ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಿ ಉತ್ತಮ ಮಾರ್ಗದರ್ಶನವಿರುತ್ತದೆಯೊ ಅಲ್ಲಿ ಅದ್ಭುತ ಚಿಂತನೆಗಳಿರಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಅಭಿಪ್ರಾಯಪಟ್ಟರು.
ಸಾಹಿತ್ಯ ಗ್ರಾಮದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಶ್ರಾವಣ ಚಿಂತನೆ ಹಾಗೂ 203 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ನಮ್ಮ ಬದುಕಿನ ನಿಜವಾದ ಮಾರ್ಗದರ್ಶಿ ಎಂದರೇ ಅದು ಸಾಹಿತ್ಯ. ಹಾಗಾಗಿಯೇ ಬಸವಾದಿ ಶರಣರು, ಜಾನಪದರು, ದಾಸರು ತಮ್ಮ ಅನೇಕ ಚಿಂತನೆಗಳನ್ನು ಸಾಹಿತ್ಯದ ಮೂಲಕ ಮುಂದಿನ ಪೀಳಿಗೆಯ ಮಾರ್ಗದರ್ಶಕವಾಗಿ ಅರ್ಪಿಸಿದ್ದಾರೆ. ಅಂತಹ ಅದ್ಭುತ ಚಿಂತನೆಗಳನ್ನು ಸದಾ ಪ್ರಸ್ತುತವಾಗಿರಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸದ ಸಂಭ್ರಮ ವಿಶೇಷವಾಗಿದೆ. ಅಂತಹ ಸಂಭ್ರಮದ ಜೊತೆಗೆ ಹೊಸತನದ ಸಮಾಜಮುಖಿ ಚಿಂತನೆಗಳತ್ತ ಮುನ್ನಡೆಯಬೇಕಿದೆ. ಯಾವಾಗ ಮನುಷ್ಯ ವಾಸ್ತವ ಲೋಕದಿಂದ ಭಾವಲೋಕಕ್ಕೆ ತೆರಳಿದನೊ ಅದು ಸಾಹಿತ್ಯವಾಯಿತು, ವಾಸ್ತವ ಲೋಕದಲ್ಲಿಯೇ ವಾಸ್ತವತೆಯನ್ನು ವಿಮರ್ಶಿಸಿದನೊ ಅದು ವಿಜ್ಞಾನವಾಯಿತು, ವಾಸ್ತವ ಭಾವಗಳೆರಡು ಅವೆಲ್ಲವನ್ನು ಮೀರಿದ ಧರ್ಮಕ್ಕೆ ಸೇರಿತು. ಅದರೇ ಇಂದು ಅಂತಹ ಮೂಲ ಚಿಂತನೆಗಳನ್ನು ಬಿಟ್ಟಿದ್ದೇವೆ, ಆಚರಣೆಯನ್ನು ಮಾತ್ರ ಉಳಿಸಿಕೊಂಡಿದ್ದೇವೆ ಎಂದು ವಿಷಾದಿಸಿದರು.
Also read: ಸ್ವಾತಂತ್ರ್ಯ ಅಮೃತ ಮಹೋತ್ಸವ: ಹರ್ ಘರ್ ಮೆ ತಿರಂಗಾ ಧ್ವಜಾರೋಹಣ
ಕಾರ್ಯಕ್ರಮ ಉದ್ಘಾಟಿಸಿ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಧರ್ಮ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳು.ಧರ್ಮ ಎಂದಿಗೂ ಸಾಹಿತ್ಯವನ್ನು ಬಿಡಲು ಸಾಧ್ಯವಿಲ್ಲ. ಜನಪರವಾದ ದೃಷ್ಟಿಕೋನಗಳು ಜ್ಞಾನದಾಸೋಹದ ಸಮಾಜಮುಖಿ ಚಿಂತನೆಗಳು ಒಡಮೂಡಲು ಸಾಹಿತ್ಯವೆಂಬುದು ಅತ್ಯವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯರಾದ ಯು.ಹೆಚ್.ವಿಶ್ವನಾಥ, ಎಂಪಿಎಂ ನಿವೃತ್ತ ಉದ್ಯೋಗಿ ಜಿ.ಬೊಮ್ಮಯ್ಯ, ಕಲಾವಿದರಾದ ಭದ್ರಾವತಿ ಗುರು, ಜಿಲ್ಲಾ ಅರಣ್ಯಾಧಿಕಾರಿಗಳಾದ ಮುಕುಂದ ಚಂದ್ರ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಗಂಗಾನಾಯ್ಕ ಉಪಸ್ಥಿತರಿದ್ದರು. ಕವಿಗಳಾದ ಡಿ.ಗಣೇಶ್, ಶ್ರೀನಿವಾಸ ನಗಲಾಪುರ, ಕಮಲಾ, ಪುಟ್ಟಮ್ಮ ಶಿವಾನಿ, ನಾಗೋಜಿರಾವ್, ಪ್ರೊ.ಸತ್ಯನಾರಾಯಣ, ರಾಮಚಂದ್ರ ಕವನ ವಾಚನ ಮಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
