ಆರೋಪಿ ಬಂದನಕ್ಕೆ ಒತ್ತಾಯ
ಬೆಂಗಳೂರು, ಅ.17: ನಿನ್ನೆ ಹಾಡುಹಗಲೇ ಬಿಜೆಪಿ ಹಾಗೂ ಆರ್ ಎಸ್ಎಸ್ ಕಾಯಕರ್ತ ರುದ್ರೇಶ್ರವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಇಂದು ಸಂಜೆಯೊಳಗೆ ಬಂಧಿಸಬೇಕೆಂದು ಬಿಜೆಪಿ ವಕ್ತಾರ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಒತ್ತಾಯಿಸಿದರು.
ರುದ್ರೇಶ್ ಹತ್ಯೆಯ ಆರೋಪಿಗಳನ್ನು ಸಂಜೆಯೊಳಗೆ ಬಂಧಿಸಲು ಬೆಂಗಳೂರು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಅವರಿಗೆ ಗಡವು ನೀಡಲಾಗಿದೆ. ಬಂಧಿಸದಿದ್ದರೆ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿನ್ನೆ ಆರ್ ಎಸ್ಎಸ್ ಪಥ ಸಂಚಲನ ಮುಗಿಸಿ ಮನೆಗೆ ಮರಳುವಾಗ ಸಂಘದ ಸಮವಸ್ತ್ರದಲ್ಲಿದ್ದ ರುದ್ರೇಶ್ ಅವರನ್ನು ಹತ್ಯೆ ಮಾಡಿದ್ದಾರೆ. ಅವರು ಶಿವಾಜಿನಗರದ ಬಿಜೆಪಿ ಘಟಕದ ಕಾರ್ಯದರ್ಶಿ ಆಗಿದ್ದರು ಎಂದರು.
ಶಿವಾಜಿನಗರದಲ್ಲಿ ಬಿಗಿ ಭದ್ರತೆ
ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಖಂಡಿಸಿ ಬಿಜೆಪಿ ಮತ್ತು ಆರ್ ಎಸ್ಎಸ್ ಕರೆ ಕೊಟ್ಟಿರುವ ಶಿವಾಜಿನಗರ ಬಂದ್ ಹಿನ್ನೆಲೆಯಲ್ಲಿ ಪೂರ್ವ ವಿಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎರಡು ಕಂಪನಿ ಆರ್ ಎಎಫ್, ಒಂದು ಕಂಪನಿ ಸಿಐಎಸ್ಎಫ್, ಒಂದು ಕಂಪನಿ ಎಚ್ಎಸ್ಬಿ ಸೇರಿದಂತೆ ನಾಲ್ಕು ಕಂಪನಿ ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ.
ಸ್ಥಳೀಯ ಪೊಲೀಸರ ಜೊತೆಗೆ ಒಂಭತ್ತು ತುಕಡಿ ಕೆಎಸ್ಆರ್ ಪಿ, 10 ತುಕಡಿ ಸಿಎಆರ್, ವಾಟರ್ಜೆಟ್ ಸೇರಿದಂತೆ 4500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು , ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ನಿಷೇಧಾಜ್ಞೆ ಜಾರಿ:
ರುದ್ರೇಶ್ ಹತ್ಯೆ ಸಂಬಂಧ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಭಾರತಿನಗರ, ಪ್ರೇಜರ್ ಟೌನ್ ವ್ಯಾಪ್ತಿಗಳಲ್ಲಿ ರಾತ್ರಿವರೆಗೂ ನಿಷೇಧಾಜ್ಞೆ (144) ಜಾರಿಗೊಳಿಸಲಾಗಿದೆ.
ಸಂಚಾರ ವಿರಳ: ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ ನಿನ್ನೆ ನಡೆದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಖಂಡಿಸಿ ಇಂದು ಬಂದ್ಗೆ ಕರೆಕೊಟ್ಟಿದ್ದ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿತ್ತು.
ಶಿವಾಜಿನಗರದ ದಂಡು ಮಾರಿಯಮ್ಮ ಸರ್ಕಲ್ ನಲ್ಲಿ ಆರ್ ಎಸ್ಎಸ್ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಸರ್ಕಲ್ ನಲ್ಲಿ ರುದ್ರೇಶ್ ಭಾವಚಿತ್ರಕ್ಕೆ ಹಾರ ಹಾಕಿ ಕೈಯಲ್ಲಿ ಆರ್ಎಸ್ಎಸ್ ಬಾವುಟ ಹಿಡಿದು ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೆಆರ್ ಪುರ ಮಾಜಿ ಶಾಸಕ ನಂದೀಶ್ ರೆಡ್ಡಿ, ವಿವಿಧ ಆರ್ ಎಸ್ಎಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹತ್ಯೆ ಘಟನೆಯನ್ನು ಖಂಡಿಸಲಾಯಿತು. ಬಂದ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಕನಕಪುರ ಸೇರಿದಂತೆ ಹಲವೆಡೆ ವ್ಯಾಪಕ ಶೋಧ ಮಾಡಲಾಗುತ್ತಿದೆ.
