ಉಡುಪಿ, ಅ.17: ಕೋಟ್ಯಾಧಿಪತಿ, ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆಯ ಆರೋಪಿಗಳಿಗೆ ನ.2ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ಅವರಿಬ್ಬರ ಆಪ್ತ ನಿರಂಜನ ಭಟ್ಟ ಅವರಿಗೆ ಈ ಹಿಂದೆ ಅವರಿಗೆ ವಿಧಿಸಲಾಗಿದ್ದ 14 ದಿನಗಳ ನ್ಯಾಯಾಂಗ ಬಂಧನ ಸೋಮವಾರ ಕೊನೆಗೊಂಡಿದ್ದು, ಸಿಐಡಿ ಪೊಲೀಸರು ಅವರನ್ನು ಮತ್ತೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅವರಿಗೆ ಮತ್ತೇ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದರು.
ಈ ನಡುವೆ ರಾಜೇಶ್ವರಿ ಅವರಿಗೆ ಜಾಮೀನು ನೀಡುವಂತೆ ಅವರ ವಕೀಲ ವಿಕ್ರಮ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಕಳೆದ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡರು. ರಾಜೇಶ್ವರಿ ಅವರು ಮಹಿಳೆಯಾಗಿರುವುದರಿಂದ ಅವರಿಗೆ ಜಾಮೀನು ನೀಡುವಂತೆ ಅವರ ವಕೀಲರು ವಾದಿಸಿದರು. ನಂತರ ನ್ಯಾಯಾಧೀಶರು, ಈ ಅರ್ಜಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವುದಕ್ಕೆ ಅ.26ರವರೆಗೆ ಅವಕಾಶ ನೀಡಿದರು.
ಉಡುಪಿಯ ಲಕ್ಷ್ಮೀಂದ್ರನಗರದ ರಾಜೇಶ್ವರಿ ಮತ್ತು ಮಗ ನವನೀತ್ ಅವರು ದುಬಾಯಿ ಉದ್ಯಮಿ ಭಾಸ್ಕರ ಶೆಟ್ಟಿ ಅವರು ಆಸ್ತಿಗಾಗಿ ಅವರ ಮನೆಯಲ್ಲಿಯೇ ರಾಡಿನಿಂದ ತಲೆಗೆ ಹೊಡೆದು, ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು. ನಂತರ ಶವವನ್ನು ಕಾರಿನಲ್ಲಿ ಆಪ್ತರಾಗಿದ್ದ ಕಾರ್ಕಳ ತಾಲೂಕಿನ ನಂದಳಿಕೆಯ ಸ್ವಯಂ ಘೋಷಿತ ಜ್ಯೋತಿಷಿ ನಿರಂಜನ ಭಟ್ಟನ ಮನೆಗೆ ತೆಗೆದುಕೊಂಡು ಹೋಗಿ ಹೋಮುಕುಂಡದಲ್ಲಿ ಸುಟ್ಟು ಹಾಕಿದ್ದರು.
ಈ ಪ್ರಕರಣದ ಸಾಕ್ಷ್ಯ ನಾಶದ ಆರೋಪದಲ್ಲಿ ನಿರಂಜ ಭಟ್ಟದ ತಂದೆ ಶ್ರೀನಿವಾಸ ಭಟ್ಕ ಮತ್ತು ಕಾರು ಚಾಲಕ ರಾಘವೇಂದ್ರ ಅವರನ್ನೂ ಬಂಧಿಸಲಾಗಿದ್ದು, ಇಬ್ಬರಿಗೂ ಜಾಮೀನು ನೀಡಲಾಗಿದೆ.
Discussion about this post