನದ ದಿ ಬೆಸ್ಟ್ ಗಿಫ್ಟ್. ಅಮ್ಮನನ್ನು ವರ್ಣಿಸಲು ಯಾವ ಪದಮಾಣಿಕ್ಯದಿಂದಲೂ ಸಾಧ್ಯವಿಲ್ಲ. ತಾಯಿಯ ಪ್ರೀತಿಯನ್ನು ಅಳತೆ ಮಾಡಲು ಯಾವ ಮಾಪಕದಿಂದಲೂ ಆಗದು. ಅಮ್ಮನ ಪ್ರೀತಿಗೆ ಧನ್ಯವಾದ ಹೇಳಲು ದಿನದ ಅಗತ್ಯವಿಲ್ಲ. ಆದರೆ ತಾಯಿಂದಿರಿಗೆ ಎಂದೇ ಒಂದು ವಿಶೇಷ ದಿನವಿದೆ. ಅದುವೇ ವಿಶ್ವ ಅಮ್ಮಂದಿರ ದಿನ.
ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂಬುದಾಗಿ ಆಚರಿಸಲಾಗುತ್ತದೆ. ತಾಯಂದಿರ ದಿನವು ಮೊದಲು 1908ರಲ್ಲಿ ಅಮೆರಿಕಾದಲ್ಲಿ ಆರಂಭವಾಯಿತು. ಅಮೆರಿಕಾದ ಶಾಂತಿ ಕಾರ್ಯಕರ್ತೆಯಾಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು. ಆದರೆ ಅವರ ತಾಯಿ 1905ರಲ್ಲಿ ಮರಣ ಹೊಂದಿದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಅನಾ, ಮೇ ತಿಂಗಳ ಎರಡನೇ ಭಾನುವಾರವನ್ನು ಆಯ್ದುಕೊಂಡರು. ಬಳಿಕ ಆ ದಿನವನ್ನು ತಾಯಂದಿರ ದಿನವಾಗಿ ಆಚರಣೆ ಮಾಡಲು ಶುರು ಮಾಡಿದರು.
ಮೇ 9, 1914ರಂದು ಅಮೆರಿಕಾದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ ಎರಡನೇ ವಾರವನ್ನು ತಾಯಂದಿರ ದಿನವಾಗಿ ಆಚರಿಸಬೇಕು ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಜಾರಿಗೆ ಬಂದ ನಂತರ ಅಮೆರಿಕಾ ರಾಷ್ಟ್ರದಾದ್ಯಂತ ತಾಯಂದಿರ ದಿನವನ್ನು ಆಚರಣೆ ಮಾಡಲಾಯಿತು. ನಂತರದಲ್ಲಿ ಭಾರತ ಸೇರಿದಂತೆ ಇನ್ನಿತರ ಹಲವಾರು ರಾಷ್ಟ್ರಗಳು ತಾಯಂದಿರ ದಿನವನ್ನು ಆಚರಿಸಲು ಮುಂದಾದವು.
ತಾಯಿಗೆ ನಮನ ಸಲ್ಲಿಸಲು ಯಾವ ದಿನದ ಅಗತ್ಯವೂ ಇಲ್ಲ. ಆದರೆ, ತಾಯಿಗಾಗಿ ಒಂದು ದಿನವನ್ನು ಮೀಸಲಿಟ್ಟು ತಾಯಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಗುತ್ತದೆ. ಲಂಡನ್ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಈ ವರ್ಷ ಭಾರತದಲ್ಲಿ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಿ ತಾಯಂದಿರಿಗೆ ಗೌರವ ಸಲ್ಲಿಸಲಾಗುತ್ತದೆ.
