ನಾನು ನನ್ನ ಬಾಲ್ಯದಲ್ಲಿ ಅತಿಹೆಚ್ಚು ಕೃಷ್ಣಾರ್ಜುನ ಜೋಡಿಗಳನ್ನು ನೋಡಿದ್ದು ಶಿವರಾಮ ಹೆಗಡೆ – ಮಹಾಬಲ ಹೆಗಡೆಯವರದು. ಆಗೆಲ್ಲ ಶಿವರಾಮ ಹೆಗಡೆಯವರ ಅರ್ಜುನ, ಮಹಾಬಲರ ಕೃಷ್ಣ. ಮುಂದಿನ ಹಂತದಲ್ಲಿ ಮಹಾಬಲರ ಅರ್ಜುನ, ಶಂಭು ಹೆಗಡೆಯವರ ಕೃಷ್ಣ. ಕುಮಾರ ಮಹಾಬಲರಾಗಿರುವತನಕವೂ ಮಹಾಬಲರದು ಕೃಷ್ಣನ ಪಾತ್ರವೇ ಜಾಸ್ತಿ. ನಾನು ಶಿವರಾಮ- ಮಹಾಬಲರ ನೂರಾರು ಜೋಡಿ ಪಾತ್ರಗಳನ್ನು ಕಂಡವನು.
ಕಂಸವಧೆಯಲ್ಲಿ ಕಂಸ – ಕೃಷ್ಣ, ಗಯ ಚರಿತ್ರೆ ಅಥವಾ ಕೃಷ್ಣಾರ್ಜುನ ಕಾಳಗದಲ್ಲಿ ಅರ್ಜುನ- ಕೃಷ್ಣ, ಕೃಷ್ಣ ಸಂಧಾನದಲ್ಲಿ ಕೌರವ – ಕೃಷ್ಣ, ಮಾಗಧ ವಧೆಯಲ್ಲಿ ಮಾಗಧ- ಕೃಷ್ಣ, ಸುಭದ್ರಾ ಕಲ್ಯಾಣದಲ್ಲಿ ಬಲರಾಮ – ಕೃಷ್ಣ, ಹೀಗೆ ಹಲವು ಪ್ರಸಂಗಗಳಲ್ಲಿ ಈ ಜೋಡಿ ಹೆಸರು ಗಳಿಸಿದ್ದು, ಜನಪ್ರಿಯವಾದದ್ದು.
ಆಗೆಲ್ಲ ಮಹಾಬಲರಿಗೆ ನೃತ್ಯದ ಕಡೆಗೆ ಹೆಚ್ಚು ಒಲವಿತ್ತು. ಕೃಷ್ಣ ಇರಲಿ, ಸುಧನ್ವನಿರಲಿ, ಬಭ್ರುವಾಹನ, ವೃಷಕೇತುವಿರಲಿ ಕುಣಿದು ಹುಡಿ ಹಾರಿಸುತ್ತಿದ್ದರು. ಮೂಡಕಣಿ ನಾರಾಯಣ ಹೆಗಡೆಯವರಲ್ಲಿ ನೃತ್ಯಾಭಿನಯವನ್ನು ವಿಶೇಷವಾಗಿ ಅಭ್ಯಸಿಸಿದ ಮಹಾಬಲರು ಹಲವು ಅಪರೂಪದ ನೃತ್ಯಗಳನ್ನು ಪ್ರದರ್ಶಿಸಬಲ್ಲವರಾಗಿದ್ದರು. ಅಂತಹ ಕೆಲವನ್ನು ನೋಡುವ ಅದೃಷ್ಟ ನನ್ನದಾಗಿತ್ತು. ವಿಶೇಷವಾಗಿ ಕೃಷ್ಣ ಮತ್ತು ಸುಧನ್ವ ಪಾತ್ರಗಳಲ್ಲಿ ಅವರ ನೃತ್ಯವೈಭವನ್ನು ಕಾಣಬಹುದಾಗಿತ್ತು. ಅವರಲ್ಲಿ ಕೆಲ ವಿಶಿಷ್ಟ ರಾಗತಾಳ ಹೆಜ್ಜೆಗಳ ಸಂಗ್ರಹ ಇದ್ದರೂ ಅದು ಹೊರಗೆ ಬರುತ್ತಿದ್ದುದು ಯಾವಾಗಲೋ ಒಮ್ಮೆಯಾಗಿತ್ತು.
