ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದೆಡೆ ಕತ್ತಲೆಯ ಬದುಕಿಗೆ ಹೊಸ ಬೆಳಕನ್ನು ನೀಡಿ ಪೊರೆಯುವ ಕುತ್ಯಾರ್ ಸೋಮನಾಥೇಶ್ವರ ದೇವರ ಕ್ಷೇತ್ರ, ಇನ್ನೊಂದೆಡೆ ಸದಾ ಭಕ್ತರ ಮೊರೆಯ ಆಲಿಸುವ ಸುರ್ಯ ಸದಾಶಿವ ದೇವರ ಸಾನಿಧ್ಯ, ಇವೆಲ್ಲಕ್ಕೂ ಕಲಶವಿತ್ತಂತೆ ಧರ್ಮದ ಬೀಡು ಧರ್ಮಸ್ಥಳ, ಹಾಗೆಯೇ ಕಾರಣೀಕದ ಕಾಜೂರು ಮಸೀದಿ, ದಿವ್ಯಾನುಭೂತಿಯನ್ನು ನೀಡುವ ಬಾಷೆಲ್ ಮಿಷನ್ ನಿರ್ಮಾಣದ ದಿವ್ಯಾಶೀರ್ವಾದ ದೇವಾಲಯ. ಈ ರೀತಿ ಸರ್ವ ಧರ್ಮದ ಸಮನ್ವಯತೆಯ ಭವ್ಯ ಪರಂಪರೆಯನ್ನು ತನ್ನ ಒಡಲೊಳಗೆ ತುಂಬಿ ತುಳುನಾಡಿನಲ್ಲಿ ತಲೆಯೆತ್ತಿ ಮೆರೆಯುತ್ತಿರುವ ತಾಲೂಕು ಬೆಳ್ತಂಗಡಿ.
ಇಂತಹ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿರುವ ಗಡಾಯಿ ಕಲ್ಲಿನ ಸನಿಹದ ಪುಟ್ಟ ಗ್ರಾಮವೇ ನಡ, ಈ ಗ್ರಾಮದ ನೆಲ್ಲಿಗುಡ್ಡೆ ಎಂಬ ಊರಲ್ಲಿ ಜನಪದ ಕಲಾವಿದ ಹಾಗೂ ನಾಟಿ ವೈದ್ಯರಾದ ಶ್ರೀ ಕುಂಡ ಮತ್ತು ಶ್ರೀಮತಿ ಅಪ್ಪಿ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೆಯವನಾಗಿ 1976 ರ ಡಿಸೆಂಬರ್ 30 ರಂದು ಮುಂದೆ ಯಕ್ಷ ಲೋಕದ ಅತ್ಯದ್ಭುತ ಹಾಸ್ಯಗಾರರಾಗಿ ಯಕ್ಷ ಲೋಕದಿ ಮೆರೆವ ಸುಂದರ ಬಂಗಾಡಿಯವರ ಜನನ.
ಎಳವೆಯಿಂದಲೇ ಯಕ್ಷಗಾನದ ಅಪ್ಪಟ ಅಭಿಮಾನಿಯಾದ ತನ್ನ ತಂದೆಯ ಜೊತೆ ಸನಿಹದಲ್ಲಿ ನಡೆಯುತ್ತಿದ್ದ ಎಲ್ಲಾ ಯಕ್ಷಗಾನ ಪ್ರದರ್ಶನವನ್ನು ರಾತ್ರಿಯಿಂದ ಬೆಳಗಿನವರೆಗೆ ನೋಡಿ, ಮನೆಗೆ ಬಂದು ಅದೇ ರೀತಿ ಕುಣಿದು ಆಟವಾಡುತ್ತಾ ಇದ್ದ ಸುಂದರ ಬಂಗಾಡಿಯವರಿಗೆ ಯಕ್ಷಗಾನದ ಗೀಳು ತಲೆಗೆ ಹತ್ತಿದರೂ, ವಿದ್ಯಾಭ್ಯಾಸ ತಲೆಗೆ ಹತ್ತಲೇ ಇಲ್ಲ. ಕ್ರಮೇಣ ಎಂಟನೆಯ ತರಗತಿಗೆ ತನ್ನ ಶಿಕ್ಷಣವನ್ನು ಮೊಟಕುಗೊಳಿಸಿ ಹೊಟ್ಟೆ ಪಾಡಿಗಾಗಿ ಹಲವೆಡೆ ಕಷ್ಟಪಟ್ಟು ದುಡಿದರು. ಬಂಗಾಡಿಯವರ ಹೊಟ್ಟೆ ತುಂಬಿದ್ರು ಮನಸು ಏಕೋ ತುಂಬಲೇ ಇಲ್ಲ.
