ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ನೌಕರರು ಮುಷ್ಕರ ಮಾಡದಂತೆ ಕಾನೂನನ್ನೇ ಜಾರಿ ಮಾಡಬೇಕು ಎಂದು ಹೊಸನಗರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲೂರು ವಾಸಪ್ಪಗೌಡ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರಕ್ಕೆ ಕರೆ ನೀಡಿದ್ದು, ಇದು ಜನ ವಿರೋಧಿ ಹಾಗೂ ಸ್ವಾರ್ಥ ಪರವಾದ ನಿರ್ಧಾರವಾಗಿದೆ ಎಂದರು.
ರಾಜ್ಯ ಸರ್ಕಾರದ ಪ್ರತಿವರ್ಷದ ಬಜೆಟ್ನ ಶೇ.50ರಷ್ಟು ಹಣ ರಾಜ್ಯ ಸರ್ಕಾರಿ ನೌಕರರ ವೇತನಕ್ಕೆ, ನಿವೃತ್ತಿ ವೇತನಕ್ಕೆ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಬಡ ಮತ್ತು ಸಣ್ಣ ಕೃಷಿ ಕಾರ್ಮಿಕರು ದಿನದ 24 ಗಂಟೆ ದುಡಿದರೂ ಅವರಿಗೆ ಸರಿಯಾದ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಅರಿಯದೆ ಎಲ್ಲಾ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರು ವಿನಾಕಾರಣ ಸರ್ಕಾರವನ್ನು ಬೆದರಿಸಲು ಮತ್ತು ಸಂದಿಗ್ದತೆಗೆ ತಳ್ಳಲು ಮುಷ್ಕರದ ಹಾದಿ ಹಿಡಿದಿದ್ದು ಖಂಡನೀಯ ಎಂದರು.
ಬಹುತೇಕ ಸರ್ಕಾರಿ ನೌಕರರು ಸೇವೆಗೆ ಹಾಜರಾದ ದಿನದಿಂದಲೇ ಭ್ರಷ್ಟಾಚಾರ ನಡೆಸುತ್ತಾ ಅಕ್ರಮ ಆಸ್ತಿ ಗಳಿಸುತ್ತಿರುವುದು ಹೆಚ್ಚಾಗಿದೆ. ಶೇ.20ರಷ್ಟು ನೌಕರರು ಪ್ರಾಮಾಣಿಕರಿದ್ದರೆ ಉಳಿದ ಶೇ.80ರಷ್ಟು ನೌಕರರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರಿ ನೌಕರರು ಹಾಗೂ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸದೆ ಪ್ರತಿಷ್ಟಿತ ಖಾಸಗಿ ಶಾಲೆಗಳಿಗೆ ಲಕ್ಷಗಟ್ಟಲೆ ಡೊನೇಷನ್ ನೀಡಿ ದಾಖಲಿಸುವುದೇ ಹೆಚ್ಚು. ಸರ್ಕಾರಿ ನೌಕರರು ಲೋಕಾಯುಕ್ತ ಬಲೆಗೆ ಬೀಳುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಾಳಿಗೆ ಒಳಗಾದ ಭ್ರಷ್ಟ ಸರ್ಕಾರಿ ನೌಕರರಿಗೆ ಶಿಕ್ಷೆಯಾಗುವ ಬದಲು ಅವರಿಗೆ ಮುಂಬಡ್ತಿ ನೀಡಿ ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ನೌಕರರು ಕರ್ತವ್ಯದಲ್ಲಿ ಲೋಪ ಎಸಗಿದರೆ ಅವರನ್ನು ಸೇವೆಯಿಂದ ನಿರ್ದಾಕ್ಷ್ಯಿಣ್ಯವಾಗಿ ವಜಾಗೊಳಿಸಬೇಕು. ರಾಜ್ಯದ ಬೊಕ್ಕಸದ ಹಣವನ್ನೆಲ್ಲ ಸರ್ಕಾರಿ ನೌಕರರು ತಿಂದು ತೇಗುವುದಲ್ಲದೆ ಲಂಚಕ್ಕೂ ಕೈಒಡ್ಡುವ ಇವರಿಗೆ ವೇತನ ಹೆಚ್ಚಳ ಮಾಡುವುದು ಖಂಡನೀಯ. ತಮ್ಮ ಹಕ್ಕನ್ನು ಕೇಳುವ ಸರ್ಕಾರಿ ನೌಕರರು ತಮ್ಮ ಕರ್ತವ್ಯದಲ್ಲಿ ಎಷ್ಟು ಪ್ರಾಮಾಣಿಕರಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