ಅವರೇ ಹೇಳುವ ಹಾಗೆ- ನನಗೆ ಯಕ್ಷಗಾನ ನೃತ್ಯದ ಹಲವು ಹಳೆಯ ಪ್ರಕಾರಗಳು ಗೊತ್ತು. ಆ ನೃತ್ಯಗಳನ್ನು ರಂಗಕ್ಕೆ ತಂದರೆ ಇಂದಿನ ಭಾಗವತರು ತಾಳ ಹಾಕಲಾರರು. ಮೃದಂಗ ಬಾರಿಸುವವರು ಸುಮ್ಮನೇ ಕುಳಿತಾರು. ಈ ದೃಷ್ಟಿಯಿಂದ ಇಂದಿನ ಯಕ್ಷಗಾನ ರಂಗಕ್ಕೆ ನಾನು ಯಾರು ಎನ್ನುವದೇ ಗೊತ್ತಿಲ್ಲ
ಇದು ಅವರ ಅಹಂ ಅಲ್ಲ, ಆತ್ಮವಿಶ್ವಾಸದ ಮಾತು. ಅಷ್ಟೊಂದು ಆಳವಾಗಿ ಅವರು ಯಕ್ಷಗಾನದ ಎಲ್ಲ ಅಂಗೋಪಾಂಗಗಳ ಅಭ್ಯಾಸ ಮಾಡಿದವರಾಗಿದ್ದರು. ಅನೇಕ ಸಲ ಅವರ ಮಾತುಗಳು ನಮ್ಮ ಇತರ ಕಲಾವಿದರಿಗೆ ಅಪ್ರಿಯವೆನಿಸುತ್ತಿದ್ದವು. ಆದರೆ ಅವರು ಎಲ್ಲರಿಗೂ ಪ್ರಿಯವಾಗಲೆಂದು ಸುಳ್ಳು ಹೇಳುತ್ತಿರಲಿಲ್ಲ. ಕಲೆ ಮತ್ತು ಕಲಾವಿದರ ಹಿತವನ್ನು ಬಯಸಿಯೇ ಅವರು ಅಪ್ರಿಯ ಸತ್ಯವನ್ನು ಹೇಳುತ್ತಿದ್ದುದು.
ಕೃಷ್ಣಾರ್ಜುನ ಕಾಳಗದಲ್ಲಿ ಅರ್ಜುನನಿಗಿದ್ದಷ್ಟು ಮಹತ್ವ ಕೃಷ್ಣನಿಗಿಲ್ಲವಾದರೂ ಮಹಾಬಲರು ತಮ್ಮ ನೃತ್ಯಾಭಿನಯ, ವಾಕ್ ಸಾಮರ್ಥ್ಯದಿಂದ ಆ ಪಾತ್ರಕ್ಕೆ ಮಹತ್ವ ತಂದುಕೊಡುತ್ತಿದ್ದರು. ಶಿವರಾಮ ಹೆಗಡೆಯವರಂತಹ ಅಭಿಜಾತ ಕಲಾವಿದರ ಎದುರು ತಮ್ಮ ಅಸ್ತಿತ್ವವನ್ನು ಕಾಣಿಸಿಕೊಳ್ಳುವದು ಅಷ್ಟು ಸುಲಭವಲ್ಲ. ಕೃಷ್ಣನ ಪಾತ್ರಕ್ಕೆ ಆ ಕಾಲದಲ್ಲಿ ಬಹಳ ಪ್ರಸಿದ್ಧರಾಗಿದ್ದ ಮೂಡಕಣಿ ನಾರಾಯಣ ಹೆಗಡೆಯವರೇ ಮಹಾಬಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ. ಒಂದು ರೀತಿಯಲ್ಲಿ ಅವರ ಶಿಷ್ಯರೂ ಹೌದು.
ಮಹಾಬಲರ ಮೇಲೆ ಕುಮಾರವ್ಯಾಸ ಭಾರತ , ಜೈಮಿನಿ ಭಾರತಗಳ ಪ್ರಭಾವವೂ ಬಹಳ ಆಳವಾಗಿ ಬಿದ್ದಿದ್ದರಿಂದ ಕೃಷ್ಣನ ವ್ಯಕ್ತಿತ್ವವನ್ನು ಹಲವು ಮಗ್ಗುಲುಗಳಿಂದ ನೋಡಬಲ್ಲವರಾಗಿದ್ದರು. ಮೂಲತಃ ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಪಾತ್ರನೃತ್ಯಾಭಿನಯಗಳಿಗೆ ಧಾರಾಳ ಅವಕಾಶವನ್ನು ನೀಡುವಂತಹದು. ಅದರೊಡನೆಯೇ ತಮ್ಮ ಮಾತುಗಾರಿಕೆ, ಹಾಡುಗಾರಿಕೆಗಳ ಬಲವನ್ನೂ ಹೊಂದಿದ್ದ ಮಹಾಬಲರು ಶ್ರೀಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದವರಾಗಿದ್ದರು ಎಂದರೂ ನಡೆದೀತು.