ನಿರಂತರ ನೋಡುತ್ತಿದ್ದ ಯಕ್ಷಗಾನ ಪಾತ್ರಗಳು, ಕೇಳುತ್ತಿದ್ದ ಅಮ್ಮಣ್ಣಾಯರ ಭಾಗವತಿಕೆ ಪದಗಳು ಯಕ್ಷರಂಗದತ್ತ ಇವರ ಚಿತ್ತವನ್ನು ಇನ್ನಷ್ಟೂ ಗಾಢವಾಗಿ ಸೆಳೆಯಿತು. ಪರಿಣಾಮವಾಗಿ ಭಾಸ್ಕರ ಬಂಗಾಡಿ ಎಂಬ ಯಕ್ಷ ಗುರುಗಳಲ್ಲಿ ತನ್ನ ಯಕ್ಷಾಭ್ಯಾಸವನ್ನು ಆರಂಭಿಸಿದರು.
ಮುಂದೆ ಕದ್ರಿ ಮೇಳದಲ್ಲಿ ನಿತ್ಯ ವೇಷ, ಮುಖ್ಯ ಸ್ತ್ರೀ ವೇಷ ಮಾಡುತ್ತಾ ತನ್ನ ಯಕ್ಷ ಕಲಾ ಜೀವನವನ್ನು ಆರಂಬಿಸಿ ನಾಲ್ಕು ವರ್ಷಗಳ ಮೇಳ ತಿರುಗಾಟವನ್ನು ಮಾಡಿದರು. ನಂತರ ಕುಂಟಾರು ಮೇಳದಲ್ಲಿ 5 ವರ್ಷಗಳ ಕಾಲ ಪುಂಡು ವೇಷ ಹಾಗೂ ಸ್ತ್ರೀ ವೇಷ ಕಲಾವಿದನಾಗಿ ಕಲಾ ಸೇವೆ ನಡೆಸುತ್ತಿದ್ದಾಗ, ನಡೆದ ಒಂದು ಅನಿರೀಕ್ಷಿತ ಘಟನೆ ಇವರ ಯಕ್ಷ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಆ ಕಾಲದಲ್ಲಿ ಕುಂಟಾರು ಮೇಳದಲ್ಲಿ ಯಶಸ್ವೀ ಪ್ರದರ್ಶನಗೊಳ್ಳುತ್ತಿದ್ದ ರವಿ ಕುಮಾರ್ ಸುರತ್ಕಲ್ ವಿರಚಿತ ನಾಗ ತಂಬಿಲ್ ಪ್ರಸಂಗ ಮೆರೆಯುತ್ತಿದ್ದ ಸಮಯ, ಈ ಪ್ರಸಂಗದ ಪ್ರಧಾನ ಹಾಸ್ಯ ಪಾತ್ರವಾದ ನಂಜುಂಡ ಪಾತ್ರಧಾರಿ ಕಡಬ ದಿನೇಶ್ ರೈ ಇವರ ಗೈರು ಹಾಜರಿಯಲ್ಲಿ ಆ ಪಾತ್ರ ನಿರ್ವಹಣೆಯ ಜವಬ್ದಾರಿಯು ಸುಂದರ್ ಬಂಗಾಡಿಯವರ ಪಾಲಿಗೆ ಒದಗಿ ಬರುತ್ತದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತನ್ನ ಹಾಸ್ಯದ ಹೊನಲಿನ ಮೂಲಕ ಸೇರಿದ ಅಪಾರ ಕಲಾ ಪ್ರೇಕ್ಷಕರನ್ನು ನಗೆಯ ಕಡಲಲ್ಲಿ ತೇಲಿಸಿದ ಇವರ ಹಾಸ್ಯ ಪ್ರಸ್ತುತಿಗೆ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರು ಮೆಚ್ಚಿ, ಮುಂದೆ ಹಾಸ್ಯ ಕಲಾವಿದರ ಗೈರು ಹಾಜರಿಯಲ್ಲಿ ಹಾಸ್ಯ ಪಾತ್ರಗಳನ್ನು ಮಾಡಲು ಬಂಗಾಡಿಯವರನ್ನು ಪ್ರೇರೇಪಿಸಿದರು.