ಹಲವರು ವಶಕ್ಕೆ
ಶಿವಾಜಿನಗರದಲ್ಲಿ ನಡೆದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಈ ಸಂಬಂಧ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಪೊಲೀಸರು ಆರ್ ಎಸ್ಎಸ್ ಕಾರ್ಯಕರ್ತರ, ಕಾಂಗ್ರೆಸ್ ಕಾರ್ಯಕರ್ತ ಎಂದು ತನಿಖೆ ನಡೆಸುವುದಿಲ್ಲ. ಒಬ್ಬ ವ್ಯಕ್ತಿ ಹಾಡುಹಗಲೇ ಕೊಲೆಯಾಗಿದ್ದಾನೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಾರೆ, ಶೀಘ್ರ ಆರೋಪಿಗಳನ್ನು ಬಂಧಿಸುತ್ತಾರೆ ಎಂದು ಹೇಳಿದರು.
ತನಿಖೆ ನಡೆಯುತ್ತಿದ್ದು ಐದಾರು ತಂಡಗಳನ್ನು ರಚನೆ ಮಾಡಲಾಗುತ್ತಿದೆ. ಬಿಜೆಪಿ ಆರ್ ಎಸ್ಎಸ್ ನವರು ಅವರ ಕಾರ್ಯಕರ್ತರ ಕೊಲೆಯಾಗಿರುವುದಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ನಾವು ವಿರೋಧಿಸುವುದಿಲ್ಲ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ
ನಿನ್ನೆ ಶಿವಾಜಿನಗರದಲ್ಲಿ ಕೊಲೆಯಾದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಮರಣೋತ್ತರ ಪರೀಕ್ಷೆಗೆ ಅವರ ಕುಟುಂಬದವರು ಒಪ್ಪುತ್ತಿಲ್ಲ. ಆರೋಪಿಗಳನ್ನು ಬಂಧಿಸುವವರೆಗೂ ನಾವು ಅನುಮತಿ ಪತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಂದೆಡೆ ಶಿವಾಜಿನಗರದ ವಿಕ್ಟೋರಿಯಾ ಆಸ್ಪತ್ರೆ ಮುಂದೆ ಆರ್ ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅವರ ಕುಟುಂಬದವರು ಕೊಲೆಗಾರರನ್ನು ಬಂಧಿಸುವವರೆಗೆ ಮರಣೋತ್ತರ ಪರೀಕ್ಷೆಯ ಅನುಮತಿ ಪತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇವರ ಮನವೊಲಿಸುವ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ
ಆಯುಕ್ತರಿಂದ ಅಧಿಕಾರಿಗಳ ಸಭೆ
ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಹಿನ್ನೆಲೆಯಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಸಭೆ ವೇಳೆ ತನಿಖೆಯ ಪ್ರಗತಿ, ಆರೋಪಿಗಳ ಸುಳಿವು ಸಿಕ್ಕಿದೆಯೇ, ಯಾರು ಈ ಕೊಲೆ ಮಾಡಿರಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಆಯುಕ್ತರು, ಕೆಲವು ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹರಿಶೇಖರನ್, ಡಿಸಿಪಿ ಸತೀಶ್ ಕುಮಾರ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
ನಿಯೋಜಿತ ಸಂಚಿನಿಂದ ಕೊಲೆ:
ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಕೊಲೆ ಪೂರ್ವ ನಿಯೋಜಿತ ಸಂಚಿನಿಂದ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಹೇಳಿದರು.