ಮಹಾಬಲರು ಕೃಷ್ಣಾರ್ಜುನಕಾಳಗ, ಕೃಷ್ಣಸಂಧಾನ, ಭೀಷ್ಮಪರ್ವ, ಮಾಗಧ ವಧೆ, ಸುಭದ್ರಾ ಕಲ್ಯಾಣ, ಕಂಸವಧೆ, ಶ್ರೀಕೃಷ್ಣ ವಿವಾಹ, ಜಾಂಬವತಿ ಪರಿಣಯ, ಮೊದಲಾದ ಪ್ರಸಂಗಗಳಲ್ಲೆಲ್ಲ ಕೃಷ್ಣನಾಗಿ ಅಭಿನಯಿಸಿದವರು.
ಮಹಾಬಲರು ಶಿವರಾಮ ಹೆಗಡೆಯವರ ಪಾತ್ರಗಳಲ್ಲಿ ಹೆಚ್ಚು ಮೆಚ್ಚಿಕೊಂಡಿದ್ದು ಮಾಗಧನ ಪಾತ್ರ. ಆ ಮಾಗಧನಿಗೆದುರಾಗಿ ಕೃಷ್ಣನ ಪಾತ್ರ ನಿರ್ವಹಿಸಲು ಎಂಟೆದೆಯೇ ಬೇಕು. ತಮ್ಮ ಹದಿನಾಲ್ಕನೆಯ ವಯಸ್ಸಿನಿಂದಲೇ ಶಿವರಾಮ ಹೆಗಡೆಯವರ ಎದುರು ಪಾತ್ರ ನಿರ್ವಹಿಸುತ್ತ ಬಂದ ಮಹಾಬಲರು ಯಾವ ಪಾತ್ರವನ್ನು ಬೇಕಾದರೂ ನಿರ್ವಹಿಸಬಲ್ಲ ಸಮರ್ಥರು. ಚಾಣಾಕ್ಷಮತಿ ಕೃಷ್ಣನಾಗಿ ಅವರು ಮಾಗಧನಿಗೆ ಸರಿಸಮನಾಗಿ ಕಾಣಿಸಿಕೊಳ್ಳುತ್ತಾರೆ.
ಮಹಾಬಲರ ಕೃಷ್ಣ ವಿಷಯಲಂಪಟನಲ್ಲ. ಆತ ಮುತ್ಸದ್ದಿ. ಬುದ್ಧಿವಂತ. ಸಂದರ್ಭಕ್ಕೆ ತಕ್ಕಂತೆ ಚತುರೋಪಾಯ ಮಾಡಬಲ್ಲ ಚತುರ.
ಸುಭದ್ರಾ ಕಲ್ಯಾಣದಲ್ಲಿ ಬಲರಾಮನೊಂದಿಗೆ ಕೃಷ್ಣ ನಡೆಸುವ ಸಂಭಾಷಣೆ ಹುಡುಗಾಟಿಗೆ, ಲಘು ಹಾಸ್ಯದೊಂದಿಗೆ ಕೂಡಿದ್ದರೂ ಅದು ಕೆಳಮಟ್ಟಕ್ಕೆ ಬರದಂತೆ ನೋಡಿಕೊಳ್ಳುವದು ವಿಶೇಷ. ಶಿವರಾಮ ಹೆಗಡೆ- ಮಹಾಬಲರ ಬಲರಾಮ – ಕೃಷ್ಣರ ಜೋಡಿಯ ಹಾಗೆಯೇ ಮಹಾಬಲ – ಶಂಭು ಹೆಗಡೆಯವರ ಬಲರಾಮ – ಕೃಷ್ಣರ ಜೋಡಿಯೂ ತುಂಬ ಜನಪ್ರಿಯ.
ಲೇಖನ: ಲಕ್ಷ್ಮೀನಾರಾಯಣ ಶಾಸ್ತ್ರಿ, ನಾಜಗಾರ, ಬೆಳಗಾವಿ
(ಮುಂದಿನದು – ಅರ್ಜುನ)
Discussion about this post