ಆದರೆ ಇವರ ಹಾಸ್ಯಕ್ಕೆ ಹೊಸ ದಿಕ್ಕು ಸಿಕ್ಕಿದ್ದು ಯಕ್ಷ ರಂಗದ ಅಮೋಘ, ಅದ್ವಿತೀಯ ಕಲಾವಿದ ಡಿ. ಮನೋಹರ್ ಕುಮಾರ್ ಇವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ. ಇವರೊಂದಿಗೆ ಮಂಗಳಾದೇವಿ ಮೇಳದಲ್ಲಿ ನಡೆಸಿದ 4 ವರ್ಷದ ತಿರುಗಾಟ ಇವರೊಳಗಿನ ಹಾಸ್ಯ ಸಾಮ್ರಾಟನನ್ನು ಯಕ್ಷ ಲೋಕಕ್ಕೆ ಪರಿಚಯಿಸಿತು. ಜೊತೆಗೆ ಯಕ್ಷಗಾನ ಕಲಾವಿದರಾದ ವಾಮನ ಕುಮಾರ್ ವೇಣೂರು ಇವರ ಬೆಂಬಲವೂ ಬಂಗಾಡಿಯವರಿಗೆ ದೊರೆಯಿತು.
ಹಲವು ಪಾತ್ರಗಳ ಮೂಲಕ ಯಕ್ಷಗಾನ ಲೋಕದಲ್ಲಿ ದುಡಿಯುತ್ತಿದ ಸುಂದರ ಬಂಗಾಡಿಯವರ ಪಾಲಿಗೆ ಯಕ್ಷ ರಂಗದ ಸುವರ್ಣ ಯುಗ ಆರಂಭವಾದದ್ದು ಬಪ್ಪನಾಡು ಮೇಳದಲ್ಲಿ ಹಾಸ್ಯಗಾರರಾಗಿ ಮಾಡಿದ 4 ವರ್ಷದ ತಿರುಗಾಟ. ಆ ಸಂದರ್ಭದಲ್ಲಿ ಬನತ ಬಂರ್ಗಾ ಪ್ರಸಂಗದ ಇವರ ನರಸಿಂಹಪಾತ್ರದ ಹಾಸ್ಯವನ್ನು ಕಂಡು ಕಲಾಭಿಮಾನಿಗಳು ಬಿದ್ದು ಬಿದ್ದು ನಗುತ್ತಿದ್ದದ್ದು, ಇವರ ಕಲಾ ಬದುಕಿನ ಒಂದು ಅತ್ಯಪೂರ್ವ ದಿನಗಳು, ಹಾಗೆಯೆ ಇವರಿಗೆ ಅಸಂಖ್ಯಾತ ಸಂಖ್ಯೆಯಲ್ಲಿ ಅಭಿಮಾನಿಗಳ ಮಹಾ ಪೂರವನ್ನೆ ನೀಡಿದ ಅಭೂತಪೂರ್ವ ಕ್ಷಣಗಳು.
ಪ್ರಸ್ತುತ ನಾಲ್ಕು ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಸುಂದರ ಬಂಗಾಡಿಯವರ ಮಲ್ಲಿಗೆ-ಸಂಪಿಗೆ ಪ್ರಸಂಗದ ಮೂರ್ತಿ, ಬನತ ಬಂಗಾರ್ ಪ್ರಸಂಗದ ನರಸಿಂಹ, ನಾಗತಂಬಿಲದ ನಂಜುಂಡ, ಪುಣ್ಣಮೆದ ಪೊಣ್ಣು ಪ್ರಸಂಗದ ಪಿಲಿ ಪುರುಷೆ, ಭಗವತಿ ಮಹಾತ್ಮೆಯ ಅಣ್ಣಯ್ಯ ಬೆಳ್ಚಡ, ರಂಗಸ್ಥಳ ಪ್ರಸಂಗದ ಬಾಬೆ ದಂತಹ ಹಾಸ್ಯ ಪಾತ್ರಗಳು ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿತು.
ಇದೇ ಸಂದರ್ಭದಲ್ಲಿ ರಂಗಭೂಮಿಯಲ್ಲೂ ತನ್ನ ಹಾಸ್ಯ ಸಾಮರ್ಥ್ಯವನ್ನು ಪ್ರದರ್ಶಿಸಿದರು. ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಲೈಫ್ ಕೊರ್ಪರ ನಾಟಕದ ನೈಂಟಿ ನಾರಾಯಣ ಪಾತ್ರ ಅದೇ ರೀತಿ ಒಯಿಕ್ಲ ಕಾಸ್ ಬೋಡ್ ನಾಟಕದ ಕಾಂತುನ ಪಾತ್ರ ಜನಮೆಚ್ಚುಗೆಯನ್ನು ಪಡೆಯಿತು.