ತಾಯಿಗೆ ಅದೆಷ್ಟೋ ಆಸೆಗಳಿರುತ್ತವೆ. ಆದರೆ ಆಕೆ ಅವನ್ನೆಲ್ಲಾ ಬದಿಗಿಟ್ಟು ಮಕ್ಕಳೇ ಸರ್ವಸ್ವ ಎಂದು ಬದುಕುತ್ತಾಳೆ. ಒಳ್ಳೆಯ ಮನಸ್ಸಿನಿಂದ ಒಬ್ಬ ಸ್ನೇಹಿತೆಯಾಗಿ, ಶಿಕ್ಷಕಿಯಾಗಿ, ಎಲ್ಲಾ ರೀತಿಯಲ್ಲೂ ತನ್ನ ಮಕ್ಕಳ ಮನದಲ್ಲಿ ಪ್ರೀತಿ ಸೇರಿದಂತೆ ಉದಾತ್ತ ಗುಣಗಳನ್ನು ಬೆಳೆಸುತ್ತಾಳೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ತನ್ನದೇ ಆದ ಅಸ್ಥಿತ್ವಕ್ಕಾಗಿ ಹೋರಾಟ ಮಾಡುತ್ತಾರೆ. ಇದರ ನಡುವೆ ತನ್ನ ತಂದೆ ತಾಯಿಯನ್ನೇ ಮರೆತು ಬಿಡುತ್ತಾರೆ. ಹೆತ್ತವರನ್ನು ಕಡೆಗಣಿಸಿ ಬಿಡುತ್ತಾರೆ. ಕೊನೆಗೆ ವೃದ್ಧಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ. ತಾಯಿ ಜೀವ ಎಲ್ಲವನ್ನೂ ಕ್ಷಮಿಸಿ ಬಿಡುತ್ತಾಳೆ. ಅದಕ್ಕೆ ಕಾರಣವಿಷ್ಟೇ ತನ್ನ ಕರುಳಿನ ಕುಡಿ ಎಂಬುದು.
ವಿದ್ಯಾವಂತರಾದ ನಾವು ಏಕಿಷ್ಟು ಕ್ರೂರಿಗಳಾಗುತ್ತಿದ್ದೇವೆ…? ಎಂಬುದ ಒಂದು ಕ್ಷಣ ಯೋಚಿಸಿ. ಇಂದು ಹೆಚ್ಚುತ್ತಿರುವ ವೃದ್ಧಾಶ್ರಮಗಳಿಗೆ ಯಾರು ಕಾರಣ ಎಂಬುದನ್ನು ಆಲೋಚಿಸಿ. ಜನ್ಮ ಮಾತ್ರವಲ್ಲ ಬದುಕನ್ನೇ ನೀಡಿದ ತಂದೆ ತಾಯಿಯನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ? ಇಂದಿನ ಚಿಗುರೆಲೆ ನಾಳೆಯ ಹಣ್ಣೆಲೆ ಅಲ್ಲವೇ… ನಮಗೂ ನಾಳೆ ಅಂಥದ್ದೇ ಸ್ಥಿತಿ ಬಾರದು ಎಂದೇನಿಲ್ಲ. ಹಾಗಾಗಿ ತಂದೆ ತಾಯಿಯನ್ನು ಕಡೆಗಣಿಸದೆ ಪ್ರೀತಿಯಿಂದ ಒಗ್ಗೂಡಿ ಬಾಳಬೇಕು. ‘‘ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ’’ ಎಂಬ ಗಾದೆ ಮಾತೇ ಇದೆ. ದೊರೆತ ನಿಸ್ವಾರ್ಥ ಬಂಧುವಾದ ತಾಯಿಯ ಪ್ರೀತಿಗೆ ಚಿರಋಣಿಗಳಾಗಿರೋಣ.
ನಮ್ಮ ರಾಷ್ಟ್ರವನ್ನು ಕಾಯುತ್ತಿರುವ ಕೆಚ್ಚೆದೆಯ ವೀರ ಯೋಧರ ತಾಯಂದಿರಿಗೆ, ಇಂದಿನ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧ ತಮ್ಮ ಮಕ್ಕಳನ್ನು ದೂರವಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ತಾಯಂದಿರಿಗೆ, ಅದೇ ರೀತಿ ಮಕ್ಕಳೇ ಸರ್ವಸ್ವ ಎಂದು ಬದುಕುತ್ತಿರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು
Get in Touch With Us info@kalpa.news Whatsapp: 9481252093
Discussion about this post