ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋಪಾಲಗೌಡ ಬಡಾವಣೆಯಲ್ಲಿ ನೂತನ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಗೋಪಾಲಗೌಡ ಬಡಾವಣೆಯ ನೂರಡಿ ರಸ್ತೆಯ ಕೇಕ್ ಕೆಫೆ ಮುಂಭಾಗದ ಮದ್ಯದಂಗಡಿ ಎದುರು ಇಂದು ಪ್ರತಿಭಟನೆ ನಡೆಸಿ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಗೋಪಾಲಗೌಡ ಬಡಾವಣೆ ಪ್ರತಿಷ್ಠಿತ ಬಡಾವಣೆಯಾಗಿದ್ದು, ವಾಸಕ್ಕೆ ಯೋಗ್ಯವಾದ ಸ್ಥಳವೆಂದು ಅನೇಕ ನಿವೃತ್ತ ನೌಕರರು ಇಲ್ಲಿ ಮನೆ ನಿರ್ಮಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ತರಾತುರಿಯಲ್ಲಿ ಕಟ್ಟಡ ಪರವಾನಿಗೆಯನ್ನೂ ಪಡೆಯದೆ ಅಕ್ರಮವಾಗಿ ದಿಢೀರ್ ಕಟ್ಟಡ ನಿರ್ಮಿಸಿ ನೂತನವಾಗಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಲಾಗಿದೆ. ಈ ಸ್ಥಳದ ಪಕ್ಕದಲ್ಲಿಯೇ ಸ್ನೇಹಾಶ್ರಯ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿಯು ಈಗಾಗಲೇ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸ್ಥಳದ ಕಣ್ಣಳತೆ ದೂರದಲ್ಲೇ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಟ್ರಸ್ಟ್ನ ಬಾಲನಿಕೇತನ ಶ್ರೀರಾಮಕೃಷ್ಣ ಮಕ್ಕಳ ತೋಟ ಎಂಬ ಹೆಸರಿನ ಪೂರ್ವ ಪ್ರಾಥಮಿಕ ಶಾಲೆ ಕಳೆದ ಹಲವು ವರ್ಷಗಳಿಂದ ಚಾಲನೆಯಲ್ಲಿದೆ. ಸಮೀಪದಲ್ಲೇ ಮಕ್ಕಳ ಆಟಿಕೆಯ ಉದ್ಯಾನ, ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುವ ಸೂಪರ್ ಮಾರ್ಕೆಟ್ ಇವೆ.
ಸಣ್ಣ ಮಕ್ಕಳನ್ನು ಬಿಡಲು ತಾಯಂದಿರೇ ಹೆಚ್ಚಾಗಿ ಬರುವುದರಿಂದ ಈ ಸ್ಥಳದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಿದರೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಸಿಎಲ್2 ಪರವಾನಿಗೆ ನೀಡಿದರೆ ನಿಯಮಾನುಸಾರ ಸ್ಥಳದಲ್ಲಿ ಕುಡಿಯಲು ಅವಕಾಶ ಇಲ್ಲದೆ ಇರುವುದರಿಂದ ಮದ್ಯವ್ಯಸನಿಗಳು ಹತ್ತಿರದ ಉದ್ಯಾನವನದಲ್ಲಿ ಕುಡಿಯುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬರುವ ಎಲ್ಲರಿಗೂ ತೊಂದರೆಯಾಗುತ್ತದೆ. ಈ ಎಲ್ಲಾ ಅಂಶ ಮನಗಂಡು ಮದ್ಯದಂಗಡಿಗೆ ಅವಕಾಶ ನೀಡಬಾರದು. ಬೇರೆ ವಾಸಕ್ಕೆ ಯೋಗ್ಯವಲ್ಲದ ಸ್ಥಳಕ್ಕೆ ವರ್ಗಾಯಿಸಬೇಕೆಂದು ನವಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ.
Also read: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರದ ದರ ಹೆಚ್ಚಿಸಿ
ಒಂದು ವೇಳೆ ಅವಕಾಶ ನೀಡಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ನಿಂಗರಾಜು, ನಯನ, ಲಕ್ಷ್ಮಣ್, ರಾಜು ಗುಜ್ಜರ್, ದೇವೇಂದ್ರಪ್ಪ, ಆಸೀಫ್, ರಾಜು ನಾಯ್ಕ ಸುರೇಶ್, ಮುನೀರ್ ಮತ್ತಿತರರಿದ್ದರು.
ಮದ್ಯದಂಗಡಿ ಬೇಕೇ ಬೇಕು:
ಮದ್ಯದಂಗಡಿ ಬೇಕೇ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ ವಿಲಕ್ಷಣ ಘಟನೆ ಗೋಪಾಳಗೌಡ ಬಡಾವಣೆಯಲ್ಲಿ ನಡೆದಿದೆ.
ಗೋಪಾಲಗೌಡ ಬಡಾವಣೆಯ ನೂರಡಿ ರಸ್ತೆಯಲ್ಲಿ ನಿನ್ನೆ ಮತ್ತು ಇಂದು ಸ್ಥಳೀಯ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಮದ್ಯದಂಗಡಿಗೆ ಅವಕಾಶ ನೀಡಬಾರದೆಂದು ಪ್ರತಿಭಟನೆ ನಡೆಸಲಾಗಿತ್ತು. ಇಂದು ಮದ್ಯದಂಗಡಿಯ ಪರವಾಗಿ ಮಹಿಳೆಯರು ಸೇರಿದಂತೆ ಇನ್ನೊಂದು ಬಣದವರು ನೂರಡಿ ರಸ್ತೆಯ ಇಕ್ಕೆಲಗಳಲ್ಲೂ ವಾಣಿಜ್ಯ ಉದ್ದೇಶಕ್ಕೆ ಅವಕಾಶವಿದ್ದು, ಬೇರೆ ಕಡೆ ಲೈಸೆನ್ಸ್ ಇರುವ ಮದ್ಯದಂಗಡಿ ಇಲ್ಲಿಗೆ ಸ್ಥಳಾಂತರಗೊಂಡಿದೆ. ಯಾವುದೇ ಕಾರಣಕ್ಕೂ ಇಲ್ಲಿಂದ ಸ್ಥಳಾಂತರವಾಗಲು ಬಿಡುವುದಿಲ್ಲ. ಇಲ್ಲಿ ಮದ್ಯದಂಗಡಿ ಬೇಕೇ ಬೇಕು ಎಂದು ಕೆಲವರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಮದ್ಯದಂಗಡಿ ಪರ ವಿರೋಧ ಪ್ರತಿಭಟನೆಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಮದ್ಯದಂಗಡಿ ಪರವಾದ ಹೋರಾಟದಲ್ಲಿ ರಾಜಕುಮಾರ್, ಪಣಿ, ನಟರಾಜ್, ರವಿ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post