ಶಿವಾಜಿನಗರ ವೃತ್ತದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ರುದ್ರೇಶ್ ಕೊಲೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ರುದ್ರೇಶ್ ಅವರ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ಪ್ರಕರಣವನ್ನು ನಮ್ಮ ಇಲಾಖೆ ಸವಾಲಾಗಿ ಸ್ವೀಕರಿಸಿ ಕೊಲೆಗಾರರನ್ನು ಶೀಘ್ರ ಬಂಧಿಸಿ ನಮ್ಮ ಸಮವಸ್ತ್ರದ ಗೌರವ ಉಳಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆಯನ್ನು ಎಲ್ಲ ದೃಷ್ಟಿಕೋನಗಳಿಂದಲೂ ಮಾಡುತ್ತಿದ್ದೇವೆ. ನಮ್ಮ ಮೇಲೆ ಯಾವ ರಾಜಕೀಯ ಒತ್ತಡವೂ ಇಲ್ಲ. ನಮ್ಮ ಆರು ವಿಶೇಷ ತನಿಖಾ ತಂಡಗಳು ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಿವೆ. ಈ ಕೃತ್ಯದ ಸಂಬಂಧ 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಸ್ನೇಹಿತರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಪ್ರತಿಭಟನೆ: ಆರೋಪಿಗಳ ಬಂಧನಕ್ಕೆ ಒತ್ತಾಯ
ಶಿವಾಜಿನಗರದಲ್ಲಿ ನಿನ್ನೆ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಖಂಡಿಸಿ ಹಂತಕರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಹಾಗೂ ಆರ್ ಎಸ್ಎಸ್ ಮುಖಂಡರು ಇಂದು ಪ್ರತಿಭಟನೆ ನಡೆಸಿದರು.
ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಇಂದು ಮೃತ ರುದ್ರೇಶ್ ನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಶಿವಾಜಿನಗರ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹತ್ಯೆಯನ್ನು ಖಂಡಿಸಿದರು. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಶಿವಾಜಿನಗರದಿಂದ ಬಾಳೆಕುಂದ್ರಿ ಸರ್ಕಲ್ ಮೂಲಕ ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಾಳೆಕುಂದ್ರಿ ಸರ್ಕಲ್ ಬಳಿ ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಶಿವಾಜಿನಗರದ ಬಸ್ ನಿಲ್ದಾಣ ಬಳಿ ತೆರಳಿದರು. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಇದಕ್ಕೂ ಮುನ್ನ ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಹಿಂದೂ ಸಂಘಟನೆಗಳ ಕಾರ್ಯಕರ್ತರ ನಿರಂತರ ಹತ್ಯೆ ನಡೆಯುತ್ತಿದೆ. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಸಂಬಂಧ ಹೋರಾಟಕ್ಕಿಳಿದಿದ್ದೇವೆ. ನಿನ್ನೆ ಗಣವೇಶದಲ್ಲಿದ್ದಾಗ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ಮಾಡಲಾಗಿದೆ.
ದೇಶದೆಲ್ಲೆಡೆ ಅಪರಿಚಿತರಿಂದ ಆರ್ ಎಸ್ಎಸ್ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಘಟನೆಗಳು ನಡೆಯುತ್ತಿವೆ. ಕರ್ನಾಟಕ ಮತ್ತೊಂದು ಕೇರಳ ಆಗಬಾರದು. ರಾಷ್ಟ್ರ ನಿರ್ಮಾಣಕ್ಕೆ ಜೀವನ ಮುಡುಪಾಗಿಡುವಂತಹ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡಿದರೆ ಅವರ ಬಗ್ಗೆ ಅನುಮಾನ ಉಂಟಾಗುತ್ತದೆ ಎಂದು ಗುಮಾನಿ ವ್ಯಕ್ತಪಡಿಸಿದರು.
ಹಂತಕರನ್ನು ಬಂಧಿಸಿ, ಇಲ್ಲದಿದ್ದರೆ ಆರ್ ಎಸ್ಎಸ್ ಬಿಜೆಪಿ ಕಾರ್ಯಕರ್ತರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಯುಧಗಳನ್ನು ಹೊಂದಲು ಲೈಸೆನ್ಸ್ ಕೊಡಿ ಎಂದು ಸುರೇಶ್ ಕುಮಾರ್ ಹೇಳಿದರು. ಇಂದು ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಗಡುವು ನೀಡಿದರು.
ಸಾಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಎಲ್ಲ ಕೊಲೆಗಳ ಹಿಂದೆ ಷಡ್ಯಂತ್ರವಿದೆ. ಪ್ರಶಾಂತ್ ಪೂಜಾರಿ ಹತ್ಯೆ, ಮಡಿಕೇರಿಯಲ್ಲಿ ಕಟ್ಟಪ್ಪ ಹತ್ಯೆ, ಮೈಸೂರಿನಲ್ಲಿ ರಾಜು ಕೊಲೆ, ಕಾರ್ಪೊರೇಟರ್ ಮಂಜುಳಾ ಶ್ರೀನಿವಾಸ್ ಅವರ ಪತಿ ಹತ್ಯೆ. ಈ ಸಕರ್ಾರಕ್ಕೆ ಇನ್ನೆಷ್ಟು ಬಲಿ ಬೇಕು. ತಿಂಗಳಿಗೊಬ್ಬರಂತೆ ಹತ್ಯೆಯಾಗುತ್ತಿದೆ. ಕೂಡಲೇ ಸರ್ಕಾರ ಹಂತಕರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆರ್. ಅಶೋಕ್ ಮಾತನಾಡಿ, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಾಂಸದ ಪಿ.ಸಿ. ಮೋಹನ್ ಮಾತನಾಡಿ, ಮಂಗಳೂರು, ಬೆಂಗಳೂರು, ಮೈಸೂರು ಎಲ್ಲ ಕಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಕೆಲಸ ನಡೆಯುತ್ತಿದೆ. ಪೊಲೀಸರು ಸರಕಾರದ ಒತ್ತಡಕ್ಕೆ ಮಣಿಯದಂತೆ ಕೆಲಸ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಬಂದ್ ಆಗಿದ್ದ ಶಿವಾಜಿ ನಗರ!
