ಕಲ್ಪ ಮೀಡಿಯಾ ಹೌಸ್ | ತಿರುಪತಿ/ಮೈಸೂರು |
ತಿರುಮಲ ಬೆಟ್ಟದಲ್ಲಿ ಶ್ರೀನಿವಾಸದ ದರ್ಶನ ಪಡೆದರೆ ಜ್ಞಾನ ಭಕ್ತಿ ಹಾಗೂ ವೈರಾಗ್ಯಗಳು ಪ್ರಾಪ್ತಿಯಾಗಿ ಅದು ಮೋಕ್ಷಕ್ಕೆ ರಹದಾರಿಯಾಗುತ್ತದೆ ಎಂದು ಸೋಸಲೆ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ತಿರುಪತಿ ತಿರುಮಲ ಬೆಟ್ಟದಲ್ಲಿ ವ್ಯಾಸರಾಜ ಮಠದ ವತಿಯಿಂದ ನವೀಕರಣಗೊಳಿಸಿರುವ ಶ್ರೀ ವಿಶ್ವ ಪಾವನ ಭವನ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿ ಅವರು ಮಾತನಾಡಿದರು.
ಗುರುಮುಖೇನ ಜ್ಞಾನ ಪಡೆಯುವುದು ಅತ್ಯಂತ ಶ್ರೇಷ್ಠ. ಇದು ಸಾಧನೆಗೆ ಮಹೋನ್ನತ ಮಾರ್ಗವನ್ನು ತೋರಲಿದೆ. ತಿರುಮಲ ಬೆಟ್ಟದಲ್ಲಿ ಶ್ರೀನಿವಾಸನ ದರ್ಶನ ಮಾಡಿ ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳನ್ನು ಬೇಡಬೇಕು. ಇದು ಮೋಕ್ಷಕ್ಕೂ ರಹದಾರಿಯಾಗಬೇಕು. ಆಗಲೇ ಬದುಕು ಸಾರ್ಥಕವಾಗುತ್ತದೆ ಎಂದರು.

ನಿತ್ಯ ಅನ್ನದಾನ ಸೇವೆ
ತಿರುಮಲದಲ್ಲಿ ವೆಂಕಟೇಶದ ದರ್ಶನಕ್ಕೆ ನಿತ್ಯವೂ ಸಾವಿರಾರು ಸಾತ್ವಿಕ ಭಕ್ತರು ದೂರದೂರದ ಪ್ರದೇಶದಿಂದ ಬರುತ್ತಾರೆ. ಜೀವನದಲ್ಲಿ ಕಠಿಣ ಅನುಷ್ಠಾನಗಳನ್ನು ಇಟ್ಟುಕೊಂಡವರು ಇಲ್ಲಿ ತಂಗಲು ಪರದಾಡುತ್ತಾರೆ. ಅಂಥವರು ದೇವರ ದರ್ಶನವನ್ನು ಸುಖವಾಗಿ ಮಾಡಲು ಮಠವು ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಿದೆ. ಇಲ್ಲಿ ನಿತ್ಯವೂ ಅನ್ನದಾನದ ಸೇವೆ ನಡೆಯಲಿದೆ ಎಂದರು.
ಶ್ರೀಮಠದ ಯತಿಗಳ ಅನನ್ಯ ಸೇವೆ
ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಮಾತನಾಡಿ, ತಿರುಪತಿ ತಿಮ್ಮಪ್ಪನಿಗೆ 12 ವರ್ಷಗಳ ಕಾಲ ವಿಶೇಷ ಸೇವೆ ಸಲ್ಲಿಸಿ, ಪುರಾತನ ದೇಗುಲದ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರೀ ವ್ಯಾಸರಾಜರು ಮಹತ್ತರ ಸೇವೆ ಸಲ್ಲಿಸಿದ್ದಾರೆ ಎಂದರು.

ಸ್ವಾಮಿ ಪುಷ್ಕರಣಿ ತೀರದಲ್ಲಿರುವ ಶ್ರೀ ವ್ಯಾಸರಾಜರ ಅಹ್ನೀಕ ಮಂಟಪ ಸದ್ಯಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಟಿಟಿಡಿ ವತಿಯಿಂದ ಸಮಗ್ರವಾಗಿ ಪುನರುತ್ಥಾನ ಮಾಡಲಾಗುವುದು ಎಂದು ಧರ್ಮಾರೆಡ್ಡಿ ಭರವಸೆ ನೀಡಿದರು.
ಕನ್ನಡದಲ್ಲೂ ಜ್ಞಾನ ಪ್ರಸಾರ
ಶ್ರೀ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ. ಆನಂದತೀರ್ಥ ನಾಗಸಂಪಿಗೆ ಮತನಾಡಿ, ಮಧ್ವಶಾಸ್ತçಕ್ಕೆ ವ್ಯಾಸರಾಜರು ಹಲವು ರೀತಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿಯೂ ಈ ಎಲ್ಲ ಗ್ರಂಥಗಳನ್ನು ಪ್ರಕಟಿಸಿರುವುದು ಈ ಸಂಸ್ಥಾನದ ಹೆಮ್ಮೆ ಎಂದರು.

ನಂತರ ಶ್ರೀವಿದ್ಯಾಶ್ರೀಶ ತೀರ್ಥರಿಗೆ ಟಿಟಿಡಿ ಸಕಲ ಗೌರವಾದರಗಳೊಡನೆ ಶ್ರೀ ವೆಂಕಟೇಶ್ವರನ ದರ್ಶನ ಮಾಡಿಸಿ ಮಹಾ ಪ್ರಸಾದ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post