ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭಬಾಯ್ ಪಟೇಲ್ #Sardar Vallabhai Patel ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ಅ.31ರಿಂದ ನವೆಂಬರ್ 26ರ ವರೆಗೆ ಏಕತಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪಟೇಲ್ ಅವರ ಏಕತಾಯಾತ್ರೆಯನ್ನು ಮಾಡಲಿದ್ದೇವೆ ಎಂದರು.
ಉತ್ತಮ ಆಡಳಿತದ ಸಂಕಲ್ಪತೊಟ್ಟು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ (ಮಂಡಲದಲ್ಲಿ) ಜಿಲ್ಲಾ ಬಿಜೆಪಿವತಿಯಿಂದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಒಳಗೊಂಡು ಭಾರತದ ತ್ರಿವರ್ಣಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು 8ರಿಂದ 10 ಕಿ.ಮೀ. ನಡಿಗೆ ಹಮ್ಮಿಕೊಂಡಿದ್ದೇವೆ. ಎಲ್ಲೂ ಬಿಜೆಪಿ ಧ್ವಜವನ್ನು ಉಪಯೋಗಿಸುವುದಿಲ್ಲ. ದೇಶಾದ್ಯಂತ ಈ ಏಕತಾಯಾತ್ರೆ ನಡೆಯಲಿದ್ದು, ಶಿವಮೊಗ್ಗದಲ್ಲಿ ಗಿಡಗಳನ್ನು ನೆಟ್ಟು ಗೋಪೂಜೆ ಮಾಡುವುದರ ಮೂಲಕ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಮೋದಿಯವರ ಕನಸಾದ ಆತ್ಮನಿರ್ಭರ ಭಾರತ್, ಸ್ವದೇಶಿ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಲಿದೆ. ಸರ್ದಾರ್ ಪಟೇಲ್ ಅವರ ಜೀವನದ ಪ್ರದರ್ಶಿನಿಯನ್ನು ಕೂಡ ಹಮ್ಮಿಕೊಳ್ಳಲಾಗುವುದು. ನಶಿಮುಕ್ತ ಭಾರತ ಶೀರ್ಷಿಕೆಯಡಿ ಈ ಅಭಿಯಾನದಲ್ಲಿ ಅರಿವು ಮೂಡಿಸಲಾಗುವುದು. ರೈತರ ಚಳುವಳಿಯ ಮೂಲಕವೇ ಸರ್ದಾರ್ ಪಟೇಲ್ ಅವರು, ಬಂದ ಕಾರಣ ರೈತರಿಗೆ ಅನುಕೂಲವಾಗುವ ಭೂಮಿಯ ಮಣ್ಣು ಪರೀಕ್ಷೆ ಕಾರ್ಯಕ್ರಮವನ್ನು ಕೂಡ ಜೋಡಿಸಲಾಗಿದೆ ಎಂದರು.
ಏಕತಾಯಾತ್ರೆಯ ಸಮಾರೋಪದಲ್ಲಿ ಸರ್ದಾರ್ ಪಟೇಲ್ ಅವರ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ವಿಜೇತರಿಗೆ ರಾಜ್ಯ ಮತ್ತು ದೇಶಮಟ್ಟದಲ್ಲೂ ಅವಕಾಶಗಳಿವೆ. ಅಲ್ಲದೆ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯ ಬಗ್ಗೆ ರೀಲ್ಸ್ ಮಾಡುವ ಸ್ಪರ್ಧೆ ಕೂಡ ಇರುತ್ತದೆ. ನಶೆಮುಕ್ತ ಭಾರತದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಸ್ವದೇಶಿ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಎಬಿವಿಪಿ ಸಂಘಟನೆಯ ಸಹಕಾರದೊಂದಿಗೆ ವಿದ್ಯಾರ್ಥಿಗಳು ಮತ್ತು ಬಿಜೆಪಿಯ ಭೂತ್ಮಟ್ಟದಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರು ಕೂಡ ಭಾಗವಹಿಸಲಿದ್ದಾರೆ. ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆಯೂ ಅರಿವು ಮೂಡಿಸಲಾಗುವುದು. ದೇಶ ಕಟ್ಟಿದವರನ್ನು, ದಾರ್ಶನಿಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಈ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು ದೇಶ 565 ಸಂಸ್ಥಾನಗಳನ್ನು ಒಗ್ಗೂಡಿಸಿ ಜಮ್ಮು-ಕಾಶ್ಮೀರ, ಹೈದ್ರಾಬಾದ್ ಮತ್ತು ಜುನಾಘಡ್ಗಳನ್ನು ದೇಶದ ಒಕ್ಕೂಟಕ್ಕೆ ಸೇರಿಸುವಲ್ಲಿ ತನ್ನ ದೃಢ ನಿಲುವುಗಳ ಮೂಲಕ ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ದೇಶದ ಏಕತೆಗೆ ಅನೇಕ ಕೊಡುಗೆಗಳನ್ನು ನೀಡಿದರು. ಮೋದಿ ಸರ್ಕಾರ ಬಂದ ಮೇಲೆ ಒಂದು ಕುಟುಂಬಕ್ಕೆ ಸೀಮಿತವಾದ ಭಾರತವನ್ನು ದೇಶ ಕಟ್ಟಿದ ದಾರ್ಶನಿಕರನ್ನು ಗುರುತಿಸುವ ಕಾರ್ಯವಾಯಿತು.
ಪಟೇಲ್ ಅವರಿಗೆ 40 ವರ್ಷಗಳ ನಂತರ 1991ರಲ್ಲಿ ಭಾರತ ರತ್ನ ನೀಡುವ ಕೆಲಸವಾಯಿತು. ಏಕತಾ ನಡಿಗೆ ಮಾಡಿ 10 ಸಾವಿರ ಟನ್ ಕಬ್ಬಿಣವನ್ನು ಸಂಗ್ರಹಿಸಿ ಗುಜರಾತಿನಲ್ಲಿ 790 ಅಡಿ ಎತ್ತರದ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿ, ಅವರ ವ್ಯಕ್ತಿತ್ವದ ಅರಿವನ್ನು ದೇಶದ ಜನರಿಗೆ ಮೂಡಿಸುವ ಕಾರ್ಯವಾಯಿತು. ಈಗ ಮತ್ತೊಮ್ಮೆ ಅವರ 150ನೇ ವರ್ಷದ ಜನ್ಮದಿನಾಚರಣೆಯನ್ನು ಏಕತಾಯಾತ್ರೆ ಮೂಲಕ ವಿವಿಧ ಸಾಮಾಜಿಕ ಚಟುವಟಿಕೆಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗಾಯತ್ರಿ ಮಲ್ಲಪ್ಪ, ಪ್ರಮುಖರಾದ ಮಾಲತೇಶ್, ಪದ್ಮಿನಿರಾವ್, ಹರಿಕೃಷ್ಣ, ಕುಪೇಂದ್ರ, ದರ್ಶನ್, ಸಂತೋಷ್, ಸತೀಶ್ ರಾಮಿನಕೊಪ್ಪ, ಸಂತೋಷ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