ಸುಂದರ ಬಂಗಾಡಿಯವರ ಹುಟ್ಟಿದ ಊರು ನಡ ಗ್ರಾಮದ ಮಂಜೊಟ್ಟಿ ಯಾದರೂ ತನ್ನ ತಾತ, ತಂದೆ ಹಾಗೂ ಯಕ್ಷ ಗುರುಗಳಾದ ಭಾಸ್ಕರ್ ಬಂಗಾಡಿಯವರು ಹುಟ್ಟಿ ಬೆಳೆದ ಬಂಗಾಡಿ ಊರಿನ ಹೆಸರನ್ನು ಅವರ ನೆನಪಿಗಾಗಿ ತನ್ನ ಹೆಸರಿನೊಂದಿಗೆ ಸೇರಿಸಿ ಆ ಮೂಲಕ ತನ್ನ ಗುರು ಹಿರಿಯರಿಗೆ ಗೌರವವನ್ನು ಸಲ್ಲಿಸಿದ್ದಾರೆ.
ತನ್ನ ಯಕ್ಷ ಜೀವನದ ಸಾಧನೆಗೆ ಕೊಡುಗೆ ನೀಡಿದ ದಿ. ಗಣೇಶ್ ಕುಂದರ್ ಕೊಳಂಬೆ, ಅರುವ ಕೊರಗಪ್ಪ ರೈ, ಡಿ. ಮನೋಹರ್ ಕುಮಾರ್, ಸರಪಾಡಿ ಅಶೋಕ್ ಶೆಟ್ಟಿ ಇವರನ್ನು ಸದಾ ಸ್ಮರಿಸುವ ಸುಂದರ ಬಂಗಾಡಿಯವರ, ಈ ಎಲ್ಲಾ ಕಲಾಸಾಧನೆಯನ್ನು ಗುರುತಿಸಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಲಾಯಿಲ, ವ್ಯಾಘ್ರ ಚಾಮುಂಡೇಶ್ವರಿ ಸ್ನೇಹ ಬಳಗ, ಕುರಿಯಾಳ ತ್ರಿಶೂಲ್ ಫ್ರೆಂಡ್ಸ್, ಸರ್ಕಲ್ ಶಸಿಗೋಳಿ ಯಕ್ಷ ಮಿತ್ರರು, ಕೊಳ ಹನುಮಾನ್ ಫ್ರೆಂಡ್ಸ್ ಕ್ಲಬ್ ವಾಂತಿಜ್ಜಾಲ್ ಹೀಗೆ ಹತ್ತು ಹಲವು ಕಡೆಯ ಸಂಘ ಸಂಸ್ಥೆಗಳ್ು ಸನ್ಮಾನಿಸಿ ಗೌರವಿಸಿದೆ.
22 ವರ್ಷದ ಸಾರ್ಥಕತೆಯ ಯಕ್ಷಗಾನ ತಿರುಗಾಟವನ್ನು ಪೂರೈಸಿ, ತನ್ನ ಮಡದಿಯಾದ ಶ್ರೀಮತಿ ಜಯಂತಿ ಯವರೊಂದಿಗೆ ಸುಖ ಸಂತೃಪ್ತಿಯ ವೈವಾಹಿಕ ಜೀವನವನ್ನು ಮಾಡುತ್ತಾ, ತನ್ನ ಕಲಾಜೀವನದ ಯಶಸ್ವೀ ಪಥದಲ್ಲಿ ಸಾಗುತ್ತಿರುವ ನಮ್ಮ ಹಾಸ್ಯ ಸಾಮ್ರಾಟ, ಹಾಸ್ಯದರಸು ಸುಂದರ ಬಂಗಾಡಿ ಇವರ ಮುಂದಿನ ಜೀವನವು ಇನ್ನಷ್ಟೂ ಉತ್ತುಂಗಕ್ಕೆ ಏರಲಿ, ಮೆರೆಯಲಿ ಎಂದು ಹಾರೈಸುತ್ತೇನೆ.
Get In Touch With Us info@kalpa.news Whatsapp: 9481252093
Discussion about this post