ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಕಾಲ್ತುಳಿತಕ್ಕೆ ಸಿಲುಕದೆ, ನೇರವಾಗಿ ಬಡವರ ಕೈ ಸೇರುತ್ತಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #Geetha Shivarajkumar ಹೇಳಿದರು.
ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರೀತಿಯ ಹಗರಣ ನಡೆಯುತ್ತಿಲ್ಲ. ಮಾಸಿಕ ₹50 ಲಕ್ಷ ಹಣ ಪ್ರತಿ ಗ್ರಾಮ ಪಂಚಾಯಿತಿಗೆ ವ್ಯಯಿಸಲಾಗುತ್ತಿದೆ. ವಾರ್ಷಿಕ ₹6 ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಲಾಗಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು ಸಮೃದ್ಧವಾಗಿ ಬೆಳೆಯುತ್ತಿದೆ ಎಂದರು.
Also read: ತೀರ್ಥಹಳ್ಳಿ | ಕಾರು ಸ್ಫೋಟ: ಓರ್ವನಿಗೆ ಗಂಭೀರ ಗಾಯ
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಮುದ್ದಿನಹಳ್ಳಿ ಬರಗಾಲ ಪ್ರದೇಶ. ಇಲ್ಲಿನ ಪ್ರದೇಶವನ್ನು ನೀರಾವರಿಯಾಗಿ ಅಭಿವೃದ್ಧಿ ಪಡಿಸಿಲ್ಲ. ಕೆರೆಗಳ ಜೀರ್ಣೊದ್ಧಾರಕ್ಕೆ ಹಿನ್ನಡೆಯಾಗಿದೆ. ಹಿಂದೆ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದರು. ಅದೊಂದೇ ಯೋಜನೆ ಇಲ್ಲಿ ಜೀವಂತ ಇರುವುದು ಎಂದರು.
ಹೆತ್ತ ತಾಯಿಯನ್ನು ಮಕ್ಕಳೇ ಅರ್ಧದಲ್ಲಿ ಕೈ ಬಿಡುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ರಾಜ್ಯ ಕಾಂಗ್ರೆಸ್ ಸರ್ಕಾರ ಇದಕ್ಕೆ ಯಾವುದೇ ಆಸ್ಪದ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಸ್ವಾಭಿಮಾನ ಹಾಗೂ ಗೌರವವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಜನ ಸೇವೆಗೆ ಮಾನವೀಯ ಮೌಲ್ಯ ಮುಖ್ಯ
ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮನೆ ಇಲ್ಲ. ಅವರು ಬೆಂಗಳೂರು ಮೂಲದವರು. ಆದ್ದರಿಂದ ಗೀತಾ ಅವರು ಜನ ಸಮಾನ್ಯರಿಗೆ ಸಿಗುವುದಿಲ್ಲ ಎಂದು ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಕೂಡದು. ಈ ರೀತಿಯ ಟೀಕಿಸುವವರಿಗೂ ಕೂಡ ಬೆಂಗಳೂರು ನಗರದಲ್ಲಿ ಮನೆಗಳಿವೆ. ಜನ ಸೇವೆ ಮಾಡಲು ಬೇಕಿರುವುದು ಮನೆಯಲ್ಲ, ಬೇಕಿರುವುದು ಮಾನವೀಯ ಮೌಲ್ಯ. ಅದು ನನಗಿದೆ-
ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ
ಕಾಂಗ್ರೆಸ್ ಮುಖಂಡ ಗೋಣಿ ಮಹಲ್ತೇಶ್ ಮಾತನಾಡಿ, ಕಷ್ಟ ಕಾಲದಲ್ಲಿ ಬಡವರಿಗೆ ಗ್ಯಾರಂಟಿ ಯೋಜನೆಗಳು ಜೀವ ಉಳಿಸಿವೆ. ಆದ್ದರಿಂದ, ಸರ್ಕಾರದ ಋಣ ತೀರಿಸಬೇಕಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ಮಾತನಾಡಿ, ಚುನಾವಣಾ ಪೂರ್ವ ಬಿಜೆಪಿ ನಾಯಕರು ನೀಡಿದ್ದ ಮಾತನ್ನು ಉಳಿಸಿಕೊಂಡಿಲ್ಲ. ಬಂಗಾರಪ್ಪ ಅವರು ನೀಡಿದ್ದ ಕಾರ್ಯಕ್ರಮ ಗಳು ಮಾತ್ರ ಇಲ್ಲಿ ಜೀವಂತವಾಗಿವೆ. ಆದ್ದರಿಂದ, ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಬೆಂಬಲಿಸಬೇಕಿದೆ ಎಂದರು
ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಕಾಂಗ್ರೆಸ್ ಮುಖಂಡರಾದ ಶಿವರಾಜಕುಮಾರ್, ಶಿವರಾಂ ಪಾರಿವಾಳ, ನಗರದ ಮಹದೇವಪ್ಪ, ರಾಘವೇಂದ್ರ ನಾಯ್ಕ್, ಬನ್ನೂರು ನಾಗರಾಜ್, ಶಿವನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮಣ್ಣ, ಬಂಡಾರಿ ಮಹಲ್ತೇಶ್, ವೈ.ಎಚ್.ನಾಗರಾಜ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post