ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ಆಯೋಗಗಳ ವತಿಯಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ #Caste Census ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ವಿಪ್ರಸಮಾಜದ ಎಲ್ಲಾ ಉಪಪಂಗಡಗಳು ಜಾತಿ ಕಾಲಂನಲ್ಲಿ ಬ್ರಾಹ್ಮಣ #Brahmana ಎಂದು ಧರ್ಮದ ಕಾಲಂನಲ್ಲಿ ಹಿಂದೂ #Hindu ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಏನನ್ನೂ ಭರ್ತಿಮಾಡಬಾರದು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.18ರಂದು ಶಿವಮೊಗ್ಗದ ಮಾತಾ ಮಾಂಗಲ್ಯ ಮಂದಿರದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಉಪಪಂಗಡಗಳ ಅಧ್ಯಕ್ಷರುಗಳ ಸಭೆ ನಡೆದು, ಎಲ್ಲವನ್ನೂ ಚರ್ಚಿಸಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ವಿಪ್ರರು ಉಪಜಾತಿ ಕಾಲಂನಲ್ಲಿ ಯಾವ ಹೆಸರನ್ನೂ ಭರ್ತಿಮಾಡದೆ ಎಕ್ಸ್ ಗ್ರೂಪಿನಿಂದ ನಮೂದಿಸಬೇಕು. ಜಾತಿ ಕಾಲಂನಲ್ಲಿ ಮಾತ್ರ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದರು.
ನಮ್ಮ ಸಮಾಜದ ಎಲ್ಲರೂ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಇದು ಹಬ್ಬಗಳ ಸಮಯ ಮಾಹಿತಿ ಸಂಗ್ರಹಕಾರರು ಬರುತ್ತಾರೆ. ಹಾಗಾಗಿ ಯಾವ ಊರುಗಳಿಗೂ ಹೋಗದೆ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಮತ್ತು ಸಮೀಕ್ಷಾಕಾರರು ಸರಿಯಾಗಿ ಮಾಹಿತಿಯನ್ನು ಭರ್ತಿಮಾಡಿಕೊಂಡಿದ್ದಾರೆಯೇ ಎಂದು ಖಚಿತಪಡಿಸಿಕೊಂಡೇ ಸಬ್ಮಿಟ್ ಮಾಡಲು ಒಪ್ಪಿಗೆ ಕೊಡಬೇಕು. ಆಧಾರ್ಕಾರ್ಡ್, ಪಾನ್ಕಾರ್ಡ್, ಓಟಲ್ ಐಟಿ, ರೇಷನ್ಕಾರ್ಡ್ ಇತ್ಯಾದಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.
ಈಗಾಗಲೇ ಈ ಬಗ್ಗೆ ಜಿಲ್ಲೆಯ ವಿಪ್ರರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ತಾಲ್ಲೂಕಿನ ಅಧ್ಯಕ್ಷರುಗಳು ಈ ಬಗ್ಗೆ ಮತ್ತಷ್ಟು ಗಮನಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷರುಗಳಾದ ಹಾಗೂ ಉಪಪಂಗಡಗಳ ಅಧ್ಯಕ್ಷರುಗಳಾದ ವೆಂಕಟೇಶಮೂರ್ತಿ, ಗುರುದತ್, ಆರ್. ಅಚ್ಚುತರಾವ್, ಸಿ.ಆರ್. ವಸಂತ್ಕುಮಾರ್, ಶಂಕರನಾರಾಯಣ ಹೊಳ್ಳ, ಕಾರಕೋಡ್ಲು ಗುರುಮೂರ್ತಿ, ಸಂತೋಷ್ ಕುಮಾರ್ ಹೆಚ್.ಎಸ್., ಕುಮಾರಶಾಸ್ತ್ರೀ, ರವಿಕುಮಾರ್, ಎಸ್. ನಾಗೇಶ್, ಕೇಶವಮೂರ್ತಿ, ಸೂರ್ಯನಾರಾಯಣ, ಲಕ್ಷ್ಮೀಕಾಂತ್, ನಾಗರಾಜ್, ಸತೀಶ್ ಡಿ.ಎಸ್., ರಮೇಶ್ ಜಿ., ಉಷಾ, ಸರಳ ಹೆಗಡೆ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















