ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಉಡುಪಿ ಮಣ್ಣಿನ ಸುವಾಸನೆ, ಅಮ್ಮನ ಕನಸು, ಕಾಲೇಜಿನ ದಿನಗಳ ಉತ್ಸಾಹ – ಇವುಗಳ ಸಂಗಮವೇ ಶಿಲ್ಪಾ ಶೆಟ್ಟಿ ಅವರ ಕಲಾಜೀವನದ ಬುನಾದಿ.
ಬಾಲ್ಯದಿಂದಲೇ ಕಲೆ ಅವರ ಹೃದಯದ ನಂಟಾಗಿದ್ದು, ಕಾಲೇಜು ಸಂದರ್ಭದಲ್ಲಿ NSS ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹವ್ಯಾಸಿ ರಂಗತಂಡಗಳ ಮೂಲಕ ಅವರು ಮೊದಲ ಬಾರಿಗೆ ರಂಗಮಂಟಪವನ್ನು ಮುಟ್ಟಿದರು. ಆ ದಿನದ ಆ ಹೆಜ್ಜೆ, ಮುಂದಿನ ದಾರಿ ಹೇಗೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಿತು. ನಂತರ ಮೈಸೂರಿನ ಪ್ರಸಿದ್ಧ ರಂಗಾಯಣದಲ್ಲಿ ನಟನಾ ತರಬೇತಿ ಪಡೆದು ತಮ್ಮ ಕಲೆಗೊಂದು ಹೊಸ ಶಕ್ತಿ ತುಂಬಿಕೊಂಡರು.
ಈ ಪಯಣದಲ್ಲಿ ತಾಯಿಯ ಪ್ರೋತ್ಸಾಹವೇ ದೊಡ್ಡ ಶಕ್ತಿ. “ನಿನ್ನ ಕನಸು ನಿನ್ನ ಹಾದಿ” ಎಂದು ಬೆನ್ನೆಲುಬಾಗಿ ನಿಂತ ತಾಯಿ, ಶಿಲ್ಪಾಳಿಗೆ ಧೈರ್ಯದ ದಾರಿಯನ್ನೂ ನೀಡಿದರು.
ಇಂದು ಶಿಲ್ಪಾ ಶೆಟ್ಟಿ ಅವರು 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ನೂರಕ್ಕೂ ಅಧಿಕ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಪಾತ್ರವು ಎಷ್ಟು ದೊಡ್ಡದು, ಚಿಕ್ಕದು ಎಂಬುದಲ್ಲ – ಅದಕ್ಕೆ ಅವರು ತುಂಬುವ ಜೀವವೇ ಮುಖ್ಯ ಎಂಬ ನಂಬಿಕೆ ಅವರ ನಟನೆಯ ಕೌಶಲ್ಯವನ್ನು ವಿಶಿಷ್ಟವಾಗಿಸಿದೆ.
ರಂಗಭೂಮಿಯ ಹೊರತಾಗಿಯೂ, ಚಲನಚಿತ್ರ ಮತ್ತು ವೆಬ್ಸೀರೀಸ್ ಜಗತ್ತಿನಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ನವ್ಯ ರಾವ್ ನಿರ್ದೇಶನದ ಪುಟ್ಟ ಭಯ, ಪ್ಯಾರಮ್ಹವ್ ಸ್ಪಾಟ್ಲೈಟ್ ನಿರ್ಮಾಣದ ಸ್ಟ್ರಾಬೆರಿ, ತುಳು ಕಿರುಚಿತ್ರ 2 ಪಜ್ಜೆ, ನಾಗೇಂದ್ರ ಗಾಣಿಗ ನಿರ್ದೇಶನದ ಅಭಿರಾಮಚಂದ್ರ, ಮನ್ಸೋರೆ ಅವರ ದೂರತೀರಯಾನ ಮೊದಲಾದ ಚಿತ್ರಗಳಲ್ಲಿ ಅವರು ತಮ್ಮ ಕಲಾಶಕ್ತಿಯನ್ನು ತೋರಿಸಿದ್ದಾರೆ. ಶಿಮಾರೋ ಚಾನೆಲ್ನ ಹಿಂದಿ ವೆಬ್ಸೀರೀಸ್ನಲ್ಲಿ ನಟನೆಯ ಮೂಲಕ ದೇಶದಾದ್ಯಂತ ಪ್ರೇಕ್ಷಕರಿಗೆ ತಲುಪಿದ್ದಾರೆ. ವಿಶೇಷವಾಗಿ ರೂಪಾ ಅಯ್ಯರ್ ನಿರ್ದೇಶನದ ಬಾಲಿವುಡ್ ಚಿತ್ರ “ನೀರಾ ಆರ್ಯ” ಅವರ ಕಲಾಜೀವನಕ್ಕೆ ಮತ್ತೊಂದು ಬಣ್ಣ ತುಂಬಿದ ಚಿತ್ರವಾಗಿದೆ.