Also read: ಪ್ರತಿದಿನ ಹುಬ್ಬಳ್ಳಿಯಿಂದ ಪುಣೆಗೆ ವಿಮಾನ ಹಾರಾಟ: ಸೇವಾ ಸಮಯದ ವಿವರ ಇಲ್ಲಿದೆ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ರೀತಿಯ ಮುಷ್ಕರದಲ್ಲಿ ಭಾಗವಹಿಸುವಂತಿಲ್ಲ. ಅದೇರೀತಿ ಸರ್ಕಾರಿ ನೌಕರರು ಸಹ ಯಾವುದೇ ರೀತಿಯ ಮುಷ್ಕರ ಮಾಡದಂತೆ ಕಾನೂನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಈ ಸರ್ಕಾರಿ ನೌಕರರು ಇದೇರೀತಿ ಪದೇಪದೇ ಮುಷ್ಕರ ನಡೆಸಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಹೊರೆಸುವ ಕೆಲಸ ಮಾಡುವುದು ನಿಶ್ಚಿತ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಷಣ್ಮುಖಪ್ಪ, ಸೋಮೇಶ್ವರ್ ಕಲ್ಲೂರು ಉಪಸ್ಥಿತರಿದ್ದರು.
ಭ್ರಷ್ಟಾಚಾರದ ಕೂಪಕ್ಕೆ ಚುನಾವಣಾ ವ್ಯವಸ್ಥೆ: ಗಣೇಶ್ ಬೆಳ್ಳಿ
ರಾಜಕಾರಣಿಗಳು ಚುನವಣೆ ವ್ಯವಸ್ಥೆಯನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದಾರೆ ಎಂದು ಪ್ರಚಾ ಪ್ರಭುತ್ವ ಜಾಗೃತಿ ಆಂದೋಲನ ವೇದಿಕೆಯ ಮುಖ್ಯಸ್ಥ ಗಣೇಶ್ ಬೆಳ್ಳಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಿನ ಚುನಾವಣೆಗಳು ಆಮಿಷದ ಚುನಾವಣೆಗಳಾಗಿವೆ. ಚಲಾವಣೆಯಾಗುವ ಮತಗಳಲ್ಲಿ ಶೇ.50ರಷ್ಟು ಹಣದ ಆಮಿಷದ ವೋಟುಗಳೇ ಇರುತ್ತವೆ. ಇದರ ಜೊತೆಗೆ ಹೆಂಡ, ಸೀರೆ, ಕುಕ್ಕರ್ ನೀಡುಗ ಆಮಿಷಗಳು ಜೊತೆಗೆ ಜಾತಿಯೂ ಸೇರಿಕೊಂಡು ಇಡೀ ಚುನಾವಣಾ ವ್ಯವಸ್ಥೆಯೇ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದರು.
ಹೋಗಲಿ, ಚುನಾವಣೆಯಲ್ಲಿ ಗೆದ್ದ ಶಾಸಕರು ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡುತ್ತಾರೆಯೇ ಎಂದರೆ ಅದೂ ಇಲ್ಲ. ಸಮಸ್ಯೆಗಳತ್ತ ಗಮನಹರಿಸುವುದಿಲ್ಲ. ಗೆದ್ದ ಮೇಲೆ ಜನರಿಗೆ ಮುಖ ತೋರಿಸುವುದಿಲ್ಲ. ಕಾಮಗಾರಿಗಳ ಕಮಿಷನ್ ಮೇಲೆ ಕಣ್ಣು ಹಾಗಿ ಮುಂದಿ ಚುನಾವಣೆಗೆ ಹಣ ಕೂಡಿಡುತ್ತಾರೆ ಎಂದರು.
ಎಲ್ಲಾ ಪಕ್ಷಗಳು ನ್ಯಾಯ ಕೊಡಿಸುವಲ್ಲಿ ವಿಫವಾಗಿವೆ. ಯಾವುದಾದರೂ ಒಂದು ಕಾರ್ಯಕ್ರಮವಾದರೆ ಗ್ರಾಮ ಗ್ರಾಮಗಳಿಗೆ ಬಸ್ ಕಳಿಸಿ ಯಾತ್ರೆ, ಜಾತ್ರೆ ಮಾಡಿ ಹಣ ಕೊಟ್ಟು ಕರೆಸಿಕೊಳ್ಳುತ್ತಾರೆ. ಒಬ್ಬ ಶಾಸಕ ಚುನಾವಣೆಗೆ ನಿಂತರೆ ಕನಿಷ್ಠ 50 ಕೋಟಿ ಖರ್ಚು ಮಾಡುತ್ತಾನೆ ಎಂಬ ಮಾತಿದೆ. ಅಷ್ಟಲ್ಲದಿದ್ದರೂ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ ಎನ್ನುವುದು ಸತ್ಯ. ಚುನಾವಣಾ ಆಯೋಗ ಇದನ್ನು ತಡೆಗಟ್ಟಬೇಕು ಎಂದರು.
ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು, ಕಾರ್ಯಕರ್ತರೆಂಬ ಪಡೆ ಕಟ್ಟಲು ಅವಕಾಶ ನೀಡಬಾರದು. ಅಭ್ಯರ್ಥಿಗಳಿಗೆ ಸಂವಿಧಾನ ಕುರಿತಂತೆ, ಸಂಸದೀಯ ವ್ಯವಸ್ಥೆಗಳ ಕುರಿತಂತೆ ಪರೀಕ್ಷೆ ನಡೆಸಬೇಕು. ರ್ಯಾಲಿ ಸಭೆಗಳನ್ನು ನಿರ್ಬಂಧಿಸಬೇಕು. ಚುನಾವಣೆಯಲ್ಲಿ ಗೆದ್ದು ಬಂದು ನಂತರ ನಿವೃತ್ತಿಯಾದ ರಾಜಕಾರಣಿಗಳಿಗೆ ಪಿಂಚಣಿಯನ್ನು ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಬಾಷಾ ಸಾಬ್, ಪ್ರಕಾಶ್ ಲಿಗಾಡಿ ಮುಂತಾದವರಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ ಸತ್ಯಾಗ್ರಹ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಶಿವಮೊಗ್ಗ ವಿಭಾಗದ ವತಿಯಿಂದ ಇಂದು ಗೋಪಿವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಕೇಂದ್ರ ಸಂಘಟನೆಯ ಜೆ.ಸಿ.ಎ ಕರೆಯ ಮೇರೆಗೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
Also read: ಗೃಹ ಸಚಿವರ ಬೆಂಗಾವಲು ವಾಹನ ವ್ಯಕ್ತಿಗೆ ಡಿಕ್ಕಿ: ಆರಗ ಜ್ಞಾನೇಂದ್ರ ಸ್ಪಷ್ಟನೆ ಹೀಗಿದೆ
ಸೇವಾ ಹಿರಿತನದ ಮೇಲೆ 12-24-36 ಸೇವೆ ಸಲ್ಲಿಸಿದ ಜಿ.ಡಿ.ಎಸ್ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡಿ ನಡೆಸುತ್ತಿರುವ ಮೇಳಗಳನ್ನು ನಿಲ್ಲಿಸಬೇಕು. ಜಿ.ಡಿ.ಎಸ್. ನೌಕರರಿಗೆ ರಜೆ ನೀಡಲು ಇರುವ ನಿರ್ಬಂಧಗಳನ್ನು ತಕ್ಷಣ ರದ್ದುಪಡಿಸಿ ಬದಲಿ ನೌಕರರನ್ನು ನೇಮಿಸಲು ಅವಕಾಶ ನೀಡಬೇಕು ಹಾಗೂ ರೂ.5ಲಕ್ಷಗಳ ವರೆಗೆ ಗುಂಪು ವಿಮೆ, 5ಲಕ್ಷಗಳ ವರೆಗೆ ಜಿ.ಡಿ.ಎಸ್, ಗ್ರಾಜ್ಯುಯಿಟಿ, ವೈದ್ಯಕೀಯ ಸೌಲಭ್ಯ ಮತ್ತು ಜಿ.ಡಿ.ಎಸ್., ಪಿಂಚಣಿ/ಎಸ್.ಡಿ.ಬಿ.ಎಸ್ ವರ್ಧನೆ ಮುಂತಾದ ಸೌಲಭ್ಯಗಳನ್ನು ನೀಡಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷರಾದ ವೆಂಕಟೇಶ್, ಕಾರ್ಯದರ್ಶಿ ಹೆಚ್.ಆರ್.ಭಾಸ್ಕರ್, ವಲಯ ಅಧ್ಯಕ್ಷರಾದ ಹೆಚ್.ವಿ. ರಾಜ್ಕುಮಾರ್, ಖಜಾಂಚಿ ಕೆ. ರಾಯಪ್ಪ ನಾಯ್ಕ್, ವನಜಾಕ್ಷಿ ಮುಕ್ತ ಮೊದಲಾದವರಿದ್ದರು.