ಶಿವಾಜಿನಗರದ ಕಾಮರಾಜ ರಸ್ತೆಯಲ್ಲಿ ನಿನ್ನೆ ನಡೆದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಶಿವಾಜಿನಗರ ಬಂದ್ ಗೆ ಆರ್ ಎಸ್ಎಸ್ ಸಂಘಟನೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿತ್ತು.
ಶಿವಾಜಿನಗರದ ದಂಡು ಮಾರಿಯಮ್ಮ ಸರ್ಕಲ್ ನಲ್ಲಿ ಆರ್ ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸರ್ಕಲ್ ನಲ್ಲಿ ರುದ್ರೇಶ್ ಭಾವಚಿತ್ರಕ್ಕೆ ಹಾರ ಹಾಕಿ ಕೈಯಲ್ಲಿ ಆರ್ ಎಸ್ಎಸ್ ಬಾವುಟ ಹಿಡಿದು ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೆಆರ್ ಪುರ ಮಾಜಿ ಶಾಸಕ ನಂದೀಶ್ರೆಡ್ಡಿ, ವಿವಿಧ ಆರ್ ಎಸ್ಎಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹತ್ಯೆ ಘಟನೆಯನ್ನು ಖಂಡಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ನಾಲ್ಕು ಪೊಲೀಸ್ ಠಾಣೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಕನಕಪುರ ಸೇರಿದಂತೆ ಹಲವೆಡೆ ವ್ಯಾಪಕ ಶೋಧ ಮಾಡಲಾಗುತ್ತಿದೆ.
ನಿನ್ನೆ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ನಿನ್ನೆ ಆರ್ ಎಸ್ಎಸ್ ಸಂಘಟನೆಯವರು ಏರ್ಪಡಿಸಿದ್ದ ಪಥ ಸಂಚಲನ ಕಾರ್ಯಕ್ರಮ ಮುಗಿಸಿಕೊಂಡು ಬಂದಾಗ ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ವಿಷಯ ನಗರವನ್ನು ಬೆಚ್ಚಿ ಬೀಳಿಸಿತ್ತು. ತಕ್ಷಣವೇ ಬಿಜೆಪಿ ಹಾಗೂ ಆರ್ ಎಸ್ಎಸ್ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದರು.
ಸಾಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು. ಇಂದು ಬಂದ್ ಗೆ ಕರೆ ನೀಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಹತ್ಯೆ ಹಿಂದೆ ಕಾರ್ಪೊರೇಟರ್ ಕೈವಾಡ ಶಂಕೆ!
ನಿನ್ನೆ ನಡೆದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಿಶೇಷ ತಂಡಗಳನ್ನು ರಚಿಸಿದ್ದು, ನಿನ್ನೆ ಕಾರ್ಪೊರೇಟರ್ ಅನ್ನು ಹುಡುಕಿಕೊಂಡು ಪೊಲೀಸರು ಇವರ ನಿವಾಸಕ್ಕೆ ಹೋಗಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರ ಮೊಬೈಲ್ ಕೂಡ ಸ್ವಿಚ್ಆಫ್ ಆಗಿದೆ. ಕಾರ್ಪೊರೇಟರ್ ಗೂ, ರುದ್ರೇಶ್ ಗೂ ವೈಮನಸ್ಸಿತ್ತು ಎಂದು ತಿಳಿದುಬಂದಿದ್ದು, ಘಟನೆಗೆ ಈ ಕಾರಣವೂ ಇರಬಹುದು ಎಂಬ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಗಳ ಫುಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದಕ್ಕೆ ಸಿಸಿಬಿಯ ತಾಂತ್ರಿಕ ವಿಭಾಗದ ಪೊಲೀಸರು ನೆರವು ನೀಡುತ್ತಿದ್ದಾರೆ.
Discussion about this post