ಅವರು ಕೇವಲ ನಟಿ ಮಾತ್ರ ಅಲ್ಲ, ಬಹುಮುಖ ಕಲಾವಿದೆ. ಸಹಾಯಕ ನಿರ್ದೇಶಕಿಯಾಗಿ ಮನ್ಸೋರೆ ಅವರ 19 20 21 ಹಾಗೂ ದೂರತೀರಯಾನ ಚಿತ್ರಗಳಲ್ಲಿ, ಶಿವರುದ್ರಯ್ಯ ಅವರ ಸಿಗ್ನಲ್ ಮ್ಯಾನ್ ಚಿತ್ರದಲ್ಲಿ ಹಾಗೂ ಬಿ.ಎಂ. ಗಿರಿರಾಜ್ ಅವರ ಹಿಂದಿ ವೆಬ್ಸೀರೀಸ್ನಲ್ಲಿ ತಮ್ಮ ಹಾದಿ ವಿಸ್ತರಿಸಿದ್ದಾರೆ. ನಿರ್ದೇಶಕಿಯಾಗಿಯೂ ಭರತವಾಕ್ಯ, ಸೋರುತಿದು ಸಂಬಂಧ, ವಿಗಡ ವಿಕ್ರಮರಾಯ ಮೊದಲಾದ ನಾಟಕಗಳ ಮೂಲಕ ತಮ್ಮ ದೃಷ್ಟಿಕೋನವನ್ನು ವೇದಿಕೆಯ ಮೇಲೆ ಮೂಡಿಸಿದ್ದಾರೆ. ಬರಹಗಾರ್ತಿಯಾಗಿ 2 ಪಜ್ಜೆ ಕಿರುಚಿತ್ರ ಮತ್ತು ಅವನಿಯ ಚೌರ್ಯೋನ್ಮಾದ ನಾಟಕವನ್ನು ಬರೆದಿದ್ದಾರೆ.
ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿಲ್ಪಾ ಶೆಟ್ಟಿ, ಇತ್ತೀಚೆಗೆ ನದೃಸಾ ಎಂಬ ಕನ್ನಡ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಮಕ್ಕಳಲ್ಲಿ ಕಲೆ ಬೆಳೆಸುವುದು ಅವರ ಹೃದಯದ ಹಂಬಲ. ಬೆಂಗಳೂರಿನ ಆರ್ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ರಂಗಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಅನೇಕ ಮಕ್ಕಳ ಮನಸ್ಸಿನಲ್ಲಿ ಕಲೆಗೊಂದು ಹೊಸ ದಾರಿ ತೆರೆದಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಕಥೆ ಕೇವಲ ಸಾಧನೆಯ ಕಥೆಯಲ್ಲ. ಅದು ಕನಸಿಗೆ ಬೆಂಬಲ ನೀಡಿದ ತಾಯಿಯ ಕಥೆ, ಧೈರ್ಯದಿಂದ ಮುಂದುವರಿದ ಹೆಜ್ಜೆಯ ಕಥೆ, ಮತ್ತು ನಿರಂತರ ಶ್ರಮದ ಕಥೆ. ಇಂದು ಅವರು ಯುವ ಕಲಾವಿದರಿಗೆ “ಕಲೆ ಬದುಕಿನ ಉಸಿರು” ಎಂಬ ಸಂದೇಶವನ್ನು ನೀಡುತ್ತಾ, ತಮ್ಮದೇ ಆದ ಪ್ರೇರಣೆಯ ದೀಪವಾಗಿದ್ದಾರೆ.
ಮನೆಯಲ್ಲಿ ಆರ್ಥಿಕ ಸಂಕಷ್ಟಗಳಿದ್ದರೂ, ತಮ್ಮ ಕಲಾ ಜೀವನಕ್ಕೆ ಯಾವುದೇ ಅಡಚಣೆ ಬಾರದಂತೆ ಶಿಲ್ಪಾ ಶೆಟ್ಟಿ ಸ್ವಾವಲಂಬಿಯಾಗಿ ಬೆಂಗಳೂರಿನಲ್ಲಿ ತಮ್ಮ ಕಲಾ ಪಯಣವನ್ನು ಮುಂದುವರಿಸಿಕೊಂಡಿದ್ದಾರೆ. ದುಡಿಮೆ ಮತ್ತು ದೃಢಸಂಕಲ್ಪದ ಮೂಲಕ ಸ್ವಂತ ಮನೆಯ ಕನಸನ್ನೂ ಅವರು ನನಸಾಗಿಸಿಕೊಂಡಿದ್ದಾರೆ. ನಮ್ಮೂರಿನ ಹೆಮ್ಮೆಯ ಪ್ರತಿಭೆಯಾದ ಈ ಕಲಾಶಿಲ್ಪಾಳಿಗೆ ನಮ್ಮೆಲ್ಲರ ಪ್ರೋತ್ಸಾಹ ಅವಶ್ಯಕ. ಅವರ ಮುಂದಿನ ಕಲಾ ಪಯಣ ಇನ್ನಷ್ಟು ಯಶಸ್ಸುಗಳನ್ನು ತಂದುಕೊಡಲೆಂದು ಕಲ್ಪ ಡಿಜಿಟಲ್ ಮೀಡಿಯಾ ಕಡೆಯಿಂದ ಹಾರೈಸುತ್ತೇವೆ.
ಲೇಖನ. ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















