ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ತಪ್ಪಿಸಲು ಗಾಂಧಿ ಬಜಾರ್ ಹಾಗೂ ದುರ್ಗಿಗುಡಿ ರಸ್ತೆಗಳಲ್ಲಿ ಒಂದು ಬದಿಯ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಸೂಡಾ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಬಳಿಕ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಲಾಕ್ಡೌನ್ ಸಡಿಲಿಕೆಯಾಗಿದೆ ಎಂದ ತಕ್ಷಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿರುವುದು ಅಪಾಯಕಾರಿ. ಹಸಿರು ವಲಯದಲ್ಲಿದ್ದ ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಇದೀಗ 30ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಒಂದು ಪಾಸಿಟಿವ್ ಪ್ರಕರಣ ವರದಿಯಾದರೆ ಇಡೀ ನಗರದಲ್ಲಿ ಪುನಃ ಲಾಕ್ಡೌನ್ ಕಠಿಣಗೊಳ್ಳಲಿದೆ. ಜನರು ಇದನ್ನು ಅರಿತುಕೊಂಡು ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ವನ್ವೇ ಪಾಸ್
ಹೊರ ಜಿಲ್ಲೆಗಳಿಗೆ ತೆರಳುವ ಬಯಸುವವರಿಗೆ ವನ್ ವೇ ಪಾಸ್ ನೀಡಲಾಗುವುದು. ಇದೇ ರೀತಿ ಬೇರೆ ಕಡೆ ಸಿಲುಕಿರುವವರನ್ನು ಹೋಗಿ ಕರೆದುಕೊಂಡು ಬರಲು ಸಹ ಪಾಸ್ ನೀಡಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರವಲ್ಲದೆ, ತಾಲೂಕುಗಳಲ್ಲಿ ತಹಶೀಲ್ದಾರ್ಗಳು ಸಹ ಪಾಸ್ ನೀಡಲಿದ್ದಾರೆ. ಜನರು ಗೊಂದಲಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಕಠಿಣ ಕ್ರಮ
ಬೇರೆ ಜಿಲ್ಲೆಗಳಿಂದ ಪಾಸ್ ಇಲ್ಲದೆ ಅನಧಿಕೃತವಾಗಿ ಅಡ್ಡದಾರಿಯಲ್ಲಿ ಜಿಲ್ಲೆ ಪ್ರವೇಶಿಸುವವರ ಮೇಲೆ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಅಂತಹವರ ಮೇಲೆ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳಿಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಅವಕಾಶ ಇದೆ. ತಾಲೂಕು ಕೇಂದ್ರಗಳಿಗೆ ಕೆಎಸ್ಆರ್ಟಿಸಿ ಬಸ್ ಬೆಳಿಗ್ಗೆ 7ರಿಂದ 10 ಹಾಗೂ ಸಂಜೆ 4ರಿಂದ 7ರವರೆಗೆ ಸಂಚರಿಸಲಿದೆ. ಸೆಲೂನ್, ಬ್ಯೂಟಿಪಾರ್ಲರ್ಗಳಿಗೂ ತೆರೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
Get in Touch With Us info@kalpa.news Whatsapp: 9481252093
Discussion about this post