ನವ ಕರ್ನಾಟಕ ನಿರ್ಮಾಣ ವೇದಿಕೆ ಪ್ರತಿಭಟನೆ
ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಅಂಡ್ ರಿಟೇಲ್ ಲಿ. ಈ ಸ್ಟೋರ್ ಇಂಡಿಯಾ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿ ಹೂಡಿಕೆದಾರರಿಗೆ ಹಣ ವಾಪಾಸ್ಸು ಕೊಡಬೇಕೆಂದು ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಉತ್ತರ ಪ್ರದೇಶದ ನೋಯಿಡಾ ಮೂಲದ ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಅಂಡ್ ರಿಟೇಲ್ ಲಿ. ಈ ಸ್ಟೋರ್ ಇಂಡಿಯಾ ಎಂಬ ಕಂಪನಿಯು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೂಪರ್ ಮಾರ್ಕೆಟ್ಗಳ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ 5ಲಕ್ಷ, 25ಲಕ್ಷ ಹಾಗೂ 1 ಕೋಟಿ ಮತ್ತು ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಆಯುರ್ವೇದಿಕ್ ಉತ್ಪನ್ನಗಳನ್ನು ಮತ್ತು ದಿನಸಿ ಸಾಮಾಗ್ರಿಗಳನ್ನು ನೀಡುವುದರ ಜೊತೆ ಪ್ರತಿ ತಿಂಗಳು ಲಾಭಾಂಶ ಬೋಡ್ರೆಂಟ್ ನೀಡುವುದಾಗಿ 3 ರಿಂದ 12 ಸಾವಿರದವರೆಗೆ ಹಣ ಕಟ್ಟಿಸಿಕೊಂಡು ಕಳೆದ 8 ತಿಂಗಳಿಂದ ಒಪ್ಪಂದದಂತೆ ಹಣ ಹಿಂತಿರುಗಿಸದೆ ಸುಮಾರು 4 ರಿಂದ 5 ಸಾವಿರ ಕೋಟಿ ಹಣವನ್ನು ವಂಚನೆ ಮಾಡಿದೆ.
ಈ ಸಂಬಂಧ ಶಿವಮೊಗ್ಗ, ಹಾಸನ, ಬೆಂಗಳೂರು, ಬಳ್ಳಾರಿ ಸೇರಿದಂತೆ ಹೊರರಾಜ್ಯಗಳಲ್ಲೂ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಬೇಕು ಮತ್ತು ಈ ಕಂಪನಿ ಪ್ರಾರಂಭ ಮಾಡಿ ಲಕ್ಷಾಂತರ ಜನರಿಗೆ ಸುಳ್ಳು ಭರವಸೆ ನೀಡಿ ಹಣ ಕಟ್ಟಿಸಿಕೊಂಡು ವಂಚನೆ ಮಾಡಿರುವ ಕಂಪನಿಯ ಸಿಎಂಡಿ ಡಾ. ಮೊಹಮ್ಮದ್ ಫೈಝಾಲಾ ಖಾನ್, ಎಂ.ಡಿ. ಶಮ್ಶಾದ್ ಅಹಮದ್ ಹಾಗೂ ಇದರ ಅಂಗಸಂಸ್ಥೆಯಾದ ಅಕ್ಸಿಸ್ ಈ ಕೋರ್ಪ್ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಇದರ ಎಂಡಿ ನಜ್ಮಾಖಾನ್ ಮತ್ತು ಎಂ.ಕೆ.ಮುಕೇಷ್ ಜಾಗಿ, ಎಂ.ಡಿ.ಉರ್ಜ್ ಅಲಿಖಾನ್, ಅನಿಲ್ ಜಾಧವ್ ಮತ್ತು ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಅಂಡ್ ರಿಟೇಲ್ ಲಿ. ಇದರ ಸಿದ್ಧನಗೌಡ ಹಾವಟಿ ಇವರುಗಳನ್ನು ಬಂಧಿಸಿ ಕರ್ನಾಟಕದ ಪೊಲೀಸ್ ಠಾಣೆಗಳಿಗೆ ತಂದು ವಿಚಾರಣೆ ನಡೆಸಿ ಕಂಪನಿಯ ಮುಖ್ಯಸ್ಥರುಗಳ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡು ಹೂಡಿಕೆದಾರರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ವೇದಿಕೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಗೋ.ರಮೇಶ್ಗೌಡ, ಸಂತೋಷ್, ನಿಂಗರಾಜ್, ನಾಗೇಶ್, ನಯನ ಮತ್ತಿತರರಿದ್ದರು.
ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್ ಭತ್ಯೆ ಹೆಚ್ಚಳಕ್ಕೆ ಆಗ್ರಹ
ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್ ಭತ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರ್ನಾಟಕ ಕ.ಸ.ಪ.ಮಿ.ವಿ. ವಿಶ್ವವಿದ್ಯಾಲಯ ಬೀದರ್ನ ವಿದ್ಯಾರ್ಥಿಗಳು ಬಿವಿಎಸ್ ಮತ್ತು ಎಐಎಸ್ ಪದವಿಯ ಅಂತಿಮ ಶೈಕ್ಷಣಿಕ ಭಾಗವಾದ ಒಂದು ವರ್ಷದ ಇಂಟರ್ಶಿಪ್ ಕಾರ್ಯಕ್ರಮವನ್ನು ರಾಜ್ಯದ ಹಾಗೂ ಹೊರರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಮಾಡಬೇಕಾಗಿದ್ದು, ಇಂಟರ್ ವಿದ್ಯಾರ್ಥಿಗಳಿಗೆ ಕಳೆದ 8ವರ್ಷಗಳಿಂದ ರೂ.14 ಸಾವಿರ ನೀಡುತ್ತಾ ಬಂದಿದೆ. ಈ ವೇತನದಲ್ಲೆ ಆಯಾ ತಿಂಗಳುಗಳ ಖರ್ಚುಗಳು, ಊಟ,ವಸತಿ, ಸಾರಿಗೆ, ಓಡಾಟದ ವೆಚ್ಚ ಹಾಗೂ ವ್ಯಾಸಂಗಕ್ಕೆ ಸಂಬಂಧಿಸಿದ ಖರ್ಚುಗಳನ್ನು ಭರಿಸಬೇಕಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ನಿತ್ಯ ಬಳಕೆಯ ವಸ್ತುಗಳು ಹಾಗೂ ಸೌಲಭ್ಯಗಳ ದರಗಳು ಹೆಚ್ಚಿದ್ದು, ಮಾಸಿಕ ೨೦ ಸಾವಿರಕ್ಕೂ ಅಧಿಕ ಖರ್ಚು ಬರುತ್ತದೆ. ಇದಲ್ಲದೆ ವಿವಿಗೆ ಕೂಡ ವಾರ್ಷಿಕ ಸುಮಾರು 45 ಸಾವಿರ ರೂ.ಗಳ ಶುಲ್ಕವನ್ನು ಪಾವತಿಸಬೇಕಾಗಿದೆ. ಇಂಟರ್ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ಯಾವುದೇ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಶೇ.ಎ.ಪಿ.ಕೆ ಅವಕಾಶವನ್ನು ಬಡ ಹಾಗೂ ರೈತಾಪಿ ಕುಟುಂಬಗಳಿಗೆ ನೀಡಬೇಕಾದ ನಿಯಮವಿರುವುದರಿಂದ ಪ್ರಸ್ತುತ ತಗಲುತ್ತಿರುವ ಅಧಿಕ ವೆಚ್ಚವನ್ನು ಭರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ.
ಈ ಕಾರಣಕ್ಕಾಗಿ ಇಂಟರ್ಶಿಪ್ ಭತ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಹಲವುಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಕಿರಿಯ ಮಾನವ ವೈದ್ಯಕೀಯ, ವಿದ್ಯಾರ್ಥಿಗಳ, ಇಂಟರ್ಶಿಪ್ ಭತ್ಯೆಯನ್ನು 30 ಸಾವಿರ ರೂ.ಗಳಿಗೆ ಏರಿಸಿರುವ ಹಿನ್ನಲೆಯಲ್ಲಿ ಮೂಕ ಪ್ರಾಣಿಗಳ ಸೇವೆಯಲ್ಲಿ ನಿರತರಾದ ಹಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ಶಿಪ್ ಮಾಸಿಕ ಭತ್ಯೆಯನ್ನು ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಾನವಾಗಿ ನೀಡುವಂತೆ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೋಹಿತ್, ನವೀನ್, ಯಶಸ್ವಿ, ರಕ್ಷಿತ್, ಹೇಮಂತ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post